ಕರ್ನಾಟಕದ ಕೆಲವು ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರನ್ನು ನೇಮಿಸಿಕೊಳ್ಳುವ ಪ್ರಕ್ರಿಯೆ ನಡೆಯುತ್ತಿದೆ. ಇದರ ಭಾಗವಾಗಿ, ಸಾರ್ವಜನಿಕ ಶಿಕ್ಷಣ ಇಲಾಖೆಯು ಪ್ರಾಥಮಿಕ ಶಾಲಾ ಶಿಕ್ಷಕರ ಅರ್ಜಿಗಳನ್ನು ಆಹ್ವಾನಿಸಿದ್ದು, ಇದರಲ್ಲಿ ಲಿಂಗತ್ವ ಅಲ್ಪಸಂಖ್ಯಾತರಿಗೆ (ಟ್ರಾನ್ಸ್ಜೆಂಡರ್) 1% ಮೀಸಲಾತಿಯನ್ನು ನೀಡಿದೆ. ಈ ಮೂಲಕ, ಆ ಸಮುದಾಯದ ಶಿಕ್ಷಕರನ್ನು ನೇಮಿಸಿಕೊಳ್ಳುತ್ತಿರುವ ದೇಶದ ಮೊದಲ ರಾಜ್ಯವಾಗಿ ಕರ್ನಾಟಕ ಗುರುತಿಸಿಕೊಳ್ಳುತ್ತಿದೆ.
ಹಲವು ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಎದುರಾಗಿದ್ದು, ಕೆಲವೆಡೆ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದೆ. ಡಿಸೆಂಬರ್ 2021ರಲ್ಲಿ, ಹಣಕಾಸು ಇಲಾಖೆಯು ಶಿಕ್ಷಕರ ನೇಮಕಾತಿಗೆ ಅನುಮೋದನೆ ನೀಡಿದ ನಂತರ, ಸಾರ್ವಜನಿಕ ಶಿಕ್ಷಣ ಇಲಾಖೆಯು 6 ರಿಂದ 8ನೇ ತರಗತಿಗಳಿಗೆ 15,000 ಶಿಕ್ಷಕರನ್ನು ನೇಮಕ ಮಾಡುವ ಪ್ರಕ್ರಿಯೆ ಆರಂಭಿಸಲು ಮುಂದಾಗಿದೆ. 15,000 ಹುದ್ದಗಳ ಪೈಕಿ 5,000 ಹುದ್ದೆಗಳನ್ನು ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಮೀಸಲಿಡಲಾಗಿದೆ.
ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ, ಗ್ರಾಮೀಣ ಕೋಟಾ, ದೈಹಿಕವಾಗಿ ಅಶಕ್ತರು, ಮಹಿಳಾ ಮೀಸಲಾತಿಗಳ ಜೊತೆಗೆ, ಹೊಸದಾಗಿ ಪರಿಚಯಿಸಲಾದ ಟ್ರಾನ್ಸ್ಜೆಂಡರ್ ಕೋಟಾವನ್ನು ಪಡೆಯಬಹುದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು 50% ಅಂಕಗಳೊಂದಿಗೆ ಪದವಿ ಪಡೆದಿರಬೇಕು. ಎರಡು ವರ್ಷಗಳ ಕಾಲ ಬೋಧನೆಯಲ್ಲಿ ಡಿಪ್ಲೊಮಾ (ಬಿಎಡ್) ಪಡೆದಿರಬೇಕು ಎಂದು ಶಿಕ್ಷಣ ಇಲಾಖೆ ಹೇಳಿದೆ.
“ಎಲ್ಲಾ ಇಲಾಖೆಗಳಲ್ಲಿ ಲಿಂಗತ್ವ ಅಲ್ಪಸಂಖ್ಯಾತರಿಗೆ ಅವಕಾಶ ನೀಡಲು ಸರ್ಕಾರವು 1% ಕೋಟಾವನ್ನು ಜಾರಿಗೊಳಿಸಿದೆ. ನಾವು ಶಿಕ್ಷಕರ ನೇಮಕಾತಿಗೆ ಕರೆ ನೀಡಿದ್ದೇವೆ, ಟಾನ್ಸ್ಜೆಂಡರ್ಗಳಿಗೆ ಮೀಸಲಾತಿ ನೀಡಲಾಗಿದೆ. ಇದು ಮಹತ್ವದ ಹೆಜ್ಜೆಯಾಗಿದ್ದು, ಈ ಸಮುದಾಯವು ಮುಖ್ಯವಾಹಿನಿಗೆ ಸೇರಲು ಸಹಾಯ ಮಾಡುತ್ತದೆ ಎಂದು ನಾವು ಭಾವಿಸುತ್ತೇವೆ” ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ.
