Homeಕರ್ನಾಟಕನೈತಿಕತೆಗೂ, ಮೊಟ್ಟೆ-ಮಾಂಸದಂಗಡಿಗೂ ಎತ್ತನಿಂದೆತ್ತ ಸಂಬಂಧವಯ್ಯಾ?

ನೈತಿಕತೆಗೂ, ಮೊಟ್ಟೆ-ಮಾಂಸದಂಗಡಿಗೂ ಎತ್ತನಿಂದೆತ್ತ ಸಂಬಂಧವಯ್ಯಾ?

- Advertisement -
- Advertisement -

ಮಕ್ಕಳಿಗೆ ನೈತಿಕ ಮೌಲ್ಯಗಳನ್ನು ಕಲಿಸುವುದು ಹೇಗೆ ಎಂದು ಮಕ್ಕಳ ಜತೆಗೆ ಯಾವುದೇ ಸಂಪರ್ಕ ಇಲ್ಲದ ಧಾರ್ಮಿಕ ನಾಯಕರನ್ನು ಸರಕಾರ ಕೇಳಿದೆ. ಹಾಗೆ ಕೇಳುವುದಕ್ಕೆಂದು ಸರಕಾರ ಏರ್ಪಡಿಸಿದ್ದ ಸಮಾಲೋಚನಾ ಸಭೆಯಲ್ಲಿ ಭಾಗವಹಿಸಿರುವ ಕೆಲವರು ಮಕ್ಕಳಿಗೆ ಸಾತ್ವಿಕ ಆಹಾರ ನೀಡಿ ಎಂದಿದ್ದಾರೆ. ಶಾಲೆಗಳ ಪಕ್ಕ ಮಾಂಸದ ಅಂಗಡಿ ಬೇಡ ಎಂದಿದ್ದಾರೆ. ಅದರಲ್ಲೂ ಮಠವೊಂದರ ಮುಖ್ಯಸ್ಥರೊಬ್ಬರು ಇನ್ನೂ ಸ್ಪಷ್ಟವಾಗಿ ’ಮಕ್ಕಳ ಮೇಲೆ ಹಿಂಸೆಯ ಪ್ರಭಾವವನ್ನು ಕಡಿಮೆ ಮಾಡಬೇಕಾಗಿದೆ. ಮಕ್ಕಳ ಮುಂದೆ ಪ್ರಾಣಿವಧೆ ಮಾಡಬಾರದು ಮತ್ತು ಮಾಂಸವನ್ನು ಅಂಗಡಿಗಳ ಮುಂದೆ ನೇತುಹಾಕುವುದನ್ನು ಸ್ಥಗಿತಗೊಳಿಸಬೇಕು ಅಥವಾ ಅದನ್ನು ಮರೆಮಾಚಬೇಕು ಎಂದಿದ್ದಾರೆ’ ಎಂದು ವರದಿಯಾಗಿದೆ.

