Homeಪುಸ್ತಕ ವಿಮರ್ಶೆಅಬ್ದುಲ್ ರಜಾಕ್ ಗುರ್ನಾರವರ ’ಪ್ಯಾರಡೈಸ್' ಕಾದಂಬರಿ

ಅಬ್ದುಲ್ ರಜಾಕ್ ಗುರ್ನಾರವರ ’ಪ್ಯಾರಡೈಸ್’ ಕಾದಂಬರಿ

- Advertisement -
- Advertisement -

ಆಫ್ರಿಕಾದ ತಾಂಜಾನಿಯಾ ಮೂಲದ, ಈಗ ಬ್ರಿಟಿಷ್ ನಾಗರಿಕರಾಗಿರುವ ಅಬ್ದುಲ್ ರಜಾಕ್ ಗುರ್ನಾರವರು ’ಜಗತ್ತಿನಲ್ಲಿ ನೆಲೆಯಿಲ್ಲದವನಂತಾಗುವ ವಿಚಾರ ಮತ್ತು ಅನುಭವವೇ ನನ್ನನ್ನು ಬರೆಯಲು ಪ್ರೇರೇಪಿಸಿತು’ ಎಂದಿದ್ದಾರೆ.

ಪೂರ್ವ ಆಫ್ರಿಕಾದಿಂದ ಯೂರೋಪಿಗಾಗಲೀ ಅಥವಾ ಆಫ್ರಿಕಾದೊಳಗೇ ಆಗಲಿ ಆಗುವ ವಲಸೆ ಮತ್ತು ಸ್ಥಳಾಂತರ ಹಾಗೂ ಅಪರಿಚಿತ-ಅಜ್ಞಾತ ಸ್ಥಳಗಳಲ್ಲಿ ಸ್ವಂತ ಚಹರೆ ಅಥವಾ ಗುರುತಿನ ಅನ್ವೇಷಣೆ ಗುರ್ನಾರವರ ಕಾದಂಬರಿಗಳಲ್ಲಿ ಕೇಂದ್ರ ವಸ್ತುವಾಗಿವೆ. ಹತ್ತು ಕಾದಂಬರಿಗಳನ್ನು ಹಾಗೂ ಹಲವಾರು ಕತೆ, ಪ್ರಬಂಧಗಳನ್ನು ರಚಿಸಿರುವ ಗುರ್ನಾರವರ ’ಪ್ಯಾರಡೈಸ್’ಅನ್ನು (1994) ಈಗ ಕನ್ನಡಕ್ಕೆ ಜಿ. ಶರಣಪ್ಪರವರು ’ಸ್ವರ್ಗ’ ಎಂದು 2022ರಲ್ಲಿ ಅನುವಾದಿಸಿದ್ದಾರೆ.

ನಮ್ಮಲ್ಲಿ ’ಜನನೀ ಜನ್ಮಭೂಮಿ ಸ್ವರ್ಗಾದಪಿ ಗರೀಯಸಿ’ ಎಂದರೆ ಜನನಿ ಮತ್ತು ಜನ್ಮಭೂಮಿ ಸ್ವರ್ಗಕ್ಕಿಂತ ಮಿಗಿಲು- ಎಂಬ ಮಾತಿದೆ. ಆದರೆ ಈ ಮಾತು ಎಷ್ಟರಮಟ್ಟಿಗೆ ನಿಜ? ಇಂಡಿಯಾದಂಥ ಜಾತಿ ಸಮಾಜದಲ್ಲಿ ಅವಮಾನಿತನಾದ ವ್ಯಕ್ತಿಗೆ ಅಮೆರಿಕ, ಬ್ರಿಟನ್ನಿನಂಥ ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿ ಉದ್ಯೋಗ ಅಥವಾ ಗ್ರೀನ್‌ಕಾರ್ಡ್ ಸಿಕ್ಕರೆ ಅವನಿಗೆ ಅದೇ ಸ್ವರ್ಗ. ಆದ್ದರಿಂದ ಮೇಲಿನ ನುಡಿಗಟ್ಟು ಕಾಲ ಮತ್ತು ದೇಶಕ್ಕೆ ಸಂಬಂಧಿಸಿ ನಿಜವಾಗುತ್ತದೆ. ಇದಕ್ಕೆ ಸಮಾನಾಂತರವಾಗಿ ಇನ್ನೊಂದು ಸಂಗತಿಯನ್ನಿಲ್ಲಿ ಪ್ರಸ್ತಾಪಿಸಬಹುದು. ಇದೇ ಏಪ್ರಿಲ್ 12, 2023ರಂದು ವರದಿಯಾಗಿರುವಂತೆ ’ವಿನಾಶಕಾರಿ ಬರಗಾಲ ಮತ್ತು ಹೆಚ್ಚುತ್ತಿರುವ ಭಯೋತ್ಪಾದಕ ದಾಳಿ ಪ್ರಕರಣಗಳಿಂದ ಕಂಗೆಟ್ಟಿರುವ ಆಫ್ರಿಕಾದ ಸೊಮಾಲಿಯಕ್ಕೆ ಅಂತಾರಾಷ್ಟ್ರೀಯ ಸಮುದಾಯದ ವ್ಯಾಪಕ ಬೆಂಬಲದ ಅಗತ್ಯವಿದೆ’ ಎಂದು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟೋನಿಯೋ ಗುಟೆರಸ್ ಆಗ್ರಹಿಸಿದ್ದಾರೆ. ಬರಗಾಲ ಪೀಡಿತ ದೇಶ ಸೊಮಾಲಿಯಾ ಮಾತ್ರ ಅಲ್ಲ; ಕೀನ್ಯಾ ಮತ್ತು ಇಥಿಯೋಪಿಯಾ ಕೂಡ ಸತತ 5 ವರ್ಷದ ವಿಫಲ ಮಳೆಗಾಲದಿಂದ ಅತ್ಯಂತ ತೀವ್ರ ಬರಗಾಲಕ್ಕೆ ತುತ್ತಾಗಿವೆ. ಜತೆಗೆ ಅಂತರ್ ಯುದ್ಧದಿಂದ ಜರ್ಝರಿತವಾಗಿವೆ. ಪರಿಣಾಮ, ಆ ದೇಶಗಳ ಮಕ್ಕಳು ಮತ್ತು ತಾಯಂದಿರು ನಿರ್ಗತಿಕರಾಗಿ ನಿರಾಶ್ರಿತರ ಶಿಬಿರಗಳಲ್ಲಿ ಅನ್ನಾಹಾರಕ್ಕೆ ಗತಿ ಇಲ್ಲದೆ ರೋಗರುಜಿನಗಳಿಂದ ಜೀವನ್ಮರಣ ಹೋರಾಟದಲ್ಲಿದ್ದಾರೆ. ಆ ದೃಶ್ಯಗಳನ್ನು ಲಭ್ಯವಿರುವ ಹಲವು ವೀಡಿಯೋ ವರದಿಗಳಲ್ಲಿ ನೋಡಬಹುದು. ತಾತ್ಪರ್ಯ ಕೇವಲ ಜನ್ಮಭೂಮಿಯಲ್ಲಿದ್ದರೆ ಮಾತ್ರ ’ಸ್ವರ್ಗ’ ಅಲ್ಲ ಎಂದಾಯಿತು. ಆ ಮಾತಿರಲಿ.

