Homeಪುಸ್ತಕ ವಿಮರ್ಶೆಅಬ್ದುಲ್ ರಜಾಕ್ ಗುರ್ನಾರವರ ’ಪ್ಯಾರಡೈಸ್' ಕಾದಂಬರಿ

ಅಬ್ದುಲ್ ರಜಾಕ್ ಗುರ್ನಾರವರ ’ಪ್ಯಾರಡೈಸ್’ ಕಾದಂಬರಿ

- Advertisement -
- Advertisement -

ಆಫ್ರಿಕಾದ ತಾಂಜಾನಿಯಾ ಮೂಲದ, ಈಗ ಬ್ರಿಟಿಷ್ ನಾಗರಿಕರಾಗಿರುವ ಅಬ್ದುಲ್ ರಜಾಕ್ ಗುರ್ನಾರವರು ’ಜಗತ್ತಿನಲ್ಲಿ ನೆಲೆಯಿಲ್ಲದವನಂತಾಗುವ ವಿಚಾರ ಮತ್ತು ಅನುಭವವೇ ನನ್ನನ್ನು ಬರೆಯಲು ಪ್ರೇರೇಪಿಸಿತು’ ಎಂದಿದ್ದಾರೆ.

ಪೂರ್ವ ಆಫ್ರಿಕಾದಿಂದ ಯೂರೋಪಿಗಾಗಲೀ ಅಥವಾ ಆಫ್ರಿಕಾದೊಳಗೇ ಆಗಲಿ ಆಗುವ ವಲಸೆ ಮತ್ತು ಸ್ಥಳಾಂತರ ಹಾಗೂ ಅಪರಿಚಿತ-ಅಜ್ಞಾತ ಸ್ಥಳಗಳಲ್ಲಿ ಸ್ವಂತ ಚಹರೆ ಅಥವಾ ಗುರುತಿನ ಅನ್ವೇಷಣೆ ಗುರ್ನಾರವರ ಕಾದಂಬರಿಗಳಲ್ಲಿ ಕೇಂದ್ರ ವಸ್ತುವಾಗಿವೆ. ಹತ್ತು ಕಾದಂಬರಿಗಳನ್ನು ಹಾಗೂ ಹಲವಾರು ಕತೆ, ಪ್ರಬಂಧಗಳನ್ನು ರಚಿಸಿರುವ ಗುರ್ನಾರವರ ’ಪ್ಯಾರಡೈಸ್’ಅನ್ನು (1994) ಈಗ ಕನ್ನಡಕ್ಕೆ ಜಿ. ಶರಣಪ್ಪರವರು ’ಸ್ವರ್ಗ’ ಎಂದು 2022ರಲ್ಲಿ ಅನುವಾದಿಸಿದ್ದಾರೆ.

ನಮ್ಮಲ್ಲಿ ’ಜನನೀ ಜನ್ಮಭೂಮಿ ಸ್ವರ್ಗಾದಪಿ ಗರೀಯಸಿ’ ಎಂದರೆ ಜನನಿ ಮತ್ತು ಜನ್ಮಭೂಮಿ ಸ್ವರ್ಗಕ್ಕಿಂತ ಮಿಗಿಲು- ಎಂಬ ಮಾತಿದೆ. ಆದರೆ ಈ ಮಾತು ಎಷ್ಟರಮಟ್ಟಿಗೆ ನಿಜ? ಇಂಡಿಯಾದಂಥ ಜಾತಿ ಸಮಾಜದಲ್ಲಿ ಅವಮಾನಿತನಾದ ವ್ಯಕ್ತಿಗೆ ಅಮೆರಿಕ, ಬ್ರಿಟನ್ನಿನಂಥ ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿ ಉದ್ಯೋಗ ಅಥವಾ ಗ್ರೀನ್‌ಕಾರ್ಡ್ ಸಿಕ್ಕರೆ ಅವನಿಗೆ ಅದೇ ಸ್ವರ್ಗ. ಆದ್ದರಿಂದ ಮೇಲಿನ ನುಡಿಗಟ್ಟು ಕಾಲ ಮತ್ತು ದೇಶಕ್ಕೆ ಸಂಬಂಧಿಸಿ ನಿಜವಾಗುತ್ತದೆ. ಇದಕ್ಕೆ ಸಮಾನಾಂತರವಾಗಿ ಇನ್ನೊಂದು ಸಂಗತಿಯನ್ನಿಲ್ಲಿ ಪ್ರಸ್ತಾಪಿಸಬಹುದು. ಇದೇ ಏಪ್ರಿಲ್ 12, 2023ರಂದು ವರದಿಯಾಗಿರುವಂತೆ ’ವಿನಾಶಕಾರಿ ಬರಗಾಲ ಮತ್ತು ಹೆಚ್ಚುತ್ತಿರುವ ಭಯೋತ್ಪಾದಕ ದಾಳಿ ಪ್ರಕರಣಗಳಿಂದ ಕಂಗೆಟ್ಟಿರುವ ಆಫ್ರಿಕಾದ ಸೊಮಾಲಿಯಕ್ಕೆ ಅಂತಾರಾಷ್ಟ್ರೀಯ ಸಮುದಾಯದ ವ್ಯಾಪಕ ಬೆಂಬಲದ ಅಗತ್ಯವಿದೆ’ ಎಂದು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟೋನಿಯೋ ಗುಟೆರಸ್ ಆಗ್ರಹಿಸಿದ್ದಾರೆ. ಬರಗಾಲ ಪೀಡಿತ ದೇಶ ಸೊಮಾಲಿಯಾ ಮಾತ್ರ ಅಲ್ಲ; ಕೀನ್ಯಾ ಮತ್ತು ಇಥಿಯೋಪಿಯಾ ಕೂಡ ಸತತ 5 ವರ್ಷದ ವಿಫಲ ಮಳೆಗಾಲದಿಂದ ಅತ್ಯಂತ ತೀವ್ರ ಬರಗಾಲಕ್ಕೆ ತುತ್ತಾಗಿವೆ. ಜತೆಗೆ ಅಂತರ್ ಯುದ್ಧದಿಂದ ಜರ್ಝರಿತವಾಗಿವೆ. ಪರಿಣಾಮ, ಆ ದೇಶಗಳ ಮಕ್ಕಳು ಮತ್ತು ತಾಯಂದಿರು ನಿರ್ಗತಿಕರಾಗಿ ನಿರಾಶ್ರಿತರ ಶಿಬಿರಗಳಲ್ಲಿ ಅನ್ನಾಹಾರಕ್ಕೆ ಗತಿ ಇಲ್ಲದೆ ರೋಗರುಜಿನಗಳಿಂದ ಜೀವನ್ಮರಣ ಹೋರಾಟದಲ್ಲಿದ್ದಾರೆ. ಆ ದೃಶ್ಯಗಳನ್ನು ಲಭ್ಯವಿರುವ ಹಲವು ವೀಡಿಯೋ ವರದಿಗಳಲ್ಲಿ ನೋಡಬಹುದು. ತಾತ್ಪರ್ಯ ಕೇವಲ ಜನ್ಮಭೂಮಿಯಲ್ಲಿದ್ದರೆ ಮಾತ್ರ ’ಸ್ವರ್ಗ’ ಅಲ್ಲ ಎಂದಾಯಿತು. ಆ ಮಾತಿರಲಿ.

