Homeಕರ್ನಾಟಕನೈತಿಕತೆಗೂ, ಮೊಟ್ಟೆ-ಮಾಂಸದಂಗಡಿಗೂ ಎತ್ತನಿಂದೆತ್ತ ಸಂಬಂಧವಯ್ಯಾ?

ನೈತಿಕತೆಗೂ, ಮೊಟ್ಟೆ-ಮಾಂಸದಂಗಡಿಗೂ ಎತ್ತನಿಂದೆತ್ತ ಸಂಬಂಧವಯ್ಯಾ?

- Advertisement -
- Advertisement -

ಮಕ್ಕಳಿಗೆ ನೈತಿಕ ಮೌಲ್ಯಗಳನ್ನು ಕಲಿಸುವುದು ಹೇಗೆ ಎಂದು ಮಕ್ಕಳ ಜತೆಗೆ ಯಾವುದೇ ಸಂಪರ್ಕ ಇಲ್ಲದ ಧಾರ್ಮಿಕ ನಾಯಕರನ್ನು ಸರಕಾರ ಕೇಳಿದೆ. ಹಾಗೆ ಕೇಳುವುದಕ್ಕೆಂದು ಸರಕಾರ ಏರ್ಪಡಿಸಿದ್ದ ಸಮಾಲೋಚನಾ ಸಭೆಯಲ್ಲಿ ಭಾಗವಹಿಸಿರುವ ಕೆಲವರು ಮಕ್ಕಳಿಗೆ ಸಾತ್ವಿಕ ಆಹಾರ ನೀಡಿ ಎಂದಿದ್ದಾರೆ. ಶಾಲೆಗಳ ಪಕ್ಕ ಮಾಂಸದ ಅಂಗಡಿ ಬೇಡ ಎಂದಿದ್ದಾರೆ. ಅದರಲ್ಲೂ ಮಠವೊಂದರ ಮುಖ್ಯಸ್ಥರೊಬ್ಬರು ಇನ್ನೂ ಸ್ಪಷ್ಟವಾಗಿ ’ಮಕ್ಕಳ ಮೇಲೆ ಹಿಂಸೆಯ ಪ್ರಭಾವವನ್ನು ಕಡಿಮೆ ಮಾಡಬೇಕಾಗಿದೆ. ಮಕ್ಕಳ ಮುಂದೆ ಪ್ರಾಣಿವಧೆ ಮಾಡಬಾರದು ಮತ್ತು ಮಾಂಸವನ್ನು ಅಂಗಡಿಗಳ ಮುಂದೆ ನೇತುಹಾಕುವುದನ್ನು ಸ್ಥಗಿತಗೊಳಿಸಬೇಕು ಅಥವಾ ಅದನ್ನು ಮರೆಮಾಚಬೇಕು ಎಂದಿದ್ದಾರೆ’ ಎಂದು ವರದಿಯಾಗಿದೆ.

ಸದರಿ ಮಠದ ಮುಖ್ಯಸ್ಥರಿಗೆ ಹಿಂಸೆಯ ಬಗ್ಗೆ ಇರುವ ಆತಂಕವನ್ನು ಮೆಚ್ಚಬೇಕೋ ಅಥವಾ ಹಿಂಸೆಯ ಬಗ್ಗೆ ಅವರಿಗೆ ಇರುವ ಮರುಕ ಹೀಗೆ ಅರೆಬರೆಯಾಗಿರುವುದು ಯಾಕೆ ಅಂತ ಪ್ರಶ್ನಿಸಬೇಕೋ ಅರ್ಥವಾಗುತ್ತಿಲ್ಲ. ಯಾಕೆಂದರೆ, ಭಾರತೀಯ ಸಮಾಜದಲ್ಲಿ ಬಹುತೇಕ ಮಕ್ಕಳು ಮಾಂಸಾಹಾರಿ ಕುಟುಂಬದಿಂದ ಬಂದವರಿರುತ್ತಾರೆ. ಆಹಾರಕ್ಕಾಗಿ ಪ್ರಾಣಿಗಳನ್ನು ಕೊಲ್ಲುವುದನ್ನು ಅವರು ಪ್ರತ್ಯಕ್ಷವಾಗಿ ನೋಡಿರುತ್ತಾರೆ ಅಥವಾ ಪರೋಕ್ಷವಾಗಿ ಊಹಿಸಿರುತ್ತಾರೆ. ಆದುದರಿಂದ ಮಾಂಸದ ಅಂಗಡಿಗಳಲ್ಲಿ ಮಾಂಸವನ್ನು ನೇತುಹಾಕಿದ್ದನ್ನು ನೋಡಿ ಅವರೆಲ್ಲ ಹಿಂಸಾತ್ಮಕ ಮನೋಭಾವವನ್ನು