ಡ್ರೈವರ್ ಇದ್ರೀಶ್ ಪಾಶಾ ಕೊಲೆ ಪ್ರಕರಣದ ಪ್ರಮುಖ ಆರೋಪಿ ಪುನೀತ್ ಕೆರೆಹಳ್ಳಿ ಮತ್ತು ಸಂಗಡಿಗರನ್ನು ಬಂಧಿಸಿ ಎಂದು ತೀವ್ರ ಒತ್ತಡ ಕೇಳಿ ಬಂದಿದೆ. ಕೊಲೆ ನಡೆದು ನಾಲ್ಕು ದಿನಗಳಾದರೂ ಬಂಧಿಸದೇ ಅವರನ್ನು ರಕ್ಷಿಸುತ್ತಿರುವವರು ಯಾರು ಎಂದು ಬಹುತ್ವ ಕರ್ನಾಟಕ ಮತ್ತು ಕಾಂಗ್ರೆಸ್ ಪಕ್ಷ ಪ್ರಶ್ನಿಸಿವೆ.
ಇದ್ರೀಶ್ ಪಾಶಾ ಕೊಲೆ ಪರಿಸ್ಥಿತಿಗೆ ಕಾರಣವಾದ ಕರ್ನಾಟಕ ಪೊಲೀಸ್ ಮತ್ತು ಕರ್ನಾಟಕ ಸರ್ಕಾರದ ನಿಷ್ಕ್ರಿಯತೆಯನ್ನು ನಾವು ಖಂಡಿಸುತ್ತೇವೆ! ಗೋ ರಕ್ಷಣೆಗೆ ಸಂಬಂಧಿಸಿದ ತೆಹಸೀನ್ ಪೂನಾವಾಲಾ ಪುಕರಣದಲ್ಲಿ ಕರ್ನಾಟಕ ಸರ್ಕಾರ ತಕ್ಷಣವೇ ಸುಪ್ರೀಂ ಕೋರ್ಟ್ ಮಾರ್ಗಸೂಚಿಗಳನ್ನು ಜಾರಿಗೊಳಿಸಬೇಕು. ಪುನೀತ್ ಕೆರೆಹಳ್ಳಿ, ಬಹಿರಂಗವಾಗಿ ವಿಡಿಯೋ ಹೇಳಿಕೆಗಳನ್ನು ನೀಡುತ್ತಿದ್ದರೂ ಇನ್ನೂ ಯಾಕೆ ಬಂಧಿಸಿಲ್ಲ? ಅವನನ್ನು ರಕ್ಷಿಸುವವರು ಯಾರು? ಎಂದು ಬಹುತ್ವ ಕರ್ನಾಟಕ ಸಂಘಟನೆ ಪ್ರಶ್ನಿಸಿದೆ.
ಪುನೀತ್ ಕೆರೆಹಳ್ಳಿ ಮತ್ತು ಇತರ ಎಲ್ಲಾ ಆರೋಪಿಗಳನ್ನು ಕೂಡಲೇ ಬಂಧಿಸಿ, ಬಜರಂಗದಳ, ರಾಷ್ಟ್ರ ರಕ್ಷಣಾ ವೇದಿಕೆ ಮತ್ತು ಇತರರು ಕಾನೂನನ್ನು ಕೈಗೆ ತೆಗೆದುಕೊಂಡಿರುವುದರ ಕುರಿತು ಹಾಲಿ ಹೈ ಕೋರ್ಟ್ ನ್ಯಾಯಾಧೀಶರಿಂದ ತನಿಖೆ ನಡೆಸಬೇಕು. ಬಹಳ ಮುಖ್ಯವಾಗಿ, ಪೋಲೀಸರ ನಿಷ್ಕ್ರಿಯತೆ ಗಮನಿಸಬೇಕು. ರಾಜ್ಯ ಸರ್ಕಾರದ ನಿಷ್ಕ್ರಿಯತೆಯೇ ಈ ಪರಿಸ್ಥಿತಿಗೆ ಕಾರಣವಾಗಿರುವುದರಿಂದ, ಲಿಂಚಿಂಗ್ನ ಎಲ್ಲಾ ಸಂತ್ರಸ್ತರಲ್ಲಿ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಲಾಗಿದೆ.