ಸದರಿ ಮಠದ ಮುಖ್ಯಸ್ಥರಿಗೆ ಹಿಂಸೆಯ ಬಗ್ಗೆ ಇರುವ ಆತಂಕವನ್ನು ಮೆಚ್ಚಬೇಕೋ ಅಥವಾ ಹಿಂಸೆಯ ಬಗ್ಗೆ ಅವರಿಗೆ ಇರುವ ಮರುಕ ಹೀಗೆ ಅರೆಬರೆಯಾಗಿರುವುದು ಯಾಕೆ ಅಂತ ಪ್ರಶ್ನಿಸಬೇಕೋ ಅರ್ಥವಾಗುತ್ತಿಲ್ಲ. ಯಾಕೆಂದರೆ, ಭಾರತೀಯ ಸಮಾಜದಲ್ಲಿ ಬಹುತೇಕ ಮಕ್ಕಳು ಮಾಂಸಾಹಾರಿ ಕುಟುಂಬದಿಂದ ಬಂದವರಿರುತ್ತಾರೆ. ಆಹಾರಕ್ಕಾಗಿ ಪ್ರಾಣಿಗಳನ್ನು ಕೊಲ್ಲುವುದನ್ನು ಅವರು ಪ್ರತ್ಯಕ್ಷವಾಗಿ ನೋಡಿರುತ್ತಾರೆ ಅಥವಾ ಪರೋಕ್ಷವಾಗಿ ಊಹಿಸಿರುತ್ತಾರೆ. ಆದುದರಿಂದ ಮಾಂಸದ ಅಂಗಡಿಗಳಲ್ಲಿ ಮಾಂಸವನ್ನು ನೇತುಹಾಕಿದ್ದನ್ನು ನೋಡಿ ಅವರೆಲ್ಲ ಹಿಂಸಾತ್ಮಕ ಮನೋಭಾವವನ್ನು ರೂಢಿಸಿಕೊಳ್ಳುತ್ತಾರೆ ಎನ್ನುವುದು ಸ್ವಲ್ಪವೂ ಅರ್ಥವಿಲ್ಲದ್ದು. ಮಾಂಸಾಹಾರದ ಪರಿಸರದಿಂದ ಬಂದ ಮಕ್ಕಳು ಹೆಚ್ಚು ಹಿಂಸಾತ್ಮಕವಾಗಿ ಬೆಳೆಯುತ್ತಾರೆ ಎನ್ನುವುದಕ್ಕೆ ಯಾವುದೇ ಪುರಾವೆ ಇಲ್ಲ. ಇನ್ನು ಮಾಂಸಾಹಾರ ಸೇವಿಸದ ಮಕ್ಕಳು ತಮ್ಮ ಪರಿಸರದಲ್ಲಿ ಮಾಂಸಾಹಾರಕ್ಕೆ ಸಂಬಂಧಿಸಿದ ವಿವಿಧ ಚಿತ್ರಣಗಳನ್ನು ತಲತಲಾಂತರಗಳಿಂದ ನೋಡಿಕೊಂಡೇ ಬೆಳೆದಿದ್ದಾರೆ. ಅವರಲ್ಲಿ ಕೆಲವರು ಬೆಳೆದ ನಂತರ ಹಿಂಸೆಯಲ್ಲಿ ತೊಡಗುವುದೋ ಅಥವಾ ಹಿಂಸೆಯನ್ನು ಪ್ರತಿಪಾದಿಸುವುದೋ ಇತ್ಯಾದಿ ಮಾಡಬಹುದು. ಆದರೆ, ಹಾಗೆ ಆಗುವಲ್ಲಿ ಅವರು ಕಂಡ ಮಾಂಸಾಹಾರಕ್ಕೆ ಸಂಬಂಧಿಸಿದ ದೃಶ್ಯಾವಳಿಗಳು ಪ್ರಭಾವ ಬೀರಿವೆ ಎನ್ನುವುದಕ್ಕೆ ಏನಾದರೂ ಪುರಾವೆ ಇದೆಯೇ? ಮಾಂಸಾಹಾರ ವ್ಯಾಪಕವಾಗಿರುವ, ಹುಡುಕಿದರೂ ಒಂದೇ ಒಂದು ’ಶುದ್ಧ ಸಸ್ಯಾಹಾರಿ’ ಹೋಟೆಲ್ ಸಿಗದ ದೇಶಗಳಲ್ಲಿ ನೆಲೆಸಿರುವ ಈ ಸಸ್ಯಾಹಾರಿಗಳ ಮಕ್ಕಳು, ಮರಿಮಕ್ಕಳೆಲ್ಲಾ ಹಿಂಸಾಪ್ರವೃತ್ತಿಯನ್ನು ಮೈಗೂಡಿಸಿಕೊಂಡು