Homeಅಂತರಾಷ್ಟ್ರೀಯಎಲ್ಲರೂ ಜೊತೆಗೂಡಿ ಆರಿಸಬೇಕಾದ ಅಮೆಜಾನ್ ಕಾಡಿನ ಬೆಂಕಿ...

ಎಲ್ಲರೂ ಜೊತೆಗೂಡಿ ಆರಿಸಬೇಕಾದ ಅಮೆಜಾನ್ ಕಾಡಿನ ಬೆಂಕಿ…

- Advertisement -
- Advertisement -

| ಸಂಪಾದಕೀಯ |

ಜಗತ್ತಿನ ಒಟ್ಟು ಶುದ್ಧ ಕುಡಿಯುವ ನೀರಿನಲ್ಲಿ ಐದನೇ ಒಂದು ಭಾಗವನ್ನು ಪೂರೈಸುವ ಅಮೆಜಾನ್ (ನದಿ ಮತ್ತು ಕಾಡು)ಗೆ ಬೆಂಕಿ ಬಿದ್ದಿದೆ. ಕಳೆದ ತಿಂಗಳೊಂದರಲ್ಲೇ 26,000 ಕಡೆ ಬೆಂಕಿ ಬಿದ್ದಿದೆ. ವರ್ಷದ ಆರಂಭದಿಂದ ಲೆಕ್ಕಕ್ಕೆ ತೆಗೆದುಕೊಂಡರೆ 80,000 ಕಡೆ ಕಾಡಿಗೆ ಬೆಂಕಿ ಬಿದ್ದಿದೆ. ಇದು ಬಿದ್ದ ಬೆಂಕಿ ಅಲ್ಲ, ಹಚ್ಚಿದ ಬೆಂಕಿ ಮತ್ತು ಇದಕ್ಕೆ ಆ ದೇಶದ ಮುಖ್ಯಸ್ಥರ ಬೆಂಬಲವಿದೆ ಎಂಬುದೇ ಕಳವಳದ ಸಂಗತಿ. ಆ ದೇಶದ ಮುಖ್ಯಸ್ಥರ ಬೆಂಬಲವಷ್ಟೇ ಅಲ್ಲದೇ ಅಮೆರಿಕಾದ ಕೃಷಿ ವ್ಯವಹಾರಸ್ಥರ ಬೆಂಬಲವೂ ಇದೆ ಎಂದು ಹೇಳಲಾಗುತ್ತಿದೆ. ಬ್ರೆಜಿಲ್‍ನ ಈಗಿನ ಅಧ್ಯಕ್ಷ ಬೊಲ್ಸೆನಾರೋ ಚುನಾವಣೆಗೆ ಸ್ಪರ್ಧಿಸಿದ್ದಾಗ ನೀಡಿದ್ದ ಚುನಾವಣಾ ಭರವಸೆಯಲ್ಲೇ ಅಮೆಜಾನ್ ಕಾಡನ್ನು ರಕ್ಷಿಸುವ ಕಾಯ್ದೆಗಳನ್ನು ಸಡಿಲಿಸುವುದೂ ಸೇರಿತ್ತು.

ಆ ದೇಶದಲ್ಲಿ ಕಾಡೆಷ್ಟಿರಬೇಕು, ಅಲ್ಲಿ ವ್ಯವಸಾಯ ಮಾಡಲು ಬಯಸುವವರಿಗೆ ಭೂಮಿ ಒದಗಿಸಲು ಯಾವ ರೀತಿಯ ನೀತಿಯಿರಬೇಕು ಎಂಬುದನ್ನು ಅವರು ತಾನೇ ನಿರ್ಧರಿಸಬೇಕು? ಅದೇ ಮಾತನ್ನು ಬೊಲ್ಸೆನಾರೋ ಹೇಳುತ್ತಿರುವುದು. ಈ ಬೆಂಕಿಯನ್ನು ನಂದಿಸಿ ಕಾಡನ್ನು ರಕ್ಷಿಸಲು 20 ಮಿಲಿಯನ್ ಡಾಲರ್ ಕೊಡುತ್ತೇವೆಂದು ಜಿ 7 ರಾಷ್ಟ್ರಗಳ ಶೃಂಗಸಭೆ ಹೇಳಿದಾಗ, ‘ಅದರ ಅಗತ್ಯವಿಲ್ಲ. ಇದು ನಮ್ಮ ಆಂತರಿಕ ವಿಚಾರ’ ಎಂದು ಬೋಲ್ಸೆನಾರೋ ಹೇಳಿಯಾಗಿದೆ.

