Homeಮುಖಪುಟಹೋರಾಟಗಾರ ಗೌತಮ್ ನವ್ಲಾಖಾ ಗೃಹಬಂಧನಕ್ಕೆ ಮತ್ತೆ ವಿಳಂಬ; ಭದ್ರತೆಯ ಕಾರಣ ನೀಡಿದ ಎನ್‌ಐಎ

ಹೋರಾಟಗಾರ ಗೌತಮ್ ನವ್ಲಾಖಾ ಗೃಹಬಂಧನಕ್ಕೆ ಮತ್ತೆ ವಿಳಂಬ; ಭದ್ರತೆಯ ಕಾರಣ ನೀಡಿದ ಎನ್‌ಐಎ

2018ರಲ್ಲಿ ನಡೆದ ಭೀಮಾ ಕೋರೆಗಾಂವ್ ಪ್ರಕರಣಕ್ಕೆ ಸಂಬಂಧಿಸಿದಂತೆ 70 ವರ್ಷದ ಗೌತಮ್‌ ನವ್ಲಾಖಾ ಆರೋಪಿಯಾಗಿದ್ದಾರೆ.

- Advertisement -
- Advertisement -

ಜೈಲಿನಲ್ಲಿರುವ ಹೋರಾಟಗಾರ ಗೌತಮ್ ನವ್ಲಾಖಾ ಅವರನ್ನು ಗೃಹಬಂಧನದಲ್ಲಿ ಇರಿಸುವ ಕುರಿತು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ತಕರಾರು ತೆಗೆದಿದೆ. ಗೌತಮ್‌ ಅವರು ಉಳಿಯಲು ಬಯಸಿದ ಸ್ಥಳದಲ್ಲಿ ಭದ್ರತಾ ಲೋಪವಿದೆ ಎಂದು ಆಕ್ಷೇಪ ಎತ್ತಿದ ಬಳಿಕ ಗೃಹಬಂಧನ ಮತ್ತೆ ವಿಳಂಬವಾಯಿತು ಎಂದು ಪಿಟಿಐ ವರದಿ ಮಾಡಿದೆ.

ಸುಪ್ರೀಂ ಕೋರ್ಟ್ ನವೆಂಬರ್ 10ರಂದು ನವ್ಲಾಖಾ ಅವರನ್ನು ಒಂದು ತಿಂಗಳ ಕಾಲ ಗೃಹಬಂಧನದಲ್ಲಿಡಲು ಅನುಮತಿ ನೀಡಿತ್ತು. ಅನಾರೋಗ್ಯ ಮತ್ತು ಜೈಲಿನಲ್ಲಿನ ಕಳಪೆ ಸೌಲಭ್ಯಗಳ ಆಧಾರದ ಮೇಲೆ ಜೈಲಿನಿಂದ ಸ್ಥಳಾಂತರಿಸುವಂತೆ ಕೋರಿ ಅವರು ಸಲ್ಲಿಸಿದ ಮನವಿಗೆ ಕೋರ್ಟ್ ಒಪ್ಪಿತ್ತು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

2018ರಲ್ಲಿ ನಡೆದ ಭೀಮಾ ಕೋರೆಗಾಂವ್ ಪ್ರಕರಣಕ್ಕೆ ಸಂಬಂಧಿಸಿದಂತೆ 70 ವರ್ಷದ ಗೌತಮ್‌ ನವ್ಲಾಖಾ ಆರೋಪಿಯಾಗಿದ್ದಾರೆ. ಹಿಂಸಾಚಾರಕ್ಕೆ ಸಂಚು ರೂಪಿಸಿದ ಆರೋಪದ ಮೇಲೆ 16 ಮಂದಿಯನ್ನು ಬಂಧಿಸಲಾಗಿದೆ.

ರಾಷ್ಟ್ರೀಯ ತನಿಖಾ ಸಂಸ್ಥೆ ಎತ್ತಿರುವ ಆಕ್ಷೇಪವು ನವ್ಲಾಖಾ ಅವರನ್ನು ಜೈಲಿನಿಂದ ಸ್ಥಳಾಂತರಿಸಲು ಉಂಟಾಗಿರುವ ಎರಡನೇ ಅಡಚಣೆಯಾಗಿದೆ.