ಬೆಳೆದಿದ್ದಾರೆಯೇ? ಒಟ್ಟಿನಲ್ಲಿ, ನೈತಿಕ ವಿದ್ಯಾಭ್ಯಾಸಕ್ಕೆ ಸಂಬಂಧಿಸಿದ ಅಂದಿನ ಚರ್ಚೆಗೆ ಸಂಬಂಧವೇ ಇಲ್ಲದ ಆಹಾರ ಪದ್ಧತಿಯ ವಿಚಾರದ ಕುರಿತಾದ ಹೇಳಿಕೆಯೊಂದನ್ನು ನೀಡುವುದರ ಹಿಂದಿನ ಯೋಚನೆ ಏನಿತ್ತು? ಅದೇ ಸಭೆಯಲ್ಲಿ ಶಾಲೆಯಲ್ಲಿ ಮಕ್ಕಳಿಗೆ ಮೊಟ್ಟೆ ನೀಡುವುದು ಕೂಡಾ ತಪ್ಪು ಎನ್ನುವ ಅಭಿಪ್ರಾಯಗಳು ಮತ್ತೊಮ್ಮೆ ಪ್ರತಿಧ್ವನಿಸಿದವು. ಒಟ್ಟಿನಲ್ಲಿ ಮಾಂಸಾಹಾರಕ್ಕೂ ಹಿಂಸೆಗೂ, ಮಾಂಸಾಹಾರಕ್ಕೂ ಅನೈತಿಕತೆಗೂ ನಂಟು ಕಲ್ಪಿಸುವ ಚಿಂತನೆ ಅಲ್ಲಿ ಕೇಳಿಸಿದ ಬಹುತೇಕ ಸಲಹೆಗಳ ಹಿನ್ನೆಲೆಯಲ್ಲಿ ಕೆಲಸ ಮಾಡಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ.

ಇರಲಿ. ಹಾಗೆ ಹೇಳಿದ ಆ ಮಠದ ಮುಖ್ಯಸ್ಥರ ಜಿಲ್ಲೆಯಲ್ಲಿ ಮತ್ತು ಪಕ್ಕದ ಜಿಲ್ಲೆಯಲ್ಲಿ ಆಗಾಗ ಮಾನವ ಕ್ರೌರ್ಯದ ಪರಮಾವಧಿ ಪ್ರದರ್ಶನ ನಡೆಯುತ್ತದೆ. ಮನುಷ್ಯರ ಮೇಲೆ ಸತ್ಯವೋ-ಸುಳ್ಳೋ ಆಪಾದನೆಗಳನ್ನು ಹೊರಿಸಿ ಮನಬಂದಂತೆ ಥಳಿಸಲಾಗುತ್ತದೆ. ಥಳಿತಕ್ಕೊಳಗಾದ ವ್ಯಕ್ತಿಗಳನ್ನು ಬೆತ್ತಲೆಗೊಳಿಸಿ ಅವರ ಮೈಮೇಲೆ ರಕ್ತ ಹೆಪ್ಪುಗಟ್ಟಿದ ಅಥವಾ ಒಸರುವ ಗಾಯಗಳ ವಿಡಿಯೋ ಮತ್ತು ಫೋಟೋಗಳನ್ನು ವೈರಲ್ ಮಾಡಲಾಗುತ್ತದೆ. ಈ ದೃಶ್ಯಾವಳಿಗಳನ್ನೆಲ್ಲಾ ಯಾವುದೇ ಅಳುಕಿಲ್ಲದೆ ಟಿವಿ ಮಾಧ್ಯಮಗಳು ತೋರಿಸುತ್ತವೆ. ದೃಶ್ಯಗಳ ಜತೆಗೆ ಹಿಂಸಾತ್ಮಕವಾದ ಭಾಷೆಯಲ್ಲಿ ವಿವರಣೆ ನೀಡುತ್ತವೆ. ಟಿವಿ ಚಾನೆಲ್‌ಗಳಲ್ಲಿ ಕುಳಿತು ಕೈಕಡಿಯಬೇಕಿತ್ತು, ಕಾಲು ಮುರಿಯಬೇಕಿತ್ತು, ನೇಣು ಹಾಕಬೇಕಿತ್ತು ಎಂಬಿತ್ಯಾದಿ ಭಾಷೆ ಬಳಸುವ ಟಿವಿ ಆಂಕರ್‌ಗಳೆಲ್ಲಾ ಯಾವ ರೀತಿಯ ಆಹಾರಕ್ರಮಗಳಿಂದ ಪ್ರಭಾವಿತರಾದವರು ಅಂತ ಒಂದು ಸಮೀಕ್ಷೆ ನಡೆದರೆ ಉತ್ತಮ.