ಅಬ್ದುಲ್ ರಜಾಕ್ ಗುರ್ನಾ

ಪ್ರಸ್ತುತ ’ಪ್ಯಾರಡೈಸ್’ ಕಾದಂಬರಿಯತ್ತ ಬಂದರೆ, ಈ ಸ್ವರ್ಗದ ಕಥೆಯೇ ಬೇರೆ. ಸಾಹಿತ್ಯ ಕ್ಷೇತ್ರದ ನೋಬಲ್ ಪ್ರಶಸ್ತಿ ಪಡೆದ ಅಬ್ದುಲ್ ರಜಾಕ್ ಗುರ್ನಾರವರ ’ಪ್ಯಾರಡೈಸ್’ ಕಾದಂಬರಿಯು ಕುರಾನ್ ಧರ್ಮಗ್ರಂಥದ ಹಂದರದ ಮೇಲೆ ರಚನೆಗೊಂಡಿದೆ. ಕುರಾನ್‌ನಲ್ಲಿನ ಪ್ರವಾದಿ ಯೂಸೂಫನ ಕತೆಯಂತೆಯೇ ಪ್ಯಾರಡೈಸ್ ಕಾದಂಬರಿಯ ಈ ಕಥಾನಾಯಕ ಯೂಸೂಫನದಾಗಿದೆ. ಕುರಾನ್ ಕತೆಯಲ್ಲಿ ಯೂಸೂಫ್ ಚಿಕ್ಕ ಬಾಲಕನಾಗಿದ್ದಾಗ ಅವನನ್ನು ಈಜಿಪ್ಟ್‌ಗೆ ತಂದು ಫೆರೋನ ಅಧಿಕಾರಿಯೊಬ್ಬನಿಗೆ ಗುಲಾಮನಂತೆ ಮಾರಾಟ ಮಾಡುತ್ತಾರೆ. ಅಲ್ಲಿ ಆ ಅಧಿಕಾರಿಯ ಬಳಿ ಕೆಲಸ ಮಾಡುತ್ತಾ ಸ್ಫುರದ್ರೂಪಿ ಯುವಕನಾಗುವ ಯೂಸೂಫನ ಮೇಲೆ ಆ ಅಧಿಕಾರಿಯ ಹೆಂಡತಿ ಕಣ್ಣುಹಾಕುತ್ತಾಳೆ. ಆದರೆ ಯೂಸುಫ್ ತಿರಸ್ಕರಿಸುತ್ತಾನೆ. ಆದರೆ ಆಕೆ ಅವನೇ ತನ್ನ ಮೇಲೆ ಕಣ್ಣು ಹಾಕಿದ್ದಾನೆಂಬ ಅಪರಾಧ ಹೊರಿಸಿ ಸೆರೆಮನೆಗೆ ಹಾಕಿಸುತ್ತಾಳೆ. ಇತ್ತ ’ಪ್ಯಾರಡೈಸ್’ನಲ್ಲಿ ಯೂಸೂಫನನ್ನು ಅವನ ತಂದೆ ತಾನು ಮಾಡಿದ ಸಾಲಕ್ಕೆ ವ್ಯಾಪಾರಿ ಅಜೀಜ್ ಎಂಬುವನಿಗೆ ಮಾರಾಟ ಮಾಡುತ್ತಾನೆ. ತನ್ನನ್ನು ಮಾರಾಟ ಮಾಡಿದ್ದಾರೆ ಹಾಗೂ ತಾನೆಂದೂ ತನ್ನ ತಂದೆತಾಯಿಯರನ್ನು ಪುನಃ ಭೇಟಿಮಾಡಲು ಸಾಧ್ಯವಾಗುವುದಿಲ್ಲವೆಂಬ ಅರಿವೇ ಅವನಿಗರಿವಿರುವುದಿಲ್ಲ. ಕುರಾನ್‌ನಲ್ಲಿನ ಕತೆಯಂತೆಯೇ ಅಜೀಜ್‌ನ ಪತ್ನಿ ಇವನ ಮೇಲೆ ಕಣ್ಣು ಹಾಕುತ್ತಾಳೆ. ಇವನೂ ಆಕೆಯನ್ನು ತಿರಸ್ಕರಿಸುತ್ತಾನೆ. ಆಕೆ ಅವನ ಮೇಲೆ ಅಪವಾದ ಹೊರಿಸುತ್ತಾಳೆ. ’ಪ್ಯಾರಡೈಸ್’ನ ಕತೆ ಸ್ಥಿತವಾಗಿರುವುದು ಇಪ್ಪತ್ತನೇ ಶತಮಾನದ ಎರಡನೇ ದಶಕದಲ್ಲಿ- ಆಗ ಜರ್ಮನಿ ಕಾಲೋನಿಯಾಗಿದ್ದ ತಾಂಜಾನಿಯಾದಲ್ಲಿ. [ಜೆ ಬಾಲಕೃಷ್ಣ, ಮುನ್ನುಡಿ]