ಗೃಹಬಂಧನಕ್ಕೆ ಅನುಮತಿ ನೀಡುವಾಗ ಸುಪ್ರೀಂ ಕೋರ್ಟ್ ವಿಧಿಸಿದ ಷರತ್ತುಗಳ ಪೈಕಿ, ನವೆಂಬರ್ 14 ರೊಳಗೆ ಪರಿಹಾರದ ಪುರಾವೆಯಾಗಿ 2 ಲಕ್ಷ ರೂಪಾಯಿಗಳ ಶ್ಯೂರಿಟಿಯನ್ನು ಸಲ್ಲಿಸಬೇಕಿತ್ತು. ನವ್ಲಾಖಾ ಅವರು ದಾಖಲೆಗಳನ್ನು ನೀಡಲು ಸಾಧ್ಯವಾಗದ ಕಾರಣ ಆರಂಭದಲ್ಲಿ ಅವರನ್ನು ಜೈಲಿನಿಂದ ಸ್ಥಳಾಂತರಿಸಲಾಗಲಿಲ್ಲ.

ಮಂಗಳವಾರ ನವ್ಲಾಖಾ ಅವರ ವಕೀಲರು, “ಸಾಲ್ವೆನ್ಸಿ ಪ್ರಮಾಣಪತ್ರವನ್ನು ಪಡೆಯಲು ಕನಿಷ್ಠ ಆರು ವಾರಗಳನ್ನು ತೆಗೆದುಕೊಳ್ಳುತ್ತದೆ” ಎಂದು ಮನವಿ ಸಲ್ಲಿಸಿದ ನಂತರ ಸುಪ್ರೀಂ ಕೋರ್ಟ್ ಇದಕ್ಕೆ ಒಪ್ಪಿಗೆ ನೀಡಿದೆ.

ಇದರ ಹೊರತಾಗಿಯೂ ಎನ್‌ಐಎ ತಕರಾರು ತೆಗೆಯಿತು. ನವ್ಲಾಖಾ ಅವರು ಗೃಹಬಂಧನದಲ್ಲಿ ಉಳಿಯಲು ಸೂಚಿಸಿದ ಕಟ್ಟಡದಲ್ಲಿ ಒಳಹೋಗಲು ಮತ್ತು ಹೊರಬರಲು ಮೂರುಮೂರು ಪ್ರವೇಶಗಳನ್ನು ನೀಡಲಾಗಿದೆ. ಹೊರಗೆ ಹೋಗುವುದನ್ನು ದಾಖಲಿಸಲು ಯಾವುದೇ ಸಿಸಿಟಿವಿ ಕ್ಯಾಮೆರಾಗಳಿಲ್ಲ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ ವಿಶೇಷ ನ್ಯಾಯಾಲಯಕ್ಕೆ ತಿಳಿಸಿದ ನಂತರ ನವ್ಲಾಖಾ ಅವರನ್ನು ಬುಧವಾರ ಜೈಲಿನಿಂದ ಸ್ಥಳಾಂತರಿಸಲು ಸಾಧ್ಯವಾಗಲಿಲ್ಲ.

ಮನೆಯ ಪ್ರತಿ ಪ್ರವೇಶ ಮತ್ತು ನಿರ್ಗಮನ ಬಿಂದುಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳು ಇರಬೇಕಾಗಿದೆ. ನವಲಾಖಾ ಅವರ ಗೃಹಬಂಧನಕ್ಕೆ ಸುಪ್ರೀಂ ಕೋರ್ಟ್ ನಿಗದಿಪಡಿಸಿದ ಷರತ್ತುಗಳಲ್ಲಿ ಇದೂ ಒಂದಾಗಿದೆ.

ಕಟ್ಟಡದ ನೆಲಮಹಡಿಯು ಸಾರ್ವಜನಿಕ ಗ್ರಂಥಾಲಯವಾಗಿ ಕಾರ್ಯನಿರ್ವಹಿಸುತ್ತದೆ. ಇದರಿಂದ ಆರೋಪಿಗಳ ಮೇಲೆ ನಿಗಾ ಇಡುವುದು ತುಂಬಾ ಕಷ್ಟಕರವಾಗುತ್ತದೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆಯು ವಾದಿಸಿದೆ. ಕಟ್ಟಡದ ಮಾಲೀಕರನ್ನು “ಕಮ್ಯುನಿಸ್ಟ್ ಪಕ್ಷದ ಕಾರ್ಯದರ್ಶಿ” ಎಂದು ಗುರುತಿಸಿರುವ ಬಗ್ಗೆ ಇದು ಆಕ್ಷೇಪಣೆಗಳನ್ನು ಎತ್ತಿದೆ.

