Homeದಲಿತ್ ಫೈಲ್ಸ್ಮಾತು ಮರೆತ ಭಾರತ; ಇದು ದಲಿತ ಭಾರತದ ಕಥನ

ಮಾತು ಮರೆತ ಭಾರತ; ಇದು ದಲಿತ ಭಾರತದ ಕಥನ

- Advertisement -
- Advertisement -

ಮಾತು ಮರೆಯುವುದರಲ್ಲಿ ಎರಡು ವಿಧ. ಒಂದು, ಕೊಟ್ಟ ಮಾತು ಮರೆಯುವುದು. ಇನ್ನೊಂದು ಮಾತಾಡಲೇಬೇಕಾದಾಗ ಮಾತಾಡದೇ ಇರುವುದು. ಎರಡು ಸನ್ನಿವೇಶದಲ್ಲಿಯೂ ಸಹ ಮಾತುಗಳನ್ನು ಮರೆಯಲಾಗುತ್ತದೆ. ಮರೆಯುವುದು ಸಹಜವಲ್ಲವೆ? ಹೌದು ಸಹಜ. ಒಮ್ಮೆಯಾದರೆ ಸಹಜ. ಮತ್ತೊಮ್ಮೆಯಾದರೂ ಸಹಜವೆನ್ನೋಣ. ಆದರೆ ಶತಮಾನಗಳ ಕಾಲದ ಮರೆವಿಗೆ ಏನೆನ್ನೋಣ? ಜಾಣ ಮರೆವು ಎಂದುಬಿಡಬಹುದು. ಆದರೆ ಭಾರತದಲ್ಲಿ ಜಾಣ ಮರೆವನ್ನೂ ಮೀರಿಸಿದ ಕ್ರೂರ ಮರೆವಿದೆ. ಈ ಕ್ರೂರ ಮರೆವಿಗೆ ಕಾರಣ ಒಂದು ಭಾರತವಿಲ್ಲದ್ದಾಗಿದೆ. ಇಲ್ಲಿ ನೂರಾರು ಭಾರತಗಳಿವೆ. ಅನ್ಯ ದೇಶಗಳಿಗೆ ಹೋಲಿಸಿಕೊಂಡಾಗ ಇಲ್ಲಿ ಹಲವು ಜಾತಿಗಳಿಂದ ಒಡೆದುಹೋಗಿರುವ ಹಲವು ಭಾರತಗಳಿವೆ. 1950ರಲ್ಲಿ ಸಂವಿಧಾನ ಈ ಭಾರತವನ್ನು ಒಂದು ಮಾಡುವ ಪ್ರಯತ್ನಕ್ಕೆ ಮುಂದಾಯಿತಾದರೂ ಆಳುವ ವರ್ಗ ಇಂದಿಗೂ ಅದು ಸಫಲವಾಗದಂತೆ ನೋಡಿಕೊಂಡು ಮತ್ತಷ್ಟು ಛಿದ್ರಗೊಂಡು ಮತ್ತಷ್ಟು ಭಾರತಗಳಾಗುವಂತೆ ಮಾಡಿದೆ.

ಇಂತಹ ಭಾರತದ ಪ್ರಾಚೀನ ಕಾಲದಲ್ಲಿ ಅಸ್ಪೃಶ್ಯ ಭಾರತವೂ ಇತ್ತು. ಆಧುನಿಕ ಭಾರತದಲ್ಲಿ ಪರಿಶಿಷ್ಟ ಜಾತಿಗಳಾಗಿ ಗುರುತಿಸಿಕೊಂಡು ಇಂದು ದಲಿತ ಭಾರತವಾಗಿದೆ. ಆದರೆ ಅಸ್ಪೃಶ್ಯ ಭಾರತ ಅವರ ಪಾಲಿಗೆ ಇಂದಿಗೂ ಜೀವಂತವಿದೆ. ಸಂವಿಧಾನ ಸಭೆಯಲ್ಲಿ ಅಸ್ಪೃಶ್ಯತೆಯನ್ನು ನಿಷೇಧಿಸಿ, ಇನ್ನು ಮುಂದೆ ಮನುಷ್ಯರಾದ ಅಸ್ಪೃಶ್ಯರನ್ನು ದೆವ್ವಗಳಂತೆ ಕಾಡುವುದಿಲ್ಲವೆಂದು ಮಾತು ಕೊಟ್ಟ ದಲಿತೇತರರು ತಾವು ಕೊಟ್ಟ ಮಾತನ್ನು ಉಳಿಸಿಕೊಂಡರೆ? ’ಹಿಂದೂ ನಾವೆಲ್ಲ ಒಂದು’ ಎಂದ ಸ್ವಯಂ ಸೇವಕರು ದಲಿತರನ್ನು ಸಮಾನವಾಗಿ ಕಂಡರೆ? ವಸುದೈವ ಕುಟುಂಬಕಂ ಎಂದ ಸಾಧು ಸಂತರು ದಲಿತರೊಂದಿಗೆ ಕಳ್ಳುಬಳ್ಳಿ ಸಂಬಂಧ ಬೆಳೆಸಿದರೆ? ದ್ವೈತ, ಅದ್ವೈತ್ಯ, ವಿಶಿಷ್ಟಾದ್ವೈತಗಳು ದಲಿತರಿಗೆ ದೇಗುಲ ಪ್ರವೇಶ ನೀಡಿದವೇ? ಆಧ್ಯಾತ್ಮದ ಭಾಗವಾಗಿಸಿಕೊಂಡವೆ? ಆಮ್ ಆದ್ಮಿ ಕೆ ಸಾಥ್ ಅಂದವರು ದಲಿತ ಕೇರಿಗಳನ್ನು ಮುಟ್ಟಿದರೆ? ’ಸಬ್ಕಾ ಸಾಥ್ ಸಬ್ಕಾ ವಿಕಾಸ್’ ಎಂದವರು ದಲಿತರ ವಿಕಾಸಕ್ಕೆ ಕೈ ಹಾಕಿದರೇ? ಹೀಗೆ ಸಾಲುಸಾಲು ಪ್ರಶ್ನೆಗಳಿಗೆ ಉತ್ತರ ಇಲ್ಲವೆಂದೇ ತೋರುತ್ತಿದೆ.