ಅಬ್ದುಲ್ ರಜಾಕ್ ಗುರ್ನಾ

ಪ್ರಸ್ತುತ ’ಪ್ಯಾರಡೈಸ್’ ಕಾದಂಬರಿಯತ್ತ ಬಂದರೆ, ಈ ಸ್ವರ್ಗದ ಕಥೆಯೇ ಬೇರೆ. ಸಾಹಿತ್ಯ ಕ್ಷೇತ್ರದ ನೋಬಲ್ ಪ್ರಶಸ್ತಿ ಪಡೆದ ಅಬ್ದುಲ್ ರಜಾಕ್ ಗುರ್ನಾರವರ ’ಪ್ಯಾರಡೈಸ್’ ಕಾದಂಬರಿಯು ಕುರಾನ್ ಧರ್ಮಗ್ರಂಥದ ಹಂದರದ ಮೇಲೆ ರಚನೆಗೊಂಡಿದೆ. ಕುರಾನ್‌ನಲ್ಲಿನ ಪ್ರವಾದಿ ಯೂಸೂಫನ ಕತೆಯಂತೆಯೇ ಪ್ಯಾರಡೈಸ್ ಕಾದಂಬರಿಯ ಈ ಕಥಾನಾಯಕ ಯೂಸೂಫನದಾಗಿದೆ. ಕುರಾನ್ ಕತೆಯಲ್ಲಿ ಯೂಸೂಫ್ ಚಿಕ್ಕ ಬಾಲಕನಾಗಿದ್ದಾಗ ಅವನನ್ನು ಈಜಿಪ್ಟ್‌ಗೆ ತಂದು ಫೆರೋನ ಅಧಿಕಾರಿಯೊಬ್ಬನಿಗೆ ಗುಲಾಮನಂತೆ ಮಾರಾಟ ಮಾಡುತ್ತಾರೆ. ಅಲ್ಲಿ ಆ ಅಧಿಕಾರಿಯ ಬಳಿ ಕೆಲಸ ಮಾಡುತ್ತಾ ಸ್ಫುರದ್ರೂಪಿ ಯುವಕನಾಗುವ ಯೂಸೂಫನ ಮೇಲೆ ಆ ಅಧಿಕಾರಿಯ ಹೆಂಡತಿ ಕಣ್ಣುಹಾಕುತ್ತಾಳೆ. ಆದರೆ ಯೂಸುಫ್ ತಿರಸ್ಕರಿಸುತ್ತಾನೆ. ಆದರೆ ಆಕೆ ಅವನೇ ತನ್ನ ಮೇಲೆ ಕಣ್ಣು ಹಾಕಿದ್ದಾನೆಂಬ ಅಪರಾಧ ಹೊರಿಸಿ ಸೆರೆಮನೆಗೆ ಹಾಕಿಸುತ್ತಾಳೆ. ಇತ್ತ ’ಪ್ಯಾರಡೈಸ್’ನಲ್ಲಿ ಯೂಸೂಫನನ್ನು ಅವನ ತಂದೆ ತಾನು ಮಾಡಿದ ಸಾಲಕ್ಕೆ ವ್ಯಾಪಾರಿ ಅಜೀಜ್ ಎಂಬುವನಿಗೆ ಮಾರಾಟ ಮಾಡುತ್ತಾನೆ. ತನ್ನನ್ನು ಮಾರಾಟ ಮಾಡಿದ್ದಾರೆ ಹಾಗೂ ತಾನೆಂದೂ ತನ್ನ ತಂದೆತಾಯಿಯರನ್ನು ಪುನಃ ಭೇಟಿಮಾಡಲು ಸಾಧ್ಯವಾಗುವುದಿಲ್ಲವೆಂಬ ಅರಿವೇ ಅವನಿಗರಿವಿರುವುದಿಲ್ಲ. ಕುರಾನ್‌ನಲ್ಲಿನ ಕತೆಯಂತೆಯೇ ಅಜೀಜ್‌ನ ಪತ್ನಿ ಇವನ ಮೇಲೆ ಕಣ್ಣು ಹಾಕುತ್ತಾಳೆ. ಇವನೂ ಆಕೆಯನ್ನು ತಿರಸ್ಕರಿಸುತ್ತಾನೆ. ಆಕೆ ಅವನ ಮೇಲೆ ಅಪವಾದ ಹೊರಿಸುತ್ತಾಳೆ. ’ಪ್ಯಾರಡೈಸ್’ನ ಕತೆ ಸ್ಥಿತವಾಗಿರುವುದು ಇಪ್ಪತ್ತನೇ ಶತಮಾನದ ಎರಡನೇ ದಶಕದಲ್ಲಿ- ಆಗ ಜರ್ಮನಿ ಕಾಲೋನಿಯಾಗಿದ್ದ ತಾಂಜಾನಿಯಾದಲ್ಲಿ. [ಜೆ ಬಾಲಕೃಷ್ಣ, ಮುನ್ನುಡಿ]

