ಅವರು ವ್ಯವಸ್ಥೆಯ ಕೈಗೊಂಬೆ ಎಂದು ನಾನೇ ಟೀಕಿಸಿದ್ದೆ. ಕೆಲವೊಮ್ಮೆ ಸಂಸದ ನಳಿನ್ ಮತ್ತು ಶಾಸಕ ವೇದವ್ಯಾಸ ಕಾಮತರ ಅಣತಿಯಂತೆ ಕೆಲಸ ಮಾಡುತ್ತಿದ್ದಾರೆ ಎಂದೆಣಿಸಿದ್ದೂ ತಪ್ಪಲ್ಲ. ಬ್ಯೂರೋಕ್ರಾಟ್ಸ್ ಯಾವತ್ತೂ ಸರ್ವ ಸ್ವತಂತ್ರವಾಗಿರುವುದು ಭಾರತದಂತಹ ದೇಶದಲ್ಲಿ ಸಾಧ್ಯವಿಲ್ಲ. ಇಲ್ಲಿರುವುದು ಬನಾನಾ ರಿಪಬ್ಲಿಕ್.
ಪ್ರಭುತ್ವದ ವಿರುದ್ಧ ಅಧಿಕಾರಿಯೊಬ್ಬ ಮಾತನಾಡುವುದನ್ನು ಬಿಜೆಪಿಯವರೆಂದಲ್ಲ, ಯಾರೂ ಸಹಿಸಿರಲಿಲ್ಲ. ಆದರೆ ಕಾನೂನು ಕೈಗೆತ್ತಿಕೊಳ್ಳುವ ಗೂಂಡಾಪಡೆಗಳ ವಿರುದ್ಧ ಕಾನೂನಾತ್ಮಕವಾಗಿ ಒಂದು ಹೇಳಿಕೆ ಕೊಟ್ಟ ಮಾತ್ರಕ್ಕೆ ದ.ಕ. ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ರನ್ನು ಪನಿಶ್ಮೆಂಟ್ ಟ್ರಾನ್ಸ್ಫರ್ ಮಾಡಲಾಗಿದೆ. ಬಹಿರಂಗವಾಗಿ ಪ್ರಭುತ್ವ ಹಾಗಂದಿಲ್ಲವಾದರೂ ಅವರನ್ನು ವರ್ಗಾಯಿಸಲಾದ-ಹುದ್ದೆ ಅದನ್ನು ಶ್ರುತಪಡಿಸುತ್ತದೆ.
ಸಿಂಧೂ ಅವರ ವರ್ಗಾವಣೆ ಕಾನೂನು ಭಂಜಕ ಶಕ್ತಿಗಳ ಕೃತ್ಯಕ್ಕೆ ಬಲ ನೀಡುವಂತಿದೆ. ತನ್ಮೂಲಕ ನೀವು ನಿಮ್ಮ ಕೆಲಸವನ್ನು ಸುಸೂತ್ರವಾಗಿ ಮಾಡುತ್ತಿರಿ, ನಿಮಗಾಗಿ ನಾವು ಜಿಲ್ಲಾಧಿಕಾರಿಯನ್ನೇ ಎತ್ತಂಗಡಿ ಮಾಡುತ್ತೇವೆ ಎಂಬ ಅಭಯದ ಸಂದೇಶವನ್ನು ಪ್ರಭುತ್ವ ಕಾನೂನು ಭಂಜಕರಿಗೆ ನೀಡಿದೆ. ಇದು ಭಾರತದಲ್ಲಿ ಪ್ರಜಾತಂತ್ರ ವ್ಯವಸ್ಥೆ ಹಾಡಹಗಲೆ ಕಗ್ಗೊಲೆಯಾಗುತ್ತಿದೆ ಎಂಬುವುದಕ್ಕೆ ಒಂದು ಪುಟ್ಟ ನಿದರ್ಶನವಷ್ಟೆ.
ಪ್ರಭುತ್ವದ ಕಾನೂನುಭಂಜಕ ಕೆಲಸಗಳಿಗೆ ಸಾಥ್ ನೀಡದ್ದಕ್ಕಾಗಿ “ಕೇರಳ ಮೂಲದ ಗುಜರಾತಿನ ಉನ್ನತ ಪೋಲೀಸ್ ಅಧಿಕಾರಿ ಶ್ರೀಕುಮಾರನ್ರನ್ನು ಯಾವ ರೀತಿ ಸತಾಯಿಸಲಾಯಿತು…ಜಸ್ಟಿಸ್ ಲೋಯಾರನ್ನು ಹೇಗೆ ಮುಗಿಸಲಾಯಿತು… ಇಂತಹ ಒಂದಲ್ಲ, ಎರಡಲ್ಲ ನೂರಾರು ಉದಾಹರಣೆಗಳನ್ನು ನಾವು ಬಿಜೆಪಿಯ ಅಂದಾ ದರ್ಬಾರಿನಲ್ಲಿ ಕಂಡಿದ್ದೇವೆ.
