ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹೀನಾಯವಾಗಿ ಸೋತ ಹಿನ್ನೆಲೆ ಮೈಸೂರು ರಂಗಾಯಣ ನಿರ್ದೇಶಕ ಸ್ಥಾನಕ್ಕೆ ಅಡ್ಡಂಡ ಕಾರ್ಯಪ್ಪ ರಾಜೀನಾಮೆ ನೀಡಿದ್ದಾರೆ.
ಮೈಸೂರು ರಂಗಾಯಣ ನಿರ್ದೇಶಕರಾದ ಬಳಿಕ ಅಡ್ಡಂಡ ಕಾರ್ಯಪ್ಪ ಹಲವು ವಿವಾದಗಳನ್ನು ಮೈ ಮೇಲೆ ಎಳೆದುಕೊಂಡಿದ್ದರು. ಅಡ್ಡಂಡ ಕಾರ್ಯಪ್ಪ ರಚಿತ ಟಿಪ್ಪು ನಿಜ ಕನಸುಗಳು ನಾಟಕ ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿತ್ತು. ಟಿಪ್ಪುವನ್ನು ಕೊಂದಿದ್ದು ಒಕ್ಕಲಿಗ ಜಾತಿಯ ಉರಿಗೌಡ ಮತ್ತು ನಂಜೇಗೌಡ ಎಂದು ಕಾಲ್ಪನಿಕ ಪಾತ್ರಗಳನ್ನು ಸೃಷ್ಟಿಸಿ, ಒಕ್ಕಲಿಗರು ವೀರರು ಶೂರರು ಎಂದು ಹೇಳಲು ಹೊರಟಿದ್ದರು. ಈ ಕಾಲ್ಪನಿಕ ಕಥೆಯನ್ನೇ ಬಿಜೆಪಿಯ ಒಕ್ಕಲಿಗ ರಾಜಕಾರಣಿಗಳಾದ ಸಿಟಿ ರವಿ ಹಾಗೂ ಅಶ್ವತ್ಥ ನಾರಾಯಣ ಅವರು ಸತ್ಯ ಎಂದು ಪ್ರತಿಪಾದಿಸಲು ಹೊರಟರು. ಆದರೆ ಒಕ್ಕಲಿಗ ಸಮುದಾಯದ ನಾಯಕರು ಹಾಗೂ ಆ ಸಮುದಾಯದ ಸ್ವಾಮೀಜಿ ಇದಕ್ಕೆ ವಿರೋಧ ಮಾಡಿದರು. ದೇಶಭಕ್ತ ಟಿಪ್ಪು ಸುಲ್ತಾನನನ್ನು ಕೊಂದ ದೇಶದ್ರೋಹಿ ಪಟ್ಟ ಒಕ್ಕಲಿಗರಿಗೆ ಬೇಡ ಎಂದು ಹೇಳುವ ಮೂಲಕ ಈ ಕಾಲ್ಪನಿಕ ಪಾತ್ರಗಳನ್ನು ಒಪ್ಪಲಿಲ್ಲ.
ಉರಿಗೌಡ ಮತ್ತು ನಂಜೇಗೌಡ ಎಂಬ ಕಾಲ್ಪನಿಕ ಪಾತ್ರಗಳನ್ನು ರಚಿಸುವ ಮೂಲಕ ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡಿದ್ದಾರೆ. ಈ ಎರಡು ಪಾತ್ರಗಳ ಮೂಲಕ ಒಕ್ಕಲಿಗರನ್ನು ಅವಮಾನಿಸಲಾಗುತ್ತಿದೆ ಎಂದು ಕಾಂಗ್ರೆಸ್ ಮತ್ತು ಜೆಡಿಎಸ್ ಆರೋಪಿಸಿದ್ದವು.
ಇದೀಗ ಬಿಜೆಪಿ ಸೋತ ಹಿನ್ನೆಲೆ ಅಡ್ಡಂಡ ಕಾರ್ಯಪ್ಪ ಸೂರು ರಂಗಾಯಣ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಪತ್ರಿಕಾ ಹೇಳಿಕೆ ನೀಡಿದ್ದಾರೆ. ”ನನ್ನನ್ನು ನಿರ್ದೇಶಕನನ್ನಾಗಿ ನೇಮಿಸಿದ್ದ ಬಿಜೆಪಿ ನೇತೃತ್ವದ ಸರ್ಕಾರ ವಿಧಾನ ಸಭಾ ಚುನಾವಣೆಯಲ್ಲಿ ಅಧಿಕಾರ ಕಳೆದುಕೊಂಡಿದೆ. ಜನಾದೇಶವನ್ನು ಗೌರವಿಸುತ್ತೇನೆ. ಈ ಕಾರಣದಿಂದ ನೈತಿಕ ಜವಾಬ್ದಾರಿಯಿಂದ ಮೈಸೂರು ರಂಗಾಯಣದ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ” ಎಂದು ತಿಳಿಸಿದ್ದಾರೆ.
”ನಾನು 2019ರ ಡಿ.31ರಂದು ಅಧಿಕಾರ ವಹಿಸಿಕೊಂಡಾಗ ರಂಗಾಯಣದ ಆರ್ಥಿಕ ಸ್ಥಿತಿ ಅಷ್ಟೇನೂ ಚೆನ್ನಾಗಿರಲಿಲ್ಲ. ಈಗ ₹2.09 ಕೋಟಿ ನಿರಖು ಠೇವಣಿ ಇದೆ. ಸಂಸ್ಥೆಯ ಬ್ಯಾಂಕ್ ಖಾತೆಯಲ್ಲಿ ₹1.57 ಕೋಟಿ ಉಳಿತಾಯದ ಹಣವಿದೆ. ಸಂಸ್ಥೆಯ ಪ್ರದರ್ಶನ, ದಾನಿಗಳ ನೆರವು, ಅನುದಾನ ಇತ್ಯಾದಿಗಳನ್ನು ಮಿತವ್ಯಯ ಮಾಡಿ ಉಳಿಕೆ ಮಾಡಲಾಗಿದೆ. ಸರ್ಕಾರದ ಇಡುಗಂಟು ಮೊತ್ತ ₹4 ಕೋಟಿ ಇದ್ದು, ಬಡ್ಡಿ ಮೊತ್ತ ₹50 ಲಕ್ಷ ಸಂಸ್ಥೆಗೆ ಸಿಗಲಿದೆ. ಒಟ್ಟು ₹4.16 ಕೋಟಿ ಮೊತ್ತ ಸಂಸ್ಥೆಯ ಖಾತೆಯಲ್ಲಿದೆ. ರಾಜ್ಯದ ಬೇರೆ ರಂಗಾಯಣ ಸಂಸ್ಥೆಗಳ ಖಾತೆಯಲ್ಲಿ ₹15 ಲಕ್ಷ ಕೂಡ ಉಳಿತಾಯ ಇಲ್ಲ. 3 ವರ್ಷ ಹಗಲಿರುಳು ದುಡಿದು ಮೈಸೂರು ರಂಗಾಯಣದ ಆರ್ಥಿಕ ಸ್ಥಿತಿ ಭದ್ರಪಡಿಸಿದ್ದೇನೆ” ಎಂದು ವಿವರಿಸಿದ್ದಾರೆ.
ರಾಜ್ಯದಲ್ಲಿ ನಡೆದ 224 ಕ್ಷೇತ್ರಗಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 66, ಕಾಂಗ್ರೆಸ್ 135 ಮತ್ತು ಜೆಡಿಎಸ್ 19 ಕ್ಷೇತ್ರಗಳಲ್ಲಿ ಗೆದ್ದಿವೆ.