ಜಾರಿ ನಿರ್ದೇಶನಾಲಯ (ಇಡಿ) ದಾಖಲಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದ ಹಿನ್ನೆಲೆಯಲ್ಲಿ ಬಂಧನಕ್ಕೆ ಒಳಗಾಗಿದ್ದ ಶಿವಸೇನಾ ಸಂಸದ ಸಂಜಯ್ ರಾವತ್ ಅವರಿಗೆ ಜಾಮೀನು ದೊರೆತಿದೆ.
ಮಧ್ಯ ಮುಂಬೈನ ಆರ್ಥರ್ ರೋಡ್ ಜೈಲಿನಿಂದ ಹೊರಬಂದ ಅವರಿಗೆ ಶಿವಸೇನೆಯ ಉದ್ಧವ್ ಠಾಕ್ರೆ ಬಣದ ಸದಸ್ಯರು ಕೇಸರಿ ಶಾಲು ಬೀಸುವ ಮೂಲಕ ಸ್ವಾಗತಿಸಿದರು. ಕಳೆದ ಮೂರು ತಿಂಗಳಿನಿಂದ ಅವರು ಬಂಧನದಲ್ಲಿದ್ದರು.
“ನನಗೆ ಸಂತೋಷವಾಗಿದೆ. ನಮಗೆ ನ್ಯಾಯಾಂಗದ ಮೇಲೆ ನಂಬಿಕೆ ಇತ್ತು. ಅದು ಮತ್ತಷ್ಟು ಹೆಚ್ಚಿದೆ” ಎಂದು ಜೈಲಿನಿಂದ ಹೊರಬಂದ ನಂತರ ರಾವತ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
#WATCH | Shiv Sena (Uddhav Thackeray faction) leader Sanjay Raut released from Arthur Road jail after Mumbai's PMLA court granted him bail in Patra Chawl land scam case earlier today. pic.twitter.com/9LnLnmV3aI
— ANI (@ANI) November 9, 2022
ರಾವುತ್ ಅವರ ಬಿಡುಗಡೆಗೆ ತಡೆ ನೀಡಲು ಬಾಂಬೆ ಹೈಕೋರ್ಟ್ ಅಸಮ್ಮತಿ ಸೂಚಿಸಿತು. ಆರ್ಥಿಕ ಅಪರಾಧಗಳ ತನಿಖೆಗೆ ನಿಯೋಜಿಸಲಾದ ಕೇಂದ್ರೀಯ ಏಜೆನ್ಸಿಯ ಕೋರಿಕೆಯಂತೆ ಜಾಮೀನನ್ನು ತಡೆಹಿಡಿಯಲು ಕೋರ್ಟ್ ನಿರಾಕರಿಸಿತು. ವಿಶೇಷ ನ್ಯಾಯಾಲಯವು ರಾವುತ್ಗೆ ಮಧ್ಯಾಹ್ನ ಜಾಮೀನು ನೀಡಿತು.
ಉಭಯ ಪಾರ್ಟಿಗಳ ವಿಚಾರಣೆಯಿಲ್ಲದೆ ಇಂತಹ ಆದೇಶವನ್ನು ಹೊರಡಿಸಲು ಸಾಧ್ಯವಿಲ್ಲ ಎಂದು ಹೇಳಿದ ಹೈಕೋರ್ಟ್ ಗುರುವಾರಕ್ಕೆ ವಿಚಾರಣೆಯನ್ನು ಮುಂದೂಡಿತು.
“ನಾನು ಆದೇಶವನ್ನು ನೋಡಿಲ್ಲ. ಯಾವ ಆಧಾರದ ಮೇಲೆ ಜಾಮೀನು ನೀಡಲಾಗಿದೆ ಎಂದು ನನಗೆ ತಿಳಿದಿಲ್ಲ. ನೀವು (ಇಡಿ) ಯಾವ ಆಧಾರದ ಮೇಲೆ ಆದೇಶವನ್ನು ಪ್ರಶ್ನಿಸಿದ್ದೀರಿ ಎಂದು ನನಗೆ ತಿಳಿದಿಲ್ಲ. ನಾನು ಈಗ ತಡೆಯಾಜ್ಞೆ ನೀಡುವುದು ಹೇಗೆ? ಕಕ್ಷಿದಾರರನ್ನು ಆಲಿಸಬೇಕು” ಎಂದು ಹೈಕೋರ್ಟ್ ನ್ಯಾಯಮೂರ್ತಿ ಭಾರತಿ ಡಾಂಗ್ರೆ ಹೇಳಿದ್ದಾರೆ.
ಇದನ್ನೂ ಓದಿರಿ: ಭಾರತದ 50ನೇ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ಸ್ವೀಕರಿಸಿದ ಡಿ.ವೈ. ಚಂದ್ರಚೂಡ್
ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಆಪ್ತರಲ್ಲಿ ಒಬ್ಬರಾಗಿರುವ ಸಂಸದ ಸಂಜಯ್ ರಾವುತ್ ಅವರನ್ನು ಪತ್ರಾ ಚಾಲ್ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು “ಕಾರಣವಿಲ್ಲದೆ, ಕಾನೂನುಬಾಹಿರವಾಗಿ ಬಂಧಿಸಿದ” ಎಂದು ವಿಶೇಷ ಪಿಎಂಎಲ್ಎ ನ್ಯಾಯಾಲಯವು ಹೇಳಿದೆ. ಜಾಮೀನು ಮಂಜೂರು ಮಾಡುವ ವಿವರವಾದ ಆದೇಶದಲ್ಲಿ ಈ ಕುರಿತು ತಿಳಿಸಿದೆ ಎಂದು ‘ಲೈವ್ ಲಾ’ ವರದಿ ಮಾಡಿದೆ.
ವಿಶೇಷ ನ್ಯಾಯಾಧೀಶ ಎಂ.ಜಿ.ದೇಶಪಾಂಡೆ ಅವರು, “ಪ್ರವೀಣ್ ರಾವತ್ ಅವರನ್ನು ಸಿವಿಲ್ ವಿವಾದಕ್ಕಾಗಿ ಬಂಧಿಸಿದ್ದರೆ, ಸಂಜಯ್ ರಾವತ್ ಅವರನ್ನು ಯಾವುದೇ ಕಾರಣವಿಲ್ಲದೆ ಬಂಧಿಸಲಾಗಿದೆ ಎಂದು ಹೇಳಲು ಯಾವುದೇ ಮಾತುಗಳಿಲ್ಲ. ಈ ಸತ್ಯವು ಕಣ್ಣಿಗೆ ಕಾಣುತ್ತಿದೆ” ಎಂದಿದ್ದಾರೆ.
ಪತ್ರಾ ‘ಚಾಲ್’ (ವಠಾರ) ಪುನರಾಭಿವೃದ್ಧಿ ಯೋಜನೆಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು ಜುಲೈ 31ರಂದು ರಾವತ್ ಅವರನ್ನು ಬಂಧಿಸಿತ್ತು.