’ಇ-ವಾಣಿಜ್ಯ’ ಸಂಸ್ಥೆಗಳಲ್ಲಿ ಉದ್ಯೋಗ ಮಾಡುತ್ತಿರುವ ಹಿಂದುಳಿದ ವರ್ಗಗಳ ಯುವಕರಿಗೆ ಬೈಕ್ ಕೊಂಡುಕೊಳ್ಳಲು 25 ಸಾವಿರ ರೂಗಳ ಸಹಾಯ ಧನ ನೀಡಲು ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮ ಅರ್ಜಿಗಳನ್ನು ಆಹ್ವಾನಿಸಿದೆ.
ನಿಗಮದ ಪ್ರಕಟಣೆಯಂತೆ, “2020-21 ನೇ ಸಾಲಿಗೆ ಇ-ವಾಣಿಜ್ಯ ಸಂಸ್ಥೆಗಳಾದ ಝೊಮೆಟೊ, ಸ್ವಿಗ್ಗಿ, ಉಬರ್ ಈಟ್ಸ್, ಅಮೆಝಾನ್ ಮುಂತಾದ ಸಂಸ್ಥೆಗಳಲ್ಲಿ ಉದ್ಯೋಗ ಪಡೆದು, ಮನೆಬಾಗಿಲಿಗೆ ಉತ್ಪನ್ನ ತಲುಪಿಸುತ್ತಿರುವ ಹಿಂದುಳಿದ ವರ್ಗಗಳಿಗೆ ಸೇರಿದ ಪ್ರವರ್ಗ-1, ಪ್ರವರ್ಗ-2ಎ, 3ಎ ಮತ್ತು 3ಬಿಗೆ ಸೇರಿದ ಯುವಕರಿಗೆ ಬೈಕ್ ಕೊಂಡುಕೊಳ್ಳಲು ನಿಗಮದಿಂದ ರೂ.25,000/-ಗಳ ಸಹಾಯ ಧನ” ನೀಡುವುದಾಗಿ ಹೇಳಿದೆ.
ಇದನ್ನೂ ಓದಿ: ಹಿಂದುಳಿದ ವರ್ಗಗಳಿಗೆ ಇನ್ನೂ ಜಾರಿಯಾಗದ ಸಾಂವಿಧಾನಿಕ ಹಕ್ಕು – ಡಾ. ಕಿರಣ್ ಎಂ. ಗಾಜನೂರು
ಆದರೆ ವಿಶ್ವಕರ್ಮ, ಉಪ್ಪಾರ, ಅಂಬಿಗ, ಮಡಿವಾಳ, ಸವಿತಾ, ಅಲೆಮಾರಿ/ಅರೆ ಅಲೆಮಾರಿ ಜನಾಂಗದವರು ಹಾಗೂ ಮತೀಯ ಅಲ್ಪಸಂಖ್ಯಾತರನ್ನು ಹೊರತುಪಡಿಸಿ ಉಳಿದ ಹಿಂದುಳಿದ ವರ್ಗದ ಯುವಜನರು ಈ ಅರ್ಜಿ ಹಾಕಬಹುದು ಎಂದು ನಿಗಮವು ತನ್ನ ಪ್ರಕಟಣೆಯಲ್ಲಿ ಹೇಳಿದ್ದು, “ಬೈಕ್ ಕೊಳ್ಳಲು ಅಗತ್ಯವಿರುವ ಉಳಿಕೆ ಮೊತ್ತವನ್ನು ಬ್ಯಾಂಕ್ ಅಥವಾ ಆರ್ಥಿಕ ಸಂಸ್ಥೆಗಳ ಮೂಲಕ ಸಾಲ ಪಡೆಯಬೇಕು” ಎಂದು ಹೇಳಿದೆ.
ಅಷ್ಟೇ ಅಲ್ಲದೆ, ಒ೦ದು ಬಾರಿ ನಿಗಮದ ಯಾವುದಾದರೂ ಯೋಜನೆಯಲ್ಲಿ ಪ್ರಯೋಜನ ಪಡೆದಿದ್ದಲ್ಲಿ ಅಂತಹವರು ಹಾಗೂ ಅವರ ಕುಟುಂಬದವರು ಮತ್ತೊಮ್ಮೆ ಸೌಲಭ್ಯ ಕೋರಿ ಅರ್ಜಿ ಸಲ್ಲಿಸಲು ಅರ್ಹರಿರುವುದಿಲ್ಲ ಎಂದು ಹೇಳಿದ್ದು, ಅಂತಹ ಅರ್ಜಿಗಳನ್ನು ತಿರಸ್ಕರಿಸಲಾಗುವುದು ಎಂದಿದೆ.
ಈ ಯೋಜನೆಯ ಅಡಿಯಲ್ಲಿ 1000 ಫಲಾನುಭವಿಗಳಿಗೆ ಈ ಸಹಾಯಧನ ನೀಡಲಿದ್ದು ಇದಕ್ಕಾಗಿ ಸರ್ಕಾರ 2.5 ಕೋಟಿ ಹಣ ವ್ಯಯಿಸಲಾಗಿದೆ ಎನ್ನಲಾಗಿದೆ.
ಇದನ್ನೂ ಓದಿ: ಹೊಸ ಶಿಕ್ಷಣ ನೀತಿ: ದುರ್ಬಲ ವರ್ಗಗಳ ವಿದ್ಯಾರ್ಥಿಗಳಿಗೆ ಮಾಡಿದ ವ್ಯವಸ್ಥಿತ ವಂಚನೆ!
ಸೌಲಭ್ಯ ಪಡೆಯಲು ಇಚ್ಚಿಸುವವರು, ಅವರು ವಾಸಿಸುತ್ತಿರುವ ಆಯಾ ಜಿಲ್ಲೆಯ ಡಿ.ದೇವರಾಜ ಅರಸು ಹಿ೦ದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಛೇರಿಯಲ್ಲಿ ಉಚಿತವಾಗಿ ಅರ್ಜಿಗಳನ್ನು ಪಡೆಯಬಹುದು ಎಂದು ಪ್ರಕಟಣೆ ಹೇಳಿದೆ. ಅಲ್ಲದೆ ನಿಗಮದ ವೆಬ್ ಸೈಟ್ www.dbcdc.karnataka.gov.in ನಲ್ಲಿ ಕೂಡಾ ಪಡೆಯಬಹುದಾಗಿದೆ.
ಆಸಕ್ತರು ಭರ್ತಿ ಮಾಡಿದ ಅರ್ಜಿಗಳನ್ನು ಆಗತ್ಯ ದಾಖಲಾತಿಗಳೊಂದಿಗೆ ಆನ್ಲೈನ್ ಅಥವಾ ಆಫ್ಲೈನ್ ಮೂಲಕ ದಿನಾಂಕ: 19/12/2020 ರೊಳಗೆ ಸಲ್ಲಿಸಬೇಕಾಗಿದ್ದು, ಆ ನಂತರ ಬರುವ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ ಎಂದು ನಿಗಮವು ತಿಳಿಸಿದೆ.
ಇದನ್ನೂ ಓದಿ: ಉತ್ತರ ಕನ್ನಡದಲ್ಲಿ ಮೀಸಲಾತಿ ಮಸಲತ್ತು! ನೈಜ ಹಿಂದುಳಿದವರಿಗೆ ಸಾಮಾಜಿಕ ಅನ್ಯಾಯ!
To
Bik