ಕನ್ನಡ ಚಿತ್ರರಂಗದಲ್ಲಿ ಹೊಸಬರ ಚಿತ್ರಗಳು ಹೆಚ್ಚು ಹೆಚ್ಚು ತೆರೆಗೆ ಬರ್ತಿವೆ. ಡಿಫರೆಂಟ್ ಕಥೆ, ಸಿನಿಮಾಟೋಗ್ರಫಿ, ಸಂಕಲನ, ಛಾಯಾಚಿತ್ರ, ನಟನೆ, ಕ್ಯಾಮರಾ, ಸಂಗೀತಗಳ ಮೂಲಕ ಯುವ ಜನತೆಯ ಮನಸ್ಸಿಗೆ ಲಗ್ಗೆಯಿಡುತ್ತಿವೆ. ಈಗ ವಿಭಿನ್ನ ಕಥಾಹಂದರ ಹೊಂದಿರುವ ‘ಅಂದವಾದ’ ಲವ್ ಸ್ಟೋರಿ ತೆರೆಗೆ ಬರಲು ಸಿದ್ಧವಾಗಿದೆ. ಚಿತ್ರದ ಹೆಸರೇ ಹೇಳುವಂತೆ ‘ಅಂದವಾದ’ ಟ್ರೇಲರ್ ಬಿಡುಗಡೆಯಾಗಿದ್ದು, ಮುದ್ದು ಮುದ್ದು ಫೀಲ್ ಕೊಡುತ್ತೆ.
ಮಳೆ ಮತ್ತು ಮಂಜಿನ ವಾತಾವರಣದಲ್ಲಿ ಚಿತ್ರೀಕರಣ ಮಾಡಲಾಗಿದೆ. ಮಲೆನಾಡಿನ ವಿವಿಧ ಭಾಗಗಳಲ್ಲಿ ಶೂಟಿಂಗ್ ಮಾಡಲಾಗಿದೆ. ಚಿತ್ರದ ನಾಯಕ, ನಾಯಕಿಯನ್ನು ಚೆಂದವಾಗಿ ತೋರಿಸಲಾಗಿದೆ. ಹೊಸ ನಿರ್ದೇಶಕ ಮತ್ತು ನಟರು ಸೇರಿ ‘ಅಂದವಾದ’ ಚಿತ್ರ ನಿರ್ಮಿಸಿದ್ದು, ಗುರುಕಿರಣ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾದ ಟ್ರೇಲರ್ ಹೊಸ ಭರವಸೆ ಮೂಡಿಸಿದೆ.
‘ಅಂದವಾದ’ ಟ್ರೇಲರ್ ಬಿಡುಗಡೆಯಾದ ಒಂದೇ ದಿನದಲ್ಲಿ 5 ಸಾವಿರಕ್ಕೂ ಹೆಚ್ಚು ವೀಕ್ಷಣೆ ಪಡೆದಿದೆ. ಚಿತ್ರದ ನಿರೂಪಣೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಚಿತ್ರದ ಟ್ರೇಲರ್ ನಲ್ಲಿ ನಾಯಕ, ನಾಯಕಿಯ ಪ್ರೇಮಕಥನ ಅನುರಣಿಸುತ್ತದೆ. ಪ್ರೇಮ ಸನ್ನಿವೇಶ, ಮೌನ ಸಂಭಾಷಣೆ ನೋಡುಗರನ್ನು ಸೆಳೆಯುತ್ತದೆ. ಒಟ್ನಲ್ಲಿ ಚಿತ್ರವು ಯುವ ಮನಸ್ಸುಗಳಿಗೆ ಮುದ ನೀಡುತ್ತದೆ ಎಂಬುದನ್ನು ಟ್ರೇಲರ್ ಬಿಚ್ಚಿಡುತ್ತದೆ.
ಚಿತ್ರವನ್ನು ಚಲ ಎಂಬುವವರು ನಿರ್ದೇಶನ ಮಾಡಿದ್ದಾರೆ. ಮಧುಶ್ರೀ ಗೋಲ್ಡನ್ ಫ್ರೇಮ್ಸ್ ಸಂಸ್ಥೆಯು ಚಿತ್ರಕ್ಕೆ ಬಂಡವಾಳ ಹೂಡಿದೆ. ವಿಕ್ರಮ್ ವರ್ಮನ್ ರಾಗ ಸಂಯೋಜನೆ, ಜೈ ನಾಯಕ, ಅನುಷಾ ರಂಗನಾಥ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಶ್ರೀಧರ್, ಹರೀಶ್ ರೈ, ಅಮರ್ ಸಲ್ವಾ ತಾರಾಗಣದಲ್ಲಿದ್ದಾರೆ. ಇದೇ 25ರಂದು ಚಿತ್ರ ತೆರೆಗೆ ಬರಲಿದೆ.