ಮಾಂಸದಂಗಡಿಗಳ ವಿಚಾರವಾಗಿ ಮಾತನಾಡಿದ ಅದೇ ಖಾಸಗಿ ಮಠದ ಮುಖ್ಯಸ್ಥರ ಜಿಲ್ಲೆಯಲ್ಲಿ ಮತ್ತು ಪಕ್ಕದ ಜಿಲ್ಲೆಯಲ್ಲಿ ಕೊರೊನಾ ಲಾಕ್‌ಡೌನ್ ಕಾಲದಲ್ಲಿ ಪೊಲೀಸರು ಅಮಾಯಕರಿಗೆ ಥಳಿಸುತಿದ್ದ ದೃಶ್ಯಗಳನ್ನು ಟಿವಿ ಚಾನೆಲ್‌ಗಳು ಯಥೇಚ್ಛವಾಗಿ ಪ್ರಸಾರ ಮಾಡಿದ್ದವು. ಪೊಲೀಸರು ಬಿಡಿ, ಒಬ್ಬ ಸಹಾಯಕ ಆಯುಕ್ತನೇ ಲಾಠಿ ಹಿಡಿದು ಲಾಕ್‌ಡೌನ್ ಕಾಲದಲ್ಲಿ ಯಾವುದೋ ಕಾರಣಕ್ಕೆ ರಸ್ತೆಗಿಳಿದ ವ್ಯಕ್ತಿಯೋರ್ವರನ್ನು ಬಡಿಯುವ ದೃಶ್ಯವನ್ನು ದೇಶಾದ್ಯಂತ ಜನ ಕಣ್ತುಂಬಿಕೊಡಿದ್ದೂ ಆಗಿತ್ತು. ಇವ್ಯಾವುದರ ಬಗ್ಗೆಯೂ ಆ ಖಾಸಗಿ ಮಠದ ಮುಖ್ಯಸ್ಥರಿಂದ ಒಂದೇ ಒಂದು ಪ್ರತಿಕ್ರಿಯೆ ಬಂದದ್ದಿಲ್ಲ. ಪ್ರತಿದಿನ ಭರಪೂರ ಹರಿದಾಡುವ ಹಿಂಸೆಯ ಪರಾಕಾಷ್ಠೆಯ ಇಂತಹ ದೃಶ್ಯಾವಳಿಗಳು ಮಕ್ಕಳ ಮನಸ್ಸಿನಲ್ಲಿ ಯಾವ ರೀತಿಯ ಪರಿಣಾಮ ಬೀರಬಹುದು ಎಂದು ಅವರು ಯೋಚಿಸಿದ ಹಾಗಿಲ್ಲ. ಆ ರೀತಿಯ ದಾಳಿಗೊಳಗಾಗುವ ವ್ಯಕ್ತಿಗಳ ಕುರಿತು ಅವರಿಗೆ ಒಂದಷ್ಟು ಮಾನವ ಸಹಜ ಅನುಕಂಪ-ಮರುಕ ಹುಟ್ಟಿದ ಹಾಗಿಲ್ಲ. ಅಂದರೆ, ಮನುಷ್ಯ ಮನುಷ್ಯ ಮೇಲೆ ವಿನಾಕಾರಣ ಎಸಗುವ ಕ್ರೌರ್ಯ ಅವರ ಪ್ರಕಾರ ಮಕ್ಕಳ ಮೇಲೆ ಯಾವ ಪರಿಣಾಮವನ್ನೂ ಬೀರುವುದಿಲ್ಲ. ಮನುಷ್ಯನ ಉಗಮ ಆದಂದಿನಿಂದಲೂ ಇರುವ ಆಹಾರ ಕ್ರಮಗಳು ಮತ್ತು ಆ ಆಹಾರ ಕ್ರಮಗಳ ಭಾಗವಾಗಿ ಮಾರಾಟವಾಗುವ ಪ್ರಾಣಿಗಳ ಮಾಂಸವನ್ನು ಕಂಡ ಮಕ್ಕಳು ಅವರ ಪ್ರಕಾರ ಹಿಂಸಾ ಪ್ರವೃತ್ತಿ ಬೆಳೆಸಿಕೊಳ್ಳಬಹುದು! ಅವರ ಮಾತಿನಿಂದ ಪ್ರೇರಣೆ ಪಡೆದ ಮಂದಿ ಇನ್ನು ಮುಂದೆ ಅವರ ಜಿಲ್ಲೆ ಮತ್ತು ಸುತ್ತಲ ಪ್ರದೇಶದ ಅಂಗಡಿಗಳಲ್ಲಿ ಮಾಂಸ ಮಾರಾಟ ಮಾಡುವುದಿದ್ದರೆ ಅದು ಹೀಗೆ ಆಗಬೇಕು, ಹಾಗೆ ಆಗಬೇಕು ಎಂದು ಹೊಸ ಅನೈತಿಕ ಪೊಲೀಸ್‌ಗಿರಿ ಯೊಂದನ್ನು ಪ್ರಾರಂಭಿಸದಿದ್ದರೆ ಸಾಕು.

ಇದನ್ನೂ ಓದಿ: ಮಾಂಸಾಹಾರದ ಮೇಲೆ ಮತ್ತೆ ಪ್ರಹಾರ: ಮಠಾಧೀಶರ ಸಲಹೆಗಳಿಗೆ ತೀವ್ರ ವಿರೋಧ

ಇನ್ನೂ ಒಂದಿಬ್ಬರು ಮಠಗಳ ಮುಖ್ಯಸ್ಥರುಗಳು ಅಲ್ಲಿ ವ್ಯಕ್ತಪಡಿಸಿರುವ ಅಭಿಪ್ರಾಯಗಳು ಮತ್ತಷ್ಟು ಕುತೂಹಲಕಾರಿಯಾಗಿವೆ. ’ಶಿಕ್ಷಕರು ಆದರ್ಶಪ್ರಾಯರಾಗಿದ್ದರೆ ಮಕ್ಕಳು ಅವರನ್ನು ನೋಡಿ ಕಲಿಯುತ್ತಾರೆ’ ಎಂದು ಒಬ್ಬರು ಹೇಳಿದ್ದಾರೆ. ಇನ್ನೋರ್ವ ಮಠಾಧಿಪತಿಗಳು ಶಿಕ್ಷಕರು ಮತ್ತು ಪೋಷಕರಿಗೆ ನೈತಿಕತೆ ಬಗ್ಗೆ ಕಲಿಸಬೇಕಾದ ಪರಿಸ್ಥಿತಿ ಇಂದು ಸೃಷ್ಟಿಯಾಗಿದೆ ಎಂದಿದ್ದಾರೆ. ಸರಿ ಮಕ್ಕಳೇನೋ ಶಿಕ್ಷಕರು ಮತ್ತು ಪೋಷಕರನ್ನು ನೋಡಿ ಕಲಿಯುತ್ತಾರೆ ಎಂದಿಟ್ಟುಕೊಳ್ಳೋಣ. ಹಾಗಾದರೆ, ಶಿಕ್ಷಕರು ಮತ್ತು ಪೋಷಕರು ತಮ್ಮ ನೈತಿಕ ಪಾಠಗಳನ್ನು ಎಲ್ಲಿಂದ ಕಲಿತುಕೊಳ್ಳಬೇಕು? ಅವರೆಲ್ಲಾ ಆಕಾಶದಿಂದ ಉದುರಿದವರೇ? ಅಥವಾ ಅವರು ಶೂನ್ಯದತ್ತ ದೃಷ್ಟಿಸಿ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಲು ಸಾಧ್ಯವೇ? ಶಿಕ್ಷಕರೂ ಸೇರಿದಂತೆ ಸಮಾಜದ ಸಮಸ್ತರಿಗೂ ನೈತಿಕವಾಗಿ ಆದರ್ಶಪ್ರಾಯರಾಗಿರಬೇಕಾದ ಧಾರ್ಮಿಕ ಮುಖಂಡರುಗಳು ನಮ್ಮ ಸಮಾಜದಲ್ಲಿ ಎಂತಹ ಮೌಲ್ಯಗಳನ್ನು ಅನುಸರಿಸುತ್ತಿದ್ದಾರೆ, ಎಂತಹ ಮಾದರಿಯನ್ನು ಮಕ್ಕಳು, ಪೋಷಕರು ಮತ್ತು ಶಿಕ್ಷಕರಿಗೆ ಒದಗಿಸುತ್ತಿದ್ದಾರೆ ಎನ್ನುವ ಪ್ರಶ್ನೆಯನ್ನು ಕೂಡಾ ಎತ್ತಬೇಕಲ್ಲ. ಶಿಕ್ಷಕರು ಆದರ್ಶಪ್ರಾಯರಾಗಿರಬೇಕು ಎಂದು ಅಲ್ಲಿ ಹೇಳಿರುವ ಮಠದ ಮುಖ್ಯಸ್ಥರೊಬ್ಬರು ಅತ್ಯಾಚಾರ ಆರೋಪಗಳನ್ನು ಎದುರಿಸಿದ್ದವರು. ಆ ಆಪಾದನೆಗಳಿಗೆ ಸಂಬಂಧಪಟ್ಟ ರೋಚಕ ವರದಿಗಳು, ವಿಡಿಯೋ ಹೇಳಿಕೆಗಳು ಯಥೇಚ್ಛವಾಗಿ ಇಂಟರ್ನೆಟ್‌ನಲ್ಲಿ ಲಭಿಸುತ್ತವೆ. ಮಕ್ಕಳಿಗೂ ಲಭಿಸುತ್ತವೆ. ಶಿಕ್ಷಕರಿಗೂ ಲಭಿಸುತ್ತವೆ. ಅಲ್ಲಿ ಸೇರಿದ್ದ ಅಷ್ಟೂ ಧಾರ್ಮಿಕ ಮುಖಂಡರಲ್ಲಿ ಎಲ್ಲರೂ ಶಿಕ್ಷಕರು ಮತ್ತು ಪೋಷಕರು ಸರಿಯಾಗಿರಬೇಕೆಂದು ಹೇಳಿದರೇ ಹೊರತು, ಒಬ್ಬರೂ ಈ ಸಮಾಜಕ್ಕೆ ನೈತಿಕ ದಾರಿದೀಪಗಳಾಗಿ ಕೆಲಸ ಮಾಡಲೆಂದೇ ಇರುವ ಧಾರ್ಮಿಕ ವ್ಯಕ್ತಿಗಳು ಕೂಡಾ ನೈತಿಕ ಹಾದಿಯಿಂದ ವಿಚಲಿತರಾಗಬಾರದು ಅಂತ ಹೇಳಿರುವುದು ವರದಿಯಾಗಿಲ್ಲ. ಸರಕಾರ ನೈತಿಕ ಶಿಕ್ಷಣದ ವಿಚಾರದಲ್ಲಿ ಸಲಹೆ ಕೇಳಲು ವಿಧಾನಸೌಧಕ್ಕೆ ಕರೆಸಿಕೊಳ್ಳುವ ವ್ಯಕ್ತಿಗಳು ನಿಜಕ್ಕೂ ನೈತಿಕತೆಯ ವಿಚಾರದಲ್ಲಿ ಸಮಾಜಕ್ಕೆ ಮಾದರಿಯಾಗಿರಬೇಕು. ಅತ್ಯಾಚಾರ ಆರೋಪಹೊತ್ತವರು, ಅತ್ಯಾಚಾರ ಪ್ರಕರಣದ ಆರೋಪಿಗಳ ಪರ ಹೇಳಿಕೆ ನೀಡುವವರು, ಭೂಕಬಳಿಕೆ ಆರೋಪಗಳನ್ನು ಎದುರಿಸುತ್ತಿರುವವರು, ಸಾಂವಿಧಾನಿಕ ಮೌಲ್ಯಗಳಿಗೆ ವಿರುದ್ಧವಾದ ಸಾರ್ವಜನಿಕ ಹೇಳಿಕೆ ನೀಡುತ್ತಿರುವವರನ್ನು ಅಥವಾ ನೀಡುತ್ತಿದ್ದವರ ಪರಂಪರೆಯಿಂದ ಬಂದವರನ್ನೆಲ್ಲಾ ಯಾವುದೇ ಸರಕಾರ ನಡೆಸುವ ಇಂತಹ ಸಮಾಲೋಚನಾ ಸಭೆಗಳಿಂದ ದೂರ ಇರಿಸಿದರೆ ಅದುವೇ ಮಕ್ಕಳಿಗೆ, ಪೋಷಕರಿಗೆ ಮತ್ತು ಶಿಕ್ಷಕರಿಗೆ ಸರಕಾರ ರವಾನಿಸಬಹುದಾದ ಬಲುದೊಡ್ಡ ನೈತಿಕ ಸಂದೇಶವಾಗುತ್ತದೆ.

ಮಕ್ಕಳಿಗೆ ಈಗಿನ ಶಿಕ್ಷಣದಲ್ಲಿ ನೈತಿಕ ಪಾಠಗಳು ಕಡಿಮೆ ಸಿಗುತ್ತವೆ ಅಂತ ಏನೂ ಅನ್ನಿಸುವುದಿಲ್ಲ. ಒಂದು ವೇಳೆ ಹಾಗೇನಾದರೂ ಆಗಿದ್ದರೆ, ಮಕ್ಕಳಿಗೆ ಭಾರತದ ಸಂವಿಧಾನ ಪ್ರತಿಪಾದಿಸುವ ಮೌಲ್ಯಗಳನ್ನು ಸರಿಯಾಗಿ ಮನದಟ್ಟು ಮಾಡಿಕೊಟ್ಟರೆ ಸಾಕು. ಅದಕ್ಕಿಂತ ದೊಡ್ಡ ಯಾವ ನೈತಿಕ ಪಾಠಗಳೂ ಬೇಕಾಗಿಲ್ಲ. ಸಂವಿಧಾನ ಕಲಿಸಿಕೊಡುವುದು ಹೇಗೆ ಎನ್ನುವ ಬಗ್ಗೆ ಶಿಕ್ಷಕರಿಗೆ ತರಬೇತಿ ನೀಡಿದರೆ ಶಿಕ್ಷಕರ ನೈತಿಕ ಪ್ರಜ್ಞೆಯೂ ಜಾಗೃತವಾಗುತ್ತದೆ, ಮಕ್ಕಳಲ್ಲಿ ನೈತಿಕ ಪ್ರಜ್ಞೆ ಬೆಳೆಸುವುದು ಹೇಗೆ ಅಂತಲೂ ಅವರಿಗೆ ತಿಳಿಯುತ್ತದೆ. ಆಹಾರ ಪದ್ಧತಿಗೂ ಹಿಂಸೆಗೂ, ಆಹಾರ ಪದ್ಧತಿಗೂ ನೈತಿಕತೆಗೂ ನಂಟು ಬೆಸೆಯುವ ಕೆಲವರ ಚಿಂತನೆಯನ್ನು ನಾಗರಿಕ ಸಮಾಜ ಪ್ರಶ್ನಿಸಬೇಕಾಗಿದೆ ಮತ್ತು ಪ್ರತಿಭಟಿಸಬೇಕಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....