ಆ ದೇಶದಲ್ಲಿ ಪರಿಸರ ಪ್ರೇಮಿಗಳು ಮತ್ತು ‘ರೈತ ನಾಯಕರು ಹಾಗೂ ಉದ್ದಿಮೆದಾರರ’ ನಡುವೆ ಈ ಕುರಿತು ಒಮ್ಮತವಿಲ್ಲ. ಪರಿಸರವಾದಿಗಳು ಕಾಡನ್ನುಳಿಸೋಣ ಎಂದರೆ, ನಮ್ಮ ಜೀವನಕ್ಕೆ ಕಲ್ಲು ಹಾಕಲು ಬರಬೇಡಿ ಎಂದು ಇನ್ನೊಂದು ಪಕ್ಷ ಹೇಳುತ್ತಿದೆ. ‘ಅಮೆಜಾನ್ ಉಳಿಸಿ’ ಎಂಬ ಕೂಗನ್ನು ಬ್ರೆಜಿಲ್ಲೇತರ ಜನರು ಹೇಳಿದಾಗಲೆಲ್ಲಾ ಅಲ್ಲಿ ತಲ್ಲಣವುಂಟಾಗುತ್ತದೆ. ‘ನಮ್ಮ ದೇಶದ ಕಾಡಿನ ಮೇಲೆ ಅಧಿಕಾರ ಚಲಾಯಿಸಲು ಅವರ್ಯಾರು’ ಎಂಬ ಕೂಗು ಹಾಕುತ್ತಾರೆ. ‘ಇದೊಂಥರಾ ವಸಾಹತುಶಾಹಿ ಮನಸ್ಥಿತಿ. ತಮ್ಮ ದೇಶಗಳ ಪರಿಸರವನ್ನು ಪೂರಾ ಹಾಳುಗೆಡವಿಕೊಂಡಿರುವ ಇವರು, ಮಾಜಿ ವಸಾಹತುಗಳಾದ ನಮ್ಮ ಪರಿಸರವನ್ನು ಉಳಿಸಲು ಕರೆ ಕೊಡುವುದನ್ನು ನಾವು ಒಪ್ಪಲು ಸಾಧ್ಯವೇ ಇಲ್ಲ’ ಎಂದು ಅವರು ಹೇಳುತ್ತಾರೆ.

ಅಮೆಜಾನ್‍ಗೆ ಬೆಂಕಿ ಹಚ್ಚಿ ಅಮೂಲ್ಯವಾದ ಕಾಡನ್ನು ಹಾಳು ಮಾಡುತ್ತಿರುವುದಲ್ಲದೇ, ಅದನ್ನು ರಕ್ಷಿಸಲೂ ಮುಂದಾಗದ ಬ್ರೆಜಿಲ್‍ನ ಸರ್ಕಾರವನ್ನು ಮಣಿಸಲು ‘ಬ್ರೆಜಿಲ್ ಸರಕುಗಳನ್ನು ಬಹಿಷ್ಕರಿಸಿ, ಅಮೆಜಾನ್ ಉಳಿಸಿ’ ಎಂಬ ಘೋಷಣೆಯಡಿ ಒಂದು ರೀತಿಯ ಆಂದೋಲನಕ್ಕೂ ಕರೆ ನೀಡಲಾಗಿದೆ. ಹಾಗಾದರೆ, ಅಲ್ಲಿಂದ ಬಹುದೂರದಲ್ಲಿರುವ ಇನ್ನೊಂದು ಮಾಜಿ ವಸಾಹತಾದ ಭಾರತದ ನಾವು ತೆಗೆದುಕೊಳ್ಳಬೇಕಾದ ನಿಲುವೇನು?

ನಮ್ಮೂರಿನ ನೀರನ್ನು ಹೇಗೆ ಬಳಸಬೇಕು, ಈ ನೆಲ ಪರಿಸರವನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂದು ಬೇರ್ಯಾರೋ ದೊಣ್ಣೆನಾಯಕ ಹೇಳಬೇಕಿಲ್ಲ ಎಂಬುದೇನೋ ಸರಿ. ಆದರೆ, ಇನ್ಯಾರೋ ಕಾಳಜಿಯಿಂದ ಹೇಳುತ್ತಿರುವುದರಲ್ಲಿ ಅವರ ಹಿತಾಸಕ್ತಿ ಮಾತ್ರವಲ್ಲದೇ ನಮ್ಮ ಉಳಿವಿನ ಪ್ರಶ್ನೆಯೂ ಇದ್ದರೇ? ಇದು ಕೇವಲ ಇಷ್ಟೇ ಆಗಿಲ್ಲ. ವಾಸ್ತವವೇನೆಂದರೆ, ಬ್ರೆಜಿಲ್‍ನಲ್ಲಿ ಭೂರಹಿತರು ಉಳುಮೆ ಮಾಡಲು ಭೂಮಿಯಿಲ್ಲದೇ ಕಾಡನ್ನು ಸುಡುತ್ತಿರುವ ಸಂಗತಿ ಇದಾಗಿಲ್ಲ. ಎಲ್ಲೋ ಕೆಲವೆಡೆ ಅದೂ ಇರಬಹುದಾದರೂ, ಭಾರೀ ಪ್ರಮಾಣದಲ್ಲಿ ಕಾಡಿನ ನಾಶಕ್ಕೆ ಮುಂದಾಗಿರುವುದು ಯುಎಸ್‍ಎ (ಅಮೆರಿಕದ)ನ ದೊಡ್ಡ ಕಂಪೆನಿಗಳ ಹಿತಾಸಕ್ತಿಯನ್ನು ಕಾಯಲು. ದೊಡ್ಡ ಪ್ರಮಾಣದ ಉಳುಮೆ ಭೂಮಿಯನ್ನು ಬೀಳು ಬಿಟ್ಟಿರುವ ದೊಡ್ಡ ದೊಡ್ಡ ಭೂಮಾಲೀಕರು, ಕಂಪೆನಿಗಳು ಆ ದೇಶದಲ್ಲಿವೆ. ಅಂತಹ ಭೂಮಿಗೆ ಲಗ್ಗೆ ಹಾಕಿ, ಅಲ್ಲಿ ಬೆಳೆ ಬೆಳೆದು ತಮ್ಮದಾಗಿಸಿಕೊಳ್ಳುವ ಒಂದು ಮಹತ್ವದ ಚಳವಳಿ ಬ್ರೆಜಿಲ್‍ನಲ್ಲಿದೆ. ಎಂಎಸ್‍ಟಿ ಎಂಬ ಈ ಭೂರಹಿತರ ಸಂಘಟನೆಯ ಹೋರಾಟದ ಕಾರಣಕ್ಕೆ, ಅಂತಹ ಭೂಮಿಯನ್ನು ಆ ಭೂರಹಿತರಿಗೇ ಕಾನೂನುಬದ್ಧವಾಗಿ ನೀಡುವ ನೀತಿಯೂ ಜಾರಿಗೆ ಬಂದಿದೆ.

ಈ ಕೆಳಗಿನ ಅಂಕಿ-ಅಂಶಗಳನ್ನು ನೋಡಿದರೆ ಅಸಲೀ ಸಂಗತಿ ಸ್ಪಷ್ಟವಾಗುತ್ತದೆ. 21.12 ಕೋಟಿ ಜನಸಂಖ್ಯೆಯುಳ್ಳ ಬ್ರೆಜಿಲ್‍ನ ವಿಸ್ತಾರ 8.510 ಮಿಲಿಯನ್ ಚದರ ಕಿ.ಮೀ. 136.87 ಕೋಟಿ ಜನಸಂಖ್ಯೆಯುಳ್ಳ ಭಾರತದ ವಿಸ್ತಾರ 3.287 ಮಿಲಿಯನ್ ಚದರ ಕಿ.ಮೀ ಆಗಿದೆ. ಇದರ ಮಧ್ಯೆಯೂ ಕೃಷಿ ಪ್ರಧಾನವಾದ ದೇಶವೊಂದು ತಾನು ಹೆಚ್ಚಿನ ಪ್ರಮಾಣದ ಭೂಮಿಯನ್ನು ಕೃಷಿಗೆ ತೊಡಗಿಸುತ್ತೇನೆಂದು ನಿರ್ಧರಿಸುವ ಹಕ್ಕನ್ನು ಹೊಂದಿರುತ್ತದೆ. ಆದರೆ ಇಲ್ಲಿ ಅಮೆರಿಕಾದ ಹಿತಾಸಕ್ತಿಗೆ ತಕ್ಕಂತೆ ಕುಣಿಯುತ್ತಿರುವ ಮತ್ತು ತನ್ನ ದೇಶದ ಜನರ ಹಿತಾಸಕ್ತಿಗೆ ವಿರುದ್ಧವಾಗಿಯೂ ವರ್ತಿಸುತ್ತಿರುವ ಅಧ್ಯಕ್ಷ ಮತ್ತು ಆತನ ಪಕ್ಷವು ನಾಶಕ್ಕೆ ಮುಂದಾಗಿದೆ.

