ಹಿಂದಿ ತಿಳಿದಿದ್ದವರು ಮಾತ್ರ ಭಾರತೀಯರೆ? ಹಿಂದಿ ಭಾಷೆ ತಿಳಿದಿದ್ದವರು ಮಾತ್ರ ಭಾರತೀಯರು ಎಂದು ಯಾವಾಗಿನಿಂದ ಆಗಿದೆ ಎಂದು ತಮಿಳುನಾಡಿ ಡಿಎಂಕೆ ಸಂಸದೆ ಕನಿಮೊಳಿ ಪ್ರಶ್ನಿಸಿದ್ದಾರೆ.
ವಿಮಾನ ನಿಲ್ದಾಣದಲ್ಲಿನ ಅಧಿಕಾರಿಯೊಬ್ಬರು ನಾನು ಹಿಂದಿಯಲ್ಲಿ ಮಾತನಾಡದ ಕಾರಣಕ್ಕೆ ನೀವು ಭಾರತೀಯರೆ? ಎಂದು ಹೇಳುವ ಮೂಲಕ ಅವಮಾನಿಸಿದ್ದಾರೆ ಎಂದು ಆರೋಪಿಸಿರುವ ಸಂಸದೆ ಹಿಂದಿ ಹೇರಿಕೆ ವಿರುದ್ಧ ಕಿಡಿಕಾರಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು “ವಿಮಾನ ನಿಲ್ದಾಣದ ಸಿಐಎಸ್ಎಫ್ ಅಧಿಕಾರಿಯೊಬ್ಬರ ಬಳಿ ನನಗೆ ಹಿಂದಿ ಬಾರದ ಕಾರಣ ತಮಿಳು ಅಥವಾ ಇಂಗ್ಲಿಷ್ನಲ್ಲಿ ಮಾತನಾಡಿ ಎಂದು ಕೇಳಿದೆ. ಅಷ್ಟಕ್ಕೆ ಅವರು ನೀವು ಭಾರತೀಯರೆ ಎಂದು ಕೇಳಿದ್ದಾರೆ. ಹಿಂದಿ ತಿಳಿದಿರುವುದು ಭಾರತೀಯರಾಗಿರುವುದಕ್ಕೆ ಸಮಾನ ಎಂದು ಯಾವಾಗಿನಿಂದ ಜಾರಿಗೆ ಬಂದಿದೆ?” ಎಂದು ಕನಿಮೊಳಿ ಟ್ವೀಟ್ ಮಾಡಿದ್ದಾರೆ. ಅಲ್ಲದೇ #hindiimposition ಎಂಬ ಹ್ಯಾಸ್ಟ್ಯಾಗ್ ಸೇರಿಸಿದ್ದಾರೆ.
Today at the airport a CISF officer asked me if “I am an Indian” when I asked her to speak to me in tamil or English as I did not know Hindi. I would like to know from when being indian is equal to knowing Hindi.#hindiimposition
— Kanimozhi (கனிமொழி) (@KanimozhiDMK) August 9, 2020
ನಿಮ್ಮ ಅಹಿತಕರ ಅನುಭವವನ್ನು ನಾವು ಪ್ರಾಮಾಣಿಕವಾಗಿ ಅಂಗೀಕರಿಸುತ್ತೇವೆ. ಸೂಕ್ತ ಕ್ರಮ ತೆಗೆದುಕೊಳ್ಳಲು ದಯವಿಟ್ಟು ನಿಮ್ಮ ಪ್ರಯಾಣದ ವಿವರಗಳಾದ ವಿಮಾನ ನಿಲ್ದಾಣ, ಸ್ಥಳ, ಪ್ರಮಾಣದ ದಿನಾಂಕ ಮತ್ತು ಸಮಯವನ್ನು ಒದಗಿಸಿ ಎಂದು ಸಿಐಎಸ್ಎಫ್ ಟ್ವೀಟ್ ಮಾಡಿದೆ.
Warm greetings from @CISFHQrs. We sincerely acknowledge your unpleasant experience. Kindly DM journey details; name of airport, location, date, and time of the incident for appropriate action in the matter.
— CISF (@CISFHQrs) August 9, 2020
ಕನಿಮೊಳಿಯವರ ಪ್ರಶ್ನೆಗೆ ಹಲವರು ದನಿಗೂಡಿಸಿದ್ದಾರೆ. ಆ ಮೂಲಕ ಮತ್ತೆ ಹಿಂದಿ ಹೇರಿಕೆಯ ಚರ್ಚೆಯನ್ನು ಮುನ್ನೆಲೆಗೆ ತಂದಿದ್ದಾರೆ.
ಇತ್ತೀಚೆಗೆ ಕೇಂದ್ರ ಕ್ಯಾಬಿನೆಟ್ ಹೊಸ ಶಿಕ್ಷಣ ನೀತಿಯನ್ನು ಅಂಗೀಕರಿಸಿದ ನಂತರ ತಮಿಳುನಾಡು ರಾಜ್ಯವು ತ್ರಿಭಾಷಾ ಸೂತ್ರ ಹೇರಿಕೆಯನ್ನು ವಿರೋಧಿಸಿತ್ತು. ಆಡಳಿತ ಮತ್ತು ವಿಪಕ್ಷಗಳು ತೀವ್ರ ಪ್ರತಿರೋಧ ತೋರಿದ್ದವು.