Homeಮುಖಪುಟಕೇಜ್ರಿವಾಲ್‌ ಕೊಲೆಗೆ ಬಿಜೆಪಿ ಬಯಸಿದೆ: ಎಎಪಿ ಆರೋಪ

ಕೇಜ್ರಿವಾಲ್‌ ಕೊಲೆಗೆ ಬಿಜೆಪಿ ಬಯಸಿದೆ: ಎಎಪಿ ಆರೋಪ

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ನೇತೃತ್ವದ ಪ್ರತಿಭಟನಾಕಾರರು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಮನೆಯ ಮೇಲೆ ದಾಳಿಗೆ ಯತ್ನಿಸಿದ್ದಾರೆಂಬುದು ಚರ್ಚೆಗೆ ಗ್ರಾಸವಾಗಿದೆ.

- Advertisement -
- Advertisement -

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ನೇತೃತ್ವದ ಪ್ರತಿಭಟನಾಕಾರರು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಮನೆಯ ಮೇಲೆ ದಾಳಿ ನಡೆಸಿದ್ದಾರೆ. ಕಾಶ್ಮೀರ ಫೈಲ್ಸ್ ಚಿತ್ರದ ಕುರಿತು ಕೇಜ್ರಿವಾಲ್‌ ಅವರು ನೀಡಿದ ಹೇಳಿಕೆ ವಿರೋಧಿಸಿ ಪ್ರತಿಭಟನೆ ನಡೆಸಲಾಗಿದ್ದು, ಪಂಜಾಬ್ ವಿಧಾನಸಭಾ ಚುನಾವಣೆಯ ಸೋಲಿನ ನಂತರ ಕೇಜ್ರಿವಾಲ್ ಅವರನ್ನು ಬಿಜೆಪಿ ಕೊಲ್ಲಲು ಬಯಸಿದೆ ಎಂದು ಆಮ್‌ ಆದ್ಮಿ ಪಾರ್ಟಿ (ಎಎಪಿ) ಆರೋಪಿಸಿದೆ.

ಪಂಜಾಬ್ ವಿಧಾನಸಭೆಯಲ್ಲಿ ಎಎಪಿ ಗೆಲುವು ಬಿಜೆಪಿಯನ್ನು ಕಂಗೆಡಿಸಿದೆ ಎಂದು ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹೇಳಿದ್ದಾರೆ. ಪಂಜಾಬ್ ಚುನಾವಣೆಯಲ್ಲಿ ಅರವಿಂದ್ ಕೇಜ್ರಿವಾಲ್ ಅವರನ್ನು ಸೋಲಿಸಲು ಸಾಧ್ಯವಾಗದ ಕಾರಣ, ಬಿಜೆಪಿ ಈಗ ಅವರನ್ನು ಕೊಲ್ಲಲು ಬಯಸಿದೆ ಎಂದಿದ್ದಾರೆ.

ಬುಧವಾರ ಮುಖ್ಯಮಂತ್ರಿಯವರ ಮನೆ ಮೇಲೆ ನಡೆದ ದಾಳಿಯು, ಪೊಲೀಸರ ಸಹಾಯದಿಂದ ಕೇಜ್ರಿವಾಲ್ ಅವರನ್ನು ಬಿಜೆಪಿ ಕೊಲ್ಲಲು ಬಯಸುತ್ತಿದೆ ಎಂಬುದನ್ನು ತೋರಿಸುತ್ತದೆ. ಇದರ ವಿರುದ್ಧ ನಾವು ಔಪಚಾರಿಕ ದೂರು ನೀಡುತ್ತೇವೆ ಎಂದು ಸಿಸೋಡಿಯಾ ಮಾಹಿತಿ ನೀಡಿದ್ದಾರೆ.

“ಕೇಜ್ರಿವಾಲ್ ಮೇಲೆ ನಡೆದಿರುವ ಜೀವ ಬೆದರಿಕೆಯ ದಾಳಿ ಇದಾಗಿದೆ. ದಾಳಿಯನ್ನು ವ್ಯವಸ್ಥಿತವಾಗಿ ಯೋಜಿಸಲಾಗಿದೆ” ಎಂದು ಅವರು ದೂರಿದ್ದಾರೆ.