ಆ ದೇಶದಲ್ಲಿ ಬೀಳುಬಿದ್ದಿರುವ ಲಕ್ಷಗಟ್ಟಲೆ ಎಕರೆ ಭೂಮಿಯನ್ನು ಜನರಿಗೆ ಹಂಚಲು ಯಾವ ಆಸಕ್ತಿ ಹೊಂದಿಲ್ಲದ ಸರ್ಕಾರ ಅದಾಗಿದೆ. ಭಾರತದಲ್ಲಿ ಮೋದಿ ಹೇಗೋ ಹಾಗೆಯೇ ಈ ಬೊಲ್ಸೆನಾರೋ ಸಹಾ ಭಾರೀ ಜನಬೆಂಬಲದೊಂದಿಗೆ ಗೆದ್ದು ಬಂದಿರುವುದು. ಹೀಗಾಗಿ ಪರಿಸ್ಥಿತಿ ಕ್ಲಿಷ್ಟವೂ, ಅಪಾಯಕಾರಿಯೂ ಆಗಿದೆ.

ಇಂತಹ ಸಂದರ್ಭದಲ್ಲಿ ಬ್ರೆಜಿಲ್ ಒಳಗಿನ ವಿವೇಕದ ದನಿಗಳಿಗೆ, ಎಂಎಸ್‍ಟಿಯಂತಹ ಸಂಘಟನೆಗಳು ಹೇಳುವ ಸಂಗತಿಗಳಿಗೆ ನಮ್ಮ ಬೆಂಬಲ ಕೊಡುವುದು ಜಗತ್ತಿನ ಎಲ್ಲರ ಕರ್ತವ್ಯವಾಗಿದೆ. ಏಕೆಂದರೆ, ಸದರಿ ಅಮೆಜಾನ್ ಕಾಡುಗಳಲ್ಲಿನ ಆದಿವಾಸಿಗಳನ್ನು ಅಲ್ಲಿಂದ ಒದ್ದೋಡಿಸಿ, ಕಾಡನ್ನು ವಶಪಡಿಸಿಕೊಳ್ಳಬೇಕು ಎಂದು ಬಹಿರಂಗವಾಗಿ ಘೋಷಿಸಿದ್ದ ವ್ಯಕ್ತಿ ಬೊಲ್ಸೆನಾರೋ; ಇದೇ ವ್ಯಕ್ತಿ ಪಾರ್ಲಿಮೆಂಟಿನಲ್ಲೇ ಈ ಹಿಂದೆ ಜನಸಾಮಾನ್ಯರ ಪರವಾಗಿ ದನಿಯೆತ್ತಿದ್ದ ಸಂಸದೆಯೊಬ್ಬರಿಗೆ ‘ನಿನ್ನನ್ನು ನಾನು ರೇಪ್ ಮಾಡುವುದೂ ಇಲ್ಲ. ಅದಕ್ಕೂ ನೀನು ಅರ್ಹಳಲ್ಲ’ ಎಂದು ಹೇಳಿದ್ದನಲ್ಲದೇ, ಸ್ವತಃ ತನ್ನ ಬಗ್ಗೆಯೇ ‘ನನಗೆ ಐದು ಮಕ್ಕಳು. ಮೊದಲ ನಾಲ್ವರು ಹುಡುಗರು. ನಂತರ ನಾನು ದುರ್ಬಲನಾದೆ. ಹಾಗಾಗಿ ಮಗಳು ಜನಿಸಿದಳು’ ಎಂದಿದ್ದ.

