ರೈತ ಹೋರಾಟದ ಕುರಿತು ಪರಿಸರ ಕಾರ್ಯಕರ್ತೆ ಗ್ರೆಟಾ ಥನ್ಬರ್ಗ್ ಹಂಚಿಕೊಂಡಿದ್ದ ಟೂಲ್ಕಿಟ್ ಪ್ರಕರಣದಲ್ಲಿ ಬೆಂಗಳೂರಿನ ಪರಿಸರ ಹೋರಾಟಗಾರ್ತಿ ದಿಶಾ ರವಿ ಬಂಧನ ಖಂಡಿಸಿ ದೇಶ-ವಿದೇಶದಲ್ಲಿ ಆಕ್ರೋಶ ವ್ಯಕ್ತವಾಗುತ್ತಿರುವ ಸಂದರ್ಭದಲ್ಲಿಯೇ ದೆಹಲಿ ಪೊಲೀಸರು ಇನ್ನಿಬ್ಬರು ಕಾರ್ಯಕರ್ತರ ಬಂಧನಕ್ಕೆ ವಾರೆಂಟ್ ಹೊರಡಿಸಿದ್ದಾರೆ. ವಕೀಲರಾದ ನಿಕಿತ ಜಾಕೋಬ್ ಮತ್ತು ಕಾರ್ಯಕರ್ತ ಶಾಂತನು ವಿರುದ್ಧ ಜಾಮೀನು ರಹಿತ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಎನ್ಡಿಟಿವಿ ವರದಿ ಮಾಡಿದೆ.
ರೈತ ಹೋರಾಟ ಬೆಂಬಲಿಸಿ ಗ್ರೆಟಾ ಹಂಚಿಕೊಂಡಿದ್ದ ಟೂಲ್ಕಿಟ್ ಅನ್ನು ಪೊಯಟಿಕ್ ಜಸ್ಟೀಸ್ ಎಂಬ ಸಂಘಟನೆ ಸಿದ್ದಪಡಿಸಿದೆ. ಇದು ಖಲಿಸ್ತಾನಿ ಸಂಘಟನೆಯಾಗಿದೆ. ಇದರೊಂದಿಗೆ ಸಂಬಂಧ ಹೊಂದಿರುವ ಮುಂಬೈ ಮೂಲದ ವಕೀಲರಾದ ನಿಕಿತ ಜಾಕೋಬ್ ಜನವರಿ 26 ರಂದು ಟ್ವಿಟರ್ ಆಂದೋಲನಕ್ಕೆ ಕರೆ ನೀಡಿದ್ದರು ಎಂದು ಪ್ರಾಥಮಿಕ ವಿಚಾರಣೆಯಿಂದ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನೊಂದೆಡೆ ದೆಹಲಿ ಕೋರ್ಟ್ ದಿಶಾ ರವಿ ಅವರಿಗೆ ಐದು ದಿನಗಳ ಪೊಲೀಸ್ ಕಸ್ಟಡಿಗೆ ಕಳಿಸಿದೆ. ಅವರ ಮೇಲೆ ದೇಶದ್ರೋಹ ಮತ್ತು ಪಿತೂರಿಯ ಆರೋಪ ಹೊರಿಸಲಾಗಿದೆ. ಅವರು ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದಾರೆ. ಫ್ರೈಡೇಸ್ ಫಾರ್ ಫ್ಯೂಚರ್ ಇಂಡಿಯಾದ ಸಂಸ್ಥಾಪಕರಲ್ಲಿ ಒಬ್ಬರಾದ ದಿಶಾ ರವಿ ಅವರು ವಿವಾದಿತ ಟೂಲ್ಕಿಟ್ ಅನ್ನು ಸಂಪಾದಿಸಿ ಹಂಚಿಕೊಂಡಿದ್ದಾರೆ ಎಂದು ದೆಹಲಿ ಪೊಲೀಸ್ ವಕ್ತಾರರು ತಿಳಿಸಿದ್ದಾರೆ.
“ನಾನು ಟೂಲ್ಕಿಟ್ ರಚಿಸಿಲ್ಲ. ನಾವು ರೈತರನ್ನು ಬೆಂಬಲಿಸಲು ಬಯಸಿದ್ದೆವು. ಫೆಬ್ರವರಿ 3 ರಂದು ನಾನು ಎರಡು ಸಾಲುಗಳನ್ನು ಎಡಿಟ್ ಮಾಡಿದೆ” ಎಂದು ದಿಶಾ ರವಿ ನ್ಯಾಯಾಲಯಕ್ಕೆ ತಿಳಿಸಿದರು. ಹೆಚ್ಚಿನ ವಿಚಾರಣೆಗಾಗಿ ಅವರನ್ನು ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದೆ.
ಹಲವಾರು ವಿರೋಧ ಪಕ್ಷಗಳು ಮತ್ತು ಕಾರ್ಯಕರ್ತರು ಅವರ ಬಂಧನವನ್ನು ಖಂಡಿಸಿದ್ದಾರೆ.
ಇದನ್ನೂ ಓದಿ: ರೈತರ ಮೊಮ್ಮಗಳನ್ನು ಬಂಧಿಸಿದರೆ ಹೋರಾಟ ದುರ್ಬಲಗೊಳ್ಳುವುದಿಲ್ಲ: ದಿಶಾ ರವಿಗೆ ಜಾಗತಿಕ ಬೆಂಬಲ