ಅಬ್ದುಲ್ ರಜಾಕ್ ಗುರ್ನಾರವರು 1948ರಲ್ಲಿ ಪೂರ್ವ ಆಫ್ರಿಕಾದ ಕಡಲಿನ ಜಾಂಜಿಬಾರ್ ದ್ವೀಪದಲ್ಲಿ ಜನಿಸಿದರು. 1963ರಲ್ಲಿ ಜಾಂಜಿಬಾರ್ ಬ್ರಿಟಿಷ್ ವಸಾಹತು ಆಡಳಿತದಿಂದ ಸ್ವತಂತ್ರ ಪಡೆದ ನಂತರ ಆಂತರಿಕ ದಂಗೆಗಳಾಗಿ, ಅರಬ್ ಮೂಲದ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ಹೆಚ್ಚಾಯಿತು. 1968ರಲ್ಲಿ 18ನೇ ವಯಸ್ಸಿನ ಗುರ್ನಾ ಇಂಗ್ಲೆಂಡಿಗೆ ವಲಸೆ ಹೋಗಿ, ಅಲ್ಲಿಯೇ ತಮ್ಮ ವಿದ್ಯಾಭ್ಯಾಸವನ್ನು ಮುಂದುವರಿಸಿದರು. ಅಲ್ಲಿನ ಅವರ ನೋಟ, ಕಂಡ ಜೀವನದ ಪರಿ, ಅನುಭವಿಸಿದ ಹಿಂಸೆಯ ಹಿನ್ನೆಲೆಯ ಬಗ್ಗೆ ಮಿಡಿಯುತ್ತಾ ಬರೆಯತೊಡಗಿದರು. ಅವರ ಮಾತೃಭಾಷೆ ’ಸ್ವಾಹಿಲಿ’ ಆದರೂ ಅವರು ಇಂಗ್ಲಿಷ್ ಭಾಷೆಯಲ್ಲೇ ಬರೆಯತೊಡಗಿದರು. ನೆಲೆ ಇಲ್ಲದೆ ಪರಿತಪಿಸುವ ಅನುಭವವೇ ಅವರನ್ನು ಬರೆಯಲು ಪ್ರೋತ್ಸಾಹಿಸಿದ್ದು. ಅವರ ಬರಹಗಳಲ್ಲಿ ಕಂಡುಬರುವ ಪ್ರಮುಖ ಅಂಶವಂದರೆ ಅಪರಿಚಿತ ಸ್ಥಳಗಳಲ್ಲಿ, ಮಾನವನ ಸ್ಥಳಾಂತರದ ಬಾಧೆ, ಹಾಗೂ ಸ್ವಂತ ಚಹರೆಯ ಅನ್ವೇಷಣೆ. ಅವರ ಕೆಲವು ಕಾದಂಬರಿಗಳು ಪ್ರಸ್ತುತ ಬ್ರಿಟನ್‌ನಲ್ಲಿ ವಲಸೆ ಬಂದವರ ಅನುಭಗಳನ್ನು ವಿವಿಧ ಮಜಲುಗಳಲ್ಲಿ ಚಿತ್ರೀಕರಿಸಿವೆ. ಅವರ ನಾಲ್ಕನೇ ಕಾದಂಬರಿ ’ಸ್ವರ್ಗ’ ಮೊದಲನೇ ವಿಶ್ವಯುದ್ಧದ ಸಮಯದ ವಸಾಹತುಪೂರ್ವ ಆಫ್ರಿಕಾದ ಕತೆಯನ್ನು ಒಳಗೊಂಡಿದೆ. ಮೊದಲು ಅವರ ಕಾದಂಬರಿಗಳು ಜನರಿಂದ ಗಹನವಾಗಿ ಸ್ವೀಕೃತಿಗೊಂಡರೂ ಆರ್ಥಿಕವಾಗಿ ಅಂತಹ ಹಿರಿಮೆಯನ್ನೇನೂ ಪಡೆದುಕೊಳ್ಳಲಿಲ್ಲ. ಆದರೆ ಅವರಿಗೆ ನೋಬಲ್ ಪ್ರಶಸ್ತಿ ಬಂದ (2021) ಮೇಲೆ ಪ್ರಕಾಶಕರು ಸಾಲಲ್ಲಿ ನಿಂತು ಅವರ ಕೃತಿಗಳನ್ನು ಪ್ರಕಟಿಸಲು ದುಂಬಾಲು ಬಿದ್ದರು.