ಈ ಪ್ರಕರಣದಲ್ಲೂ ಫ್ರೆಂಚ್ ಅಧ್ಯಕ್ಷ ಮ್ಯಾಕ್ರೋನ್ ಅಮೆಜಾನ್ ಕಾಡಿನ ಕುರಿತು ಕಾಳಜಿ ವ್ಯಕ್ತಪಡಿಸಿದಾಗ, ಮ್ಯಾಕ್ರೋನ್ ಪತ್ನಿಯ ಕುರಿತು ಕೀಳು ಅಭಿರುಚಿಯ ಟ್ವಿಟ್ಟರ್ ಕಾಮೆಂಟ್ ಮಾಡಿದ್ದು ಇದೇ ಬ್ರೆಜಿಲ್ ಅಧ್ಯಕ್ಷ. ಬಡವರು, ದುರ್ಬಲರು, ಕಪ್ಪುವರ್ಣೀಯರು, ಆದಿವಾಸಿಗಳು, ಮಹಿಳೆಯರ ಕುರಿತಾಗಿ ಈತನ ದ್ವೇಷಪೂರಿತ ಮನೋಭಾವವೇ ಪರಿಸರದ ಕುರಿತೂ ವ್ಯಕ್ತವಾಗುತ್ತಿದೆ. ಜಗತ್ತಿನೆಲ್ಲೆಡೆ ಮನುಷ್ಯ ಕುಲದ ವಿನಾಶಕ್ಕೆ ನಿಂತಿರುವ ಬೊಲ್ಸೆನಾರೋಗಳ ವಿರುದ್ಧ ಜಗತ್ತಿನೆಲ್ಲೆಡೆಯ ಜನರೂ ಒಂದಾಗಿ ದನಿಯೆತ್ತಬೇಕಾದ ದಿನಗಳು ಬಂದಿವೆ. ಅಮೆಜಾನ್‍ಗೆ ಬಿದ್ದಿರುವ ಬೆಂಕಿ ಭಾರತವನ್ನೂ ಸುಡುತ್ತದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಪೊಲೀಸರನ್ನು ನಿಯಂತ್ರಿಸದಿದ್ದರೆ ಜರ್ಮನಿಯ ನಾಜಿಗಳಂತೆ ಆಗಬಹುದು’: ದಲಿತ ವ್ಯಕ್ತಿಯ ಮೇಲಿನ ದೌರ್ಜನ್ಯ ಪ್ರಕರಣದಲ್ಲಿ ಪಾಟ್ನಾ ಹೈಕೋರ್ಟ್ ಕಳವಳ

ದಲಿತ ವ್ಯಕ್ತಿಯೊಬ್ಬರ ಜಾತಿ ತಿಳಿದ ನಂತರ ಅವರ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಬಿಹಾರದ ಮಾಜಿ ಪೊಲೀಸ್ ಅಧಿಕಾರಿಯ ವಿರುದ್ಧ ತಕ್ಷಣವೇ ಎಫ್‌ಐಆರ್ (FIR) ದಾಖಲಿಸುವಂತೆ ಪಾಟ್ನಾ ಹೈಕೋರ್ಟ್ ನಿರ್ದೇಶಿಸಿದೆ....

“ಎಷ್ಟೊಂದು ದುರಹಂಕಾರ!”: ಜೆ.ಪಿ.ನಡ್ಡಾ ಹೇಳಿಕೆಗೆ ಕಪಿಲ್ ಸಿಬಲ್ ತೀವ್ರ ಆಕ್ಷೇಪ; ಪ್ರತಿಭಟನಾನಿರತ ಸಿಜೆಪಿ ಬೆಂಬಲಿಸಿ ವೀಡಿಯೋ ಸಂದೇಶ

ಪರೀಕ್ಷಾ ಅಕ್ರಮಗಳನ್ನು ಖಂಡಿಸಿ ಕ್ರಾಂತಿಕಾರಿ ಜಿರಳೆ ಜನತಾ ಪಕ್ಷ (ಸಿಜೆಪಿ) ನಡೆಸುತ್ತಿರುವ ವಿದ್ಯಾರ್ಥಿ ಪ್ರತಿಭಟನೆಯ ವಿಚಾರದಲ್ಲಿ ಕೇಂದ್ರ ಸರ್ಕಾರದ ನಡೆಗೆ ದೇಶಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಈ ನಡುವೆ ಕೇಂದ್ರ ಸಚಿವ ಜೆ.ಪಿ....