ಸಿಂಧೂ ಅವರು ಬಹಳ ದಕ್ಷ ಅಧಿಕಾರಿಯೆಂದು ಇಲ್ಲದ ವಿಶೇಷಣಗಳನ್ನು ಅವರಿಗೆ ನೀಡಲಾರೆ. ಕೊರೋನಾ ಆರಂಭ ಕಾಲದಲ್ಲಿ ಕೊಲ್ಲಿ ರಾಷ್ಟ್ರಗಳಿಂದ ಮಂಗಳೂರಿಗೆ ಬಂದಿಳಿದ ಮಂಗಳೂರು ಮುಸ್ಲಿಮರಿಗೆ ನೀಡಲಾದ ಮಾನಸಿಕ ಹಿಂಸೆ ಇನ್ನೂ ನಮ್ಮ ಮನಸಿಂದ ಮಾಸಿಲ್ಲ. ಅದಾಗ್ಯೂ ಆ ಬಳಿಕ ಅವರು ಕೋವಿಡ್ ವಿಷಮಕಾಲದಲ್ಲಿ ನಡೆದುಕೊಂಡ ಬಗೆ, ತೆಗೆದುಕೊಂಡ ಕ್ರಮ ಇತ್ಯಾದಿಗಳನ್ನು ಸ್ವಲ್ಪವಾದರೂ ಮೆಚ್ಚದಿರಲಾಗದು. ವ್ಯವಸ್ಥೆಯ ಉಪಟಳದ ಮಧ್ಯೆಯೂ ತನ್ನ ಮಿತಿಯಲ್ಲಿ ಜನಪರವಾಗಿಯೇ ಸಿಂಧೂ ಕೆಲಸ ಮಾಡಿದ್ದಾರೆ.
ಇತ್ತೀಚೆಗೆ ಸಿಂಧೂ ಹೇಳಿದ ಕಹಿ ಸತ್ಯವೊಂದು ವ್ಯವಸ್ಥೆಯ ಕಣ್ಣು ಕೆಂಪಾಗಿಸಿದೆ ಕೂಡಾ. “ಜಿಲ್ಲೆಯಲ್ಲಿ ಕೋವಿಡ್ನಿಂದ ಮೃತರಾದವರ ಅಸಲಿ ಸಂಖ್ಯೆ ಕೇವಲ ನಾಲ್ಕು, ಉಳಿದ ಮೂವತ್ತಾರು ಸಾವುಗಳು ಇನ್ನಿತರ ಆರೋಗ್ಯ ಸಮಸ್ಯೆಗಳಿಂದ ಸಂಭವಿಸಿದ್ದು” ಎಂದು ಅವರು ಹೇಳಿದ್ದು, ಕೊರೋನಾ ಕಾಲದ ಇತರ ಸಾವಿಗೆಲ್ಲಾ ಕೊರೋನಾ ಲೇಬಲ್ ಹಚ್ಚಲಾಗುತ್ತಿದೆ ಎನ್ನುವ ಪರೋಕ್ಷ ಸಂದೇಶ ನೀಡುವಂತಿತ್ತು. ಇದರಿಂದ ಬೆತ್ತಲಾದವರು ಜಿಲ್ಲೆಯ ಕೆಲ ಖಾಸಗಿ ಆಸ್ಪತ್ರೆ ಮಾಫಿಯಾ.
ಪ್ರಭುತ್ವ ಖಾಸಗಿ ಆಸ್ಪತ್ರೆ ಮಾಫಿಯಾದೊಂದಿಗೆ ಹೇಗೆ ಕೈ ಜೋಡಿಸಿದೆ ಎನ್ನುವುದಕ್ಕೆ ಇದು ಅತ್ಯುತ್ತಮ ನಿದರ್ಶನವಾಗಿದೆ. ಜಿಲ್ಲೆಯ ಕೆಲ ದರೋಡೆಕೋರ ಖಾಸಗಿ ಆಸ್ಪತ್ರೆಗಳಿಗೆ ಕೊರೋನಾ ಬಂದಾಗಿನಿಂದ ಸುಗ್ಗಿ ಕಾಲ. ಹೇಗೆಂದರೆ ಕೊರೋನಾದಲ್ಲಿ ರೋಗಿ ಅತ್ಯಂತ ಕ್ರಿಟಿಕಲ್ ಆದಾಗ ಮಾತ್ರ ಹೆಚ್ಚಿನ ಕೇರ್ ಮತ್ತು ಔಷಧಿಗಳ ಅಗತ್ಯ ಬೀಳುತ್ತದೆ. 98% ಕೋವಿಡ್ ಪಾಸಿಟಿವ್ ರೋಗಿಗಳನ್ನು ಸುಖಾಸುಮ್ಮನೆ ವಾರಗಟ್ಟಲೆ ಆಸ್ಪತ್ರೆಗಳಲ್ಲಿ ಬಂಧಿಸಿಟ್ಟು ಒಟ್ಟು ಅಡ್ಮಿಟೆಡ್ ಅವಧಿಯಲ್ಲಿ ಎರಡು ಪ್ಯಾರಾಸಿಟಮೋಲ್, ನಾಲ್ಕು ಝಿಂಕ್, ನಾಲ್ಕು ಕ್ಯಾಲ್ಸಿಯಂ ಗುಳಿಗೆಗಳನ್ನು ನುಂಗಿಸಿ ಐವತ್ತರಿಂದ-ಅರುವತ್ತು ಸಾವಿರ ಬಿಲ್ ಸುಲಿಯಲಾಗಿದೆ.