“ಎಎಪಿ ಸಮಾಜದ ಎಲ್ಲಾ ವರ್ಗಗಳಿಂದ ಬೆಂಬಲ ಪಡೆಯುತ್ತಿರುವುದರಿಂದ ಬಿಜೆಪಿ ಪ್ಯಾನಿಕ್ ಮೋಡ್‌ನಲ್ಲಿದೆ. ಬಿಜೆಪಿಯ ಗೂಂಡಾಗಳಿಂದ ಕೇಜ್ರಿವಾಲ್-ಜಿ ಮೇಲಾದ ದಾಳಿಯು ಭಾರತದ ಜನರ ಮೇಲಿನ ದಾಳಿಯಾಗಿದೆ. ಜನರು ಬಿಜೆಪಿಗೆ ತಕ್ಕ ಪ್ರತ್ಯುತ್ತರ ನೀಡಲಿದ್ದಾರೆ” ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಬೆಂಗಳೂರು ಸಂಸದರ ನೇತೃತ್ವದಲ್ಲಿ ಭಾರತೀಯ ಜನತಾ ಯುವ ಮೋರ್ಚಾ (ಬಿಜೆವೈಎಂ) ಕಾರ್ಯಕರ್ತರು ಬುಧವಾರ ದೆಹಲಿ ಮುಖ್ಯಮಂತ್ರಿಯವರ ನಿವಾಸದ ಬಳಿ ಘೋಷಣೆಗಳನ್ನು ಕೂಗಿದರು. ಕಾಶ್ಮೀರಿ ಪಂಡಿತರ ದುಸ್ಥಿತಿಯನ್ನು ಕೇಜ್ರಿವಾಲ್ ಅಣಕಿಸಿದ್ದಾರೆಂದು ಆರೋಪಿಸಿ, ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದರು.

ಸೂರ್ಯ ಸೇರಿದಂತೆ ಕೆಲವು ಸದಸ್ಯರು ಸಿಎಂ ನಿವಾಸದ ಮುಖ್ಯ ಗೇಟ್ ತಲುಪಲು ಯಶಸ್ವಿಯಾದರು. ಸ್ಟೀಲ್ ಬಾಗಿಲಿಗೆ ಬಣ್ಣ ಎಸೆದರು. ಗೇಟ್ ಬಳಿ ಅಳವಡಿಸಲಾದ ಸಿಸಿಟಿವಿಯನ್ನು ಹಾನಿಗೊಳಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರತಿಭಟನೆಯ ನಂತರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸೂರ್ಯ, “ಅವರು (ಕೇಜ್ರಿವಾಲ್) ಕಾಶ್ಮೀರಿ ಪಂಡಿತರ ಹತ್ಯಾಕಾಂಡವನ್ನು ಅಸತ್ಯ ಎಂದು ಲೇವಡಿ ಮಾಡಿದರು. ಬೇಷರತ್ ಕ್ಷಮೆಯಾಚಿಸಬೇಕು ಎಂದು ನಾವು ಒತ್ತಾಯಿಸುತ್ತೇವೆ. ಅವರು ಕ್ಷಮೆಯಾಚಿಸುವವರೆಗೂ ನಮ್ಮ ಪ್ರತಿಭಟನೆಗಳು ಮುಂದುವರೆಯುತ್ತವೆ” ಎಂದಿದ್ದಾರೆ.

