ಉತ್ತರ ಪ್ರದೇಶದ ಉನ್ನಾವೋ ಜಿಲ್ಲೆಯಲ್ಲಿ ಎರಡು ತಿಂಗಳ ಹಿಂದೆ ಕಾಣೆಯಾಗಿದ್ದ ದಲಿತ ಯುವತಿಯ ಮೃತದೇಹ ಕೊಳೆತ ಸ್ಥಿತಿಯಲ್ಲಿ ಮಾಜಿ ಸಚಿವರ ಮಗನ ಒಡೆತನದ ಆಶ್ರಮವೊಂದರಲ್ಲಿ ಪತ್ತೆಯಾಗಿದೆ. ಇದು ಚುನಾವಣೆ ಎದುರಿಸುತ್ತಿರುವ ಯುಪಿಯಲ್ಲಿ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ.
2021 ರ ಡಿಸೆಂಬರ್ 8 ರಂದು ನಾಪತ್ತೆಯಾಗಿದ್ದ 22 ವರ್ಷದ ದಲಿತ ಯುವತಿಯ ಮೃತದೇಹ ಸಮಾಜವಾದಿ ಪಕ್ಷದ ಮಾಜಿ ನಾಯಕರಾಗಿದ್ದ ಫತೇಹ್ ಬಹದ್ದೂರ್ ಸಿಂಗ್ ಅವರ ಪುತ್ರ ರಾಜೋಲ್ ಸಿಂಗ್ ಒಡೆತನದ ಆಶ್ರಮದಲ್ಲಿ ಕೊಳೆತ ಸ್ಥಿತಿಯಲ್ಲಿ ಗುರುವಾರ (ಫೆ.10) ಪತ್ತೆಯಾಗಿದೆ.
ಮೃತ ಯುವತಿಯ ತಾಯಿ, ರಾಜೋಲ್ ಸಿಂಗ್ ಯುವತಿಯನ್ನು ಅಪಹರಿಸಿದ್ದಾರೆ, ಪೊಲೀಸರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿ, ಜನವರಿ 24 ರಂದು ಲಕ್ನೋದಲ್ಲಿ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರ ವಾಹನದ ಮುಂದೆ ಆತ್ಮಹತ್ಯೆಗೆ ಯತ್ನಿಸಿದರು. ಬಳಿಕ ಪೊಲೀಸರು ಅದೇ ದಿನ ರಾಜೋಲ್ ಸಿಂಗ್ ಅವರನ್ನು ಬಂಧಿಸಿದ್ದರು.
ಇದನ್ನೂ ಓದಿ: ‘ಉತ್ತರಾಖಂಡದಲ್ಲಿ ಬಿಜೆಪಿ ಸೋಲಲಿದೆ’: ಬಿಜೆಪಿ ಸ್ಟಾರ್ ಪ್ರಚಾರಕ, ಮಧ್ಯಪ್ರದೇಶ ಸಿಎಂ ಚೌಹಾಣ್ ಹೇಳಿಕೆ
Unnao, UP: Police recovers dead body of a missing woman from plot allegedly owned by the accused
"FIR was registered on Dec 8 and the accused was later arrested. Following investigation, the dead body was recovered. The post mortem will be done," says ASP Shashi Shekhar Singh https://t.co/zd1Lzvmd5i pic.twitter.com/ewZ2WoGxmL
— ANI UP/Uttarakhand (@ANINewsUP) February 10, 2022
“ನಾವು ಆರೋಪಿ ರಾಜೋಲ್ ಸಿಂಗ್ನನ್ನು ವಿಚಾರಣೆಗೆ ಒಳಪಡಿಸಿದ್ದೇವೆ. ವಿಚಾರಣೆ ನಂತರ ಎಸ್ಒಜಿ ತಂಡ ಗುರುವಾರ ಯುವತಿಯ ಮೃತದೇಹವನ್ನು ಹೊರತೆಗೆದಿದೆ. ಮೃತದೇಹವನ್ನು ಆಶ್ರಮದ ಬಳಿಯ ಜಾಗದಲ್ಲಿ ಹೂಳಲಾಗಿತ್ತು” ಎಂದು ಉನ್ನಾವೋದ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಶಶಿ ಶೇಖರ್ ಸಿಂಗ್ ಹೇಳಿದ್ದಾರೆ.
