ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಬಂಧನಕ್ಕೆ ಕಾರಣವಾದ ದೆಹಲಿ ಅಬಕಾರಿ ನೀತಿ ಪ್ರಕರಣದ ಆರೋಪಿ, ಬಳಿಕ ಅನುಮೋದಕನಾಗಿದ್ದ ರಾಘವ ಮಾಗುಂಟ ರೆಡ್ಡಿಯ ತಂದೆ ಮಾಗುಂಟ ಶ್ರೀನಿವಾಸುಲು ರೆಡ್ಡಿಗೆ ಎನ್ಡಿಎ ಟಿಕೆಟ್ ನೀಡಲಾಗಿದೆ.
ಮಾಗುಂಟ ಶ್ರೀನಿವಾಸುಲು ರೆಡ್ಡಿ ಆಂಧ್ರಪ್ರದೇಶದ ಪ್ರಮುಖ ಬಿಜೆಪಿ ಮಿತ್ರ ಪಕ್ಷವಾದ ತೆಲುಗು ದೇಶಂ ಪಕ್ಷದಿಂದ ಶುಕ್ರವಾರ ಲೋಕಸಭೆ ಟಿಕೆಟ್ ಪಡೆದಿದ್ದಾರೆ.
ದಿ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದಂತೆ, ಫೆಬ್ರವರಿ 28ರಂದು ತಂದೆ-ಮಗ ಇಬ್ಬರೂ ವೈಎಸ್ಆರ್ ಕಾಂಗ್ರೆಸ್ ಪಕ್ಷದಿಂದ ಟಿಡಿಪಿಗೆ ಸೇರಿದ ನಂತರ ಕ್ಷೇತ್ರದಲ್ಲಿ ಪ್ರಚಾರದಲ್ಲಿ ನಿರತರಾಗಿದ್ದರು. ಒಂಗೋಲ್ನಿಂದ ನಾಲ್ಕು ಬಾರಿ ಸಂಸದರಾಗಿರುವ ಶ್ರೀನಿವಾಸುಲು ಈ ಬಾರಿ ತಮ್ಮ ಮಗನಿಗೆ ಟಿಕೆಟ್ ನೀಡಬೇಕೆಂದು ಬಯಸಿದ್ದರು. ಆದರೆ ಅಬಕಾರಿ ನೀತಿ ಪ್ರಕರಣದ ಕರಿ ನೆರಳು ಟಿಡಿಪಿ ನಿರ್ಧಾರವನ್ನು ಪ್ರೇರೇಪಿಸಿತು ಎಂದು ಮೂಲಗಳು ತಿಳಿಸಿವೆ.
ಆಂಧ್ರಪ್ರದೇಶದಲ್ಲಿ ಟಿಡಿಪಿ, ಜನಸೇನಾ ಪಕ್ಷ ಮತ್ತು ಬಿಜೆಪಿ ಒಳಗೊಂಡಿರುವ ಎನ್ಡಿಎ ನಾಲ್ಕು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ. ಮೇ 13ರಂದು ಆಂಧ್ರಪ್ರದೇಶದಲ್ಲಿ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆ ಏಕಕಾಲದಲ್ಲಿ ನಡೆಯಲಿದೆ.
ಗುರುವಾರ ದೆಹಲಿ ನ್ಯಾಯಾಲಯದಲ್ಲಿ ಕೇಜ್ರಿವಾಲ್ ಅವರು ಹೇಳಿಕೆಯಲ್ಲಿ ತಂದೆ-ಮಗ ಇಬ್ಬರ ಬಗ್ಗೆಯೂ ಉಲ್ಲೇಖ ಮಾಡಿದ್ದಾರೆ. ಅಲ್ಲಿ ಶ್ರೀನಿವಾಸುಲು ತನ್ನ ಮಗನನ್ನು ಫೆಬ್ರವರಿ 2023ರಲ್ಲಿ ಬಂಧಿಸಿದಾಗ ನನ್ನ ವಿರುದ್ಧ ಬಲವಂತವಾಗಿ ಹೇಳಿಕೆ ನೀಡಿದ್ದಾರೆ. ಆ ಬಳಿಕ ರಾಘವ ಅವರು ಅಕ್ಟೋಬರ್ 2023ರಲ್ಲಿ ಪ್ರಕರಣದಲ್ಲಿ ಅನುಮೋದಕರಾದ ನಂತರ ಅವರಿಗೆ ಜಾಮೀನು ನೀಡಲಾಗಿದೆ.
ಇದರ ನಂತರ ಕೆ.ಕವಿತಾ ಅವರು ಮಾಗುಂಟ ಶ್ರೀನಿವಾಸುಲು ರೆಡ್ಡಿಗೆ 19 ಮಾರ್ಚ್ 2021ರಂದು ಕರೆ ಮಾಡಿ ಅವರನ್ನು ಭೇಟಿಯಾಗುವಂತೆ ಕೇಳಿಕೊಂಡಿದ್ದಾರೆ. ಮರುದಿನ, ಶ್ರೀನಿವಾಸಲು ರೆಡ್ಡಿ ಹೈದರಾಬಾದ್ನಲ್ಲಿರುವ ಅವರ ನಿವಾಸಕ್ಕೆ ಕವಿತಾ ಅವರನ್ನು ಭೇಟಿಯಾಗಲು ಹೋಗಿದ್ದಾರೆ. ಆ ಸಭೆಯಲ್ಲಿ ಕೆ.ಕವಿತಾ ಅವರು ಅರವಿಂದ್ ಕೇಜ್ರಿವಾಲ್ ತಮ್ಮೊಂದಿಗೆ ಮಾತನಾಡಿ 100 ಕೋಟಿ ನೀಡುವಂತೆ ಕೇಳಿದ್ದಾರೆ ಎಂದು ಹೇಳಿದ್ದಾರೆ. ಅದರಂತೆ ಶ್ರೀನಿವಾಸಲು ರೆಡ್ಡಿ ಅವರಿಗೆ 50 ಕೋಟಿ ರೂ. ವ್ಯವಸ್ಥೆ ಮಾಡುವಂತೆ ಹೇಳಿದ್ದಾರೆ ಎಂದು ಇಡಿ ಆರೋಪಿಸಿದೆ. ರಾಘವ ರೆಡ್ಡಿ ಅವರು ತಮ್ಮ ತಂದೆ ಮತ್ತು ಕೆ. ಕವಿತಾ ಅವರ ನಡುವಿನ ಒಪ್ಪಂದದ ಪ್ರಕಾರ ಕವಿತಾ ಅವರ ಸಹಚರರಿಗೆ 25 ಕೋಟಿ ರೂಪಾಯಿ ನಗದು ಪಾವತಿಸಿದ್ದಾರೆ ಎಂದು ಇಡಿಗೆ ತಿಳಿಸಿದ್ದಾರೆ.
Mask is off if ever it was on https://t.co/VgXf5b0UpW
— Teesta Setalvad (@TeestaSetalvad) March 30, 2024
ಇದನ್ನು ಓದಿ: ಅಬಕಾರಿ ನೀತಿ ಹಗರಣ: ದೆಹಲಿಯ ಮತ್ತೋರ್ವ ಸಚಿವರಿಗೆ ED ಸಮನ್ಸ್