“ಈ ಪ್ರತಿಭಟನೆಯು ಚಲನಚಿತ್ರದ ಪರವಾಗಿ ಅಥವಾ ‘ದಿ ಕಾಶ್ಮೀರ ಫೈಲ್ಸ್’ ಬಗ್ಗೆ ಅಲ್ಲ. ಈ ಪ್ರತಿಭಟನೆಯು ಕಾಶ್ಮೀರದಲ್ಲಿನ ಹಿಂದೂಗಳ ನರಮೇಧವನ್ನು ನಿರಾಕರಿಸುವ ಕೇಜ್ರಿವಾಲ್ ಅವರ ಅಮಾನವೀಯ ಮನಸ್ಥಿತಿಯ ವಿರುದ್ಧವಾಗಿದೆ” ಎಂದು ಸೂರ್ಯ ಹೇಳಿದರು.

‘ಇದು ಕೇಜ್ರಿವಾಲ್ ಅವರನ್ನು ಕೊಲ್ಲುವ ಪ್ರಯತ್ನವಾಗಿದೆ’ ಎಂಬ ಸಿಸೋಡಿಯಾ ಹೇಳಿಕೆಯನ್ನು ಉಲ್ಲೇಖಿಸಿದ ಸೂರ್ಯ, “ನಾವು ಅವರನ್ನು (ಕೇಜ್ರಿವಾಲ್) ಭೇಟಿ ಮಾಡಿ ನಮ್ಮ ದುಃಖವನ್ನು ವ್ಯಕ್ತಪಡಿಸಲು ಬಯಸಿದ್ದೇವೆ. ಇದು ಕೇಜ್ರಿವಾಲ್ ಅವರನ್ನು ಹತ್ಯೆ ಮಾಡುವ ಯತ್ನ ಎಂದಿರುವುದು ಉನ್ಮಾದ ಮತ್ತು ಕಲ್ಪನೆಯಿಂದ ಕೂಡಿದೆ” ಎಂದಿದ್ದಾರೆ.

ಎಎಪಿ ಶಾಸಕ ಅತಿಶಿ ಪೊಲೀಸರ ನಿಷ್ಕ್ರಿಯತೆಯನ್ನು ಪ್ರಶ್ನಿಸಿದ್ದಾರೆ. ಬಿಜೆಪಿ ಕಾರ್ಯಕರ್ತರು ಸಿಎಂ ಮನೆಗೆ ಹೇಗೆ ತಲುಪಲು ಸಾಧ್ಯವಾಯಿತು ಎಂದು ಕೇಳಿದ್ದಾರೆ. “ಶಾಕಿಂಗ್! ಸಿಎಂ ಅರವಿಂದ್ ಕೇಜ್ರಿವಾಲ್ ಅವರ ನಿವಾಸದಲ್ಲಿ ಬಿಜೆಪಿ ಕಾರ್ಯಕರ್ತರು ಮತ್ತು ಮುಖಂಡರು ಆಕ್ರೋಶ ವ್ಯಕ್ತಪಡಿಸಿದಾಗ ದೆಹಲಿ ಪೊಲೀಸರು ಏನು ಮಾಡುತ್ತಿದ್ದರು?” ಎಂದು ಟ್ವೀಟ್ ಮಾಡಿದ್ದಾರೆ.

ಸಿವಿಲ್ ಲೈನ್ಸ್ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಅಪರಿಚಿತ ದುಷ್ಕರ್ಮಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. 70 ಮಂದಿಯನ್ನು ಬಂಧಿಸಿ ನಂತರ ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೆಳಿಗ್ಗೆ 11.30 ರ ಸುಮಾರಿಗೆ ಐಪಿ ಕಾಲೇಜು ಬಳಿಯ ಲಿಂಕ್ ರಸ್ತೆಯಲ್ಲಿರುವ ಸಿಎಂ ನಿವಾಸದ ಹೊರಗೆ ಬಿಜೆವೈಎಂನ ಸುಮಾರು 150-200 ಪ್ರತಿಭಟನಾಕಾರರು ಧರಣಿ ಆರಂಭಿಸಿದರು ಎಂದು ಪೊಲೀಸ್ ಉಪ ಆಯುಕ್ತ (ಉತ್ತರ) ಸಾಗರ್ ಸಿಂಗ್ ಕಲ್ಸಿ ಮಾಹಿತಿ ನೀಡಿದ್ದಾರೆ.

