Homeಕರ್ನಾಟಕಹಿಜಾಬ್‌‌‌‌‌‌ ವಿರೋಧಿ ಹಿಂಸಾಚಾರವು ರಾಜ್ಯದ ಸಮ್ಮಿಶ್ರ ವೈವಿಧ್ಯ ಸಂಸ್ಕೃತಿಯನ್ನು ನಾಶ ಮಾಡುತ್ತಿದೆ: ‘ಬಹುತ್ವ ಕರ್ನಾಟಕ’ ಆಕ್ರೋಶ

ಹಿಜಾಬ್‌‌‌‌‌‌ ವಿರೋಧಿ ಹಿಂಸಾಚಾರವು ರಾಜ್ಯದ ಸಮ್ಮಿಶ್ರ ವೈವಿಧ್ಯ ಸಂಸ್ಕೃತಿಯನ್ನು ನಾಶ ಮಾಡುತ್ತಿದೆ: ‘ಬಹುತ್ವ ಕರ್ನಾಟಕ’ ಆಕ್ರೋಶ

- Advertisement -
- Advertisement -

“ಕಳೆದ ಕೆಲವು ತಿಂಗಳಿನಿಂದ ರಾಜ್ಯದಲ್ಲಿ ದ್ವೇಷ ಪ್ರೇರಿತ ಅಪರಾಧಗಳು ಮತ್ತು ದೊಂಬಿ ಅಪರಾಧಗಳು ಭೀಕರ ರೀತಿಯಲ್ಲಿ ಹೆಚ್ಚುತ್ತಿದ್ದು, ಈ ದಾಳಿಗಳು ಹೆಚ್ಚಾಗಿ ಮುಸಲ್ಮಾನ ಮತ್ತು ಕ್ರೈಸ್ತ ಸಮುದಾಯಗಳ ವಿರುದ್ಧ ನಡೆಯುತ್ತಿದೆ. ಇದೀಗ ಶೈಕ್ಷಣಿಕ ಸಂಸ್ಥೆಗಳು ಹೊಸತಾಗಿ ಹಿಂಸೆಯ ಕೇಂದ್ರಗಳಾಗಿ ಮಾರ್ಪಾಡಾಗುತ್ತಿದೆ, ಇದ್ದಕ್ಕಿದಂತೆಯೇ ಮುಸಲ್ಮಾನ ವಿದ್ಯಾರ್ಥಿನಿಯರು ತಮ್ಮ ಧಾರ್ಮಿಕ ಆಚರಣೆಯಾಗಿ ಪಾಲಿಸುತ್ತಿದ್ದ ಹಿಜಾಬ್‌‌ ಅನ್ನು ಹಿಂಸಾತ್ಮಕ ರೀತಿಯಲ್ಲಿ ವಿರೋಧಿಸಲಾಗುತ್ತಿದೆ. ಈ ಘಟನೆಗಳು ಕರ್ನಾಟಕದ ಸಮ್ಮಿಶ್ರ ವೈವಿಧ್ಯ ಸಂಸ್ಕೃತಿಯನ್ನೇ ನಾಶ ಮಾಡುತ್ತಿವೆ” ಎಂದು ‘ಬಹುತ್ವ ಕರ್ನಾಟಕ’ ಶುಕ್ರವಾರ ಆಕ್ರೋಶ ವ್ಯಕ್ತಪಡಿಸಿದೆ.

ಶುಕ್ರವಾರದಂದು ಬೆಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ, ಪ್ರಸ್ತುತ ಕರ್ನಾಟಕದಲ್ಲಿರುವ ಸಂಧಿಗ್ಧ ಪರಿಸ್ಥಿತಿಯ ಬಗ್ಗೆ ಮಾತನಾಡಿದ ಬಹುತ್ವ ಕರ್ನಾಟಕದ ಮೈತ್ರೇಯಿ ಕೃಷ್ಣನ್‌ ಅವರು, “ಇಲ್ಲಿ ವ್ಯಕ್ತಿಗಳ ಸಮಾನತೆ, ಬಹುತ್ವ, ಭ್ರಾತೃತ್ವ ಮತ್ತು ಘನತೆಯ ಮೇಲೆ ದಾಳಿ ನಡೆಯುತ್ತಿದೆ. ಒಂದು ಕಡೆ ಮುಸ್ಲಿಂ ಮಹಿಳೆಯರ ಮೇಲೆ ಇಸ್ಲಾಮೋಫೋಬಿಕ್‌‌‌ ದಾಳಿ ನಡೆಯುತ್ತಿದ್ದರೆ ಮತ್ತೊಂದೆಡೆ ಗತಕಾಲದಿಂದಲೂ ಶಿಕ್ಷಣದ ನಿರಾಕರಣೆಗೆ ಒಳಪಟ್ಟಿದ್ದ ತಳಮಟ್ಟದಲ್ಲಿರುವ ಬಡ ವಿದ್ಯಾರ್ಥಿಗಳನ್ನು ತೀವ್ರಗಾಮಿಗಳನ್ನಾಗಿ ಮಾಡಲು ಪ್ರಯತ್ನಿಸಲಾಗುತ್ತಿದೆ” ಎಂದು ಹೇಳಿದರು.