ರೂಢಿಸಿಕೊಳ್ಳುತ್ತಾರೆ ಎನ್ನುವುದು ಸ್ವಲ್ಪವೂ ಅರ್ಥವಿಲ್ಲದ್ದು. ಮಾಂಸಾಹಾರದ ಪರಿಸರದಿಂದ ಬಂದ ಮಕ್ಕಳು ಹೆಚ್ಚು ಹಿಂಸಾತ್ಮಕವಾಗಿ ಬೆಳೆಯುತ್ತಾರೆ ಎನ್ನುವುದಕ್ಕೆ ಯಾವುದೇ ಪುರಾವೆ ಇಲ್ಲ. ಇನ್ನು ಮಾಂಸಾಹಾರ ಸೇವಿಸದ ಮಕ್ಕಳು ತಮ್ಮ ಪರಿಸರದಲ್ಲಿ ಮಾಂಸಾಹಾರಕ್ಕೆ ಸಂಬಂಧಿಸಿದ ವಿವಿಧ ಚಿತ್ರಣಗಳನ್ನು ತಲತಲಾಂತರಗಳಿಂದ ನೋಡಿಕೊಂಡೇ ಬೆಳೆದಿದ್ದಾರೆ. ಅವರಲ್ಲಿ ಕೆಲವರು ಬೆಳೆದ ನಂತರ ಹಿಂಸೆಯಲ್ಲಿ ತೊಡಗುವುದೋ ಅಥವಾ ಹಿಂಸೆಯನ್ನು ಪ್ರತಿಪಾದಿಸುವುದೋ ಇತ್ಯಾದಿ ಮಾಡಬಹುದು. ಆದರೆ, ಹಾಗೆ ಆಗುವಲ್ಲಿ ಅವರು ಕಂಡ ಮಾಂಸಾಹಾರಕ್ಕೆ ಸಂಬಂಧಿಸಿದ ದೃಶ್ಯಾವಳಿಗಳು ಪ್ರಭಾವ ಬೀರಿವೆ ಎನ್ನುವುದಕ್ಕೆ ಏನಾದರೂ ಪುರಾವೆ ಇದೆಯೇ? ಮಾಂಸಾಹಾರ ವ್ಯಾಪಕವಾಗಿರುವ, ಹುಡುಕಿದರೂ ಒಂದೇ ಒಂದು ’ಶುದ್ಧ ಸಸ್ಯಾಹಾರಿ’ ಹೋಟೆಲ್ ಸಿಗದ ದೇಶಗಳಲ್ಲಿ ನೆಲೆಸಿರುವ ಈ ಸಸ್ಯಾಹಾರಿಗಳ ಮಕ್ಕಳು, ಮರಿಮಕ್ಕಳೆಲ್ಲಾ ಹಿಂಸಾಪ್ರವೃತ್ತಿಯನ್ನು ಮೈಗೂಡಿಸಿಕೊಂಡು ಬೆಳೆದಿದ್ದಾರೆಯೇ? ಒಟ್ಟಿನಲ್ಲಿ, ನೈತಿಕ ವಿದ್ಯಾಭ್ಯಾಸಕ್ಕೆ ಸಂಬಂಧಿಸಿದ ಅಂದಿನ ಚರ್ಚೆಗೆ ಸಂಬಂಧವೇ ಇಲ್ಲದ ಆಹಾರ ಪದ್ಧತಿಯ ವಿಚಾರದ ಕುರಿತಾದ ಹೇಳಿಕೆಯೊಂದನ್ನು ನೀಡುವುದರ ಹಿಂದಿನ ಯೋಚನೆ ಏನಿತ್ತು? ಅದೇ ಸಭೆಯಲ್ಲಿ ಶಾಲೆಯಲ್ಲಿ ಮಕ್ಕಳಿಗೆ ಮೊಟ್ಟೆ ನೀಡುವುದು ಕೂಡಾ ತಪ್ಪು ಎನ್ನುವ ಅಭಿಪ್ರಾಯಗಳು ಮತ್ತೊಮ್ಮೆ ಪ್ರತಿಧ್ವನಿಸಿದವು. ಒಟ್ಟಿನಲ್ಲಿ ಮಾಂಸಾಹಾರಕ್ಕೂ ಹಿಂಸೆಗೂ, ಮಾಂಸಾಹಾರಕ್ಕೂ ಅನೈತಿಕತೆಗೂ ನಂಟು ಕಲ್ಪಿಸುವ ಚಿಂತನೆ ಅಲ್ಲಿ ಕೇಳಿಸಿದ ಬಹುತೇಕ ಸಲಹೆಗಳ ಹಿನ್ನೆಲೆಯಲ್ಲಿ ಕೆಲಸ ಮಾಡಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ.