“ದಿ ಕಾಶ್ಮೀರ್ ಫೈಲ್ಸ್ ಚಲನಚಿತ್ರಕ್ಕೆ ಸಂಬಂಧಿಸಿದಂತೆ ವಿಧಾನಸೌಧದಲ್ಲಿ ದೆಹಲಿ ಸಿಎಂ ನೀಡಿದ ಹೇಳಿಕೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸಲಾಯಿತು. ಮಧ್ಯಾಹ್ನ 1 ಗಂಟೆ ಸುಮಾರಿಗೆ ಕೆಲವು ಪ್ರತಿಭಟನಾಕಾರರು ಬ್ಯಾರಿಕೇಡ್‌ಗಳನ್ನು ಮುರಿದು ಸಿಎಂ ನಿವಾಸದ ಹೊರಗೆ ಬಂದು ಗದ್ದಲ ಎಬ್ಬಿಸಿ ಘೋಷಣೆಗಳನ್ನು ಕೂಗಿದರು. ಸಿಎಂ ಮನೆ ಬಾಗಿಲಿಗೂ ಬಣ್ಣ ಎರಚಿದ್ದಾರೆ. ಬೂಮ್ ತಡೆಗೋಡೆ ಮತ್ತು ಅಲ್ಲಿದ್ದ ಸಿಸಿಟಿವಿ ಕ್ಯಾಮೆರಾವನ್ನೂ ಧ್ವಂಸಗೊಳಿಸಲಾಗಿದೆ” ಎಂದು ಹೇಳಿದರು.

ಕಳೆದ ಗುರುವಾರ, ದೆಹಲಿ ಅಸೆಂಬ್ಲಿಯಲ್ಲಿ ಮಾತನಾಡುವಾಗ ಕೇಜ್ರಿವಾಲ್ ಅವರು ಕಾಶ್ಮೀರ ಫೈಲ್‌ ಸಿನಿಮಾ ಸಂಬಂಧ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡರು. ಸಿನಿಮಾವನ್ನು ತೆರಿಗೆ ಮುಕ್ತಗೊಳಿಸಬೇಕು ಎಂಬ ಬಿಜೆಪಿ ಶಾಸಕರ ಬೇಡಿಕೆಗೆ ಪ್ರತಿಕ್ರಿಯಿಸಿದ ಕೇಜ್ರಿವಾಲ್ ಅವರು, “ನೀವು ಇದಕ್ಕಾಗಿಯೇ ರಾಜಕೀಯ ಸೇರಿದ್ದೀರಾ? ಚಿತ್ರ ನಿರ್ಮಾಪಕರು ಕೋಟಿಗಟ್ಟಲೆ ಹಣ ಗಳಿಸುತ್ತಿದ್ದರೆ, ಬಿಜೆಪಿ ಸದಸ್ಯರು ಸಿನಿಮಾ ಪ್ರಚಾರಕ್ಕೆ ಇಳಿದು ಪೋಸ್ಟರ್‌ಗಳನ್ನು ಅಂಟಿಸಿದ್ದಾರೆ” ಎಂದು ಟೀಕಿಸಿದ್ದರು.

“ಇದಕ್ಕಾಗಿಯೇ ನೀವು ರಾಜಕೀಯಕ್ಕೆ ಬಂದಿದ್ದೀರಾ? ಸಿನಿಮಾಗಳ ಪೋಸ್ಟರ್ ಹಾಕಲು? ನಿಮ್ಮ ಕೆಲಸದ ಬಗ್ಗೆ ನಿಮ್ಮ ಮಕ್ಕಳಿಗೆ ಕೇಳಿದಾಗ ನೀವು ಏನು ಹೇಳುತ್ತೀರಿ. ಚಿತ್ರ ಕಾ ಪೋಸ್ಟರ್ ಲಗಾತಾ ಹೂಂ? (ನಾನು ಚಲನಚಿತ್ರ ಪೋಸ್ಟರ್‌ಗಳನ್ನು ಹಾಕಿದ್ದೇನೆ) ಎನ್ನುವಿರಾ?” ಎಂದು ಕೇಜ್ರಿವಾಲ್ ಕುಟುಕಿದ್ದರು.

