ಖಲಿಸ್ತಾನಿ ನಾಯಕ ಮತ್ತು ವಾರಿಸ್ ಪಂಜಾಬ್ ಡಿ ಮುಖ್ಯಸ್ಥ ಅಮೃತಪಾಲ್ ಸಿಂಗ್ ಅವರನ್ನು ಜಲಂಧರ್ನ ನಕೋದರ್ ಬಳಿ ಶನಿವಾರ ಬಂಧಿಸಲಾಗಿದೆ ಎಂದು ವರದಿಯಾಗಿದೆ. ಇದರ ಜೊತೆಗೆ ಪಂಜಾಬ್ನಲ್ಲಿ ಭಾನುವಾರ ಮಧ್ಯಾಹ್ನ 12 ಗಂಟೆಯವರೆಗೆ ನಿರ್ಬಂಧ ಹೇಳಲಾಗಿದೆ.
ಪಂಜಾಬ್ ಪೊಲೀಸರು ಪ್ರತ್ಯೇಕತಾವಾದಿ ನಾಯಕನ ವಿರುದ್ಧ ನಿನ್ನೆ ಕ್ರಮ ಕೈಗೊಂಡರು, ಕೇಂದ್ರ ಗೃಹ ಸಚಿವಾಲಯವು ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಪಂಜಾಬ್ ಸರ್ಕಾರದೊಂದಿಗೆ ನಿರಂತರ ಸಂಪರ್ಕದಲ್ಲಿದೆ.
ಆತನ ಆರು ಮಂದಿ ಸಹಾಯಕರನ್ನು ಈ ಹಿಂದೆ ಜಲಂಧರ್ನಲ್ಲಿ ಬಂಧಿಸಲಾಗಿತ್ತು. ಅವರನ್ನು ಅಜ್ಞಾತ ಸ್ಥಳದಲ್ಲಿ ವಿಚಾರಣೆ ನಡೆಸಲಾಗುತ್ತಿದೆ.
ಪಂಜಾಬ್ ಪೊಲೀಸರು ಶಾಕೋಟ್ ಬಳಿ ಅಮೃತ್ಪಾಲ್ ಸಿಂಗ್ನ ಇತ್ತೀಚಿನ ಸ್ಥಳವನ್ನು ಪತ್ತೆಹಚ್ಚಿದ್ದರು. ನಂತರ ಇಂದು ಬೆಳಿಗ್ಗೆ ಅವರನ್ನು ಬಂಧಿಸುವ ಪ್ರಯತ್ನದಲ್ಲಿ 50ಕ್ಕೂ ಹೆಚ್ಚು ಪೊಲೀಸ್ ವಾಹನಗಳು ಖಾಲಿಸ್ತಾನಿ ನಾಯಕನನ್ನು ಬೆನ್ನು ಹತ್ತಿದ್ದವು.
ಪಂಜಾಬ್ನ ಹಲವಾರು ಜಿಲ್ಲೆಗಳಲ್ಲಿ ಮೊಬೈಲ್ ಇಂಟರ್ನೆಟ್ ಸೇವೆಗಳನ್ನು ನಿರ್ಬಂಧಿಸಲಾಗಿದೆ ಮತ್ತು ನಿರ್ಬಂಧಗಳು ನಾಳೆಯವರೆಗೆ ಮುಂದುವರಿಯುತ್ತದೆ.
“ಧ್ವನಿ ಕರೆ ಹೊರತುಪಡಿಸಿ, ಎಲ್ಲಾ ಮೊಬೈಲ್ ಇಂಟರ್ನೆಟ್ ಸೇವೆಗಳು, ಎಲ್ಲಾ ಎಸ್ಎಂಎಸ್ ಸೇವೆಗಳು (ಬ್ಯಾಂಕಿಂಗ್ ಮತ್ತು ಮೊಬೈಲ್ ರೀಚಾರ್ಜ್ ಹೊರತುಪಡಿಸಿ) ಮತ್ತು ಮೊಬೈಲ್ ನೆಟ್ವರ್ಕ್ಗಳಲ್ಲಿ ಒದಗಿಸಲಾದ ಎಲ್ಲಾ ಡಾಂಗಲ್ ಸೇವೆಗಳು, ಪಂಜಾಬ್ನ ಪ್ರಾದೇಶಿಕ ನ್ಯಾಯವ್ಯಾಪ್ತಿಯಲ್ಲಿ ಮಾರ್ಚ್ 18ರಿಂದ ಮಾರ್ಚ್ 19ರ ಮಧ್ಯಾಹ್ನದವರೆಗೆ ರದ್ದುಗೊಳಿಸಲಾಗಿದೆ. ಸುಳ್ಳು ಸುದ್ದಿಗಳನ್ನು ತಡೆಯಲು, ಸಾರ್ವಜನಿಕ ಸುರಕ್ಷತೆಯ ಹಿತದೃಷ್ಟಿಯಿಂದ ಈ ಕ್ರಮ ಜರುಗಿಸಲಾಗಿದೆ” ಎಂದು ಪಂಜಾಬ್ನ ಗೃಹ ವ್ಯವಹಾರ ಮತ್ತು ನ್ಯಾಯಾಂಗ ಇಲಾಖೆಯು ಆದೇಶಿಸಿದೆ.
ಕಳೆದ ತಿಂಗಳು ಅಮೃತಪಾಲ್ ಸಿಂಗ್ ಮತ್ತು ಅವರ ಬೆಂಬಲಿಗರು ಪೊಲೀಸ್ ಬ್ಯಾರಿಕೇಡ್ಗಳನ್ನು ಭೇದಿಸಿ ಅಜ್ನಾಲಾ ಪೊಲೀಸ್ ಠಾಣೆಗೆ ಶಸ್ತ್ರಾಸ್ತ್ರಗಳೊಂದಿಗೆ ನುಗ್ಗಿದ್ದರು. ಗಲಭೆ ವೇಳೆ ಬಂಧಿಸಲಾದ ಪ್ರತ್ಯೇಕವಾದಿಯೊಬ್ಬನನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ಬೆಂಬಲಿಗರು ಪೊಲೀಸ್ ಸಿಬ್ಬಂದಿಯೊಂದಿಗೆ ಘರ್ಷಣೆ ನಡೆಸಿದ್ದರು.