ಡಿಸೆಂಬರ್ 2021ರಲ್ಲಿ, ಕರ್ನಾಟಕ ಪೊಲೀಸ್ ಇಲಾಖೆಯು ಟ್ರಾನ್ಸ್ಜೆಂಡರ್ಗಳನ್ನು ಸೇವೆಗೆ ಸೇರಿಸಲು ನಿರ್ಧರಿಸಿತ್ತು. ಅದರಂತೆ, ಮೀಸಲು ಸಬ್-ಇನ್ಸ್ಪೆಕ್ಟರ್ (ಆರ್ಎಸ್ಐ) ಶ್ರೇಣಿಯ 70 ಹುದ್ದೆಗಳಿಗೆ ಅರ್ಹ ಪುರುಷರು, ಮಹಿಳೆಯರು ಮತ್ತು ಟ್ರಾನ್ಸ್ಜೆಂಡರ್ಗಳು ಅರ್ಜಿ ಸಲ್ಲಿಸಲು ಅಧಿಸೂಚನೆ ಹೊರಡಿಸಲಾಗಿದೆ.
“ಕರ್ನಾಟಕದಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಬಗ್ಗೆ ರಾಜ್ಯ ಸರ್ಕಾರ ಸಮೀಕ್ಷೆ ನಡೆಸಿಲ್ಲ. ಆ ಸಮುದಾಯದ ಬಗ್ಗೆ ಸರ್ಕಾರದ ಬಳಿ ಸರಿಯಾದ ಮಾಹಿತಿ ಇಲ್ಲ. ಆ ಸಮುದಾಯದ ಜನರ ಶಿಕ್ಷಣ ಅಥವಾ ಸಾಮಾಜಿಕ-ಆರ್ಥಿಕ ಸ್ಥಿತಿಯ ಬಗ್ಗೆ ಯಾವುದೇ ಡೇಟಾ ಇಲ್ಲದಿರುವಾಗ, ಅಂತಹ ಅಧಿಸೂಚನೆಯು ಅವರಿಗೆ ಹೇಗೆ ಸಹಾಯ ಮಾಡುತ್ತದೆ? ಅಧಿಸೂಚನೆಯ ಪ್ರಕಾರ, ಟ್ರಾನ್ಸ್ಜೆಂಡರ್ಗಳಿಗಾಗಿ 150 ಪೋಸ್ಟ್ಗಳಿವೆ. ಶಿಕ್ಷಣಕ್ಕೆ ಬಂದಾಗ ಎಷ್ಟು ಅರ್ಹರು ಇದ್ದಾರೆ ಎಂಬುದು ನಮಗೆ ತಿಳಿದಿಲ್ಲ. ಅವರ ಶಿಕ್ಷಣಕ್ಕೆ ಸರ್ಕಾರ ಮೊದಲು ಒತ್ತು ನೀಡಬೇಕು’’ ಎಂದು ಲೈಂಗಿಕ ಅಲ್ಪಸಂಖ್ಯಾತರ ಹೋರಾಟಗಾರ್ತಿ ಅಕ್ಕೈ ಪದ್ಮಶಾಲಿ ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿರಿ: ಅಂಬೇಡ್ಕರ್ ವಿಚಾರಧಾರೆಯೇ ಪ್ರೇರಣೆ: ಮೈಸೂರು ವಿವಿಯಲ್ಲಿ ಪಿಎಚ್.ಡಿ ಮಾಡುತ್ತಿರುವ ಟ್ರಾನ್ಸ್ಜೆಂಡರ್ ಮಹಿಳೆಯ ಮನದಾಳ