ಮುಂದುವರಿದು, “ನಿಜವಾಗಲೂ ಸಾರ್ವಜನಿಕ ಹಿತಾಸಕ್ತಿಯಿಂದ ಸಿನಿಮಾ ಮಾಡಿದ್ದರೆ ಸಿನಿಮಾ ನಿರ್ಮಾಪಕರು ಯೂಟ್ಯೂಬ್ ನಲ್ಲಿ ಅಪ್ ಲೋಡ್ ಮಾಡಬೇಕು” ಎಂದು ಕೇಜ್ರಿವಾಲ್ ಆಗ್ರಹಿಸಿದ್ದು ಜನರ ಪ್ರಶಂಸೆಗೆ ಪಾತ್ರವಾಗಿತ್ತು.

ಕಾಶ್ಮೀರಿ ಪಂಡಿತರ ನಿರ್ಗಮನವನ್ನು “ದೊಡ್ಡ ದುರಂತ” ಮತ್ತು “ಅನ್ಯಾಯ” ಎಂದು ಕರೆದಿರುವ ಕೇಜ್ರಿವಾಲ್, “ಬಿಜೆಪಿಗೆ ಕಾಶ್ಮೀರ ಫೈಲ್‌ಗಳು ಮುಖ್ಯವಾಗಿದೆ. ನನಗೆ ಕಾಶ್ಮೀರಿ ಪಂಡಿತರು ಹೆಚ್ಚು ಮುಖ್ಯ. ಕಾಶ್ಮೀರದಿಂದ ಪಂಡಿತರು ವಲಸೆ ಬಂದಾಗ 1993ರಲ್ಲಿ 233 ಪಂಡಿತರು ದೆಹಲಿ ಸರ್ಕಾರಕ್ಕೆ ಗುತ್ತಿಗೆ ಶಿಕ್ಷಕರಾಗಿ ಸೇರಿದ್ದರು. ನಮ್ಮ ಸರ್ಕಾರ ಬಂದಾಗ ಅವರನ್ನೆಲ್ಲ ಖಾಯಂ ಮಾಡಿದೆವು. ನಾವು ಅವರ ಮೇಲೆ ಸಿನಿಮಾ ಮಾಡಿಲ್ಲ” ಎಂದು ತಿಳಿಸಿದ್ದರು.


ಇದನ್ನೂ ಓದಿರಿ: 2022ರ ಗುಜರಾತ್ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಕೆಲಸ ಮಾಡಲಿರುವ ಪ್ರಶಾಂತ್ ಕಿಶೋರ್?: ಮೇ ತಿಂಗಳಲ್ಲಿ ಘೋಷಣೆ ಸಾಧ್ಯತೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಧಾನಿ ಮೋದಿ ಚುನಾವಣೆಯಲ್ಲಿ ಸ್ಪರ್ಧಿಸದಂತೆ ನಿರ್ಬಂಧ ವಿಧಿಸಲು ಕೋರಿ ದೆಹಲಿ ಹೈಕೋರ್ಟ್‌ಗೆ ಅರ್ಜಿ

0
ಲೋಕಸಭೆ ಚುನಾವಣೆಗೆ "ದೇವರು ಮತ್ತು ಪೂಜಾ ಸ್ಥಳಗಳ" ಹೆಸರಿನಲ್ಲಿ ಮತ ಕೇಳುವ ಮೂಲಕ ಮಾದರಿ ನೀತಿ ಸಂಹಿತೆ (ಎಂಸಿಸಿ) ಉಲ್ಲಂಘಿಸಿರುವ ಆರೋಪದ ಮೇಲೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕ್ರಮ ಕೈಗೊಳ್ಳುವಂತೆ ದೆಹಲಿ...