ಇರಲಿ. ಹಾಗೆ ಹೇಳಿದ ಆ ಮಠದ ಮುಖ್ಯಸ್ಥರ ಜಿಲ್ಲೆಯಲ್ಲಿ ಮತ್ತು ಪಕ್ಕದ ಜಿಲ್ಲೆಯಲ್ಲಿ ಆಗಾಗ ಮಾನವ ಕ್ರೌರ್ಯದ ಪರಮಾವಧಿ ಪ್ರದರ್ಶನ ನಡೆಯುತ್ತದೆ. ಮನುಷ್ಯರ ಮೇಲೆ ಸತ್ಯವೋ-ಸುಳ್ಳೋ ಆಪಾದನೆಗಳನ್ನು ಹೊರಿಸಿ ಮನಬಂದಂತೆ ಥಳಿಸಲಾಗುತ್ತದೆ. ಥಳಿತಕ್ಕೊಳಗಾದ ವ್ಯಕ್ತಿಗಳನ್ನು ಬೆತ್ತಲೆಗೊಳಿಸಿ ಅವರ ಮೈಮೇಲೆ ರಕ್ತ ಹೆಪ್ಪುಗಟ್ಟಿದ ಅಥವಾ ಒಸರುವ ಗಾಯಗಳ ವಿಡಿಯೋ ಮತ್ತು ಫೋಟೋಗಳನ್ನು ವೈರಲ್ ಮಾಡಲಾಗುತ್ತದೆ. ಈ ದೃಶ್ಯಾವಳಿಗಳನ್ನೆಲ್ಲಾ ಯಾವುದೇ ಅಳುಕಿಲ್ಲದೆ ಟಿವಿ ಮಾಧ್ಯಮಗಳು ತೋರಿಸುತ್ತವೆ. ದೃಶ್ಯಗಳ ಜತೆಗೆ ಹಿಂಸಾತ್ಮಕವಾದ ಭಾಷೆಯಲ್ಲಿ ವಿವರಣೆ ನೀಡುತ್ತವೆ. ಟಿವಿ ಚಾನೆಲ್‌ಗಳಲ್ಲಿ ಕುಳಿತು ಕೈಕಡಿಯಬೇಕಿತ್ತು, ಕಾಲು ಮುರಿಯಬೇಕಿತ್ತು, ನೇಣು ಹಾಕಬೇಕಿತ್ತು ಎಂಬಿತ್ಯಾದಿ ಭಾಷೆ ಬಳಸುವ ಟಿವಿ ಆಂಕರ್‌ಗಳೆಲ್ಲಾ ಯಾವ ರೀತಿಯ ಆಹಾರಕ್ರಮಗಳಿಂದ ಪ್ರಭಾವಿತರಾದವರು ಅಂತ ಒಂದು ಸಮೀಕ್ಷೆ ನಡೆದರೆ ಉತ್ತಮ.

