ಮಣಿಪುರದಲ್ಲಿ ಕುಕಿ ಮಹಿಳೆಯರನ್ನು ಬೆತ್ತಲೆಗೊಳಿಸಿ ಮೆರವಣಿಗೆ ಮಾಡಿದ ಹೇಯ ಕೃತ್ಯದ ವಿಡಿಯೋ ಕಳೆದ ವಾರ ವೈರಲ್ ಆಗಿತ್ತು. ಇದರಿಂದ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು. ಇದೀಗ ಅಮೆರಿಕ ಕೂಡ “ಆಘಾತ ಮತ್ತು ಗಾಬರಿಗೊಂಡಿದೆ” ಎಂದು ವಾಷಿಂಗ್ಟನ್ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಬಗ್ಗೆ ವಿದೇಶಾಂಗ ಇಲಾಖೆಯ ಉಪ ವಕ್ತಾರರಾದ ವೇದಾಂತ್ ಪಟೇಲ್ ಅವರು ಪತ್ರಿಕಾಗೋಷ್ಠಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದು, ”ಈ ಲಿಂಗ ಆಧಾರಿತ ಹಿಂಸಾಚಾರದಿಂದ ಬದುಕುಳಿದವರಿಗೆ ನಾವು ನಮ್ಮ ಆಳವಾದ ಸಹಾನುಭೂತಿಗಳನ್ನು ತಿಳಿಸುತ್ತೇವೆ ಮತ್ತು ಅವರಿಗೆ ನ್ಯಾಯ ದೊರಕಿಸುವ ಭಾರತ ಸರ್ಕಾರದ ಪ್ರಯತ್ನಗಳನ್ನು ಬೆಂಬಲಿಸುತ್ತೇವೆ. ಜುಲೈ 23ರಂದು, ವಿದೇಶಾಂಗ ಇಲಾಖೆಯು ಲೈಂಗಿಕ ದೌರ್ಜನ್ಯದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದೆ” ಎಂದು ಹೇಳಿದರು.
ಬುಧವಾರವೂ ಮುಂದುವರೆದ ಹಿಂಸಾಚಾರ:
ಮೊರೆಹ್ ಜಿಲ್ಲೆಯಲ್ಲಿ ಈ ಹೀಂಸಾಚಾರದಿಂದ ಸ್ಥಾಳಾಂತರಗೊಂಡಿರುವವ ಮನೆಗಳಿಗೆ ದುಷ್ಕರ್ಮಿಗಳ ಗುಂಪೊಂದು ಬುಧವಾರ ಬೆಂಕಿ ಹಚ್ಚಿದೆ ಎಂದು ಪಿಟಿಐ ವರದಿ ಮಾಡಿದೆ.
ಈ ಮನೆಗಳು ಮ್ಯಾನ್ಮಾರ್ ಗಡಿಗೆ ಸಮೀಪವಿರುವ ಮೊರೆಹ್ ಬಜಾರ್ ಪ್ರದೇಶದಲ್ಲಿವೆ. ಹಿಂಸಾಚಾರ ಭುಗಿಲೆದ್ದ ನಂತರ ಅವರು ಪ್ರದೇಶವನ್ನು ತೊರೆದ ಮೈತಿ ಸಮುದಾಯಕ್ಕೆ ಸೇರಿದವರು ಎಂದು ವರದಿಯಾಗಿದೆ.