ದ್ವೇಷಪೂರಿತ ಅಪರಾಧಗಳನ್ನು ಅಂತ್ಯಗೊಳಿಸಲು ತಡೆಗಟ್ಟುವ, ಪರಿಹಾರ ಮತ್ತು ದಂಡನಾತ್ಮಕ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಲು ತೆಪ್ಪಿನ್ ಪೂನಾವಾಲಾ ವರ್ಸಸ್ ಯೂನಿಯನ್ ಆಫ್ ಇಂಡಿಯಾ [AIR 2018 SC 3354] ನಲ್ಲಿ ಸುಪ್ರೀಂ ಕೋರ್ಟ್ನ ಆದೇಶವನ್ನು ಕಟ್ಟುನಿಟ್ಟಾಗಿ ಅನುಸರಿಸುವುದನ್ನು ಸರ್ಕಾರ ಖಚಿತಪಡಿಸಿಕೊಳ್ಳಬೇಕು. ಅದರಲ್ಲಿ ಇಂತಹ ಘಟನೆಗಳನ್ನು ತಡೆಗಟ್ಟಲು ಕಟ್ಟುನಿಟ್ಟಾದ ನೋಡಲ್ ಅಧಿಕಾರಿಗಳನ್ನು ನೇಮಿಸುವುದು, ವಿಳಂಬವಿಲ್ಲದೆ ಎಫ್ಐಆರ್ ನೋಂದಣಿ, ಸಂತ್ರಸ್ತರ ಕುಟುಂಬ ಸದಸ್ಯರಿಗೆ ಕಿರುಕುಳವನ್ನು ತಡೆಯುವುದು, ಗುಂಪು ಹಿಂಸಾಚಾರದ ಪ್ರಕರಣಗಳನ್ನು ಫಾಸ್ಟ್ ಟ್ರ್ಯಾಕ್ ನ್ಯಾಯಾಲಯಗಳ ಮೂಲಕ ವಿಚಾರಣೆಗೆ ಒಳಗಾಗುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಆಗ್ರಹಿಸಲಾಗಿದೆ.
ಪುನೀತ್ ಕೆರೆಹಳ್ಳಿ ಮತ್ತು ಆತನ ಸಹಚರರನ್ನು ಬಂಧಿಸುವಲ್ಲಿ ವಿಫಲರಾದ ಪೊಲೀಸ್ ಅಧಿಕಾರಿಗಳ ವಿರುದ್ಧ ಸುಪ್ರೀಂ ಕೋರ್ಟ್ ಆದೇಶದಂತೆ ಕ್ರಮ ಕೈಗೊಳ್ಳಬೇಕು ಮತ್ತು ತರಾತುರಿಯಲ್ಲಿ ಹೊರತಂದಿರುವ, ಸಂವಿಧಾನದ ಮೌಲ್ಯಗಳಿಗೆ ವಿರುದ್ಧವಾದ ಕರ್ನಾಟಕ ಪ್ರಿವೆನೈನ್ ಆಫ್ ಸ್ಲಾಟರ್ ಅಂಡ್ ಪ್ರಿಸರ್ವೇಶನ್ ಆಫ್ ಕ್ಯಾಟಲ್ ಕಾಯಿದೆ 2021 ಯನ್ನು ಹಿಂಪಡೆಯಿರಿ ಎಂದು ಒತ್ತಾಯಿಸಲಾಗಿದೆ.
ಏನಂಥ ಹೇಡಿತನ ಸರಕಾರವೇ ನಿನ್ನದು? ತಲೆ ಹಿಡುಕ, ಕೊಲೆ ಗಡುಕ ಪುನೀತ್ ಕೆರೆಹಳ್ಳಿಯನ್ನು ಬಂಧಿಸಿ ಎಂದು ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಆಗ್ರಹಿಸಿದ್ದಾರೆ.
ಸಾತನೂರಿನಲ್ಲಿ ಜಾನುವಾರು ವ್ಯಾಪಾರಿಯನ್ನು ಹತ್ಯೆಗೈದ ಕೊಲೆಗಡುಕನನ್ನು ಇನ್ನೂ ಬಂಧಿಸಲಿಲ್ಲ, ಆತ ರಾಜಾರೋಷವಾಗಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮಾಡಿ ವಿರೋಧ ಪಕ್ಷದ ನಾಯಕರಿಗೆ ಬೆದರಿಕೆ ಹಾಕುತ್ತಿದ್ದಾನೆ. ಒಬ್ಬ ಕೊಲೆ ಆರೋಪಿಯನ್ನು ಬಂಧಿಸಲಾಗಿಲ್ಲ ಅಂದರೆ ಏನರ್ಥ? ರಾಜ್ಯದಲ್ಲಿ ಗೃಹ ಇಲಾಖೆ ಸತ್ತು ಹೋಗಿದೆಯೇ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಸಾತನೂರಿನಲ್ಲಿ ಜಾನುವಾರು ವ್ಯಾಪಾರಿಯನ್ನು ಹತ್ಯೆಗೈದ ಕೊಲೆಗಡುಕನನ್ನು ಇನ್ನೂ ಬಂಧಿಸಲಿಲ್ಲ,
ಆತ ರಾಜಾರೋಷವಾಗಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮಾಡಿ ವಿರೋಧ ಪಕ್ಷದ ನಾಯಕರಿಗೆ ಬೆದರಿಕೆ ಹಾಕುತ್ತಿದ್ದಾನೆ.
ಒಬ್ಬ ಕೊಲೆ ಆರೋಪಿಯನ್ನು ಬಂಧಿಸಲಾಗಿಲ್ಲ ಅಂದರೆ ಏನರ್ಥ?