ಮಾಂಸದಂಗಡಿಗಳ ವಿಚಾರವಾಗಿ ಮಾತನಾಡಿದ ಅದೇ ಖಾಸಗಿ ಮಠದ ಮುಖ್ಯಸ್ಥರ ಜಿಲ್ಲೆಯಲ್ಲಿ ಮತ್ತು ಪಕ್ಕದ ಜಿಲ್ಲೆಯಲ್ಲಿ ಕೊರೊನಾ ಲಾಕ್‌ಡೌನ್ ಕಾಲದಲ್ಲಿ ಪೊಲೀಸರು ಅಮಾಯಕರಿಗೆ ಥಳಿಸುತಿದ್ದ ದೃಶ್ಯಗಳನ್ನು ಟಿವಿ ಚಾನೆಲ್‌ಗಳು ಯಥೇಚ್ಛವಾಗಿ ಪ್ರಸಾರ ಮಾಡಿದ್ದವು. ಪೊಲೀಸರು ಬಿಡಿ, ಒಬ್ಬ ಸಹಾಯಕ ಆಯುಕ್ತನೇ ಲಾಠಿ ಹಿಡಿದು ಲಾಕ್‌ಡೌನ್ ಕಾಲದಲ್ಲಿ ಯಾವುದೋ ಕಾರಣಕ್ಕೆ ರಸ್ತೆಗಿಳಿದ ವ್ಯಕ್ತಿಯೋರ್ವರನ್ನು ಬಡಿಯುವ ದೃಶ್ಯವನ್ನು ದೇಶಾದ್ಯಂತ ಜನ ಕಣ್ತುಂಬಿಕೊಡಿದ್ದೂ ಆಗಿತ್ತು. ಇವ್ಯಾವುದರ ಬಗ್ಗೆಯೂ ಆ ಖಾಸಗಿ ಮಠದ ಮುಖ್ಯಸ್ಥರಿಂದ ಒಂದೇ ಒಂದು ಪ್ರತಿಕ್ರಿಯೆ ಬಂದದ್ದಿಲ್ಲ. ಪ್ರತಿದಿನ ಭರಪೂರ ಹರಿದಾಡುವ ಹಿಂಸೆಯ ಪರಾಕಾಷ್ಠೆಯ ಇಂತಹ ದೃಶ್ಯಾವಳಿಗಳು ಮಕ್ಕಳ ಮನಸ್ಸಿನಲ್ಲಿ ಯಾವ ರೀತಿಯ ಪರಿಣಾಮ ಬೀರಬಹುದು ಎಂದು ಅವರು ಯೋಚಿಸಿದ ಹಾಗಿಲ್ಲ. ಆ ರೀತಿಯ ದಾಳಿಗೊಳಗಾಗುವ ವ್ಯಕ್ತಿಗಳ ಕುರಿತು ಅವರಿಗೆ ಒಂದಷ್ಟು ಮಾನವ ಸಹಜ ಅನುಕಂಪ-ಮರುಕ ಹುಟ್ಟಿದ ಹಾಗಿಲ್ಲ. ಅಂದರೆ, ಮನುಷ್ಯ ಮನುಷ್ಯ ಮೇಲೆ ವಿನಾಕಾರಣ ಎಸಗುವ ಕ್ರೌರ್ಯ ಅವರ ಪ್ರಕಾರ ಮಕ್ಕಳ ಮೇಲೆ ಯಾವ ಪರಿಣಾಮವನ್ನೂ ಬೀರುವುದಿಲ್ಲ. ಮನುಷ್ಯನ ಉಗಮ ಆದಂದಿನಿಂದಲೂ ಇರುವ ಆಹಾರ ಕ್ರಮಗಳು ಮತ್ತು ಆ ಆಹಾರ ಕ್ರಮಗಳ ಭಾಗವಾಗಿ ಮಾರಾಟವಾಗುವ ಪ್ರಾಣಿಗಳ ಮಾಂಸವನ್ನು ಕಂಡ ಮಕ್ಕಳು ಅವರ ಪ್ರಕಾರ ಹಿಂಸಾ ಪ್ರವೃತ್ತಿ ಬೆಳೆಸಿಕೊಳ್ಳಬಹುದು! ಅವರ ಮಾತಿನಿಂದ ಪ್ರೇರಣೆ ಪಡೆದ ಮಂದಿ ಇನ್ನು ಮುಂದೆ ಅವರ ಜಿಲ್ಲೆ ಮತ್ತು ಸುತ್ತಲ ಪ್ರದೇಶದ ಅಂಗಡಿಗಳಲ್ಲಿ ಮಾಂಸ ಮಾರಾಟ ಮಾಡುವುದಿದ್ದರೆ ಅದು ಹೀಗೆ ಆಗಬೇಕು, ಹಾಗೆ ಆಗಬೇಕು ಎಂದು ಹೊಸ ಅನೈತಿಕ ಪೊಲೀಸ್‌ಗಿರಿ ಯೊಂದನ್ನು ಪ್ರಾರಂಭಿಸದಿದ್ದರೆ ಸಾಕು.

ಇದನ್ನೂ ಓದಿ: ಮಾಂಸಾಹಾರದ ಮೇಲೆ ಮತ್ತೆ ಪ್ರಹಾರ: ಮಠಾಧೀಶರ ಸಲಹೆಗಳಿಗೆ ತೀವ್ರ ವಿರೋಧ

ಇನ್ನೂ ಒಂದಿಬ್ಬರು ಮಠಗಳ ಮುಖ್ಯಸ್ಥರುಗಳು ಅಲ್ಲಿ ವ್ಯಕ್ತಪಡಿಸಿರುವ ಅಭಿಪ್ರಾಯಗಳು ಮತ್ತಷ್ಟು ಕುತೂಹಲಕಾರಿಯಾಗಿವೆ. ’ಶಿಕ್ಷಕರು ಆದರ್ಶಪ್ರಾಯರಾಗಿದ್ದರೆ ಮಕ್ಕಳು ಅವರನ್ನು ನೋಡಿ ಕಲಿಯುತ್ತಾರೆ’ ಎಂದು ಒಬ್ಬರು ಹೇಳಿದ್ದಾರೆ. ಇನ್ನೋರ್ವ ಮಠಾಧಿಪತಿಗಳು ಶಿಕ್ಷಕರು ಮತ್ತು ಪೋಷಕರಿಗೆ ನೈತಿಕತೆ ಬಗ್ಗೆ ಕಲಿಸಬೇಕಾದ ಪರಿಸ್ಥಿತಿ ಇಂದು ಸೃಷ್ಟಿಯಾಗಿದೆ ಎಂದಿದ್ದಾರೆ. ಸರಿ ಮಕ್ಕಳೇನೋ ಶಿಕ್ಷಕರು ಮತ್ತು ಪೋಷಕರನ್ನು ನೋಡಿ ಕಲಿಯುತ್ತಾರೆ ಎಂದಿಟ್ಟುಕೊಳ್ಳೋಣ. ಹಾಗಾದರೆ, ಶಿಕ್ಷಕರು ಮತ್ತು ಪೋಷಕರು ತಮ್ಮ ನೈತಿಕ ಪಾಠಗಳನ್ನು ಎಲ್ಲಿಂದ ಕಲಿತುಕೊಳ್ಳಬೇಕು? ಅವರೆಲ್ಲಾ ಆಕಾಶದಿಂದ ಉದುರಿದವರೇ? ಅಥವಾ ಅವರು ಶೂನ್ಯದತ್ತ ದೃಷ್ಟಿಸಿ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಲು ಸಾಧ್ಯವೇ? ಶಿಕ್ಷಕರೂ ಸೇರಿದಂತೆ ಸಮಾಜದ ಸಮಸ್ತರಿಗೂ ನೈತಿಕವಾಗಿ ಆದರ್ಶಪ್ರಾಯರಾಗಿರಬೇಕಾದ ಧಾರ್ಮಿಕ ಮುಖಂಡರುಗಳು ನಮ್ಮ ಸಮಾಜದಲ್ಲಿ ಎಂತಹ ಮೌಲ್ಯಗಳನ್ನು ಅನುಸರಿಸುತ್ತಿದ್ದಾರೆ, ಎಂತಹ ಮಾದರಿಯನ್ನು ಮಕ್ಕಳು, ಪೋಷಕರು ಮತ್ತು ಶಿಕ್ಷಕರಿಗೆ ಒದಗಿಸುತ್ತಿದ್ದಾರೆ ಎನ್ನುವ ಪ್ರಶ್ನೆಯನ್ನು ಕೂಡಾ ಎತ್ತಬೇಕಲ್ಲ. ಶಿಕ್ಷಕರು ಆದರ್ಶಪ್ರಾಯರಾಗಿರಬೇಕು ಎಂದು ಅಲ್ಲಿ ಹೇಳಿರುವ ಮಠದ ಮುಖ್ಯಸ್ಥರೊಬ್ಬರು ಅತ್ಯಾಚಾರ ಆರೋಪಗಳನ್ನು ಎದುರಿಸಿದ್ದವರು. ಆ ಆಪಾದನೆಗಳಿಗೆ ಸಂಬಂಧಪಟ್ಟ ರೋಚಕ ವರದಿಗಳು, ವಿಡಿಯೋ ಹೇಳಿಕೆಗಳು ಯಥೇಚ್ಛವಾಗಿ ಇಂಟರ್ನೆಟ್‌ನಲ್ಲಿ ಲಭಿಸುತ್ತವೆ. ಮಕ್ಕಳಿಗೂ ಲಭಿಸುತ್ತವೆ. ಶಿಕ್ಷಕರಿಗೂ ಲಭಿಸುತ್ತವೆ. ಅಲ್ಲಿ ಸೇರಿದ್ದ ಅಷ್ಟೂ ಧಾರ್ಮಿಕ ಮುಖಂಡರಲ್ಲಿ ಎಲ್ಲರೂ ಶಿಕ್ಷಕರು ಮತ್ತು ಪೋಷಕರು ಸರಿಯಾಗಿರಬೇಕೆಂದು ಹೇಳಿದರೇ ಹೊರತು, ಒಬ್ಬರೂ ಈ ಸಮಾಜಕ್ಕೆ ನೈತಿಕ ದಾರಿದೀಪಗಳಾಗಿ ಕೆಲಸ ಮಾಡಲೆಂದೇ ಇರುವ ಧಾರ್ಮಿಕ ವ್ಯಕ್ತಿಗಳು ಕೂಡಾ ನೈತಿಕ ಹಾದಿಯಿಂದ ವಿಚಲಿತರಾಗಬಾರದು ಅಂತ ಹೇಳಿರುವುದು ವರದಿಯಾಗಿಲ್ಲ. ಸರಕಾರ ನೈತಿಕ ಶಿಕ್ಷಣದ ವಿಚಾರದಲ್ಲಿ ಸಲಹೆ ಕೇಳಲು ವಿಧಾನಸೌಧಕ್ಕೆ ಕರೆಸಿಕೊಳ್ಳುವ ವ್ಯಕ್ತಿಗಳು ನಿಜಕ್ಕೂ ನೈತಿಕತೆಯ ವಿಚಾರದಲ್ಲಿ ಸಮಾಜಕ್ಕೆ ಮಾದರಿಯಾಗಿರಬೇಕು. ಅತ್ಯಾಚಾರ ಆರೋಪಹೊತ್ತವರು, ಅತ್ಯಾಚಾರ ಪ್ರಕರಣದ ಆರೋಪಿಗಳ ಪರ ಹೇಳಿಕೆ ನೀಡುವವರು, ಭೂಕಬಳಿಕೆ ಆರೋಪಗಳನ್ನು ಎದುರಿಸುತ್ತಿರುವವರು, ಸಾಂವಿಧಾನಿಕ ಮೌಲ್ಯಗಳಿಗೆ ವಿರುದ್ಧವಾದ ಸಾರ್ವಜನಿಕ ಹೇಳಿಕೆ ನೀಡುತ್ತಿರುವವರನ್ನು ಅಥವಾ ನೀಡುತ್ತಿದ್ದವರ ಪರಂಪರೆಯಿಂದ ಬಂದವರನ್ನೆಲ್ಲಾ ಯಾವುದೇ ಸರಕಾರ ನಡೆಸುವ ಇಂತಹ ಸಮಾಲೋಚನಾ ಸಭೆಗಳಿಂದ ದೂರ ಇರಿಸಿದರೆ ಅದುವೇ ಮಕ್ಕಳಿಗೆ, ಪೋಷಕರಿಗೆ ಮತ್ತು ಶಿಕ್ಷಕರಿಗೆ ಸರಕಾರ ರವಾನಿಸಬಹುದಾದ ಬಲುದೊಡ್ಡ ನೈತಿಕ ಸಂದೇಶವಾಗುತ್ತದೆ.