ಇದನ್ನೂ ಓದಿ: ಟರ್ಬನ್ ಆಯ್ಕೆಯಾಗಿರಬಹುದಾದರೆ, ಹಿಜಾಬ್ ಏಕೆ ಆಗಬಾರದು?: ನಟಿ ಸೋನಮ್ ಕಪೂರ್ ಪ್ರಶ್ನೆ

ಪಿಯುಸಿಎಲ್‌‌‌ನ ಅರವಿಂದ್‌ ನಾರಾಯಣ್‌‌ ಮಾತನಾಡಿ, “ಹಿಜಾಬ್‌ ಧರಿಸಿದ ಕಾರಣಕ್ಕಾಗಿ ವಿದ್ಯಾರ್ಥಿನಿಯರಿಗೆ ಕಾಲೇಜ್‌ ಒಳಗಡೆ ಪ್ರವೇಶ ನಿರಾಕರಿಸಿದ ಕ್ರಮವು ಕಾನೂನು ಬಾಹಿರ. ಸರ್ಕಾರವು ಅಸಂವಿಧಾನಿಕವಾದ ಆದೇಶವನ್ನು ಹೊರಡಿಸುವುದರ ಮೂಲಕ ಇತರೆ ಕಾಲೇಜುಗಳಲ್ಲೂ ಸಹ ಇಂತಹ ಕಾನೂನು ಬಾಹಿರ ಕ್ರಮ ಹೆಚ್ಚಾಗುವಂತೆ ಮಾಡಿದೆ. ಸರಕಾರ ತನ್ನ ಕರ್ತವ್ಯ ನಿರ್ವಹಿಸುವಲ್ಲಿ ಸಂಪೂರ್ಣ ವಿಫಲವಾಗಿದ್ದು, ವಿದ್ಯಾರ್ಥಿಗಳ ಮೂಲಭೂತ ಹಕ್ಕುಗಳ ರಕ್ಷಣೆಗೆ ಸರಕಾರ ಕೂಡಲೇ ಕ್ರಮ ಕೈಗೊಳ್ಳಬೇಕು” ಎಂದು ಹೇಳಿದರು.

ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್‌ ವಾದ)ಯ ರಾಜ್ಯ ಸಂಚಾಲಕ ಮಾವಳ್ಳಿ ಶಂಕರ್‌ ಮಾತನಾಡಿ, “ಕೋವಿಡ್‌ ನಂತರದ ರಾಜ್ಯದಲ್ಲಿ ಆರ್ಥಿಕ ಸ್ಥಿತಿಯು ಹದಗೆಟ್ಟಿದ್ದು, ಶಿಕ್ಷಣಕ್ಕೆ ಸಂಬಂಧಿಸಿದಂತೆ ಹಲವಾರು ಸಮಸ್ಯೆಗಳಿವೆ. ಸರ್ಕಾರವು ಈ ಸಮಸ್ಯೆಗಳನ್ನು ಬಗೆಹರಿಸುವ ಬದಲು ತಮ್ಮ ಕಾನೂನು ಬಾಹಿರ ಕ್ರಮಗಳ ಮೂಲಕ ಈ ಬಿಕ್ಕಟ್ಟಿಗೆ ಮತ್ತಷ್ಟು ಪ್ರಚೋದನೆ ನೀಡಿದೆ. ಬಹಿರಂಗವಾಗಿ ಹಿಂಸಾಚಾರಕ್ಕೆ ಪ್ರಚೋದನೆ ನೀಡುವವರ ವಿರುದ್ಧ ಸರಕಾರ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ?