ಅಬ್ದುಲ್ ರಜಾಕ್ ಗುರ್ನಾರವರು 1948ರಲ್ಲಿ ಪೂರ್ವ ಆಫ್ರಿಕಾದ ಕಡಲಿನ ಜಾಂಜಿಬಾರ್ ದ್ವೀಪದಲ್ಲಿ ಜನಿಸಿದರು. 1963ರಲ್ಲಿ ಜಾಂಜಿಬಾರ್ ಬ್ರಿಟಿಷ್ ವಸಾಹತು ಆಡಳಿತದಿಂದ ಸ್ವತಂತ್ರ ಪಡೆದ ನಂತರ ಆಂತರಿಕ ದಂಗೆಗಳಾಗಿ, ಅರಬ್ ಮೂಲದ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ಹೆಚ್ಚಾಯಿತು. 1968ರಲ್ಲಿ 18ನೇ ವಯಸ್ಸಿನ ಗುರ್ನಾ ಇಂಗ್ಲೆಂಡಿಗೆ ವಲಸೆ ಹೋಗಿ, ಅಲ್ಲಿಯೇ ತಮ್ಮ ವಿದ್ಯಾಭ್ಯಾಸವನ್ನು ಮುಂದುವರಿಸಿದರು. ಅಲ್ಲಿನ ಅವರ ನೋಟ, ಕಂಡ ಜೀವನದ ಪರಿ, ಅನುಭವಿಸಿದ ಹಿಂಸೆಯ ಹಿನ್ನೆಲೆಯ ಬಗ್ಗೆ ಮಿಡಿಯುತ್ತಾ ಬರೆಯತೊಡಗಿದರು. ಅವರ ಮಾತೃಭಾಷೆ ’ಸ್ವಾಹಿಲಿ’ ಆದರೂ ಅವರು ಇಂಗ್ಲಿಷ್ ಭಾಷೆಯಲ್ಲೇ ಬರೆಯತೊಡಗಿದರು. ನೆಲೆ ಇಲ್ಲದೆ ಪರಿತಪಿಸುವ ಅನುಭವವೇ ಅವರನ್ನು ಬರೆಯಲು ಪ್ರೋತ್ಸಾಹಿಸಿದ್ದು. ಅವರ ಬರಹಗಳಲ್ಲಿ ಕಂಡುಬರುವ ಪ್ರಮುಖ ಅಂಶವಂದರೆ ಅಪರಿಚಿತ ಸ್ಥಳಗಳಲ್ಲಿ, ಮಾನವನ ಸ್ಥಳಾಂತರದ ಬಾಧೆ, ಹಾಗೂ ಸ್ವಂತ ಚಹರೆಯ ಅನ್ವೇಷಣೆ. ಅವರ ಕೆಲವು ಕಾದಂಬರಿಗಳು ಪ್ರಸ್ತುತ ಬ್ರಿಟನ್‌ನಲ್ಲಿ ವಲಸೆ ಬಂದವರ ಅನುಭಗಳನ್ನು ವಿವಿಧ ಮಜಲುಗಳಲ್ಲಿ ಚಿತ್ರೀಕರಿಸಿವೆ. ಅವರ ನಾಲ್ಕನೇ ಕಾದಂಬರಿ ’ಸ್ವರ್ಗ’ ಮೊದಲನೇ ವಿಶ್ವಯುದ್ಧದ ಸಮಯದ ವಸಾಹತುಪೂರ್ವ ಆಫ್ರಿಕಾದ ಕತೆಯನ್ನು ಒಳಗೊಂಡಿದೆ. ಮೊದಲು ಅವರ ಕಾದಂಬರಿಗಳು ಜನರಿಂದ ಗಹನವಾಗಿ ಸ್ವೀಕೃತಿಗೊಂಡರೂ ಆರ್ಥಿಕವಾಗಿ ಅಂತಹ ಹಿರಿಮೆಯನ್ನೇನೂ ಪಡೆದುಕೊಳ್ಳಲಿಲ್ಲ. ಆದರೆ ಅವರಿಗೆ ನೋಬಲ್ ಪ್ರಶಸ್ತಿ ಬಂದ (2021) ಮೇಲೆ ಪ್ರಕಾಶಕರು ಸಾಲಲ್ಲಿ ನಿಂತು ಅವರ ಕೃತಿಗಳನ್ನು ಪ್ರಕಟಿಸಲು ದುಂಬಾಲು ಬಿದ್ದರು.

