ಕೆಲವು ನಿವೃತ್ತ ನ್ಯಾಯಾಧೀಶರು ದೇಶ ವಿರೋಧಿ ಗ್ಯಾಂಗ್ನ ಭಾಗವಾಗಿದ್ದಾರೆ ಮತ್ತು ನ್ಯಾಯಾಂಗವು ವಿರೋಧ ಪಕ್ಷದ ಪಾತ್ರವನ್ನು ನಿರ್ವಹಿಸಬೇಕೆಂದು ಪ್ರಯತ್ನಿಸುತ್ತಿದ್ದಾರೆ ಎಂದು ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಹೇಳಿರುವುದಾಗಿ ‘ಇಂಡಿಯಾ ಟುಡೇ’ ವರದಿ ಮಾಡಿದೆ.
ಶನಿವಾರ ಇಂಡಿಯಾ ಟುಡೇ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಈ ಹೇಳಿಕೆ ನೀಡಿದ್ದಾರೆ.
“ಕೆಲವು ನಿವೃತ್ತ ನ್ಯಾಯಾಧೀಶರು… ಭಾರತ ವಿರೋಧಿ ಗ್ಯಾಂಗ್ನ ಭಾಗವಾಗಿರುವ ಕೆಲವು ಹೋರಾಟಗಾರರಾಗಿದ್ದಾರೆ. ಭಾರತೀಯ ನ್ಯಾಯಾಂಗವು ವಿರೋಧ ಪಕ್ಷದ ಪಾತ್ರವನ್ನು ವಹಿಸುವಂತೆ ಈ ಜನರು ಪ್ರಯತ್ನಿಸುತ್ತಿದ್ದಾರೆ” ಎಂದು ರಿಜಿಜು ಆರೋಪಿಸಿದ್ದಾರೆ.
“…ನ್ಯಾಯಾಧೀಶರು ಯಾವುದೇ ಗುಂಪು ಅಥವಾ ರಾಜಕೀಯ ಸಂಬಂಧದ ಭಾಗವಾಗಿರುವುದಿಲ್ಲ. ನ್ಯಾಯಾಂಗವು ಶಾಸಕಾಂಗದೊಳಗೆ ತಲೆಹಾಕಬೇಕು ಎಂದು ಈ ಜನರು ಹೇಗೆ ಬಹಿರಂಗವಾಗಿ ಹೇಳುತ್ತಾರೆ?” ಎಂದು ಪ್ರಶ್ನಿಸಿದ್ದಾರೆ.
“ಸುಪ್ರೀಂಕೋರ್ಟ್ನ ಇಂದಿನ ಮುಖ್ಯ ನ್ಯಾಯಮೂರ್ತಿ ಮತ್ತು ಹೈಕೋರ್ಟ್ಗಳ ಮುಖ್ಯ ನ್ಯಾಯಮೂರ್ತಿಗಳೊಂದಿಗೆ ಉತ್ತಮ ಕಾರ್ಯ ಸಂಬಂಧವನ್ನು ಹೊಂದಿದ್ದೇನೆ” ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಸರ್ಕಾರ ಮತ್ತು ನ್ಯಾಯಾಂಗದ ನಡುವೆ ಯಾವುದೇ ಘರ್ಷಣೆ ಇಲ್ಲ ಎಂದು ತಿಳಿಸಿದ್ದಾರೆ.
“ಘರ್ಷಣೆ ಪದವನ್ನು ಬಳಸುವುದು ಸರಿಯಲ್ಲ” ಎಂದಿರುವ ಅವರು, “ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಭಿನ್ನಾಭಿಪ್ರಾಯಗಳಿವೆ. ನಮ್ಮ ಸರ್ಕಾರವು ಮೊದಲ ದಿನದಿಂದ ನ್ಯಾಯಾಂಗಕ್ಕೆ ಜಾಗವನ್ನು ನೀಡುವಲ್ಲಿ, ನ್ಯಾಯಾಂಗದ ಸ್ವಾತಂತ್ರ್ಯವನ್ನು ಕಾಪಾಡುವ ಜೊತೆಗೆ ನ್ಯಾಯಾಂಗವನ್ನು ಬಲಪಡಿಸುವ ವಿಷಯದಲ್ಲಿ ಸಂಪೂರ್ಣವಾದ ಸ್ಪಷ್ಟತೆಯನ್ನು ಹೊಂದಿದೆ” ಎಂದಿದ್ದಾರೆ.
