ಪಶ್ಚಿಮ ಬಂಗಾಳದ ಬಿಜೆಪಿ ನಾಯಕ ಅನುಪಮ್ ಹಝ್ರಾ ಅವರನ್ನು ಮಂಗಳವಾರ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಸ್ಥಾನದಿಂದ ವಜಾಗೊಳಿಸಲಾಗಿದೆ.
ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಸಲುವಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್ ಶಾ ಕೋಲ್ಕತ್ತಾದಲ್ಲಿದ್ದಾಗಲೇ ಈ ಬೆಳವಣಿಗೆ ನಡೆದಿದೆ.
ಲೋಕಸಭೆಯ ಮಾಜಿ ಸಂಸದರಾಗಿರುವ ಹಝ್ರಾ ಅವರು, ಪಶ್ಚಿಮ ಬಂಗಾಳ ರಾಜ್ಯ ಬಿಜೆಪಿ ಘಟಕದ ಕಾರ್ಯಚಟುವಟಿಕೆಗಳನ್ನು ಕೆಲ ಸಮಯದಿಂದ ಟೀಕಿಸುತ್ತಿದ್ದರು. ಈ ಕಾರಣಕ್ಕಾಗಿ, ಹಝ್ರಾ ಪಕ್ಷದ ನೀತಿಗೆ ವಿರುದ್ಧವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿ ವಜಾಗೊಳಿಸಿಲಾಗಿದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.
ಡಿಸೆಂಬರ್ 24ರಂದು ಕೋಲ್ಕತ್ತಾದಲ್ಲಿ ಸುಮಾರು ಒಂದು ಲಕ್ಷ ಜನರು ಒಟ್ಟಾಗಿ ಭಗವದ್ಗೀತೆಯ ಶ್ಲೋಕಗಳನ್ನು ಪಠಿಸಿದ ಬಿಜೆಪಿಯ ‘ಗೀತಾಪಾಠ್’ ಕಾರ್ಯಕ್ರಮವನ್ನು ಟೀಕಿಸಿದ್ದ ಹಝ್ರಾ, ಪಕ್ಷದ ನಾಯಕರು ಹಣ ಪೋಲು ಮಾಡುತ್ತಿದ್ದಾರೆ. ಕಾರ್ಯಕ್ರಮದ ಪಾಸ್ಗಳನ್ನು ತಲಾ 1 ಸಾವಿರ ರೂಪಾಯಿಗೆ ಮಾರಾಟ ಮಾಡಿದ್ದಾರೆ ಎಂದು ಆರೋಪಿಸಿದ್ದರು. ದೇವರ ಹೆಸರಿನಲ್ಲಿ ದುಡ್ಡು ಮಾಡುವವರು ನಿಜವಾದ ಹಿಂದೂಗಳೇ? ಎಂದು ಪ್ರಶ್ನಿಸಿದ್ದರು. ಈ ಬೆನ್ನಲ್ಲೇ ಅವರನ್ನು ವಜಾಗೊಳಿಸಿಲಾಗಿದೆ ಎಂದು ವರದಿಗಳು ಹೇಳಿವೆ.
ಮತ್ತೊಂದೆಡೆ, ಕೇಂದ್ರ ತನಿಖಾ ಸಂಸ್ಥೆಗಳಿಂದ ಸಮನ್ಸ್ ನಿರೀಕ್ಷೆಯಲ್ಲಿರುವ ಟಿಎಂಸಿ ನಾಯಕರು ನನ್ನನ್ನು ಸಂಪರ್ಕಿಸಬಹುದು ಎಂದು ಹಝ್ರಾ ಹೇಳಿದ್ದರು. ಈ ಮೂಲಕ ಆರೋಪಗಳನ್ನು ಎದುರಿಸುತ್ತಿರುವವರು ಬಿಜೆಪಿ ಸೇರಿದರೆ ಆರೋಪ ಮುಕ್ತರಾಗಬಹುದು ಎಂಬ ಸಂದೇಶ ಸಾರಿದ್ದರು. ಇದು ಬಿಜೆಪಿಗೆ ಮುಜುಗರ ತರಿಸಿತ್ತು. ಈ ಎಲ್ಲಾ ಕಾರಣಗಳಿಗೆ ಹಝ್ರಾ ಅವರನ್ನು ವಜಾಗೊಳಿಸಿದ್ದಾರೆ ಎನ್ನಲಾಗಿದೆ.
ಅನುಪಮ್ ಹಝ್ರಾ ಅವರನ್ನು ವಜಾಗೊಳಿಸಿದ ಆದೇಶ ಪತ್ರವನ್ನು ಹಂಚಿಕೊಂಡಿರುವ ಪತ್ರಕರ್ತ ಮೊಹಮ್ಮದ್ ಝುಬೈರ್ ಕೂಡ, ಬಿಜೆಪಿಯ ಗೀತಾಪಾಠ್ ಕಾರ್ಯಕ್ರಮವನ್ನು ಟೀಕಿಸಿದ್ದಕ್ಕೆ ಹಝ್ರಾ ಅವರನ್ನು ವಜಾಗೊಳಿಸಲಾಗಿದೆ ಎಂದು ಹೇಳಿದ್ದಾರೆ.
Propaganda News agency @ANI won't tell why he was removed from the National secretary post of BJP. Recently Anupam Hazra accused the party leaders of siphoning off funds in the name of Gita paath. https://t.co/U1prZAUlXZ
— Mohammed Zubair (@zoo_bear) December 26, 2023
2014ರಲ್ಲಿ ತೃಣಮೂಲ ಕಾಂಗ್ರೆಸ್ನಿಂದ ಸ್ಪರ್ಧಿಸಿ ಗೆದ್ದಿದ್ದ ಹಝ್ರಾ, ಬಳಿಕ ಬಿಜೆಪಿಗೆ ಪಕ್ಷಾಂತರ ಮಾಡಿದ್ದರು. ಪಕ್ಷದ ಪರಿಶಿಷ್ಟ ಜಾತಿಯ ಪ್ರಮುಖ ಮುಖಂಡರಾಗಿದ್ದ ಹಝ್ರಾ ಅವರಿಗೆ, 2020ರಲ್ಲಿ ಉನ್ನತ ಹುದ್ದೆ ನೀಡಲಾಗಿತ್ತು. 2023ರಲ್ಲಿ ಅವರನ್ನು ಎರಡನೇ ಅವಧಿಗೆ ಮುಂದುವರಿಸಲಾಗಿತ್ತು. ಹಝ್ರಾ ಬಿಜೆಪಿ ಬಿಹಾರದ ಸಹ ಉಸ್ತುವಾರಿ ಕೂಡ ಆಗಿದ್ದರು.
ಇದನ್ನೂ ಓದಿ : ತಮಿಳುನಾಡು: ಪೆರಿಯಾರ್ ವಿಶ್ವವಿದ್ಯಾನಿಲಯದ ಉಪಕುಲಪತಿ ಬಂಧನ