’ರೀ ಈಗ ಮೊದಲಿನಂತಿಲ್ಲ. ಎಲ್ಲಾ ಬದಲಾಗುತ್ತಿದೆ’ ಎಂದವರ ಮುಂದೆ ಲೆಕ್ಕವಿಲ್ಲದಷ್ಟು ದಲಿತರ ಹೆಣಗಳ ಪಟ್ಟಿ ಇಟ್ಟಾಗ ಮಾತನ್ನೇ ಮರೆತುಬಿಡುತ್ತಾರೆ. ೨೦೨೦ರಲ್ಲಿ ದಲಿತರ ಮೇಲೆ 58,563 ದೌರ್ಜನ್ಯಗಳನ್ನು ಎಸಗಲಾಗಿದೆ. ಸ್ವತಂತ್ರ ಭಾರತ ಲೆಕ್ಕವಿಲ್ಲದಷ್ಟು ದಲಿತರ ಹತ್ಯಾಕಾಂಡಗಳಿಗೆ ನ್ಯಾಯವೇ ಸಿಗದೆ ನರಳುತ್ತಿವೆ. ಪ್ರತಿ ದಿನದ ಪತ್ರಿಕೆಗಳ ಮೂಲೆಗಳಲ್ಲಿ ದಲಿತರ ಮೇಲಿನ ದೌರ್ಜನ್ಯಗಳು ವರದಿಯಾಗುತ್ತವೆ. ಇದರಲ್ಲಿ ಕೊಲೆ ಅತ್ಯಾಚಾರಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇವೆ. ಆದರೂ ದಲಿತೇತರರ ಉತ್ತರ ಸಿದ್ಧವಾಗಿರುತ್ತದೆ. ’ಈಗ ಮೊದಲಿನಂತಲ್ಲ ಬಿಡ್ರಿ’.