ಯಾವಾಗ ಸಿಂಧೂ ಅಸಲಿ ಕೊರೋನಾದಿಂದ ಸಂಭವಿಸಿದ ಸಾವು ಕೇವಲ ನಾಲ್ಕು ಮಾತ್ರ ಎಂದಿದ್ದರೋ ಅಂದಿನಿಂದ ಜನ ಖಾಸಗಿ ಆಸ್ಪತ್ರೆಗಳ ವಿರುದ್ಧ ಹರಿಹಾಯತೊಡಗಿದರು. ಕೆಲ ಪತ್ರಿಕೆಗಳಲ್ಲಿ ಸಿಂಧೂ ಅವರ ಹೇಳಿಕೆಯನ್ನು ಪುಷ್ಟೀಕರಿಸುವಂತಹ ವರದಿಗಳು ಮತ್ತು ಜನಾಭಿಪ್ರಾಯಗಳೂ ಪ್ರಕಟವಾದವು.ಇದು ಖಾಸಗಿ ಆಸ್ಪತ್ರೆ ಮಾಫಿಯಾದೊಂದಿಗೆ ಕೈ ಜೋಡಿಸಿದ ಆಳುವ ವರ್ಗಕ್ಕೆ ಚಪ್ಪಲಿಯಲ್ಲಿ ಹೊಡೆದಂತಾಗಿತ್ತು. ಇದಕ್ಕೆಲ್ಲಾ ಒಂದು ಕೊನೆಗಾಣಿಸಲೇಬೇಕಿತ್ತು.
ಇದೀಗ ಆಳುವ ವರ್ಗದ ಕೃಪಾಪೋಷಿತ ಗೂಂಡಾಗಳ ವಿರುದ್ಧ ನೀಡಿದ ಹೇಳಿಕೆಯ ಸಂದರ್ಭದಲ್ಲಿ ವರ್ಗಾವಣೆ ಮಾಡಿ ಪ್ರಭುತ್ವ ಒಂದೇ ಏಟಿಗೆ ಎರಡು ಹಣ್ಣು ಉದುರಿಸಿದೆ. ಒಂದೆಡೆ ಗೂಂಡಾಗಳನ್ನು ಸಂತೈಸಿದಂತೆಯೂ ಆಯಿತು, ಇನ್ನೊಂದೆಡೆ ಖಾಸಗಿ ಆಸ್ಪತ್ರೆ ಮಾಫಿಯಾ ಜೊತೆ ಕೈ ಜೋಡಿಸಿದ ವಿಚಾರದಲ್ಲಾದ ಮುಖಭಂಗಕ್ಕೆ ಪ್ರತೀಕಾರ ತೀರಿಸಿದಂತೆಯೂ ಆಯಿತು.
ಸಿಂಧೂ ಇಂತಹ ನಡೆಗಳನ್ನು ಪ್ರಜ್ಞಾಪೂರ್ವಕವಾಗಿ ಇಟ್ಟರೋ, ಅಲ್ಲವೋ ಎಂದು ಸ್ಪಷ್ಟವಾಗಿ ಹೇಳಲಾಗದು. ಆದರೆ ಒಟ್ಟಿನಲ್ಲಿ ಅವರ ಇಂತಹ ನಡೆಗಳು ಪ್ರಭುತ್ವಕ್ಕೆ ಮುಜುಗರವುಂಟು ಮಾಡಿದ್ದಂತೂ ಸುಳ್ಳಲ್ಲ.
ಆಧುನಿಕ ಕಾಲದ ರಾಜನಂತಹ ಜಿಲ್ಲಾಧಿಕಾರಿ ಹುದ್ದೆಯನ್ನು ತೊರೆದು ಹೊರಬರಲು ಎಲ್ಲರೂ ಸಸಿಕಾಂಥ್ ಸೆಂಥಿಲ್ ಅಲ್ಲವಲ್ಲಾ….?
–ಇಸ್ಮತ್ ಪಜೀರ್, ಯುವ ಬರಹಗಾರರು.
ಓದಿ: ’ಕಡಿದು ಕೊಲೆ ಮಾಡಬೇಕು’: ದ. ಕ. ಜಿಲ್ಲಾಧಿಕಾರಿಗೆ ಕೊಲೆ ಬೆದರಿಕೆ
ಉತ್ತಮವಾದ ವಿಮರ್ಶೆ, ಸಕಾಲಿಕ ಬರಹ.