ನಾರಾಯಣ ಗುರುಗಳಿರುವ ಸ್ತಬ್ಧಚಿತ್ರ ತೆರವು ವಿಚಾರದಲ್ಲಿ ಬಿಲ್ಲವರಲ್ಲಿ ಮೂಡಿರುವ ಅಸಮಾಧಾನದಿಂದ ಮತ್ತು ಗಣರಾಜ್ಯೋತ್ಸವ ಸಮಾರಂಭದಲ್ಲಿ ಡಾ.ಬಿ.ಆರ್‌.ಅ೦ಬೇಡ್ಕರ್‌ ಅವರ ಭಾವಚಿತ್ರ ತೆಗೆದಿರುವ ಬಗ್ಗೆ ರಾಜ್ಯಾದ್ಯಂತ ದಲಿತರು ಅಸಮಾಧಾನ ವ್ಯಕ್ತಪಡಿಸುತ್ತಿರುವುದರಿಂದ ಬಿಜೆಪಿ ಸರ್ಕಾರ ವಿಚಲಿತವಾಗಿದೆ. ತಳಮಟ್ಟದಲ್ಲಿರುವ ಸಮುದಾಯಗಳು ಇನ್ನೂ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿವೆ. ಇವೆಲ್ಲಾ ಸಮಸ್ಯೆಗಳಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಈ ವಿವಾದವನ್ನು ಸರ್ಕಾರ ಸೃಷ್ಟಿ ಮಾಡಿದೆ ಎಂಬ ಆತಂಕ ರಾಜ್ಯದಾದ್ಯಂತ ಇದೆ” ಎಂದು ಹೇಳಿದರು.

ಇದನ್ನೂ ಓದಿ: ಸಿಂಧೂರ ಧರಿಸುವುದು ನನ್ನ ಆಯ್ಕೆ, ಹಿಜಾಬ್ ಧರಿಸುವುದು ಮುಸ್ಕಾನ್ ಆಯ್ಕೆ: `ಹಮ್ ಸಬ್ ಹಿಂದೂಸ್ತಾನಿ’ ಎಂದ ತೆಲಂಗಾಣ ಸಿಎಂ ಪುತ್ರಿ

ಜಮಾತೆ ಇಸ್ಲಾಮಿ ಹಿಂದ್ ಉಪಾಧ್ಯಕ್ಷ ಮೊಹಮ್ಮದ್‌ ಯೂಸುಫ್‌ ಕಣ್ಣಿ ಮಾತನಾಡಿ, “ಎಲ್ಲಾ ಜನತೆ, ಅದರಲ್ಲೂ ವಿಶೇಷವಾಗಿ ಅಲ್ಪಸಂಖ್ಯಾತರ ಮೂಲಭೂತ ಹಕ್ಕುಗಳನ್ನು ರಕ್ಷಣೆ ಮಾಡುವುದು ಸರ್ಕಾರದ ಕರ್ತವ್ಯ. ಮುಸ್ಲಿಮರ ಸಾಮಾಜಿಕ-ಆರ್ಥಿಕ ಪರಿಸ್ಥಿತಿ ಹಿಂದುಳಿದಿದ್ದು, ಅದನ್ನು ಪರಿಹರಿಸಲು ಸರ್ಕಾರ ತೆಗೆದು ಕೊಳ್ಳಬೇಕಾದ ಅಗತ್ಯ ಕ್ರಮಗಳ ಕುರಿತು ‘ಸಾಚಾರ್‌ ಸಮಿತಿಯ ವರದಿ’ ವಿವರಿಸಿದೆ. ಇತ್ತೀಚಿಗೆ ನಡೆಯುತ್ತಿರುವ ವಿದ್ಯಾಮಾನಗಳು ಮುಸ್ಲಿಮರನ್ನು, ಅದರಲ್ಲೂ ವಿಶೇಷವಾಗಿ ಮಹಿಳೆಯರನ್ನು ಇನ್ನಷ್ಟು ದುರ್ಬಲ ಸ್ಥಾನಕ್ಕೆ ತಳ್ಳುತ್ತಿವೆ” ಎಂದು ಆತಂಕ ವ್ಯಕ್ತಪಡಿಸಿದರು.