ತನಿಖೆಯಲ್ಲಿ ನಿರ್ಲಕ್ಷ್ಯ ತೋರಿದ್ದಕ್ಕಾಗಿ ಆ ಪ್ರದೇಶದ ಸ್ಟೇಷನ್ ಹೌಸ್ ಆಫೀಸರ್ (ಎಸ್ಎಚ್ಒ) ಅವರನ್ನು ಅಮಾನತುಗೊಳಿಸಲಾಗಿದೆ ಎಂದು ವರದಿಯಾಗಿದೆ. ಯುವತಿಯ ಮರಣೋತ್ತರ ಪರೀಕ್ಷಯಲ್ಲಿ ಆಕೆಯನ್ನು ಕತ್ತು ಹಿಸುಕಿ ಕೊಲೆ ಮಾಡಿರುವುದು ಹಾಗೂ ಆಕೆಯ ಕತ್ತು ಮುರಿದಿರುವುದು ಕಂಡುಬಂದಿದೆ.
ದಲಿತ ಯುವತಿಯ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ ಶುಕ್ರವಾರ ಸಮಾಜವಾದಿ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
उन्नाव जिले में सपा नेता के खेत में दलित युवती का दफनाया हुआ शव बरामद होना अति-दुःखद व गंभीर मामला। परिवार वाले पहले से ही उसके अपहरण व हत्या को लेकर सपा नेता पर शक कर रहे थे। राज्य सरकार पीड़ित परिवार को न्याय दिलाने के लिए दोषियों के खिलाफ तुरन्त सख्त कानूनी कार्रवाई करे।
— Mayawati (@Mayawati) February 11, 2022
“ಉನ್ನಾವೊ ಜಿಲ್ಲೆಯ ಎಸ್ಪಿ ನಾಯಕರ ಕ್ಷೇತ್ರದಲ್ಲಿ ದಲಿತ ಯುವತಿಯ ಮೃತದೇಹ ದೊರೆತಿರುವುದು ಅತ್ಯಂತ ದುಃಖಕರ ಮತ್ತು ಗಂಭೀರ ವಿಷಯವಾಗಿದೆ. ಯುವತಿಯ ಅಪಹರಣ ಮತ್ತು ಕೊಲೆ ಮಾಡಿರುವ ಬಗ್ಗೆ ಕುಟುಂಬಸ್ಥರು ಎಸ್ಪಿ ನಾಯಕರ ವಿರುದ್ಧ ಶಂಕೆ ವ್ಯಕ್ತಪಡಿಸಿದ್ದರು. ರಾಜ್ಯ ಸರ್ಕಾರ ಕೂಡಲೇ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಿ ನೊಂದ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕು” ಎಂದು ಟ್ವೀಟ್ ಮಾಡಿದ್ದಾರೆ.
ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ್ ಯಾದವ್, ’ಪ್ರಕರಣಕ್ಕೂ ತಮ್ಮ ಪಕ್ಷಕ್ಕೂ ಸಂಬಂಧವಿಲ್ಲ. ಈ ದುರದೃಷ್ಟಕರ ಘಟನೆಯು ಯುಪಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಬಿಜೆಪಿ ಸರ್ಕಾರದ ಸುಳ್ಳು ಹೇಳಿಕೆಗಳನ್ನು ಬಹಿರಂಗಪಡಿಸಿದೆ. ಸಂತ್ರಸ್ತ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕು’ ಎಂದು ಆಗ್ರಹಿಸಿದ್ದಾರೆ.
ಇನ್ನು ತಮ್ಮ ಮಗಳು ನಾಪತ್ತೆಯಾದಾಗ ಪೊಲೀಸರು ತನ್ನ ದೂರುಗಳಿಗೆ ಕಿವಿಗೊಡಲಿಲ್ಲ ಎಂದು ಸಂತ್ರಸ್ತೆಯ ತಾಯಿ ಹೇಳಿದ್ದಾರೆ. “ನಿಮ್ಮ ಹುಡುಗಿ ಮನೆಯಿಂದ ಓಡಿ ಹೋಗಿದ್ದಾರೆ. ಶೀಘ್ರದಲ್ಲೇ ಹಿಂತಿರುಗುತ್ತಾರೆ ಎಂದ ಪೊಲೀಸ್ ಅಧಿಕಾರಿಗಳು ನಮಗೆ ಎಸ್ಪಿಯನ್ನು ಭೇಟಿ ಮಾಡಲು ಸಹ ಬಿಡಲಿಲ್ಲ” ಎಂದಿದ್ದಾರೆ.
ಇದನ್ನೂ ಓದಿ: ಉತ್ತರ ಪ್ರದೇಶ: ಹತ್ರಾಸ್ ಅತ್ಯಾಚಾರ ಪ್ರಕರಣ ಚುನಾವಣೆಯನ್ನು ಪ್ರಭಾವಿಸುವುದೇ?