ವಾಚ್ ಕಟ್ಟಿದ್ದಕ್ಕೆ, ಮೀಸೆ ಬಿಟ್ಟದ್ದಕ್ಕೆ, ಕುದುರೆ ಹತ್ತಿದ್ದಕ್ಕೆ, ಅಂಬೇಡ್ಕರ್ ರಿಂಗ್‌ಟೋನ್ ಇಟ್ಟುಕೊಂಡಿದ್ದಕ್ಕೆ ದಲಿತರನ್ನ ಕೊಲೆ ಮಾಡಿಬಿಡುವಷ್ಟು ಕ್ರೂರಿಗಳು ಇಂದಿಗೂ ಈ ನೆಲದಲ್ಲಿರುವಾಗ ಭಾರತ ಸ್ವಾತಂತ್ರ್ಯಗೊಂಡಿದೆ ಎಂದು ಹೇಗೆ ಹೇಳುವುದು? ಆಗಿರುವ ಗಾಯಕ್ಕೆ ಮುಲಾಮು ಹಚ್ಚಬೇಕಾದ ಸಮಾಜ ಪದೇಪದೇ ಅದೇ ಗಾಯದ ಮೇಲೆ ಬರೆ ಹಾಕುತ್ತಾ ’ನೋಡು ಈಗ ಹಳೆಯ ಗಾಯ ಕಾಣುತ್ತಿಲ್ಲ’ ಎಂದರೆ ದಲಿತರು ನಂಬಿ ಕೂರಬೇಕೆ? ಕಾಲ ಬದಲಾಗಿದೆ ಹಾಗೂ ಸಮಾಜ ಬದಲಾಗಿದೆ ಎಂದು ಬೊಗಳೆ ಬಿಡುವ ಜಾತಿವಾದಿಗಳಿಗೆ ತಾವು ಮರೆತ ಮಾತುಗಳನ್ನು ನೆನಪಿಸಬೇಕಿದೆ. ಅಷ್ಟೇ ಅಲ್ಲ. ಭಾರತದ ಇತಿಹಾಸದಲ್ಲಿ ದಲಿತರ ಮೇಲೆ ಮೇಲ್ಜಾತಿಗಳು ನಡೆಸಿರುವ ದೌರ್ಜನ್ಯವನ್ನು ನೆನಪಿಸಬೇಕಿದೆ. ಇದರ ಜೊತೆಗೆ ದಲಿತರಲ್ಲಿಯೇ ತಮ್ಮ ಸಹಬಾಂಧವರ ಕೊಲೆಗಳನ್ನು ಮರೆತು ಮೈಮರೆತಿರುವವರಿಗೂ ದಲಿತ ಭಾರತದ ಮೇಲೆ ದಲಿತೇತರ ಭಾರತ ನಡೆಸಿರುವ ಭಯೋತ್ಪಾದನೆಯನ್ನು ನೆನಪಿಸಬೇಕಿದೆ. ಜಾತಿಯೆಂಬ ದೇಶದ್ರೋಹದ ವಿವಿಧ ಮುಖಗಳನ್ನು ಹಾಗೂ ಅದರ ಕ್ರೂರ ಮುಖವನ್ನು ತೋರಿಸಬೇಕಿದೆ.

ಬಹುದೊಡ್ಡ ವಿಸ್ಮೃತಿಯನ್ನು ಭಾರತಕ್ಕೆ ಪರಿಚಯಿಸಿ ಅಲ್ಲೆಲ್ಲ ತುಟಕ್ ಪಿಟಕ್ ಎನ್ನದೆ ಬಾಯಿ-ಮನಸ್ಸುಗಳಿಗೆ ಬೀಗ ಜಡಿದುಕೊಂಡು ಕುಳಿತಿದ್ದ, ಈಗಲೂ ಸುದೀರ್ಘ ಜೀವಂತ ಶವಗಳಾಗಿಯೇ ಉಳಿದಿರುವ ಮೂಳೆ ಮಾಂಸದ ತಡಿಕೆಗಳ ಮುಂದೆ ದಲಿತರ ಸುಟ್ಟ ಬೂದಿ, ಹೆಪ್ಪುಗಟ್ಟಿದ ನೆತ್ತರನ್ನು ತೋರಿಸಬೇಕಿದೆ.

ಅದಕ್ಕಾಗಿಯೇ ಈ ಅಂಕಣ. ಮಾತು ಮರೆತ ಭಾರತ. ಮಹಾಮರೆವಿನಲ್ಲಿ ಮುಳುಗಿ ತೇಲುತ್ತಿರುವ ದಲಿತರಿಗೂ ಹಾಗೂ ದಲಿತೇತರರಿಬ್ಬರಿಗೂ ಸಮರ್ಪಣೆ.

ಸಾಕ್ಯ ಸಮಗಾರ


ಇದನ್ನೂ ಓದಿ: ಹುಸಿ ಕಾಳಜಿಯ, ಪಕ್ಷಪಾತ ಧೋರಣೆಯ, ದ್ವೇಷದ ಅಜೆಂಡಾವುಳ್ಳ ’ದ ಕಾಶ್ಮೀರ್ ಫೈಲ್ಸ್’

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹಾಸನ ಪೆನ್‌ಡ್ರೈವ್ ಪ್ರಕರಣ: ಎಸ್‌ಐಟಿ ರಚಿಸಲು ಕೋರಿ ಮಹಿಳಾ ಆಯೋಗದಿಂದ ಸಿಎಂಗೆ ಪತ್ರ

0
ಹಾಸನ ಜಿಲ್ಲೆಯಲ್ಲಿ ಹರಿದಾಡುತ್ತಿರುವ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ವಿಶೇಷ ತಂಡ ರಚನೆ ಮಾಡುವಂತೆ ಕೋರಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌದರಿ ಅವರು ಸಿಎಂ ಸಿದ್ದರಾಮಯ್ಯ, ಗೃಹ ಸಚಿವ...