ರೈತ ಮುಖಂಡ ವೀರಸಂಗಯ್ಯ ಜಿ ಎಂ ಮಾತನಾಡಿ, “ತಮ್ಮ ಮಕ್ಕಳಿಗೆ ಬೇಡದಿದ್ದರೂ ಬಲವಂತವಾಗಿ ಕೇಸರಿ ಶಾಲು ತೊಡಿಸುತ್ತಿದ್ದಾರೆ. ಮಕ್ಕಳ ಮನಸ್ಸಿನಲ್ಲಿ ದ್ವೇಷವನ್ನು ತುಂಬಿಸಲಾಗಿದ್ದು ಮತ್ತು ಇದರಿಂದಾಗಿ ಮಕ್ಕಳ ಭವಿಷ್ಯದ ಬಗ್ಗೆ ಚಿಂತೆಯುಂಟಾಗಿದೆ ಎಂದು ಎಷ್ಟೋ ಜನ ಪೋಷಕರು ನಮ್ಮ ಬಳಿ ಬಂದು ನೋವನ್ನು ಹಂಚಿಕೊಂಡಿದ್ದಾರೆ. ಈ ಕೋಮುವಾದಿ ಅಜೆಂಡಾ ಕೂಡಲೇ ನಿಲ್ಲಬೇಕು” ಎಂದು ಒತ್ತಾಯಿಸಿದರು.

ಅಕ್ಕೈ ಪದ್ಮಶಾಲಿಯವರು ಮಾತನಾಡಿ, “ಮಹಿಳೆಯರು ತಮಗೆ ಬೇಕಾದುದನ್ನು ಧರಿಸುವ ಹಕ್ಕನ್ನು ಹೊಂದಿದ್ದಾರೆ. ಸರ್ಕಾರ ಅಥವಾ ಯಾವುದೇ ವ್ಯಕ್ತಿ ಅದನ್ನು ಪ್ರಶ್ನಿಸಲು ಸಾಧ್ಯವಿಲ್ಲ. ಮಹಿಳೆಯರು ಯಾವ ರೀತಿಯ ಬಟ್ಟೆಯನ್ನು ಧರಿಸಬೇಕೆಂದು ನಿರ್ಧರಿಸಲು ನಿರಂತರವಾಗಿ ಪ್ರಯತ್ನ ಮಾಡಲಾಗುತ್ತಿದೆ. ಈಗ ಶಿಕ್ಷಣವನ್ನು ನಿರಾಕರಿಸಲು ಇದನ್ನು ಬಳಸಲಾಗುತ್ತಿದೆ. ಇದು ಸಂಪೂರ್ಣವಾಗಿ ಅಸಾಂವಿಧಾನಿಕ ಮತ್ತು ಮಹಿಳೆಯರ ಘನತೆ ಮತ್ತು ಸ್ವಾಯತ್ತತೆಯನ್ನು ಉಲ್ಲಂಘಿಸುತ್ತದೆ” ಎಂದು ಹೇಳಿದರು.