ಇದನ್ನೂ ಓದಿ: ಪ್ರೊ. ಕಾರ್ಲೋಸರ ‘ಶಂಬಾಲ’ ಎಂಬ ರಾಜಕೀಯ ಕಾದಂಬರಿ

ಗುರ್ನಾರವರು ತಮ್ಮ ಕಾದಂಬರಿಗಳಲ್ಲಿ ಮುಖ್ಯವಾಗಿ ಚಿತ್ರಿಸುವ ಮತ್ತೊಂದು ಅಂಶವೇಂದರೆ, ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿನ ಯುದ್ಧ ಅಥವಾ ಇನ್ನಿತರ ಸಂಘರ್ಷಗಳು ಮತ್ತು ಅವುಗಳಿಂದ ಹುಟ್ಟುವ ಯಾತನೆ ಹಾಗೂ ವಲಸೆ; ಅವರ ಕಥೆ ಕಾದಂಬರಿಗಳ ಪಾತ್ರಗಳು ಹೊಸ ಪರಿಸರದಲ್ಲಿ ತಮ್ಮ ಹೊಸ ಚಹರೆಗಳಿಗಾಗಿ ನಿರಂತರವಾಗಿ ಅಪೇಕ್ಷಿಸುತ್ತವೆ. ಅವು ನಿರಂತರವಾಗಿ ಹೊಸ ಬದುಕಿನ ಹಾಗೂ ಗತದ ಅಸ್ತಿತ್ವಗಳ ನಡುವಿನ ತಾಕಲಾಟಕ್ಕೆ ಒಳಗಾಗುತ್ತವೆ. ಹೊಸ ಸಂಸ್ಕೃತಿಯಲ್ಲಿ ಗತದ ಬಾಳಿನ ಅಸ್ತಿತ್ವವನ್ನು ಹುಡುಕುವ ಪ್ರಯತ್ನದಲ್ಲಿ ತೊಡಗುತ್ತವೆ. ಆಗ ತುಮುಲ, ಕೀಳರಿಮೆ ಮತ್ತು ಸಂಘರ್ಷಕ್ಕೆ ಸಿಕ್ಕಿ ಬಳಲುತ್ತವೆ. ಈ ಪರಿಸ್ಥಿತಿಯಲ್ಲಿ ಅವರು ಸಾಕಷ್ಟು ಯೋಚಿಸಿ ಎಚ್ಚರಿಕೆಯಿಂದ ಕೃತಿ ರಚನೆಗೆ ತೊಡಗುತ್ತಾರೆ. ವಾಸ್ತವದ ನೆಲೆಗಟ್ಟಿನ ಮೇಲೆ ಕಾಲ್ಪನಿಕ ಪಾತ್ರಗಳನ್ನು ನಿಲ್ಲಿಸುತ್ತಾರೆ. ’ಪ್ಯಾರಡೈಸ್’ ಕಾದಂಬರಿಯಲ್ಲಿ ಪ್ರಮುಖ ಅಂಶವೆಂದರೆ, ಒಬ್ಬ ಆಫ್ರಿಕಾ ಮೂಲದ ಹುಡುಗ ಬಾಲ್ಯದಿಂದ ಯೌವನಾವಸ್ಥೆಗೆ ಬರುವಂತಹುದು. ಇದೊಂದು ಆಫ್ರಿಕಾದ ಮೂಲ ಸಮುದಾಯವೊಂದರ ಕುಸುಮ. ಯೂರೋಪಿನ ವಸಾಹತುಶಾಹಿಯ ಕಾಲ್ತುಳಿತಕ್ಕೆ ಸಿಲುಕಿ ಧೂಳಾಗಿ ಹೋಗುವ ಪ್ರೇಮ ದುರಂತ ಚಿತ್ರ.

ಹನ್ನೆರಡು ವರ್ಷದ ಬಾಲಕ ಯೂಸೂಫ್ ತನ್ನ ತಂದೆ ಮಾಡಿದ್ದ ಸಾಲಕ್ಕೆ ಮಾರಾಟವಾಗುತ್ತಾನೆ; ತನ್ನ ಹಿಂದಿನ ಸರಳ ಹಳ್ಳಿ ಜೀವನವನ್ನ ಬಿಡಬೇಕಾಗುತ್ತದೆ. ಈ ಕಥಾನಾಯಕ ಯೂಸೂಫ್‌ನ ಕಣ್ಣುಗಳ ಮುಖಾಂತರ ಗುರ್ನಾರವರು ಯುದ್ಧದ ಜಂಜಾಟದಲ್ಲಿ ಸಿಲುಕಿರುವ ಆಫ್ರಿಕಾದ ಕೋಮುವಾರು ವ್ಯಾಪಾರದ ಹೋರಾಟಗಾರರ ಬಗ್ಗೆ ಚಿತ್ರಿಸುತ್ತಾರೆ. ಅದೇ ಸಮಯದಲ್ಲಿ ಕಥಾನಾಯಕನ ಬಾಲ್ಯದ ಹೋರಾಟದ ಪರಿಚಯವಾಗುತ್ತದೆ. ಇದರ ಪರಿಣಾಮ ಈ ಕೃತಿ ರೋಮಾಂಚಕ ಮತ್ತು ಶಕ್ತಿಯುತವಾದ ಕೃತಿ ಆಗಿ ಒಡಮೂಡಿದೆ. [ಲೇಖಕರ ಮಾತು]