ನವ್ಲಾಖಾ ಪರವಾಗಿ ಹಾಜರಾದ ವಕೀಲ ಯುಗ್ ಮೋಹಿತ್ ಚೌಧರಿ, ಏಜೆನ್ಸಿ ಬಯಸಿದಲ್ಲೆಲ್ಲಾ ಸಿಸಿಟಿವಿ ಕ್ಯಾಮೆರಾಗಳನ್ನು ಸ್ಥಾಪಿಸಲು ಸಿದ್ಧ ಎಂದು ನ್ಯಾಯಾಲಯಕ್ಕೆ ತಿಳಿಸಿದರು ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಕಟ್ಟಡದ ಮೊದಲ ಮಹಡಿಗೆ ಮಾತ್ರ ನವ್ಲಾಖಾ ಅವರನ್ನು ನಿರ್ಬಂಧಿಸಲಾಗುವುದು ಮತ್ತು ನೆಲ ಅಂತಸ್ತಿನ ಗ್ರಂಥಾಲಯಕ್ಕೆ ಪ್ರವೇಶ ನೀಡುವುದಿಲ್ಲ ಎಂದು ತಿಳಿಸಿದ್ದಾರೆ.

ಕಟ್ಟಡದ ಮಾಲೀಕತ್ವದ ಬಗ್ಗೆ ಆಕ್ಷೇಪಣೆಯ ಕುರಿತು ಚೌಧರಿ, “ನೀವು ನಿವೇಶನದ ಮಾಲೀಕತ್ವದ ಬಗ್ಗೆ ಹೇಳಲು ಸಾಧ್ಯವಿಲ್ಲ. ಸಿಪಿಐ(ಎಂ) ಒಂದು ನೋಂದಾಯಿತ ರಾಜಕೀಯ ಪಕ್ಷವಾಗಿದೆ” ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿರಿ: ಬಿಬಿಎಂಪಿ ಬಳಸಿಕೊಂಡು ಮತದಾರರ ಡೇಟಾ ಕದ್ದ ಬೊಮ್ಮಾಯಿ ಸರ್ಕಾರ: ಕಾಂಗ್ರೆಸ್‌ ದೂರು

ಆದಾಗ್ಯೂ ಎನ್‌ಐಎ ಈಗ ಸಲ್ಲಿಸಿರುವ ವರದಿಯ ಕುರಿತು ಸುಪ್ರೀಂ ಕೋರ್ಟ್‌ನ ಆದೇಶಕ್ಕಾಗಿ ಕಾಯದೆ ಈ ಹಂತದಲ್ಲಿ ನವ್ಲಾಖಾ ಅವರನ್ನು ಬಿಡುಗಡೆ ಮಾಡುವುದು ಸರಿಯಲ್ಲ ಎಂದು ವಿಶೇಷ ಎನ್‌ಐಎ ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ಕೈಗೆತ್ತಿಕೊಳ್ಳಲಾಗಿದ್ದು ನ್ಯಾಯಮೂರ್ತಿ ಕೆಎಂ ಜೋಸೆಫ್ ನೇತೃತ್ವದ ಪೀಠದ ಮುಂದೆ ಇಂದು (ಶುಕ್ರವಾರ) ವಿಚಾರಣೆ ಬರಲಿದೆ.

ಇದರ ನಡುವೆ ಹಿರಿಯ ನಟಿ ಸುಹಾಸಿನಿ ಮುಲೆ ಅವರು ಬುಧವಾರ ವಿಶೇಷ ನ್ಯಾಯಾಲಯದ ಮುಂದೆ ನವಲಖಾ ಅವರಿಗೆ ಜಾಮೀನುದಾರರಾಗಿ ಹಾಜರಾಗಿದ್ದರು. ಸುಮಾರು 30 ವರ್ಷಗಳಿಂದ ನವ್ಲಾಖಾ ಅವರು ಪರಿಚಯವಿದ್ದಾರೆ ಎಂದು ಸುಹಾಸಿನಿ ತಿಳಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...