ಇದನ್ನೂ ಓದಿ: ಹಿಜಾಬ್ ವಿವಾದ ವಿಶೇಷ ವರದಿ: ಬಹುತ್ವ ಸಂಸ್ಕೃತಿಯ ಭಾರತದಲ್ಲಿ ಮತೀಯ ರಾಜಕಾರಣ

ಬಹುತ್ವ ಕರ್ನಾಟಕದ ಹಕ್ಕೊತ್ತಾಯಗಳು

  1. ಎಲ್ಲಾ ವಿದ್ಯಾರ್ಥಿಗಳಿಗೆ ತರಗತಿಯೊಳಗಿನ ಶಾಸನಬದ್ಧ ಹಕ್ಕುಗಳನ್ನು ತಾರತಮ್ಯವಿಲ್ಲದೆ ಸಾಂವಿಧಾನಿಕವಾಗಿ ಪುನಃಸ್ಥಾಪಿಸಿ, ಇತ್ತೀಚಿನ ದ್ವೇಷಾತ್ಮಕ ಕೃತ್ಯಗಳಿಗೆ ಒಳಗಾಗಿರುವ ಮುಸಲ್ಮಾನ ವಿದ್ಯಾರ್ಥಿನಿಯರಿಗೆ ಸೂಕ್ತ ರಕ್ಷಣೆಯನ್ನು ನೀಡಿ ಅವರ ಶೈಕ್ಷಣಿಕ ಹಕ್ಕನ್ನು ಭದ್ರಪಡಿಸಬೇಕು.
  2. ಸರಕಾರದ ತಾರೀಕು 5 ಫಬ್ರವರಿ 2022 ರ ಸುತ್ತೋಲೆ ಕ್ರಮಾಂಕ No. 14 SHH 2022 Bengaluru ಅನ್ನು ಹಿಂಪಡೆಯಬೇಕು ಹಾಗೂ ಮುಸಲ್ಮಾನ ವಿದ್ಯಾರ್ಥಿನಿಯರ ಶೈಕ್ಷಣಿಕ ಹಕ್ಕನ್ನು ಕಾಪಾಡಬೇಕು.
  3. ದಲಿತ, ಬಹುಜನ, ಆದಿವಾಸಿ ಯುವಕರ ಮನಸ್ಸಿನಲ್ಲಿ ದ್ವೇಷ ತುಂಬಿ ಅವರ ಭವಿಷ್ಯ ಹಾಳು ಮಾಡುತ್ತಿರುವವರ ವಿರು‌ದ್ಧ ಸರಕಾರ ಕಠಿಣ ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಸಮಾಜ ಕಲ್ಯಾಣ ಇಲಾಖೆಯಿಂದ ತನಿಖೆ ನಡಸಬೇಕು.
  4. ತಕ್ಷಣ ಶಾಲಾ ಕಾಲೇಜುಗಳಲ್ಲಿ, ಶೈಕ್ಷಣಿಕ ಸಂಸ್ಥೆಗಳಲ್ಲಿ ಕೋಮುವಾದಿ ದ್ವೇಷ ಹರಡುವುದನ್ನು ನಿಲ್ಲಿಸಿ, ಭಾರತ ಸರಕಾರದ 2008ರ ಕೋಮು ಸೌಹಾರ್ದತೆಗೆ ಮಾರ್ಗಸೂಚಿಗಳನ್ನು ಕ್ರಿಯಾಶೀಲವಾಗಿ ಅನುಸರಿಸಬೇಕು.
  5. ಕಾನೂನನ್ನು ಉಲ್ಲಂಘಿಸಿ ದ್ವೇಷ ಹರಡಿದ ಎಲ್ಲಾ ಚುನಾಯಿತ ಜನ ಪ್ರತಿನಿಧಿಗಳ ವಿರುದ್ಧ ತಕ್ಷಣ IPC 1980ರ ಕಲಂ 153A, 153B, 295A, 298 ಮತ್ತು 505(2)ಗಳ ಅಡಿಯಲ್ಲಿ FIRಗಳನ್ನು ದಾಖಲಿಸಿ, ಪೋಲಿಸ್‌ ಆಧಿಕಾರಿಗಳಿಗೆ ಕಾನೂನು ಪ್ರಕಾರ ಬಂಧಿಸಬೇಕೆಂಬ ಆದೇಶಗಳನ್ನು ಹೊರಡಿಸಬೇಕು.
  6. ರಾಜ್ಯದಲ್ಲಿ ಕೋಮುವಾದಿ ಕಲಹಗಳನ್ನು ಸೃಷ್ಟಿಸಿ ಪೋಷಿಸುತ್ತಿರುವ ಕೋಮುವಾದಿ ವ್ಯಕ್ತಿಗಳನ್ನು ಗುರುತಿಸಿ ತಕ್ಷಣ IPC 1980ರ ಕಲಂ 153A, 153B, 295A, 298 ಮತ್ತು 505(2)ಗಳ ಅಡಿಯಲ್ಲಿ FIRಗಳನ್ನು ದಾಖಲಿಸಿ, ಕಾನೂನು ಪ್ರಕಾರ ಬಂಧಿಸಬೇಕು.
  7. ರಾಜ್ಯದಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡಲು ಇತರ ಎಲ್ಲಾ ಕ್ರಮಗಳನ್ನು ಕೈಗೊಳ್ಳಬೇಕು.

ಇದನ್ನೂ ಓದಿ: ಹಿಜಾಬ್‌‌ಗಾಗಿ ದನಿಯೆತ್ತಿದ ವಿದ್ಯಾರ್ಥಿನಿಯರ ಫೋನ್‌‌ ನಂಬರ್‌, ವಿಳಾಸ ಲೀಕ್‌ ಮಾಡಿದ ಉಡುಪಿ ಕಾಲೇಜು!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯವರು ಬಜೆಟ್ ಓದುವುದೂ ಇಲ್ಲ, ಆರ್ಥಿಕತೆ ಬಗ್ಗೆ ಗೊತ್ತೂ ಇಲ್ಲ: ಸಿಎಂ ಸಿದ್ದರಾಮಯ್ಯ

0
ಬಡವರಿಗೆ ಆರ್ಥಿಕ ಸಬಲತೆ ಕೊಡುವುದು ಅಭಿವೃದ್ಧಿ ಅಲ್ಲವೇ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಗ್ಯಾರಂಟಿ ಯೋಜನೆಗಳನ್ನೇ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ" ಎಂಬ ಬಿಜೆಪಿಗರ ಆರೋಪಕ್ಕೆ...