ಬಂಗಾಳಕೊಲ್ಲಿಯಲ್ಲಿ ಅಪ್ಪಳಿಸಿದ್ದ ನಿವಾರ್ ಚಂಡಮಾರುತ, ತಮಿಳುನಾಡು, ಪುದುಚೇರಿಗಳಲ್ಲಿ ಭಾರಿ ಅನಾಹುತಕ್ಕೆ ಕಾರಣವಾಗಿದೆ. ಹಲವು ಸಾವು ನೋವುಗಳಿಗೆ ಕಾರಣವಾಗಿ ಸರ್ಕಾರದ ಬೊಕ್ಕಸಕ್ಕೆ ಮತ್ತಷ್ಟು ಹೊರೆಯಾಗಿದೆ. ಈ ಹೊಡೆತದಿಂದ ನಿಟ್ಟುಸುರು ಬಿಡುವ ಮೊದಲೇ ಮತ್ತೊಂದು ಚಂಡಮಾರುತ ಅಪ್ಪಳಿಸಲು ಸಿದ್ದವಾಗಿದೆ.
ಬಂಗಾಳಕೊಲ್ಲಿಯಲ್ಲಿ ಮತ್ತೊಂದು ಚಂಡಮಾರುತ ಸೃಷ್ಟಿಯಾಗಿದ್ದು, ಅದು ದೊಡ್ಡ ಮಟ್ಟಕ್ಕೆ ಬೆಳೆದರೆ, ಡಿಸೆಂಬರ್ 2 ರಂದು ಮತ್ತೆ ತಮಿಳುನಾಡು ಮತ್ತು ಪುದುಚೇರಿ ಕರಾವಳಿ ಭಾಗಗಳಿಗೆ ಅಪ್ಪಳಿಸುವ ಸಾಧ್ಯತೆ ಇದೆ. ಈ ಚಂಡಮಾರುತಕ್ಕೆ ‘ಬುರೆವಿ’ ಎಂದು ಹೆಸರಿಡಲಾಗಿದೆ.
ಆಗ್ನೇಯ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಒತ್ತಡವುಂಟಾಗಿ ಚಂಡಮಾರುತ ಸೃಷ್ಟಿಯಾಗಲಿದ್ದು, ಅದು ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ ಎಂದು ತಮಿಳುನಾಡು ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ.
ಇದನ್ನೂ ಓದಿ: ತಮಿಳುನಾಡು: ನಿವಾರ್ ಸಂತ್ರಸ್ತರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಪರಿಹಾರ ಘೋಷಣೆ
“ಬಂಗಾಳದ ಆಗ್ನೇಯ ಕೊಲ್ಲಿ ಮತ್ತು ದಕ್ಷಿಣ ಅಂಡಮಾನ್ ಪ್ರದೇಶಗಳಲ್ಲಿ ವಾಯುಭಾರ ಕುಸಿತದಿಂದ ಒತ್ತಡವುಂಟಾಗುವ ಸಾಧ್ಯತೆಯಿದೆ. ಇದು ಮುಂದಿನ 48 ಗಂಟೆಗಳಲ್ಲಿ ಕೇಂದ್ರೀಕರಿಸುತ್ತದೆ ಜೊತೆಗೆ ಮತ್ತಷ್ಟು ತೀವ್ರಗೊಂಡು, ಪಶ್ಚಿಮ ದಿಕ್ಕಿಗೆ ತೆರಳಿ ಡಿಸೆಂಬರ್ 2 ರಂದು ತಮಿಳುನಾಡು-ಪುದುಚೇರಿ ತೀರವನ್ನು ತಲುಪುವ ಸಾಧ್ಯತೆಯಿದೆ ”ಎಂದು ಪ್ರಾಧಿಕಾರ ತಿಳಿಸಿದೆ.
A low pressure area has formed over south East BOB and adjoining areas of south Andaman and equatorial Indian ocean. It is likely to concentrate into depression during next 48 hours and move westwards and approach south Tamilnadu coast by 2nd Dec.
— TN SDMA (@tnsdma) November 28, 2020
ಆದರೆ ಬುರೆವಿ ಚಂಡಮಾರುತದ ಪ್ರಭಾವ ಎಷ್ಟರಮಟ್ಟಿಗೆ ತ್ರೀವ್ರವಾಗಿರಲಿದೆ ಎಂದು ತಿಳಿದುಬಂದಿಲ್ಲ. ಆಗ್ನೇಯ ಬಂಗಾಳಕೊಲ್ಲಿಯಲ್ಲಿ ಉಂಟಾಗುತ್ತಿರುವ ಚಂಡಮಾರುತದ ಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಬುರೆವಿ ಚಂಡಮಾರುತ ದುರ್ಬಲವಾಗಿದ್ದರೂ ಕೂಡ ಡಿ. 1 (ನಾಳೆ) ಮತ್ತು 2ರಂದು ಕರಾವಳಿ ಪ್ರದೇಶಗಳಲ್ಲಿ ವ್ಯಾಪಕ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.
ಚೆನ್ನೈ, ಕಡಲೂರು, ಚೆಂಗಲ್ಪಟ್ಟು, ವೆಲ್ಲೂರು ಮತ್ತು ನಾಗಪಟ್ಟಣಂ ಸೇರಿದಂತೆ 18 ನಿವಾರ್ ಚಂಡಮಾರುತ ಪೀಡಿತ ಜಿಲ್ಲೆಗಳಲ್ಲಿ, ನಾಲ್ಕು ಮಂದಿ ಸಾವನ್ನಪ್ಪಿದ್ದಾರೆ ಜೊತೆಗೆ ನೂರಾರು ಜಾನುವಾರುಗಳನ್ನು ಚಂಡಮಾರುತ ಬಲಿ ಪಡೆದಿದೆ. 2,064 ಮರಗಳು ಧರೆಗುರುಳಿದ್ದು, ಇದರಿಂದ ಇದು ಸುಮಾರು 108 ವಿದ್ಯುತ್ ಪರಿವರ್ತಕಗಳಿಗೆ ಮತ್ತು 2,927 ಕ್ಕೂ ಹೆಚ್ಚು ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ ಎಂದು ಸಿಎಂ ಪಳನಿಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದರು.
ಮೃತರ ಕುಟುಂಬದವರಿಗೆ ತಲಾ 2 ಲಕ್ಷ ರೂಪಾಯಿ ಮತ್ತು ಗಾಯಗೊಂಡವರಿಗೆ ತಲಾ 50,000 ರೂಪಾಯಿ ಪರಿಹಾರವನ್ನು ಕೇಂದ್ರ ಸರ್ಕಾರ ಘೋಷಿಸಿದ್ದರೇ, ರಾಜ್ಯ ಸರ್ಕಾರ ಮೃತ ಕುಟುಂಬಗಳಿಗೆ ತಲಾ 10 ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ.