ಬೆಂಗಳೂರಿನ ಗವಿಪುರಂ ಕೊರೊನಾ ರೋಗಿಯೊಬ್ಬರು ತಮ್ಮ ಮನೆ ಮುಂದೆ ಆಂಬುಲೆನ್ಸ್ಗಾಗಿ ಸುಮಾರು ಎರಡು ಗಂಟೆಗಳ ಕಾಲ ಕಾದು, ಕೊನೆಗೆ ಅಲ್ಲೆ ಪ್ರಾಣ ಬಿಟ್ಟ ದುರ್ಘಟನೆಗೆ BBMP ಕಮಿಷನರ್ ಬಿ.ಎಚ್ ಅನಿಲ್ ಕುಮಾರ್ ಕೈಮುಗಿದ ಕ್ಷಮೆ ಕೇಳಿದ್ದಾರೆ.
55 ವರ್ಷದ ವ್ಯಕ್ತಿಯ ಶವವನ್ನು ಅವರ ಮನೆಯ ಹೊರಗಿನ ಬೀದಿಯಲ್ಲಿ ಮಲಗಿಸಿದ್ದು, ಅವರ ಸಂಬಂಧಿಕರು ಮೃತದೇಹದ ಪಕ್ಕದಲ್ಲಿ ನಿಂತಿರುವ ವಿಡಿಯೋವೊಂದು ಎಲ್ಲೆಡೆ ವೈರಲ್ ಆಗಿತ್ತು.
ಘಟನೆಯ ಹಿನ್ನೆಲೆ
ಹನುಮಂತನಗರ ಬಳಿಯ ಗವಿಪುರಂ ವ್ಯಕ್ತಿಯೊಬ್ಬರು ಉಸಿರಾಟದ ಸಮಸ್ಯೆಗಳಿಂದ ಬಳಲುತ್ತಿದ್ದು, ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದರು. ಅವರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಿದ್ದು ಪಾಸಿಟಿವ್ ವರದಿ ಬರುತ್ತಿದ್ದಂತಯೇ ಅವರ ಪತ್ನಿ ಆಸ್ಪತ್ರೆಗೆ ಮಾಹಿತಿ ನೀಡಿ ಆಂಬುಲೆನ್ಸ್ಗಾಗಿ ಮನವಿ ಮಾಡಿದ್ದರು.
ಆದರೆ ಆಂಬ್ಯುಲೆನ್ಸ್ ಬರುವುದು ತಡವಾಗಿದೆ. ಅವರ ಕುಟುಂಬ ಸದಸ್ಯರು ಅವರನ್ನು ಆಟೋರಿಕ್ಷಾ ಮೂಲಕ ಆಸ್ಪತ್ರೆಗೆ ಕರೆದೊಯ್ಯಲು ನಿರ್ಧರಿಸಿದರು. ಆದರೆ ಅವರು ಮನೆಯಿಂದ ಹೊರಬಂದ ಕೂಡಲೇ ಬೀದಿಯಲ್ಲಿ ಕುಸಿದುಬಿದ್ದಿದ್ದಾರೆ. ಅವರನ್ನು ಮಲಗಿಸಿ ಅವರ ಸಂಬಂಧಿಗಳು ಕಾಯುತ್ತಿರುವಾಗ ಪ್ರಾಣಬಿಟ್ಟಿದ್ದಾರೆ ಎನ್ನಲಾಗಿದೆ. ಎರಡು ಗಂಟೆಗಳ ವಿಳಂಬದ ನಂತರ ಆಂಬ್ಯುಲೆನ್ಸ್ ಅಲ್ಲಿಗೆ ತಲುಪಿತು ಎನ್ನಲಾಗಿದೆ.
ವಿಷಯ ತಿಳಿದ ನಂತರ ಬೆಂಗಳೂರು BBMP ಕಮಿಷನರ್ ಬಿ.ಎಚ್ ಅನಿಲ್ ಕುಮಾರ್ ಅವರ ಮನಗೆ ತೆರಳಿ ಕೈ ಮುಗಿದ ಬೇಷರತ್ ಕ್ಷಮೆ ಕೇಳಿದ್ದಾರೆ. ಘಟನೆಯ ತನಿಖೆಗೆ ಆದೇಶಿಸಲಾಗುವುದು. ಆರೋಗ್ಯ ಸೇವೆಗಳ ಮೇಲೆ ಭಾರಿ ಒತ್ತಡವಿದ್ದರೂ ಭವಿಷ್ಯದಲ್ಲಿ ಇಂತಹ ಘಟನೆಗಳು ಪುನರಾವರ್ತನೆಯಾಗದಂತೆ ನೋಡಿಕೊಳ್ಳುತ್ತೇವೆ ಎಂದು ಅವರು ಹೇಳಿದ್ದಾರೆ. ಈ ಕುರಿತು ಟ್ವೀಟ್ ಕೂಡ ಮಾಡಿದ್ದಾರೆ.