ಮಕ್ಕಳಿಗೆ ಈಗಿನ ಶಿಕ್ಷಣದಲ್ಲಿ ನೈತಿಕ ಪಾಠಗಳು ಕಡಿಮೆ ಸಿಗುತ್ತವೆ ಅಂತ ಏನೂ ಅನ್ನಿಸುವುದಿಲ್ಲ. ಒಂದು ವೇಳೆ ಹಾಗೇನಾದರೂ ಆಗಿದ್ದರೆ, ಮಕ್ಕಳಿಗೆ ಭಾರತದ ಸಂವಿಧಾನ ಪ್ರತಿಪಾದಿಸುವ ಮೌಲ್ಯಗಳನ್ನು ಸರಿಯಾಗಿ ಮನದಟ್ಟು ಮಾಡಿಕೊಟ್ಟರೆ ಸಾಕು. ಅದಕ್ಕಿಂತ ದೊಡ್ಡ ಯಾವ ನೈತಿಕ ಪಾಠಗಳೂ ಬೇಕಾಗಿಲ್ಲ. ಸಂವಿಧಾನ ಕಲಿಸಿಕೊಡುವುದು ಹೇಗೆ ಎನ್ನುವ ಬಗ್ಗೆ ಶಿಕ್ಷಕರಿಗೆ ತರಬೇತಿ ನೀಡಿದರೆ ಶಿಕ್ಷಕರ ನೈತಿಕ ಪ್ರಜ್ಞೆಯೂ ಜಾಗೃತವಾಗುತ್ತದೆ, ಮಕ್ಕಳಲ್ಲಿ ನೈತಿಕ ಪ್ರಜ್ಞೆ ಬೆಳೆಸುವುದು ಹೇಗೆ ಅಂತಲೂ ಅವರಿಗೆ ತಿಳಿಯುತ್ತದೆ. ಆಹಾರ ಪದ್ಧತಿಗೂ ಹಿಂಸೆಗೂ, ಆಹಾರ ಪದ್ಧತಿಗೂ ನೈತಿಕತೆಗೂ ನಂಟು ಬೆಸೆಯುವ ಕೆಲವರ ಚಿಂತನೆಯನ್ನು ನಾಗರಿಕ ಸಮಾಜ ಪ್ರಶ್ನಿಸಬೇಕಾಗಿದೆ ಮತ್ತು ಪ್ರತಿಭಟಿಸಬೇಕಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...

ತಾರತಮ್ಯ ಮುಕ್ತ ಕ್ಯಾಂಪಸ್ ನಿರ್ಮಾಣದತ್ತ ಮಹತ್ವದ ಹೆಜ್ಜೆ; ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ಕರ್ನಾಟಕ ಸರ್ಕಾರದ ಸಚಿವ ಸಂಪುಟ ಗುರುವಾರ (ಏ.16) ದಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ’ಗೆ ಅನುಮೋದನೆ ನೀಡಿದೆ. ಹೈದರಾಬಾದ್‌ನ ಕೆಂದ್ರೀಯ ವಿಶ್ವವಿದ್ಯಾಲಯದಲ್ಲಿ...

ಕ್ಷೇತ್ರ ಮರುವಿಂಗಡನೆ : ಗೃಹ ಸಚಿವ ಅಮಿತ್ ಶಾ ಹೇಳಿದ್ದೆಲ್ಲವು ನಿಜವೇ?..ಇಲ್ಲಿದೆ ವಾಸ್ತವಾಂಶ

ದೇಶದ ಗೃಹ ಸಚಿವರು ಸಂಸತ್ತಿನಲ್ಲಿ ಪ್ರಮುಖ ಕಾನೂನಿನ ಬಗ್ಗೆ ವಿವರಿಸುವಾಗ ವಿಷಯ ಸ್ಪಷ್ಟವಾಗಿರಬೇಕು. ಆದರೆ, ಕ್ಷೇತ್ರ ಮರುವಿಂಗಡನೆ ಕುರಿತು ಗೃಹ ಸಚಿವ ಅಮಿತ್ ಶಾ ಮಾತನಾಡಿರುವುದು ಹಾಗಿರಲಿಲ್ಲ. ದಕ್ಷಿಣ ಭಾರತದ ರಾಜ್ಯಗಳು ತಮ್ಮ...