ಇದನ್ನೂ ಓದಿ: ಪ್ರೊ. ಕಾರ್ಲೋಸರ ‘ಶಂಬಾಲ’ ಎಂಬ ರಾಜಕೀಯ ಕಾದಂಬರಿ

ಗುರ್ನಾರವರು ತಮ್ಮ ಕಾದಂಬರಿಗಳಲ್ಲಿ ಮುಖ್ಯವಾಗಿ ಚಿತ್ರಿಸುವ ಮತ್ತೊಂದು ಅಂಶವೇಂದರೆ, ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿನ ಯುದ್ಧ ಅಥವಾ ಇನ್ನಿತರ ಸಂಘರ್ಷಗಳು ಮತ್ತು ಅವುಗಳಿಂದ ಹುಟ್ಟುವ ಯಾತನೆ ಹಾಗೂ ವಲಸೆ; ಅವರ ಕಥೆ ಕಾದಂಬರಿಗಳ ಪಾತ್ರಗಳು ಹೊಸ ಪರಿಸರದಲ್ಲಿ ತಮ್ಮ ಹೊಸ ಚಹರೆಗಳಿಗಾಗಿ ನಿರಂತರವಾಗಿ ಅಪೇಕ್ಷಿಸುತ್ತವೆ. ಅವು ನಿರಂತರವಾಗಿ ಹೊಸ ಬದುಕಿನ ಹಾಗೂ ಗತದ ಅಸ್ತಿತ್ವಗಳ ನಡುವಿನ ತಾಕಲಾಟಕ್ಕೆ ಒಳಗಾಗುತ್ತವೆ. ಹೊಸ ಸಂಸ್ಕೃತಿಯಲ್ಲಿ ಗತದ ಬಾಳಿನ ಅಸ್ತಿತ್ವವನ್ನು ಹುಡುಕುವ ಪ್ರಯತ್ನದಲ್ಲಿ ತೊಡಗುತ್ತವೆ. ಆಗ ತುಮುಲ, ಕೀಳರಿಮೆ ಮತ್ತು ಸಂಘರ್ಷಕ್ಕೆ ಸಿಕ್ಕಿ ಬಳಲುತ್ತವೆ. ಈ ಪರಿಸ್ಥಿತಿಯಲ್ಲಿ ಅವರು ಸಾಕಷ್ಟು ಯೋಚಿಸಿ ಎಚ್ಚರಿಕೆಯಿಂದ ಕೃತಿ ರಚನೆಗೆ ತೊಡಗುತ್ತಾರೆ. ವಾಸ್ತವದ ನೆಲೆಗಟ್ಟಿನ ಮೇಲೆ ಕಾಲ್ಪನಿಕ ಪಾತ್ರಗಳನ್ನು ನಿಲ್ಲಿಸುತ್ತಾರೆ. ’ಪ್ಯಾರಡೈಸ್’ ಕಾದಂಬರಿಯಲ್ಲಿ ಪ್ರಮುಖ ಅಂಶವೆಂದರೆ, ಒಬ್ಬ ಆಫ್ರಿಕಾ ಮೂಲದ ಹುಡುಗ ಬಾಲ್ಯದಿಂದ ಯೌವನಾವಸ್ಥೆಗೆ ಬರುವಂತಹುದು. ಇದೊಂದು ಆಫ್ರಿಕಾದ ಮೂಲ ಸಮುದಾಯವೊಂದರ ಕುಸುಮ. ಯೂರೋಪಿನ ವಸಾಹತುಶಾಹಿಯ ಕಾಲ್ತುಳಿತಕ್ಕೆ ಸಿಲುಕಿ ಧೂಳಾಗಿ ಹೋಗುವ ಪ್ರೇಮ ದುರಂತ ಚಿತ್ರ.

ಹನ್ನೆರಡು ವರ್ಷದ ಬಾಲಕ ಯೂಸೂಫ್ ತನ್ನ ತಂದೆ ಮಾಡಿದ್ದ ಸಾಲಕ್ಕೆ ಮಾರಾಟವಾಗುತ್ತಾನೆ; ತನ್ನ ಹಿಂದಿನ ಸರಳ ಹಳ್ಳಿ ಜೀವನವನ್ನ ಬಿಡಬೇಕಾಗುತ್ತದೆ. ಈ ಕಥಾನಾಯಕ ಯೂಸೂಫ್‌ನ ಕಣ್ಣುಗಳ ಮುಖಾಂತರ ಗುರ್ನಾರವರು ಯುದ್ಧದ ಜಂಜಾಟದಲ್ಲಿ ಸಿಲುಕಿರುವ ಆಫ್ರಿಕಾದ ಕೋಮುವಾರು ವ್ಯಾಪಾರದ ಹೋರಾಟಗಾರರ ಬಗ್ಗೆ ಚಿತ್ರಿಸುತ್ತಾರೆ. ಅದೇ ಸಮಯದಲ್ಲಿ ಕಥಾನಾಯಕನ ಬಾಲ್ಯದ ಹೋರಾಟದ ಪರಿಚಯವಾಗುತ್ತದೆ. ಇದರ ಪರಿಣಾಮ ಈ ಕೃತಿ ರೋಮಾಂಚಕ ಮತ್ತು ಶಕ್ತಿಯುತವಾದ ಕೃತಿ ಆಗಿ ಒಡಮೂಡಿದೆ. [ಲೇಖಕರ ಮಾತು]