ಇಲ್ಲಿ ಚಿತ್ರಿತವಾಗಿರುವ ಕೆಲವು ಸನ್ನಿವೇಶಗಳು, ಪಾತ್ರಗಳು ಮನರಂಜನೆಯ ಜೊತೆಗೆ ಹೊಸ ಸನ್ನಿವೇಶಗಳನ್ನು ಸೃಷ್ಟಿಸಿ ಓದುಗರು ಮರೆಯದಂತೆ ಪರಿಣಾಮವನ್ನುಂಟುಮಾಡುತ್ತವೆ. ಉದಾಹರಣೆಗೆ ಬಾಲಕ ಯೂಸೂಫನ ಜೇಬಿಗೆ ವ್ಯಾಪಾರಿ ಅಜೀಜ್ ಚಿಕ್ಕಪ್ಪ ಬಂದಾಗಲೆಲ್ಲಾ ಕಾಸು ಇಳಿಬಿಟ್ಟು ಅವನು ತನ್ನ ಹಿಂದೆ ಬರುವಂತೆ ಸಲಿಗೆ ಬೆಳೆಸಿಕೊಳ್ಳುವುದು; ಚಿಕ್ಕಪ್ಪ ಅಜೀಜ್‌ನ ಮನೆತೋಟದ ಮರಗಳಿಗೆ ಸಿಸಿ ಕ್ಯಾಮರಗಳೆಂಬಂತೆ ಅಲ್ಲಿಗಲ್ಲಿಗೆ ಕನ್ನಡಿಗಳನ್ನು ನೇತುಹಾಕಿ ಅಲ್ಲಿ ಕೆಲಸ ಮಾಡುವವರ ಚಲನವಲನಗಳನ್ನು (ಸಿ.ಸಿ.ಕ್ಯಾಮರ ತೋರಿದಂತೆ) ವೀಕ್ಷಿಸುವ ಮನೆಯ ಯಜಮಾನಿಯ ಚಾತುರ್ಯ; ಚಿಕ್ಕಪ್ಪ ಅಜೀಜ್ ದೂರ ಪ್ರಾಂತ್ಯಗಳಿಗೆ ವ್ಯಾಪಾರಕ್ಕೆ ಹೋಗುವಾಗ ಸರಕು ಸರಂಜಾಮುಗಳ ಜೊತೆಗೆ ಮನರಂಜನೆಗೆ ಜನರನ್ನು ಸಜ್ಜುಗೊಳಿಸುವುದು; ಆಫ್ರಿಕಾದ ಪರ್ವತ ಬೆಟ್ಟಗುಡ್ಡಗಳ ಕಣಿವೆಕಂದರಗಳ ರುದ್ರಭಯಂಕರ ದೃಶ್ಯಗಳು; ಅಲ್ಲಿಗಲ್ಲಿಗೆ ಕೇಳಿಬರುವ ಬುಡಕಟ್ಟು ಜನರ ಭಯಾದ್ಭುತ ದೆವ್ವ ಪಿಶಾಚಿಗಳ ಕಥನಗಳು; ಚಟು ಸುಲ್ತಾನನ ವ್ಯಾಪಾರ ವಂಚನೆಯ ದೃಶ್ಯಗಳು; ಬಿಳಿ ದೊರೆಗಳ ಕೋತಿ ಕಜ್ಜಾಯ ಹಂಚಿಕೆಯ ನ್ಯಾಯ ಪಕ್ಷಪಾತಗಳು; ಮುಂತಾಗಿ ಎಲ್ಲವೂ ಯೂಸೂಫನ ಕಣ್ಣ ನೋಟದಲ್ಲಿ ಅರಳುತ್ತವೆ.

ಬಯಕೆಯ ತೋಪು ಎಂಬ ಅಧ್ಯಾಯದಲ್ಲಿ ಬರುವ ಈ ವರ್ಣನೆಯನ್ನು ಗಮನಿಸಿ: “ಪರ್ವತದ ಮೇಲಿನ ಬೆಳಕು ಹಸಿರಾಗಿದೆ” ಅವನು ಹೇಳಿದ. “ಅಂತಹ ನೋಟವನ್ನು ನಾನೆಂದೂ ಕಲ್ಪಿಸಿಕೊಂಡಿರಲಿಲ್ಲ” ಮತ್ತು ಗಾಳಿ, ಅದು ಶುಭ್ರವಾಗಿ ತೊಳೆದಂತಿತ್ತು. ಬೆಳಗಿನ ವೇಳೆ, ಸೂರ್ಯ ಹಿಮದ ತುತ್ತತುದಿಯನ್ನು ಬಡಿಯುತ್ತಿದ್ದಾಗ ಅದು ನಿರಂತರತೆಯನ್ನು ಅನುಭವಿಸುತ್ತಿತ್ತು. ಬದಲಾವಣೆಯನ್ನ ಕಾಣದ ಕಾಲದಂತೆ ಮತ್ತು ಮಧ್ಯಾಹ್ನದ ಕೊನೇಭಾಗದಲ್ಲಿ ನೀರಿನ ಪಕ್ಕದ ಧ್ವನಿಯ ಶಬ್ದ ಆಳವಾಗಿ ಆಕಾಶಕ್ಕೇರುತ್ತಿತ್ತು. ಒಂದು ಸಾಯಂಕಾಲ ಪರ್ವತದ ಮೇಲಕ್ಕೆ ಪ್ರಯಾಣ ಮಾಡುತ್ತಿದ್ದಾಗ ನಾವು ನೀರು ಧುಮ್ಮುಕ್ಕುತ್ತಿದ್ದ ಒಂದು ಜಾಗದಲ್ಲಿ ನಿಂತೆವು. ಅದು ಎಲ್ಲವೂ ಅಂತ್ಯವಾದಷ್ಟೇ ಸುಂದರವಾಗಿತ್ತು. ಅಂತಹ ಸೌಂದರ್ಯವನ್ನು ನಾನೆಂದೂ ನೋಡಿರಲಿಲ್ಲ. ದೇವರು ಉಸಿರಾಡುವುದನ್ನ ನೀನು ಅಲ್ಲಿ ಕೇಳಬಹುದಾಗಿತ್ತು. [ಪುಟ.189]

ಈ ಭಾಗದ ಅನುಭವಾತ್ಮಕ ವರ್ಣನೆ ಎ.ಎನ್ ಮೂರ್ತಿರಾಯರ ’ಸಂಜೆಗಣ್ಣಿನ ಹಿನ್ನೋಟ’ದಲ್ಲಿ ಬರುವ ಅಮೆರಿಕದ ರಾಕೀಪರ್ವತ ತಪ್ಪಲಿನ ಅವರ ಅನುಭವಾತ್ಮಕ ವರ್ಣನೆಯನ್ನು ಸ್ಮರಣೆಗೆ ತರುವಂತಿದೆ. ದೇವರು ಇಂಥ ರಸಸ್ಥಳಗಳಲ್ಲಿ ಧ್ಯಾನಕ್ಕೆಳಸುತ್ತಾನೆ ಎಂಬುದು ಮೂರ್ತಿರಾಯರ ಮಾತು. ಯೂಸುಫ್ ಊರಿಗೆ ಹಿಂದಿರುಗಿದ ಮೇಲೆ ಹಿರಿಯ ಸೋದರ ಕಲೀಲನಿಗೆ ತಾನು ಕಂಡುಂಡ ಅನೇಕಾನೇಕ ಅನುಭವಗಳನ್ನು ಪುನರನುಭವಿಸಿದನೆಂಬಂತೆ ಹೇಳುತ್ತಿರುತ್ತಾನೆ. ಅವನು ಮಂತ್ರಮುಗ್ಧನಾಗಿ ಹೂಂಗುಟ್ಟುತ್ತಿರುತ್ತಾನೆ.