ಮೊರೆಹ್ನಲ್ಲಿ ನಡೆದ ಘಟನೆಯ ಕೆಲವು ಗಂಟೆಗಳ ಮೊದಲು, ಕಾಂಗ್ಪೋಕ್ಪಿ ಜಿಲ್ಲೆಯ ಜನಸಮೂಹವು ಸಿಬ್ಬಂದಿಯನ್ನು ಸಾಗಿಸಲು ಭದ್ರತಾ ಪಡೆಗಳು ಬಳಸುತ್ತಿದ್ದ ಎರಡು ಬಸ್ಗಳಿಗೆ ಬೆಂಕಿ ಹಚ್ಚಿದೆ. ಮಂಗಳವಾರ ಸಂಜೆ ದಿಮಾಪುರದಿಂದ ಬಸ್ಸುಗಳು ಹೋಗುತ್ತಿದ್ದಾಗ ಸಪೋರ್ಮಿನಾ ಪ್ರದೇಶದಲ್ಲಿ ಬೆಂಕಿ ಹಚ್ಚಲಾಗಿದೆ. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಮಣಿಪುರದಲ್ಲಿ ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಿದ ಮತ್ತು ಹಲ್ಲೆ ಮಾಡಿದ ಘಟನೆಯಿಂದ ಸಶಸ್ತ್ರ ನಾಗಾ ಗುಂಪಿನ ರಾಷ್ಟ್ರೀಯ ಸಮಾಜವಾದಿ ಕೌನ್ಸಿಲ್ ಆಫ್ ನಾಗಾಲ್ಯಾಂಡ್ (ಇಸಾಕ್-ಮುಯಿವಾ) ನ ಮಹಿಳಾ ವಿಭಾಗವು ”ಆಘಾತ ಮತ್ತು ಭಯಭೀತರಾಗಿದ್ದೇವೆ” ಎಂದು ಹೇಳಿದೆ.
ರಾಜ್ಯದಲ್ಲಿ ನಡೆಯುತ್ತಿರುವ ಹಿಂಸಾಚಾರದ ಬಗ್ಗೆ ಈ ಗುಂಪು ಮಾತನಾಡಿರುವುದು ಇದೇ ಮೊದಲು. ನಾಗಾಲಿಮ್ನ ರಾಷ್ಟ್ರೀಯ ಸಮಾಜವಾದಿ ಮಹಿಳಾ ಸಂಘಟನೆಯ ಅಧ್ಯಕ್ಷೆ ಹೊಶೆಲಿ ಅಚುಮಿ ಮಾತನಾಡಿದ್ದು, ”ಮಣಿಪುರದಲ್ಲಿ ಮಹಿಳೆಯರ ಹಕ್ಕುಗಳಿಗೆ, ವಿಶೇಷವಾಗಿ ಅವರ ಜೀವನೋಪಾಯ ಮತ್ತು ಘನತೆಗೆ ಬೆದರಿಕೆ ಇರುವ ದುಃಸ್ವಪ್ನ ಪರಿಸ್ಥಿತಿಯಿಂದ ನಮ್ಮ ಸಮೂಹ ಆಘಾತಕ್ಕೊಳಗಾಗಿದೆ. ಮಣಿಪುರದ ಹಿಂಸಾಚಾರದಿಂದ ರಾಜ್ಯದಲ್ಲಿ “ಯಾವುದೇ ಸಮಾನತೆಯನ್ನು ಕಾಣುವುದಿಲ್ಲ” ಎಂದು ಅವರು ಹೇಳಿದರು.
ಕಳೆದ ವಾರ ರಾಷ್ಟ್ರವ್ಯಾಪಿ ಆಕ್ರೋಶಕ್ಕೆ ಕಾರಣವಾಗಿದ್ದ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಪೊಲೀಸರು ಇದುವರೆಗೆ ಏಳು ಮಂದಿಯನ್ನು ಬಂಧಿಸಿದ್ದಾರೆ. ಮೇ 4 ರಂದು ಹಲ್ಲೆ ನಡೆದಿದ್ದು, ಪೊಲೀಸರು ಮೇ 18 ರಂದು ಎಫ್ಐಆರ್ ಸಲ್ಲಿಸಿದ್ದರು. ಆದರೆ, ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೆಯಾದ ನಂತರ ಕಳೆದ ವಾರವಷ್ಟೇ ಮೊದಲ ಬಂಧನವನ್ನು ಮಾಡಲಾಗಿದೆ.
ಇದನ್ನೂ ಓದಿ: ‘ಮಿಸ್ಟರ್ ಮೋದಿ, ಏನು ಬೇಕಾದರೂ ಕರೆಯಿರಿ, ಮಣಿಪುರದಲ್ಲಿ ಶಾಂತಿಯನ್ನು ಮರುನಿರ್ಮಾಣ ಮಾಡುತ್ತೇವೆ’: ರಾಹುಲ್ ಗಾಂಧಿ