ಇಲ್ಲಿ ಚಿತ್ರಿತವಾಗಿರುವ ಕೆಲವು ಸನ್ನಿವೇಶಗಳು, ಪಾತ್ರಗಳು ಮನರಂಜನೆಯ ಜೊತೆಗೆ ಹೊಸ ಸನ್ನಿವೇಶಗಳನ್ನು ಸೃಷ್ಟಿಸಿ ಓದುಗರು ಮರೆಯದಂತೆ ಪರಿಣಾಮವನ್ನುಂಟುಮಾಡುತ್ತವೆ. ಉದಾಹರಣೆಗೆ ಬಾಲಕ ಯೂಸೂಫನ ಜೇಬಿಗೆ ವ್ಯಾಪಾರಿ ಅಜೀಜ್ ಚಿಕ್ಕಪ್ಪ ಬಂದಾಗಲೆಲ್ಲಾ ಕಾಸು ಇಳಿಬಿಟ್ಟು ಅವನು ತನ್ನ ಹಿಂದೆ ಬರುವಂತೆ ಸಲಿಗೆ ಬೆಳೆಸಿಕೊಳ್ಳುವುದು; ಚಿಕ್ಕಪ್ಪ ಅಜೀಜ್‌ನ ಮನೆತೋಟದ ಮರಗಳಿಗೆ ಸಿಸಿ ಕ್ಯಾಮರಗಳೆಂಬಂತೆ ಅಲ್ಲಿಗಲ್ಲಿಗೆ ಕನ್ನಡಿಗಳನ್ನು ನೇತುಹಾಕಿ ಅಲ್ಲಿ ಕೆಲಸ ಮಾಡುವವರ ಚಲನವಲನಗಳನ್ನು (ಸಿ.ಸಿ.ಕ್ಯಾಮರ ತೋರಿದಂತೆ) ವೀಕ್ಷಿಸುವ ಮನೆಯ ಯಜಮಾನಿಯ ಚಾತುರ್ಯ; ಚಿಕ್ಕಪ್ಪ ಅಜೀಜ್ ದೂರ ಪ್ರಾಂತ್ಯಗಳಿಗೆ ವ್ಯಾಪಾರಕ್ಕೆ ಹೋಗುವಾಗ ಸರಕು ಸರಂಜಾಮುಗಳ ಜೊತೆಗೆ ಮನರಂಜನೆಗೆ ಜನರನ್ನು ಸಜ್ಜುಗೊಳಿಸುವುದು; ಆಫ್ರಿಕಾದ ಪರ್ವತ ಬೆಟ್ಟಗುಡ್ಡಗಳ ಕಣಿವೆಕಂದರಗಳ ರುದ್ರಭಯಂಕರ ದೃಶ್ಯಗಳು; ಅಲ್ಲಿಗಲ್ಲಿಗೆ ಕೇಳಿಬರುವ ಬುಡಕಟ್ಟು ಜನರ ಭಯಾದ್ಭುತ ದೆವ್ವ ಪಿಶಾಚಿಗಳ ಕಥನಗಳು; ಚಟು ಸುಲ್ತಾನನ ವ್ಯಾಪಾರ ವಂಚನೆಯ ದೃಶ್ಯಗಳು; ಬಿಳಿ ದೊರೆಗಳ ಕೋತಿ ಕಜ್ಜಾಯ ಹಂಚಿಕೆಯ ನ್ಯಾಯ ಪಕ್ಷಪಾತಗಳು; ಮುಂತಾಗಿ ಎಲ್ಲವೂ ಯೂಸೂಫನ ಕಣ್ಣ ನೋಟದಲ್ಲಿ ಅರಳುತ್ತವೆ.