ವಿದ್ಯಾರ್ಥಿಗಳ ಮೇಲೆ ಪೊಲೀಸ್ ದೌರ್ಜನ್ಯ: ಮೋದಿ-ಅಮಿತ್ ಶಾ ರಾಜೀನಾಮೆಗೆ ರಾಹುಲ್ ಗಾಂಧಿ ಆಗ್ರಹ

ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ 'ಸಂಸತ್ ಚಲೋ' ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳ ಮೇಲೆ ನಡೆದ ಪೊಲೀಸ್ ದೌರ್ಜನ್ಯವನ್ನು ಕಾಂಗ್ರೆಸ್ ನಾಯಕ ರಾಹುಲ್...

ಕೇಂದ್ರ ಸಚಿವ ಜೆ.ಪಿ.ನಡ್ಡಾ ಅವರನ್ನು ಭೇಟಿಯಾದ ಸಿಜೆಪಿ ನಿಯೋಗ; ಮನವಿ ಪತ್ರ ಸಲ್ಲಿಕೆ

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆಗೆ ಆಗ್ರಹಿಸಿ ನವದೆಹಲಿಯಲ್ಲಿ ಪ್ರತಿಭಟನೆ ತೀವ್ರಗೊಂಡಿರುವ ಬೆನ್ನಲ್ಲೇ ಇಂದು ಕೇಂದ್ರ ಸಚಿವ ಜೆಪಿ ನಡ್ಡಾ ಅವರನ್ನು ಸಿಜೆಪಿ ಸದಸ್ಯರಾದ ಸೌರವ್ ದಾಸ್ ಮತ್ತು ಅಶುತೋಷ್ ರಂಕಾ...

‘ಸಂಸತ್ ಚಲೋ’: ‘ಸೋನಮ್ ವಾಂಗ್ಚುಕ್ ಪತ್ನಿ ಮೇಲೆ ದೆಹಲಿ ಪೊಲೀಸರಿಂದ ಹಲ್ಲೆ’: ವಿದ್ಯಾರ್ಥಿಗಳ ಮೇಲೂ ಲಾಠಿ ಚಾರ್ಜ್  

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಆಯೋಜಿಸಲಾಗಿದ್ದ ‘ಸಂಸದ್ ಚಲೋ’ ಮೆರವಣಿಗೆಯ ವೇಳೆ ಶಿಕ್ಷಣ ತಜ್ಞ ಹಾಗೂ ಲಡಾಖ್ ಹೋರಾಟಗಾರ ಸೋನಮ್ ವಾಂಗ್ಚುಕ್ ಅವರ ಪತ್ನಿ ಗೀತಾಂಜಲಿ ಜೆ. ಆಂಗ್ಮೋ ಸೇರಿದಂತೆ ಹಲವಾರು ಪ್ರತಿಭಟನಾಕಾರರ ಮೇಲೆ...

ಕನಿಷ್ಠ 20 ಸಾವಿರ ‘ಕಾಕ್ರೋಚ್‌’ಗಳಿಂದ ಸಂಸತ್ತಿಗೆ ಮೆರವಣಿಗೆ; ವಿದ್ಯಾರ್ಥಿಗಳ ಮೇಲೆ ಪೊಲೀಸರಿಂದ ಲಾಠಿಚಾರ್ಜ್ – ಅಶ್ರುವಾಯು

ಧರ್ಮೇಂದ್ರ ಪ್ರಧಾನ್ ರಾಜೀನಾಮಗೆ ಒತ್ತಾಯಿಸಿ ಮುಂಗಾರು ಅಧಿವೇಶನದ ಮೊದಲ ದಿನದಂದು ಸಂಸತ್ತಿಗೆ ಮೆರವಣಿಗೆ ನಡೆಸಲು ದೆಹಲಿಯಲ್ಲಿ ಜಮಾಯಿಸಿದ್ದ ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ಸಾವಿರಾರು ಬೆಂಬಲಿಗರನ್ನು ಚದುರಿಸಲು ದೆಹಲಿ ಪೊಳಿಸರು ಅಶ್ರುವಾಯು ಶೆಲ್‌ಗಳನ್ನು...

