ಗುಜರಾತ್ನ ಬಿಜೆಪಿ ನಾಯಕರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಜಂಟಿ ಕಾರ್ಯದರ್ಶಿ ಗೋಪಾಲ್ ಇಟಾಲಿಯಾ ಅವರನ್ನು ಸೋಮವಾರ ಬಂಧಿಸಲಾಗಿದೆ ಎಂದು ಪಿಟಿಐ ವರದಿ ಮಾಡಿದೆ. ಆದರೆ, ಆ ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು.
ಸೆಪ್ಟೆಂಬರ್ 2 ರಂದು, ಬಿಜೆಪಿ ರಾಜ್ಯಾಧ್ಯಕ್ಷ ಸಿಆರ್ ಪಾಟೀಲ್ ಮತ್ತು ಗುಜರಾತ್ ಗೃಹ ಸಚಿವ ಹರ್ಷ ಸಾಂಘವಿ ವಿರುದ್ಧ ಅವಹೇಳನಕಾರಿ ಪದಗಳನ್ನು ಬಳಸಿದ ಆರೋಪದ ಮೇಲೆ ಮತ್ತು ಬಿಜೆಪಿ ಕಾರ್ಯಕರ್ತರನ್ನು “ಗೂಂಡಾಗಳು” ಎಂದು ಉಲ್ಲೇಖಿಸಿದ್ದಕ್ಕಾಗಿ ಸೂರತ್ ಜಿಲ್ಲೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಬಿಜೆಪಿ ಕಾರ್ಯಕರ್ತ ಪ್ರತಾಪಭಾಯಿ ಚೋವಾಡಿಯಾ ನೀಡಿದ ದೂರಿನ ಆಧಾರದ ಮೇಲೆ ಸೂರತ್ ಜಿಲ್ಲೆಯ ಉಮ್ರಾ ಪೊಲೀಸ್ ಠಾಣೆಯಲ್ಲಿ ಇಟಾಲಿಯಾ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಈ ಪ್ರಕರಣವನ್ನು ಸೂರತ್ ಕ್ರೈಂ ಬ್ರಾಂಚ್ ತನಿಖೆ ನಡೆಸುತ್ತಿದೆ ಎಂದು ದಿ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಸೋಮವಾರ ಜಾಮೀನು ಪಡೆದ ನಂತರ ಮಾತನಾಡಿದ ಇಟಾಲಿಯಾ ಅವರು, ”ರಾಜ್ಯ ಪೊಲೀಸರು ತನಗೆ ಕಿರುಕುಳ ನೀಡಲು ಈ ರೀತಿ ಮಾಡುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: ಗುಜರಾತ್ನ ಬಿಜೆಪಿ ನಾಯಕನ ವಿರುದ್ಧ ಮಾತನಾಡಿದ್ದಕ್ಕೆ ಎಎಪಿ ನಾಯಕನ ಬಂಧನ!
”ಇಂತಹ ಹೇಳಿಕೆಗಳನ್ನು ಎಲ್ಲಾ ರಾಜಕೀಯ ನಾಯಕರು ಪರಸ್ಪರ ವಿರುದ್ಧವಾಗಿ ಮಾಡುತ್ತಾರೆ. ಆದರೆ ನನ್ನ ವಿರುದ್ಧ ಮಾತ್ರ ಎಫ್ಐಆರ್ ದಾಖಲಿಸಿದ್ದು ಹೇಗೆ? ಅವರು [ಪೊಲೀಸ್ ಮತ್ತು ಸರ್ಕಾರ] ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ” ಎಂದು ಇಟಾಲಿಯಾ ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.
ಈ ಮಧ್ಯೆ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಪ್ರತಿಕ್ರಿಯಿಸಿ, ”ಆಮ್ ಆದ್ಮಿ ಪಕ್ಷ ವಿಧಾನಸಭಾ ಚುನಾವಣೆಯಲ್ಲಿ ಐದು ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ನಮ್ಮ ಈ ಸಾಧನೆ ಕಂಡು ಬಿಜೆಪಿ ಹೆದರಿದೆ ಹಾಗಾಗಿ ಇಟಾಲಿಯಾ ಬಂಧನವಾಗಿದೆ ಎಂದು ಹೇಳಿದ್ದಾರೆ.
”ಗುಜರಾತ್ನಲ್ಲಿ ಆಮ್ ಆದ್ಮಿ ಪಕ್ಷದ ಅದ್ಭುತ ಪ್ರದರ್ಶನದಿಂದ ಬಿಜೆಪಿ ಎಷ್ಟು ಆಘಾತಕ್ಕೊಳಗಾಗಿದೆ ಎಂದರೆ ಅದು ಈಗ ನಮ್ಮ ಗುಜರಾತ್ ನಾಯಕ ಗೋಪಾಲ್ ಇಟಾಲಿಯಾ ಅವರನ್ನು ಬಂಧಿಸಿದೆ. ಆಮ್ ಆದ್ಮಿ ಪಕ್ಷವನ್ನು ಮುಗಿಸಬೇಕು ಎನ್ನುವುದೊಂದೆ ಬಿಜೆಪಿಯ ಗುರಿಯಾಗಿದೆ. ಹಾಗಾಗಿ ಅವರು, ಒಬ್ಬರ ಹಿಂದೆ ಇನ್ನೊಬ್ಬರಂತೆ ಎಲ್ಲರನ್ನೂ ಜೈಲಿಗೆ ಹಾಕುತ್ತಿದ್ದಾರೆ” ಎಂದು ಕಿಡಿಕಾರಿದರು.