ಬಯಕೆಯ ತೋಪು ಎಂಬ ಅಧ್ಯಾಯದಲ್ಲಿ ಬರುವ ಈ ವರ್ಣನೆಯನ್ನು ಗಮನಿಸಿ: “ಪರ್ವತದ ಮೇಲಿನ ಬೆಳಕು ಹಸಿರಾಗಿದೆ” ಅವನು ಹೇಳಿದ. “ಅಂತಹ ನೋಟವನ್ನು ನಾನೆಂದೂ ಕಲ್ಪಿಸಿಕೊಂಡಿರಲಿಲ್ಲ” ಮತ್ತು ಗಾಳಿ, ಅದು ಶುಭ್ರವಾಗಿ ತೊಳೆದಂತಿತ್ತು. ಬೆಳಗಿನ ವೇಳೆ, ಸೂರ್ಯ ಹಿಮದ ತುತ್ತತುದಿಯನ್ನು ಬಡಿಯುತ್ತಿದ್ದಾಗ ಅದು ನಿರಂತರತೆಯನ್ನು ಅನುಭವಿಸುತ್ತಿತ್ತು. ಬದಲಾವಣೆಯನ್ನ ಕಾಣದ ಕಾಲದಂತೆ ಮತ್ತು ಮಧ್ಯಾಹ್ನದ ಕೊನೇಭಾಗದಲ್ಲಿ ನೀರಿನ ಪಕ್ಕದ ಧ್ವನಿಯ ಶಬ್ದ ಆಳವಾಗಿ ಆಕಾಶಕ್ಕೇರುತ್ತಿತ್ತು. ಒಂದು ಸಾಯಂಕಾಲ ಪರ್ವತದ ಮೇಲಕ್ಕೆ ಪ್ರಯಾಣ ಮಾಡುತ್ತಿದ್ದಾಗ ನಾವು ನೀರು ಧುಮ್ಮುಕ್ಕುತ್ತಿದ್ದ ಒಂದು ಜಾಗದಲ್ಲಿ ನಿಂತೆವು. ಅದು ಎಲ್ಲವೂ ಅಂತ್ಯವಾದಷ್ಟೇ ಸುಂದರವಾಗಿತ್ತು. ಅಂತಹ ಸೌಂದರ್ಯವನ್ನು ನಾನೆಂದೂ ನೋಡಿರಲಿಲ್ಲ. ದೇವರು ಉಸಿರಾಡುವುದನ್ನ ನೀನು ಅಲ್ಲಿ ಕೇಳಬಹುದಾಗಿತ್ತು. [ಪುಟ.189]

ಈ ಭಾಗದ ಅನುಭವಾತ್ಮಕ ವರ್ಣನೆ ಎ.ಎನ್ ಮೂರ್ತಿರಾಯರ ’ಸಂಜೆಗಣ್ಣಿನ ಹಿನ್ನೋಟ’ದಲ್ಲಿ ಬರುವ ಅಮೆರಿಕದ ರಾಕೀಪರ್ವತ ತಪ್ಪಲಿನ ಅವರ ಅನುಭವಾತ್ಮಕ ವರ್ಣನೆಯನ್ನು ಸ್ಮರಣೆಗೆ ತರುವಂತಿದೆ. ದೇವರು ಇಂಥ ರಸಸ್ಥಳಗಳಲ್ಲಿ ಧ್ಯಾನಕ್ಕೆಳಸುತ್ತಾನೆ ಎಂಬುದು ಮೂರ್ತಿರಾಯರ ಮಾತು. ಯೂಸುಫ್ ಊರಿಗೆ ಹಿಂದಿರುಗಿದ ಮೇಲೆ ಹಿರಿಯ ಸೋದರ ಕಲೀಲನಿಗೆ ತಾನು ಕಂಡುಂಡ ಅನೇಕಾನೇಕ ಅನುಭವಗಳನ್ನು ಪುನರನುಭವಿಸಿದನೆಂಬಂತೆ ಹೇಳುತ್ತಿರುತ್ತಾನೆ. ಅವನು ಮಂತ್ರಮುಗ್ಧನಾಗಿ ಹೂಂಗುಟ್ಟುತ್ತಿರುತ್ತಾನೆ.

ಸ್ವರ್ಗ ಕಾದಂಬರಿಯಲ್ಲಿ ಒಂದು ಸ್ವಾರಸ್ಯದ ಪ್ರಹಸನ ಇದೆ. ಸ್ಥಳೀಯ ವ್ಯಾಪಾರಿ ಮತ್ತು ಮ್ಯಕ್ಯಾನಿಕ್ ಕಲಾಸಿಂಗ್ ಎಂಬಿಬ್ಬರ ನಡುವೆ ಅದು ಜರುಗುತ್ತದೆ. ಒಂದು ಹಂತದಲ್ಲಿ ಹಮೀದ್ ಕಲಾಸಿಂಗ್‌ನನ್ನು ಜಿಪುಣನಾಗಬೇಡ ದುಡಿದದ್ದನ್ನೆಲ್ಲಾ ಬಾಂಬೆಗೆ ಕಳಿಸುತ್ತೀಯೇನು? ಎಂದು ಕೇಳುತ್ತಾನೆ. ಅದಕ್ಕೆ ಕಲಾಸಿಂಗ್ ’ನಾವೇನು ಬಾಂಬೆಯಿಂದ ಬಂದಿಲ್ಲ. ಅದು ಕುತ್ತಿಗೆ ಕತ್ತರಿಸುವ ಬನಿಯಾಗಳ ಗೂಡು, ಗುಜರಾತೀ ಕಸ, ಅವರು ಹಣ ಉಳ್ಳವರು ಮತ್ತು ಅವರು ಅಣ್ಣತಮ್ಮಂದಿರ ರಕ್ತ ಹೀರುವವರು’(ಪುಟ-88) ಮುಂತಾಗಿ ಪ್ರತಿಕ್ರಿಯಿಸುತ್ತಾನೆ. ಬನಿಯಾಗಳ ಹಣದ ಮೇಲಿನ ದುರಾಸೆ ಎಷ್ಟೆಂಬುದು ಇಲ್ಲಿ ಸುವ್ಯಕ್ತ.

