ಕೇಂದ್ರದ ರೈತ ವಿರೋಧಿ ಕಾಯ್ದೆಗಳ ವಿರುದ್ದ ’ದೆಹಲಿ ಚಲೋ’ ಆಂದೋಲನದ ಮೂಲಕ ರಾಜಧಾನಿಗೆ ಹೊರಟ ರೈತರಿಗೆ ದೆಹಲಿಯ 25 ಮಸೀದಿಗಳು ಆಹಾರ ಸೇರಿದಂತೆ ರಾತ್ರಿಯ ತಂಗುವಿಕೆಗೆ ಬೇಕಾದ ವ್ಯವಸ್ಥೆ ಮಾಡಿ ಅನ್ನದಾತರಿಗೆ ಆತಿಥ್ಯ ನೀಡಿತು.
ಯುನೈಟೆಡ್ ಎಗೇನ್ಸ್ಟ್ ಹೇಟ್ (UAH) ನ ನದೀಮ್ ಖಾನ್ ನೇತೃತ್ವದ ತಂಡ ಈ ವ್ಯವಸ್ಥೆಯನ್ನು ಮಾಡಿದ್ದು, ಹೌಜ್ ಖಾಸ್, ಓಖ್ಲಾ, ಓಲ್ಡ್ ರೋಹ್ಟಕ್ ರಸ್ತೆ ಮತ್ತು ಓಲ್ಡ್ ದೆಹಲಿ ಎಂಬ ನಾಲ್ಕು ಸ್ಥಳಗಳಲ್ಲಿ ಆಹಾರ ತಯಾರಿಸಲಾಗಿತ್ತು.
“ನಮಗೆ ಎಲ್ಲಿಂದ ವಿನಂತಿಗಳು ಬಂದರೂ ನಾವು ಆಹಾರ ಪ್ಯಾಕೆಟ್ಗಳನ್ನು ಸ್ಥಳಗಳಿಗೆ ತಲುಪಿಸುತ್ತಿದ್ದೇವೆ. ಇದಲ್ಲದೆ, ಆಹಾರ ಪ್ಯಾಕೆಟ್ಗಳನ್ನು ಹೊಂದಿರುವ ನಮ್ಮ ವ್ಯಾನ್ಗಳು ರೈತರು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುವ ಸ್ಥಳಗಳಿಗೆ ಹೋಗುತ್ತಿವೆ” ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ವಾಟರ್ ಜೆಟ್ ನಿಲ್ಲಿಸಿದ ರೈತ ಹೋರಾಟದ ‘ಹೀರೋ’ ಮೇಲೆ ಕೊಲೆಯತ್ನದ ಕೇಸು!
“ನಾವು ಬೇರೆ ಬೇರೆ ಸ್ಥಳಗಳಿಂದ ಕರೆಗಳನ್ನು ಸ್ವೀಕರಿಸುತ್ತಿದ್ದೇವೆ. ಯಾರೂ ಹಸಿವಾಗದಂತೆ ನೋಡಿಕೊಳ್ಳುವುದು ನಮ್ಮ ಉದ್ದೇಶ, ರೈತರಿಗೆ ಕಂಬಳಿ ಮತ್ತು ರಾತ್ರಿ ತಂಗಲು ಸಹ ಅವಕಾಶ ಕಲ್ಪಿಸಿದೆ. ದೆಹಲಿಯಾದ್ಯಂತ 25 ಮಸೀದಿಗಳು ಇದಕ್ಕಾಗಿ ಸಜ್ಜಾಗಿದೆ, ಅಲ್ಲಿ ರೈತರು ರಾತ್ರಿ ಕಳೆಯಬಹುದು. ನಮ್ಮ ಸ್ವಯಂಸೇವಕರು ರೈತರು ಎಲ್ಲಿ ಸಿಲುಕಿಕೊಂಡಿದ್ದಾರೋ ಅಲ್ಲಿಂದ ಅವರನ್ನು ಕರೆದುಕೊಂಡು ಹೋಗಲು ಮತ್ತು ರಾತ್ರಿ ವಾಸ್ತವ್ಯಕ್ಕಾಗಿ ಹತ್ತಿರದ ಮಸೀದಿಗೆ ಕರೆದೊಯ್ಯಲು ವಾಹನಗಳೊಂದಿಗೆ ಸಿದ್ಧರಾಗಿದ್ದಾರೆ” ಎಂದು ಅವರು ಹೇಳಿದ್ದಾರೆ.
ಸುಮಾರು 500 ಕ್ಕೂ ಹೆಚ್ಚು ರೈತ ಸಂಘಟನೆಗಳ ಆಶ್ರಯದಲ್ಲಿ ರೈತ ವಿರೋಧಿ ಕಾನೂನನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ನವೆಂಬರ್ 26-27ರ ‘ದೆಹಲಿ ಚಲೋ’ ಮೆರವಣಿಗೆಯನ್ನು ಯೋಜಿಸಲಾಗಿತ್ತು. ದೆಹಲಿಗೆ ಪ್ರವೇಶಿಸುತ್ತಿದ್ದ ರೈತರ ಜಾಥವನ್ನು ಗಡಿಯಲ್ಲಿ ತಡೆಯಲಾಗಿತ್ತಾದರೂ, ಭಾರಿ ಪ್ರತಿಭಟನೆಗೆ ಮಣಿದ ಸರ್ಕಾರ ಅವರನ್ನು ರಾಜಧಾನಿ ಪ್ರವೇಶಿಸಲು ಅನುಮತಿ ನೀಡಿತು.
ಇದನ್ನೂ ಓದಿ: ಇದು ರೈತರ ಸಂಸ್ಕೃತಿ: ಲಾಠೀ ಚಾರ್ಜ್ ಮಾಡಿದ ಪೊಲೀಸ್ಗೆ ನೀರು ಕೊಟ್ಟ ರೈತನ ಫೋಟೊ ವೈರಲ್