ಕೋವಿಡ್19 ಸೋಂಕಿನಿಂದ ನಿನ್ನೆ ಮೃತಪಟ್ಟ ಹನುಮಂತನಗರದ ಗವಿಪುರಂನ ನಿವಾಸಿಯವರ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ತಿಳಿಸಲಾಯಿತು. ಇಂತಹ ಘಟನೆ ನಡೆದಿರುವುದು ವಿಷಾದನೀಯ. ಇದಕ್ಕಾಗಿ #ಬಿಬಿಎಂಪಿ ಅಧಿಕಾರಿಗಳ ಪರವಾಗಿ ಕ್ಷಮೆ ಕೋರುತ್ತೇನೆ.#BBMP #Bengaluru #BBMPFightsCovid19 pic.twitter.com/r3hBs8vNmg
— B.H.Anil Kumar,IAS (@BBMPCOMM) July 4, 2020
ತಪ್ಪನ್ನು ಒಪ್ಪಿಕೊಂಡು ಕ್ಷಮೆ ಕೇಳಿದ ಅನಿಲ್ ಕುಮಾರ್ರವರ ಕಾರ್ಯಕ್ಕೆ ಸಾಮಾಜಿಕ ಮಾಧ್ಯಮಗಳಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಬಹಳಷ್ಟು ನೆಟ್ಟಿಗರು ಸರ್ಕಾರವೊಂದಕ್ಕೆ ಇರಬೇಕಾದ ಪ್ರಾಮಾಣಿಕತೆ ಇದು ಎಂದು ಬರೆದಿದ್ದಾರೆ.
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟ್ವೀಟ್ ಮಾಡಿ “ಸಕಾಲದಲ್ಲಿ ಅಂಬ್ಯುಲೆನ್ಸ್ ಬರದೆ ಸಾವನಪ್ಪಿದ್ದ ಕೊರೊನಾ ಸೋಂಕಿತರ ಮನೆಗೆ ತೆರಳಿ ಕುಟುಂಬದ ಕ್ಷಮೆ ಕೇಳಿದ ಬಿಬಿಎಂಪಿ ಕಮಿಷನರ್ ಅನಿಲ್ ಕುಮಾರ್, ನಮ್ಮೆಲ್ಲ ಅಧಿಕಾರಿಗಳಿಗೆ ಮಾದರಿಯಾಗಿದ್ದಾರೆ, ಅವರಿಗೆ ಅಭಿನಂದನೆಗಳು. ಜನತೆ ಅಧಿಕಾರಿಗಳಿಂದ ನಿರೀಕ್ಷಿಸುವುದು ಇಂತಹ ಸೂಕ್ಷ್ಮ ಅಂತಕರಣದ ಮಾನವೀಯ ನಡವಳಿಕೆಯನ್ನು” ಎಂದಿದ್ದಾರೆ.
ಸಕಾಲದಲ್ಲಿ ಅಂಬ್ಯುಲೆನ್ಸ್ ಬರದೆ ಸಾವನಪ್ಪಿದ್ದ ಕೊರೊನಾ ಸೋಂಕಿತರ ಮನೆಗೆ ತೆರಳಿ ಕುಟುಂಬದ ಕ್ಷಮೆ ಕೇಳಿದ @BBMPCOMM ಅನಿಲ್ ಕುಮಾರ್, ನಮ್ಮೆಲ್ಲ ಅಧಿಕಾರಿಗಳಿಗೆ ಮಾದರಿಯಾಗಿದ್ದಾರೆ, ಅವರಿಗೆ ಅಭಿನಂದನೆಗಳು.
ಜನತೆ ಅಧಿಕಾರಿಗಳಿಂದ ನಿರೀಕ್ಷಿಸುವುದು ಇಂತಹ ಸೂಕ್ಷ್ಮ ಅಂತಕರಣದ ಮಾನವೀಯ ನಡವಳಿಕೆಯನ್ನು. pic.twitter.com/1joH1hnuqq
— Siddaramaiah (@siddaramaiah) July 5, 2020
ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಬೆಂಗಳೂರು ಕೊರೊನಾ ನಿರ್ವಹಣೆ ಉಸ್ತುವಾರಿ, ಸಚಿವ ಆರ್.ಅಶೋಕ್, ಈ ದುರ್ಘಟನೆಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಕೊರೊನಾ ಸಕಾರಾತ್ಮಕ ಪ್ರಕರಣಗಳ ಸಂಖ್ಯೆ ಒಂದು ವಾರದಲ್ಲಿ ಹಲವು ಪಟ್ಟು ಹೆಚ್ಚಾಗಿದೆ. ಬಹಳಷ್ಟು ಜನರು ಬೆಂಗಳೂರು ತೊರೆದು ತಮ್ಮ ಊರುಗಳಿಗೆ ಮರಳಿದ್ದಾರೆ ಎಂದು ವರದಿಯಾಗಿದೆ.
ಕರ್ನಾಟಕವು ಶನಿವಾರ ಒಂದೇ ದಿನ 1,839 ಹೊಸ COVID-19 ಪ್ರಕರಣಗಳನ್ನು ವರದಿ ಮಾಡಿದೆ. ಅವುಗಳಲ್ಲಿ 1,172 ಪ್ರಕರಣಗಳು ಬೆಂಗಳೂರಿನಲ್ಲೇ ದಾಖಲಾಗಿವೆ. ರಾಜ್ಯದಲ್ಲಿ ಒಟ್ಟು ಸೋಂಕುಗಳ ಸಂಖ್ಯೆ 21,549 ಮತ್ತು ಸಾವುಗಳು 335 ಕ್ಕೆ ತಲುಪಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಇದನ್ನೂ ಓದಿ: ಆಂಬುಲೆನ್ಸ್ಗಾಗಿ 2 ಗಂಟೆ ಕಾಯುವಿಕೆ: ಮನೆ ಮುಂದೆ ಪ್ರಾಣಬಿಟ್ಟ ಬೆಂಗಳೂರಿನ ಕೊರೊನಾ ಸೋಂಕಿತ!