ಅಬ್ದುಲ್ ರಾಜಾಕ್ ಗುರ್ನಾರವರ ಲೋಕಾನುಭವ ದೊಡ್ಡದು. ನೈಸರ್ಗಿಕ ಹಾಗೂ ಮಾನವ ಸಂಪನ್ಮೂಲಗಳಿಂದ ತುಂಬಿರುವ ಆಫ್ರಿಕಾ ಖಂಡಕ್ಕೆ ಶತಮಾನಗಳ ಪರ್ಯಂತ ವಿದೇಶೀ ಆಕ್ರಮಣಕಾರರು, ವರ್ತಕರು, ಧರ್ಮಪ್ರಚಾರಕರು ಲಗ್ಗೆ ಇಟ್ಟಿದ್ದಾರೆ. ಅದೆಲ್ಲವನ್ನು ಗುರ್ನಾ ಅವರು ಸೂಕ್ಷ್ಮವಾಗಿ ದಾಖಲಿಸುತ್ತಾರೆ. ಕೊಳ್ಳೆಕಾರರಿಗೆ ಆಫ್ರಿಕಾ ಒಂದು ಅಕ್ಷಯ ಭಂಡಾರ. ಬಹುರಾಷ್ಟ್ರದ ಬಹುಸಂಸ್ಕೃತಿಯ ಬಹು ಧರ್ಮೀಯ ಜನರು ಅಲ್ಲಿಗೆ ಬರುತ್ತಾರೆ. ಉದ್ಯೋಗ ಅರಸುತ್ತಾ ಬಂದವರೂ ಇದ್ದಾರೆ. ಆಫ್ರಿಕನ್ನರನ್ನು ಹಿಡಿದು ಗುಲಾಮರನ್ನಾಗಿ ಮಾರಾಟ ಮಾಡಿದ್ದಾರೆ. ಆದರೆ ಈಗ ಅಷ್ಟು ಸಂಪದ್ಯುಕ್ತ ದೇಶ ಬರಡುಬರಡಾಗಿ ಭೀಕರ ಬರ ಎದುರಿಸುತ್ತಿದೆ.

ಈ ಬಗೆಯ ಚಮತ್ಕಾರಯುಕ್ತ ಕೃತಿಯನ್ನು ಪ್ರೊ. ಜಿ. ಶರಣಪ್ಪ ಸೊರಗೊಂಡನಹಳ್ಳಿ ಅವರು ಕನ್ನಡಕ್ಕೆ ತರ್ಜುಮೆ ಮಾಡಿದ್ದಾರೆ; ಸೃಷ್ಟಿ ನಾಗೇಶ್ ಇದನ್ನು ಪ್ರಕಟಿಸಿದ್ದಾರೆ. ಅವರಿಗೆ ಧನ್ಯವಾದಗಳು ಸಲ್ಲಬೇಕು.

ಪ್ರೊ. ಶಿವರಾಮಯ್ಯ

ಪ್ರೊ. ಶಿವರಾಮಯ್ಯ
ಕನ್ನಡ ಪ್ರಾಧ್ಯಾಪಕರಾಗಿ ನಿವೃತ್ತರಾಗಿರುವ ಶಿವರಾಮಯ್ಯನವರು ತಮ್ಮ ಅಧ್ಯಾಪನ ಮತ್ತು ಸಂಶೋಧನಾ ಕಾರ್ಯಗಳ ಜೊತೆಗೆ ಜನಪರ ಹೋರಾಟಗಳಲ್ಲಿ ಗುರುತಿಸಿಕೊಂಡವರು. ಸ್ವಪ್ನ ಸಂಚಯ (ಕವನ ಸಂಕಲನ), ಉರಿಯ ಉಯ್ಯಾಲೆ (ವಿಮರ್ಶಾ ಬರಹಗಳ ಸಂಕಲನ), ದನಿ ಇಲ್ಲದವರ ದನಿ, ಪಂಪಭಾರತ ಭಾಗ-1 &2 (ಸಂಪಾದನೆ ಮತ್ತು ಗದ್ಯಾನುವಾದ) ಅವರ ಪುಸ್ತಕಗಳಲ್ಲಿ ಕೆಲವು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶಾಲೆ, ಪೂಜಾ ಸ್ಥಳ, ಬಸ್ ನಿಲ್ದಾಣಗಳ ಬಳಿ ಇರುವ 717 ಮದ್ಯದಂಗಡಿಗಳನ್ನು ಮುಚ್ಚಲು ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಆದೇಶ 

ಅಧಿಕಾರ ವಹಿಸಿಕೊಂಡ ನಂತರ ತಮ್ಮ ಮೊದಲ ಪ್ರಮುಖ ಆಡಳಿತಾತ್ಮಕ ನಿರ್ದೇಶನದಲ್ಲಿ, ಸಿ. ಜೋಸೆಫ್ ವಿಜಯ್ ಸೋಮವಾರ, ತಮಿಳುನಾಡು ಸರ್ಕಾರವು ಪೂಜಾ ಸ್ಥಳಗಳು, ಶಿಕ್ಷಣ ಸಂಸ್ಥೆಗಳು ಮತ್ತು ಬಸ್ ನಿಲ್ದಾಣಗಳಿಂದ 500 ಮೀಟರ್ ಒಳಗೆ...

FACT CHECK: ಭಾರತೀಯರು ಚಿನ್ನ ಖರೀದಿಸಬೇಡಿ ಎಂದು 1967ರಲ್ಲೇ ಇಂದಿರಾ ಗಾಂಧಿ ಹೇಳಿದ್ರಾ?

ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ತೆಲಂಗಾಣದ ಸಿಕಂದರಾಬಾದ್ ರ‍್ಯಾಲಿಯಲ್ಲಿ ಮಾತನಾಡುತ್ತಾ, ಆರ್ಥಿಕ ಬಿಕ್ಕಟ್ಟು ತಪ್ಪಿಸಲು "ಒಂದು ವರ್ಷ ಚಿನ್ನ ಖರೀದಿಸಬೇಡಿ" ಎಂದು ಜನರಲ್ಲಿ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ, 1967ರಲ್ಲಿ ಅಂದಿನ ಪ್ರಧಾನಿ...

ಪಶ್ಚಿಮ ಬಂಗಾಳ| ಧ್ವನಿವರ್ಧಕಗಳ ನಿಯಂತ್ರಣಕ್ಕೆ ಆದೇಶಿಸಿದ ನೂತನ ಸಿಎಂ ಅಧಿಕಾರಿ; ಧಾರ್ಮಿಕ ಸಭೆ ನೆಪದಲ್ಲಿ ರಸ್ತೆ ತಡೆಗೆ ನಿಷೇಧ

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವು ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಬಳಕೆಯನ್ನು ನಿಯಂತ್ರಿಸಲು ಮತ್ತು ಪ್ರಾರ್ಥನೆ ಅಥವಾ ಧಾರ್ಮಿಕ ಸಭೆ ನೆಪದಲ್ಲಿ ಸಾರ್ವಜನಿಕ ರಸ್ತೆಗಳನ್ನು ನಿರ್ಬಂಧಿಸದಂತೆ ನೋಡಿಕೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಹೊಸ ಸೂಚನೆಗಳನ್ನು...

ರಾಜಸ್ಥಾನದಲ್ಲಿ ನೀಟ್‌-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ; ಸಿಬಿಐ ತನಿಖೆಗೆ ಆದೇಶಿಸಿದ ಸರ್ಕಾರ

ಮೇ 3 ರಂದು ನಡೆಸಲಾದ ನೀಟ್ (ಯುಜಿ) 2026 ಅನ್ನು ರದ್ದುಗೊಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ (ಮೇ 12) ಘೋಷಿಸಿದೆ. ಪ್ರತ್ಯೇಕವಾಗಿ ತಿಳಿಸಲಾಗುವ ದಿನಾಂಕಗಳಲ್ಲಿ ಮರು ಪರೀಕ್ಷೆಯನ್ನು ನಡೆಸಲಾಗುವುದು, ಪರೀಕ್ಷೆಗೆ...

ಇತ್ಯರ್ಥವಾಗದ ಚುನಾವಣಾ ತಕರಾರು : ಮತ ಹಾಕಿದ ಜನರಿಗೆ ದಿನಕ್ಕೊಬ್ಬ ಶಾಸಕ

ರಾಜ್ಯದಲ್ಲಿ ಪ್ರಸ್ತುತ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೂರು ವರ್ಷಗಳನ್ನು ಪೂರೈಸಿದೆ. ಚುನಾವಣೆ ನಡೆಯಲು ಇನ್ನು ಎರಡು ವರ್ಷಗಳು ಬಾಕಿಯಿದೆ. ಅಂದರೆ, ಸರ್ಕಾರದ ಐದು ವರ್ಷಗಳ ಅವಧಿಯಲ್ಲಿ ಮುಕ್ಕಾಲು...

“ಸನಾತನವನ್ನು ನಿರ್ಮೂಲನೆ ಮಾಡಬೇಕು…”; ವಿಧಾನಸಭೆಯಲ್ಲೇ ತನ್ನ ಹಿಂದಿನ ಹೇಳಿಕೆ ಪುನರುಚ್ಚರಿಸಿದ ಉದಯನಿಧಿ ಸ್ಟಾಲಿನ್

ತಮಿಳುನಾಡು ವಿರೋಧ ಪಕ್ಷದ ನಾಯಕ ಮತ್ತು ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಮಂಗಳವಾರ ತಮಿಳುನಾಡು ವಿಧಾನಸಭೆಯಲ್ಲಿ ನಡೆದ ಅಧಿವೇಶನದಲ್ಲಿ, ಸನಾತನ ಧರ್ಮದ ನಿರ್ಮೂಲನೆಗೆ ಮತ್ತೊಮ್ಮೆ ಕರೆ ನೀಡಿದ್ದಾರೆ. ಸದನದಲ್ಲಿ ಮಾತನಾಡಿದ ಅವರು, "ಜನರನ್ನು ವಿಭಜಿಸುವ...

‘ಅಮೃತಕಾಲ’ದ ಸ್ವಪ್ನದಿಂದ ‘ಬಿಕ್ಕಟ್ಟಿನ ಕಾಲ’ಕ್ಕೆ: ಕಳಚಿಕೊಳ್ಳುತ್ತಿರುವ ಮೋದಿಯವರ ‘ಆತ್ಮನಿರ್ಭರ’ ಮುಖವಾಡ 

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗೂ ಮುನ್ನ ದೇಶವು ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆಯಿಂದ ಬಳಲುತ್ತಿದ್ದಾಗ, ಬಿಜೆಪಿ ನಾಯಕರು ಮತ್ತು ಕೇಂದ್ರ ಸರ್ಕಾರದ ಮಂತ್ರಿಗಳು ಮೋದಿಯವರ ‘ದಯೆ’ಯಿಂದ ಭಾರತಕ್ಕೆ ಯಾವುದೇ...

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...