ಶಾಲೆಗಳಲ್ಲಿ ಸಾತ್ವಿಕ ಆಹಾರ ನೀಡುವ ಚಿಂತನೆಯಿಲ್ಲ, ಆದರೆ ಸರ್ಕರ ನೈತಿಕ ಶಿಕ್ಷಣ ನೀಡುವ ಉದ್ದೇಶವಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಸ್ಪಷ್ಟನೆ ನೀಡಿದ್ದಾರೆ.
ವಿಧಾನ ಪರಿಷತ್ನಲ್ಲಿ ಜೆಡಿಎಸ್ ಶಾಸಕ ಕೆ.ಎಸ್ ತಿಪ್ಪೇಸ್ವಾಮಿಯವರ ಪ್ರಶ್ನೆಗೆ ಉತ್ತರಿಸಿದ ಅವರು, “ಸಾತ್ವಿಕ ಆಹಾರ ಮತ್ತು ನೈತಿಕ ಶಿಕ್ಷಣ ಎರಡನ್ನೂ ಒಟ್ಟಿಗೆ ನೋಡುವುದು ಸರಿಯಲ್ಲ. ಸರ್ವಧರ್ಮ ಚಿಂತಕರ ಸಭೆಯಲ್ಲಿ ನೈತಿಕ ಶಿಕ್ಷಣ ನೀಡಬೇಕೆಂಬ ಒಕ್ಕೊರಲ ಆಗ್ರಹ ಕೇಳಿಬಂದಿದೆ. ಕೆಲವರು ಸಾತ್ವಿಕ ಆಹಾರ ನೀಡಬೇಕೆಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಆಧಾರದಲ್ಲಿ ನಾವು ನೈತಿಕ ಶಿಕ್ಷಣ ನೀಡುವ ಉದ್ದೇಶ ಹೊಂದಿದ್ದೇವೆ” ಎಂದಿದ್ದಾರ.
ಶಾಲಾ ಶಿಕ್ಷಣದಲ್ಲಿ ಮೌಲ್ಯ ಶಿಕ್ಷಣ ಶಿಕ್ಷಣವನ್ನು ಅನುಷ್ಠಾನಗೊಳಿಸುವುದರ ಕುರಿತು ವಿಧಾನಸೌಧದಲ್ಲಿ ನಡೆದಿದ್ದ ಸಭೆಯಲ್ಲಿ ಸಭೆಯಲ್ಲಿ ಮಠಾಧೀಶರು ಮಾಂಸಾಹಾರದ ಮೇಲೆ ಮತ್ತೆ ಪ್ರಹಾರ ನಡೆಸಿದ್ದರು. ಮಕ್ಕಳಿಗೆ ಸಾತ್ವಿಕ ಆಹಾರ ನೀಡಬೇಕು, ಅಂಗಡಿಗಳ ಮುಂದೆ ಮಾಂಸ ನೇತು ಹಾಕುವುದನ್ನು ಬ್ಯಾನ್ ಮಾಡಬೇಕೆಂಬ ಆಗ್ರಹಗಳು ಕೇಳಿಬಂದಿದ್ದವು. ಆದರೆ ಇದಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ಕಂಡುಬಂದಿತ್ತು.
ಸಭೆಯಲ್ಲಿ ಸೋಂದಾ ಸ್ವರ್ಣವಲ್ಲಿ ಮಠದ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಮಾತನಾಡಿ, “ಆಹಾರಕ್ಕೂ ವ್ಯಕ್ತಿತ್ವಕ್ಕೂ ಸಂಬಂಧವಿದೆ. ಕೆಲವು ಆಹಾರಗಳು ಮಕ್ಕಳಲ್ಲಿ ನಕರಾತ್ಮಕ ಮನೋಭಾವ ಬೆಳೆಸುತ್ತವೆ. ಹಾಗಾಗಿ ಮಕ್ಕಳಿಗೆ ಸಾತ್ವಿಕ ಆಹಾರ ನೀಡಬೇಕು ಮತ್ತು ಭಗವದ್ಗೀತೆಯನ್ನು ಮುಕ್ತವಾಗಿ ಬೋಧಿಸಬೇಕು” ಎಂದು ಪ್ರತಿಪಾದಿಸಿದ್ದರು.
ಮಕ್ಕಳು ಅಪೌಷ್ಠಿಕತೆಯಿಂದ ನರಳುತ್ತಿರುವ ಸಂದರ್ಭದಲ್ಲಿ ಮಾಂಸಾಹಾರದಂತಹ ಪೌಷ್ಠಿಕ ಆಹಾರದ ಮೇಲಿನ ಸ್ವಾಮೀಜಿಗಳ ಪ್ರಹಾರವನ್ನು ಹಲವಾರು ಜನ ಸಾಮಾಜಿಕ ಜಾಲತಾಣಗಳಲ್ಲಿ ಖಂಡಿಸಿದ್ದರು. ಹಾಗಾಗಿ ಸರ್ಕಾರ ಸಸ್ಯಾಹಾರಿ ಆಹಾರ ಕಡ್ಡಾಯ ಮಾಡುವುದರಿಂದ ಹಿಂದೆ ಸರಿದು, ನೈತಿಕ ಶಿಕ್ಷಣ ನೀಡುವುದಾಗಿ ಹೇಳಿಕೆ ನೀಡುತ್ತಿದೆ.
ಇದನ್ನೂ ಓದಿ: ನೈತಿಕತೆಗೂ, ಮೊಟ್ಟೆ-ಮಾಂಸದಂಗಡಿಗೂ ಎತ್ತನಿಂದೆತ್ತ ಸಂಬಂಧವಯ್ಯಾ?