ನ್ಯಾಯಾಂಗಕ್ಕೆ ನೇಮಕಾತಿಗಳನ್ನು ಮಾಡುವ ಕೊಲಿಜಿಯಂ ವ್ಯವಸ್ಥೆಯನ್ನು ಪದೇ ಪದೇ ಇತ್ತೀಚಿನ ದಿನಗಳಲ್ಲಿ ಟೀಕಿಸುತ್ತಿರುವ ಕೇಂದ್ರ ಕಾನೂನು ಸಚಿವರು, “ಅದು (ಕೊಲಿಜಿಯಂ) ಪಾರದರ್ಶಕವಾಗಿಲ್ಲ” ಎಂದು ಪ್ರತಿಪಾದಿಸಿದ್ದಾರೆ.
ಇದನ್ನೂ ಓದಿರಿ: ಖಲಿಸ್ತಾನಿ ನಾಯಕನ ಬಂಧನ; ಪಂಜಾಬ್ನಲ್ಲಿ ಇಂಟರ್ನೆಟ್ ಬಂದ್
“‘ಗುಪ್ತಚರ ಇಲಾಖೆ’, ‘ಸಂಶೋಧನೆ ಮತ್ತು ವಿಶ್ಲೇಷಣಾ ವಿಭಾಗ’ದ ಸೂಕ್ಷ್ಮ ವರದಿಗಳ ಕೆಲವು ಭಾಗಗಳನ್ನು ಸುಪ್ರೀಂ ಕೋರ್ಟ್ನ ಕೊಲಿಜಿಯಂ, ಸಾರ್ವಜನಿಕಗೊಳಿಸಿದ್ದು ಗಂಭೀರ ಹಾಗೂ ಕಳವಳಕಾರಿ ವಿಷಯ” ಎಂದು ಸಚಿವರು ಜನವರಿಯಲ್ಲಿ ಹೇಳಿಕೆ ನೀಡಿದ್ದರು.
ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಕೊಲಿಜಿಯಂ, ದೆಹಲಿ ಹೈಕೋರ್ಟ್ಗೆ ಹಿರಿಯ ವಕೀಲ ಸೌರಭ್ ಕಿರ್ಪಾಲ್ ಅವರನ್ನು ನ್ಯಾಯಮೂರ್ತಿಯನ್ನಾಗಿ ನೇಮಿಸಲು ಶಿಫಾರಸು ಮಾಡುವಾಗ ಸರ್ಕಾರ ರವಾನಿಸಿದ ಸಂಶೋಧನೆ ಮತ್ತು ವಿಶ್ಲೇಷಣಾ ವಿಭಾಗದ ಪತ್ರಗಳನ್ನು ಉಲ್ಲೇಖಿಸಿದ ನಂತರ ಸಚಿವರು ಈ ಹೇಳಿಕೆಗಳನ್ನು ನೀಡಿದ್ದರು.
ವಕೀಲ ಆರ್ ಜಾನ್ ಸತ್ಯನ್ ಅವರನ್ನು ಮದ್ರಾಸ್ ಹೈಕೋರ್ಟಿನಲ್ಲಿ ನ್ಯಾಯಾಧೀಶರನ್ನಾಗಿ ನೇಮಿಸುವ ಕುರಿತು ಗುಪ್ತಚರ ಬ್ಯೂರೋ ನೀಡಿದ ವರದಿಯನ್ನೂ ಕೊಲಿಜಿಯಂ ಉಲ್ಲೇಖಿಸಿತ್ತು.