ಸ್ವರ್ಗ ಕಾದಂಬರಿಯಲ್ಲಿ ಒಂದು ಸ್ವಾರಸ್ಯದ ಪ್ರಹಸನ ಇದೆ. ಸ್ಥಳೀಯ ವ್ಯಾಪಾರಿ ಮತ್ತು ಮ್ಯಕ್ಯಾನಿಕ್ ಕಲಾಸಿಂಗ್ ಎಂಬಿಬ್ಬರ ನಡುವೆ ಅದು ಜರುಗುತ್ತದೆ. ಒಂದು ಹಂತದಲ್ಲಿ ಹಮೀದ್ ಕಲಾಸಿಂಗ್‌ನನ್ನು ಜಿಪುಣನಾಗಬೇಡ ದುಡಿದದ್ದನ್ನೆಲ್ಲಾ ಬಾಂಬೆಗೆ ಕಳಿಸುತ್ತೀಯೇನು? ಎಂದು ಕೇಳುತ್ತಾನೆ. ಅದಕ್ಕೆ ಕಲಾಸಿಂಗ್ ’ನಾವೇನು ಬಾಂಬೆಯಿಂದ ಬಂದಿಲ್ಲ. ಅದು ಕುತ್ತಿಗೆ ಕತ್ತರಿಸುವ ಬನಿಯಾಗಳ ಗೂಡು, ಗುಜರಾತೀ ಕಸ, ಅವರು ಹಣ ಉಳ್ಳವರು ಮತ್ತು ಅವರು ಅಣ್ಣತಮ್ಮಂದಿರ ರಕ್ತ ಹೀರುವವರು’(ಪುಟ-88) ಮುಂತಾಗಿ ಪ್ರತಿಕ್ರಿಯಿಸುತ್ತಾನೆ. ಬನಿಯಾಗಳ ಹಣದ ಮೇಲಿನ ದುರಾಸೆ ಎಷ್ಟೆಂಬುದು ಇಲ್ಲಿ ಸುವ್ಯಕ್ತ.

ಅಬ್ದುಲ್ ರಾಜಾಕ್ ಗುರ್ನಾರವರ ಲೋಕಾನುಭವ ದೊಡ್ಡದು. ನೈಸರ್ಗಿಕ ಹಾಗೂ ಮಾನವ ಸಂಪನ್ಮೂಲಗಳಿಂದ ತುಂಬಿರುವ ಆಫ್ರಿಕಾ ಖಂಡಕ್ಕೆ ಶತಮಾನಗಳ ಪರ್ಯಂತ ವಿದೇಶೀ ಆಕ್ರಮಣಕಾರರು, ವರ್ತಕರು, ಧರ್ಮಪ್ರಚಾರಕರು ಲಗ್ಗೆ ಇಟ್ಟಿದ್ದಾರೆ. ಅದೆಲ್ಲವನ್ನು ಗುರ್ನಾ ಅವರು ಸೂಕ್ಷ್ಮವಾಗಿ ದಾಖಲಿಸುತ್ತಾರೆ. ಕೊಳ್ಳೆಕಾರರಿಗೆ ಆಫ್ರಿಕಾ ಒಂದು ಅಕ್ಷಯ ಭಂಡಾರ. ಬಹುರಾಷ್ಟ್ರದ ಬಹುಸಂಸ್ಕೃತಿಯ ಬಹು ಧರ್ಮೀಯ ಜನರು ಅಲ್ಲಿಗೆ ಬರುತ್ತಾರೆ. ಉದ್ಯೋಗ ಅರಸುತ್ತಾ ಬಂದವರೂ ಇದ್ದಾರೆ. ಆಫ್ರಿಕನ್ನರನ್ನು ಹಿಡಿದು ಗುಲಾಮರನ್ನಾಗಿ ಮಾರಾಟ ಮಾಡಿದ್ದಾರೆ. ಆದರೆ ಈಗ ಅಷ್ಟು ಸಂಪದ್ಯುಕ್ತ ದೇಶ ಬರಡುಬರಡಾಗಿ ಭೀಕರ ಬರ ಎದುರಿಸುತ್ತಿದೆ.

ಈ ಬಗೆಯ ಚಮತ್ಕಾರಯುಕ್ತ ಕೃತಿಯನ್ನು ಪ್ರೊ. ಜಿ. ಶರಣಪ್ಪ ಸೊರಗೊಂಡನಹಳ್ಳಿ ಅವರು ಕನ್ನಡಕ್ಕೆ ತರ್ಜುಮೆ ಮಾಡಿದ್ದಾರೆ; ಸೃಷ್ಟಿ ನಾಗೇಶ್ ಇದನ್ನು ಪ್ರಕಟಿಸಿದ್ದಾರೆ. ಅವರಿಗೆ ಧನ್ಯವಾದಗಳು ಸಲ್ಲಬೇಕು.