ರಾಜ್ಯದಲ್ಲಿ ಗೃಹ ಇಲಾಖೆ ಸತ್ತು ಹೋಗಿದೆಯೇ @JnanendraAraga?— Karnataka Congress (@INCKarnataka) April 4, 2023
ಜಾನುವಾರು ವ್ಯಾಪಾರಿಯನ್ನು ಕೊಲೆ ಮಾಡಿದ್ದೂ ಅಲ್ಲದೆ, ವಿರೋಧ ಪಕ್ಷದ ನಾಯಕರಿಗೆ ಬೆದರಿಕೆ ಹಾಕುವ ಕೊಲೆಗಡುಕನ ಧೈರ್ಯದ ಹಿಂದಿನ ಕಾರಣವೇನು? ಗೃಹಸಚಿವರು ಕೊಲೆ ಆರೋಪಿಯನ್ನು ತಮ್ಮದೇ ಮನೆಯಲ್ಲಿಟ್ಟುಕೊಂಡು ವಿಡಿಯೋ ಮೂಲಕ ಸಿದ್ದರಾಮಯ್ಯ ಅವರಿಗೆ ಬೆದರಿಕೆ ಹಾಕಿಸುತ್ತಿದ್ದಾರೆಯೇ? ಆರಗ ಜ್ಞಾನೇಂದ್ರರವರೆ ಕೊಲೆ ಆರೋಪಿಯ ರಕ್ಷಣೆಗೆ ನಿಂತಿರುವರೆ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
‘ನನ್ನ ಕ್ಷೇತ್ರ ವ್ಯಾಪ್ತಿಯ ಸಾತನೂರಿನಲ್ಲಿ ಮತೀಯ ಗೂಂಡಾಗಿರಿಯ ಭಾಗವಾಗಿ ಒಬ್ಬನ ಕೊಲೆಯಾಗಿದೆ. ಈ ಕೊಲೆಗೆ ಕಾರಣರಾದ ವ್ಯಕ್ತಿ ಬಿಜೆಪಿ ನಾಯಕರ ಆಪ್ತನಾಗಿದ್ದಾನೆ. ಈ ಹತ್ಯೆಗೆ ಮುಖ್ಯಮಂತ್ರಿ ಮತ್ತು ಗೃಹ ಸಚಿವ ಹೊಣೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಿಸಿದ್ದಾರೆ.
‘‘ಈ ಕೊಲೆಗೆ ಸರ್ಕಾರವೇ ಕಾರಣ. ಹೊಣೆ ಹೊತ್ತು ಮುಖ್ಯಮಂತ್ರಿ ಮತ್ತು ಗೃಹ ಸಚಿವರು ರಾಜೀನಾಮೆ ನೀಡಬೇಕು. ಅಲ್ಪಸಂಖ್ಯಾತರು ಬದುಕಲು ಅವಕಾಶ ಮಾಡಿಕೊಡಬೇಕು. ಚುನಾವಣೆ ಸಮಯದಲ್ಲಿ ಇಂತಹ ಗೊಂದಲ ಮಾಡುವುದು ಸರಿಯಲ್ಲ. ಈ ಹತ್ಯೆಯಲ್ಲಿ ಭಾಗಿಯಾಗಿರುವವರನ್ನು ಬಂಧಿಸಬೇಕು. ಮೃತನ ಕುಟುಂಬಕ್ಕೆ ಸರ್ಕಾರ ಕೂಡಲೇ 25 ಲಕ್ಷ ರೂ ಪರಿಹಾರ ನೀಡಬೇಕು” ಎಂದು ಅವರು ಆಗ್ರಹಿಸಿದ್ದಾರೆ.
ಇನ್ನು ಕೊಲೆ ಆರೋಪಿ ಪುನೀತ್ ಕೆರೆಹಳ್ಳಿ ಸೋಮವಾರ ರಾತ್ರಿ ಮತ್ತೆ ಫೇಸ್ಬುಕ್ ಲೈವ್ ಬಂದು ಮಾಜಿ ಸಿಎಂಗಳಾದ ಹೆಚ್.ಡಿ ಕುಮಾರಸ್ವಾಮಿ, ಸಿದ್ದರಾಮಯ್ಯ ಕೊಲೆ ಮಾಡಿಸಿರಬೇಕು ಎಂದು ಧಮಕಿ ಹಾಕಿದ್ದಾನೆ. ಈ ಕುರಿತು ಸಾಕಷ್ಟು ವಿರೋಧ ವ್ಯಕ್ತವಾಗಿದೆ.
ಇದನ್ನೂ ಓದಿ: ‘ರಾತ್ರಿ ಹೊತ್ತು ರಸ್ತೆಯಲ್ಲಿ ಬ್ಯಾಟ್ ಹಿಡಿದು ತಿರುಗುವವರಿಗೆ ಪೊಲೀಸರ ಅನುಮತಿ ಇತ್ತೇ?’: ಇದ್ರೀಶ್ ಹತ್ಯೆಗೆ…