ಸಿಜೆಪಿ ಪ್ರತಿಭಟನೆಗೆ ನಡುಗಿದ ಕೇಂದ್ರ ಸರ್ಕಾರ; ತರಾತುರಿಯಲ್ಲಿ ಸಂಸತ್ತಿನ ಗೇಟ್ ಮುಚ್ಚಿದ ಭದ್ರತಾ ಸಿಬ್ಬಂದಿ

ನೀಟ್‌ ಪರೀಕ್ಷೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳನ್ನು ವಿರೋಧಿಸಿ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಒತ್ತಾಯಿಸಿ ಇಂದು ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ) ಹಮ್ಮಿಕೊಂಡಿರುವ ಸಂಸತ್ ಮೆರವಣಿಗೆಗೆ ಕೇಂದ್ರ ಸರ್ಕಾರ...

ಹಕ್ಕುಗಳ ಕಾಯ್ದೆಗೆ 7 ವರ್ಷ: ಕಾಗದದಲ್ಲಷ್ಟೇ ಸಮಾನತೆ, ಉದ್ಯೋಗ ಸಿಗದೆ ಬೀದಿಗೆ ತಳ್ಳಲ್ಪಡುತ್ತಿರುವ ಟ್ರಾನ್ಸ್‌ಜೆಂಡರ್‌ ಸಮುದಾಯ

ಬೆಂಗಳೂರು: ರಾಷ್ಟ್ರೀಯ ಮಟ್ಟದಲ್ಲಿ ‘ಟ್ರಾನ್ಸ್‌ಜೆಂಡರ್ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ಕಾಯ್ದೆ-2019’ ಜಾರಿಗೆ ಬಂದು ಏಳು ವರ್ಷಗಳು ಕಳೆದಿದ್ದರೂ, ಸಮುದಾಯದ ಆರ್ಥಿಕ ಸಬಲೀಕರಣ ಇನ್ನೂ ಕನಸಾಗಿಯೇ ಉಳಿದಿದೆ. ಬೆಂಗಳೂರಿನ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ...

ಸಂಸತ್‌ ಚಲೋ: ಕಾಕ್ರೋಚ್ ಜನತಾ ಪಾರ್ಟಿ ಪ್ರತಿಭಟನೆಗೆ ಭಾರೀ ಬೆಂಬಲ

ದೇಶಾದ್ಯಂತ ಭಾರಿ ಸಂಚಲನ ಸೃಷ್ಟಿಸಿರುವ ನೀಟ್‌ (NEET) ಪ್ರಶ್ನೆಪತ್ರಿಕೆ ಸೋರಿಕೆ, ಸಾಲು ಸಾಲು ವಿದ್ಯಾರ್ಥಿಗಳ ಆತ್ಮಹತ್ಯೆ ಹಾಗೂ ದೇಶದ ಪರೀಕ್ಷಾ ವ್ಯವಸ್ಥೆಯ ಸರಣಿ ವೈಫಲ್ಯಗಳನ್ನು ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ (CJP) ಆಯೋಜಿಸಿರುವ...

ಡಿಜಿಟಲೀಕರಣಗೊಂಡ 2002ರ ಮತದಾರರ ಪಟ್ಟಿಯಿಂದ ಬೆಂಗಳೂರಿನ ಮತಗಟ್ಟೆಗಳೇ ಮಾಯ: ಮಾಹಿತಿ ಸಿಗದೆ ಆತಂಕದಲ್ಲಿ ನೂರಾರು ಮತದಾರರು

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಹಲವು ಭಾಗಗಳಲ್ಲಿ 2002ರ ಡಿಜಿಟಲೀಕರಣಗೊಂಡ ಮತದಾರರ ಪಟ್ಟಿಯಿಂದ ಇಡೀ ಮತಗಟ್ಟೆಗಳೇ ಕಾಣೆಯಾಗಿರುವ ಗಂಭೀರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇದರಿಂದಾಗಿ ನೂರಾರು ಮತದಾರರು ಆತಂಕ ಮತ್ತು ಗೊಂದಲಕ್ಕೊಳಗಾಗಿದ್ದಾರೆ ಎಂದು...