ಪ್ರೊ. ಶಿವರಾಮಯ್ಯ

ಪ್ರೊ. ಶಿವರಾಮಯ್ಯ
ಕನ್ನಡ ಪ್ರಾಧ್ಯಾಪಕರಾಗಿ ನಿವೃತ್ತರಾಗಿರುವ ಶಿವರಾಮಯ್ಯನವರು ತಮ್ಮ ಅಧ್ಯಾಪನ ಮತ್ತು ಸಂಶೋಧನಾ ಕಾರ್ಯಗಳ ಜೊತೆಗೆ ಜನಪರ ಹೋರಾಟಗಳಲ್ಲಿ ಗುರುತಿಸಿಕೊಂಡವರು. ಸ್ವಪ್ನ ಸಂಚಯ (ಕವನ ಸಂಕಲನ), ಉರಿಯ ಉಯ್ಯಾಲೆ (ವಿಮರ್ಶಾ ಬರಹಗಳ ಸಂಕಲನ), ದನಿ ಇಲ್ಲದವರ ದನಿ, ಪಂಪಭಾರತ ಭಾಗ-1 &2 (ಸಂಪಾದನೆ ಮತ್ತು ಗದ್ಯಾನುವಾದ) ಅವರ ಪುಸ್ತಕಗಳಲ್ಲಿ ಕೆಲವು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತಕ್ಷಣವೇ ‘SIR ಹೆಲ್ಪ್‌ ಡೆಸ್ಕ್‌’ ಸ್ಥಾಪಿಸುವಂತೆ ಅಧಿಕಾರಿಗಳಿಗೆ ಸಿಎಂ ಸೂಚನೆ

ರಾಜ್ಯದಲ್ಲಿ ಭಾರತೀಯ ಚುನಾವಣಾ ಆಯೋಗದಿಂದ ನಡೆಯುತ್ತಿರುವ ಎಸ್‌ಐಆರ್ (Special Electoral Roll Purification) ಪ್ರಕ್ರಿಯೆ ಸಂದರ್ಭದಲ್ಲಿ ರಾಜ್ಯದ ಯಾವುದೇ ಪ್ರಜೆಯೂ ತನ್ನ ಅತ್ಯಮೂಲ್ಯವಾದ ಮತದಾನದ ಹಕ್ಕನ್ನು ಕಳೆದುಕೊಳ್ಳಬಾರದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್...

ವಿಷಾಹಾರಕ್ಕೆ ಜಾಗತಿಕವಾಗಿ ವರ್ಷಕ್ಕೆ 15 ಲಕ್ಷ ಜನರು ಬಲಿ: ಮಕ್ಕಳಿಗೆ ಹೆಚ್ಚಿನ ಅಪಾಯ: ಭಾರತದ ಸ್ಥಿತಿಯೂ ಆತಂಕಕಾರಿ! 

ನಾವು ದಿನನಿತ್ಯ ಸೇವಿಸುವ ಆಹಾರವೇ ನಮ್ಮ ಜೀವಕ್ಕೆ ಕಂಟಕವಾಗುತ್ತಿದೆಯೇ? ಹೌದು ಎನ್ನುತ್ತದೆ ವಿಶ್ವ ಆರೋಗ್ಯ ಸಂಸ್ಥೆಯ (WHO) ಇತ್ತೀಚಿನ ಆಘಾತಕಾರಿ ವರದಿ. ಜಾಗತಿಕವಾಗಿ ಅಸುರಕ್ಷಿತ ಮತ್ತು ಕಲುಷಿತ ಆಹಾರದ ಸೇವನೆಯಿಂದಾಗಿ ಪ್ರತಿ ವರ್ಷ...

ಡಿಕೆಶಿ ಸಂಪುಟದಲ್ಲಿ ಅಲ್ಪಸಂಖ್ಯಾತರಿಗೆ ಸಿಗುತ್ತಾ ಸೂಕ್ತ ಪ್ರಾತಿನಿಧ್ಯ?

ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಿ, ಡಿ.ಕೆ ಶಿವಕುಮಾರ್ ಹೊಸ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಾಗಿದೆ. ಈ ಮೂಲಕ ಕಳೆದ ಒಂದು ವರ್ಷದಿಂದ ನಡೆಯುತ್ತಿದ್ದ ಸಿಎಂ ಬದಲಾವಣೆಯ...

‘ಕರ್ನಾಟಕದಲ್ಲಿ SIR’ ಮತ ಉಳಿಸಿಕೊಳ್ಳುವಂತೆ ಕಾರ್ಯಕರ್ತರಿಗೆ CM ಡಿ.ಕೆ ಶಿವಕುಮಾರ್ ಕರೆ!

ಕರ್ನಾಟಕ ರಾಜಕಾರಣದಲ್ಲಿ ಹೊಸ ಯುಗ ಆರಂಭವಾಗಿದೆ. ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ಪ್ರಮಾಣವಚನ ಸ್ವೀಕರಿಸಿದ್ದಾರೆ. ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಕೆಲಸ ಮಾಡದಿರುವ ಸಚಿವ ಮತ್ತು ಶಾಸಕರನ್ನು ಸುಮ್ಮನೆ ಬಿಡುವುದಿಲ್ಲ ಎಂದು...

ವೋಟರ್ ಐಡಿ, ಆಧಾರ್ ಇದ್ದರೂ ನೆಮ್ಮದಿ ಇಲ್ಲ, ಪಶ್ಚಿಮ ಬಂಗಾಳದಲ್ಲಿ ಶುರುವಾಯ್ತು ‘ಹೋಲ್ಡಿಂಗ್ ಸೆಂಟರ್’ಗಳ ಭಯ

ಪಶ್ಚಿಮ ಬಂಗಾಳದಲ್ಲಿ "ಯಾರು ಈಗಾಗಲೇ ಮತದಾರರ ಪಟ್ಟಿಯಿಂದ ಹೊರಗುಳಿದಿದ್ದಾರೋ ಮತ್ತು ಟ್ರಿಬ್ಯೂನಲ್‌ನ (ನ್ಯಾಯಮಂಡಳಿ) ಅನುಮೋದನೆಗಾಗಿ ಕಾಯುತ್ತಿದ್ದಾರೋ, ಅಂತಹವರಲ್ಲಿ ಹೊಸ ಪೊಲೀಸ್ ವ್ಯವಸ್ಥೆ ಮತ್ತು ಬಂಧನ ಕೇಂದ್ರಗಳು (ಡಿಟೆಂಷನ್ ಸೆಂಟರ್) ತಮ್ಮನ್ನು ವಿದೇಶಿಯರಂತೆ ನಡೆಸಿಕೊಳ್ಳಲ್ಪಡಬಹುದು...

ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹ : ಮೊದಲ ಬೀದಿ ಹೋರಾಟಕ್ಕೆ ಸಜ್ಜಾದ ಕಾಕ್ರೋಚ್ ಜನತಾ ಪಾರ್ಟಿ

ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಅಲೆಯನ್ನು ಸೃಷ್ಟಿಸಿರುವ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ತನ್ನ ಮೊದಲ ಬೀದಿ ಹೋರಾಟಕ್ಕೆ ಸಜ್ಜಾಗಿದೆ. ಜೂನ್ 6, 2026ರಂದು ನವದೆಹಲಿಯ ಜಂತರ್ ಮಂತರ್‌ನಲ್ಲಿ ಸಿಜೆಪಿ ಪ್ರತಿಭಟನೆ ಆಯೋಜಿಸಿದ್ದು, ಇದರ...

ದೆಹಲಿ: ‘ಮಾಳವೀಯ ನಗರ’ ಅಗ್ನಿ ದುರಂತಕ್ಕೆ 21 ಜನರು ಬಲಿ: ವ್ಯವಸ್ಥೆಯ ವೈಫಲ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿರುವ ನಾಗರೀಕರು 

ದೆಹಲಿಯ ಅತ್ಯಂತ ಜನನಿಬಿಡ ಮತ್ತು ವಾಣಿಜ್ಯ ಪ್ರದೇಶವಾದ ಮಾಳವೀಯ ನಗರದಲ್ಲಿ 2026 ಜೂನ್ 3, ಬುಧವಾರ ನಸುಕಿನ ಜಾವ ಸಂಭವಿಸಿದ ಭೀಕರ ಅಗ್ನಿ ದುರಂತವು ಇಡೀ ದೇಶವನ್ನು ಬೆಚ್ಚಿಬೀಳಿಸಿದೆ. 'ಫ್ಲೋರಿಶ್ ಸ್ಟೇ ಬಿ...

“ವಿಷ ಕಾರದೆ ಮಾತನಾಡಿ”: ಕಲ್ಲಡ್ಕ ಪ್ರಭಾಕರ ಭಟ್‌ಗೆ ಹೈಕೋರ್ಟ್ ತಾಕೀತು

ಹೆಚ್ಚು ಮಕ್ಕಳನ್ನು ಹೆರುವ ಮುಸ್ಲಿಂ ಮಹಿಳೆಯರನ್ನು ಲೇವಡಿ ಮಾಡುವ ಮೂಲಕ ಕೋಮು ದ್ವೇಷ ಹರಡಿದ್ದಾರೆ ಎಂಬ ಆರೋಪ ಎದುರಿಸುತ್ತಿರುವ ಹಿಂದುತ್ವ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಕಲ್ಲಡ್ಕ ಅವರಿಗೆ ತಮ್ಮ ಮುಂದಿನ ಭಾಷಣಗಳಲ್ಲಿ...

ಪತ್ರಕರ್ತ- ಚಿತ್ರ ನಿರ್ಮಾಪಕ ಸೇರಿದಂತೆ ಹಲವು ಕ್ಷೇತ್ರಗಳ ಪ್ರಮುಖರನ್ನು ವಕ್ತಾರರನ್ನಾಗಿ ನೇಮಿಸಿದ ಸಿಜೆಪಿ

ಆನ್‌ಲೈನ್ ಸೆನ್ಸೇಷನ್ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ)ಯು ಶಿಕ್ಷಣ ವ್ಯವಸ್ಥೆಯಲ್ಲಿನ ವೈಫಲ್ಯಗಳ ವಿರುದ್ಧ ಪ್ರಸ್ತಾಪಿಸಿದ ಪ್ರತಿಭಟನೆಗೆ ಮುಂಚಿತವಾಗಿ ತನ್ನ ವ್ಯಾಪ್ತಿಯನ್ನು ವಿಸ್ತರಿಸುವ ಸಲುವಾಗಿ ಮೂವರು ವಕ್ತಾರರ ಹೆಸರನ್ನು ಘೋಷಿಸಿದೆ. ಎಕ್ಸ್‌ನಲ್ಲಿನ ಪೋಸ್ಟ್‌ ಮಾಡಿರುವ ಅಭಿಜೀತ್...

CBSE ಪರೀಕ್ಷೆಯಲ್ಲಿ OSM ವಿವಾದ | ಸಂಸದೀಯ ಸಮಿತಿಯ ಮುಂದೆ ಹಾಜರಾದ ವಿದ್ಯಾರ್ಥಿ ಸಾರ್ಥಕ್ ಸಿದ್ಧಾಂತ್

ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್‌ಸಿ) ಆನ್-ಸ್ಕ್ರೀನ್ ಮಾರ್ಕಿಂಗ್ (ಒಎಸ್‌ಎಂ) ಮೌಲ್ಯಮಾಪನ ವ್ಯವಸ್ಥೆಯಲ್ಲಿನ ಗಂಭೀರ ಲೋಪಗಳ ಕುರಿತು ವಿವಾದ ಭುಗಿಲೆದ್ದಿರುವ ನಡುವೆ, 17 ವರ್ಷದ ವಿದ್ಯಾರ್ಥಿ ಸಾರ್ಥಕ್ ಸಿದ್ಧಾಂತ್ ನವದೆಹಲಿಯ ಸಂಸತ್ ಭವನದಲ್ಲಿ...