Homeಮುಖಪುಟಮೀಸಲಾತಿಯ ಮೂಲ, ಋಗ್ವೇದ ಕಾಲ: ವಿಕಾಸ್ ಆರ್. ಮೌರ್ಯ

ಮೀಸಲಾತಿಯ ಮೂಲ, ಋಗ್ವೇದ ಕಾಲ: ವಿಕಾಸ್ ಆರ್. ಮೌರ್ಯ

- Advertisement -
- Advertisement -

ಮೀಸಲಾತಿ ಕಣ್ಣಗಾಯಕ್ಕೊಂಡು ಕನ್ನಡಿ: ಲೇಖನ-1

ವಿಕಾಸ್‌ ಆರ್‌.ಮೌರ್ಯ

ಸ್ವತಂತ್ರ ಭಾರತದ ಇತಿಹಾಸದಲ್ಲಿ ಮೀಸಲಾತಿಯಷ್ಟು ಚರ್ಚೆಗೆ ಒಳಗಾಗಿರುವ ಬೇರೊಂದು ಪರಿಕಲ್ಪನೆ ಇಲ್ಲ. ಈ ಚರ್ಚೆಗಳಲ್ಲಿ ಮೀಸಲಾತಿಪರಕ್ಕಿಂತಲೂ ಮೀಸಲಾತಿ ವಿರೋಧದ ಚರ್ಚೆಯೇ ಹೆಚ್ಚಿದೆ. ಆಘಾತಕಾರಿಯಾದ ಅಂಶವೆಂದರೆ ಮೀಸಲಾತಿಯಿಂದಲೇ ಆರ್ಥಿಕವಾಗಿ ಸಬಲರಾಗಿರುವ ಮತ್ತು ಸಬಲರಾಗುತ್ತಿರುವ ದಲಿತ, ಮಹಿಳೆ ಮತ್ತು ಹಿಂದುಳಿದ ಜಾತಿಗಳ ಜನರೇ ಕಂಠಮಟ್ಟ ಅದನ್ನು ವಿರೋಧಿಸುತ್ತಿರುವುದು. ಇವರಲ್ಲಿ ಹಿಂದುಳಿದ ಜಾತಿಗಳ ವಿದ್ಯಾರ್ಥಿ ಸಮೂಹವಂತೂ ಮೀಸಲಾತಿ ಸೌಲಭ್ಯ ಕೇವಲ ‘ಎಸ್ಸಿ-ಎಸ್ಟಿ’ಗಳಿಗೆ ಮಾತ್ರವಿದೆ ಎಂಬ ಅನಿಸಿಕೆಯನ್ನು ಗಾಢವಾಗಿ ಹೊಂದಿವೆ. ಅದರಿಂದ ಒಂದು ಬಗೆಯ ಅಸಹನೆಯೂ ಅವರಲ್ಲಿದೆ.

ಈ ರೀತಿಯ ಅಸಹನೆಯು ಆ ವಿದ್ಯಾರ್ಥಿಗಳ ಮೂಲ ಚಿಂತನೆಯಲ್ಲಿಲ್ಲ. ಬದಲಾಗಿ ಅವರೊಳಗೆ ಸಂಪ್ರದಾಯವಾದಿಗಳು ಕೃತಕವಾಗಿ ತುಂಬಿರುವ ಪ್ರಕ್ರಿಯೆಯಾಗಿದೆ. ಕುಷ್ಟ ರೋಗದ ಮಚ್ಚೆಯ ಮೇಲೆ ಎಷ್ಟೇ ಚುಚ್ಚಿಕೊಂಡರೂ ನೋವಾಗುವುದಿಲ್ಲವಲ್ಲವೋ ಹಾಗೆ. ಆದ್ದರಿಂದ ಮೀಸಲಾತಿ ವಿರೋಧಿ ಮನಸ್ಥಿತಿಗೆ ಚಿಕಿತ್ಸೆ ನೀಡುವುದು ಇಂದಿನ ಜರೂರಾಗಿದೆ.

ಪ್ರಸ್ತುತ ಮೀಸಲಾತಿಯೆಂಬುದು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ಜಾತಿಗಳು, ಎಲ್ಲಾ ಜಾತಿಯ ಮಹಿಳೆಯರು, ಅಂಗವಿಕಲರು, ರಾಜ್ಯ ಭಾಷೆ, ಪ್ರಾದೇಶಿಕ ಜನಾಂಗ ಗ್ರಾಮೀಣ ಕೃಪಾಂಕ ಮತ್ತು ಇತ್ತೀಚೆಗೆ ಆರ್ಥಿಕವಾಗಿ ಹಿಂದುಳಿದಿರುವ (8 ಲಕ್ಷ ವಾರ್ಷಿಕ ಆದಾಯ ಮತ್ತು 5 ಎಕರೆವರೆಗೆ ಜಮೀನು ಹೊಂದಿರುವ) ಮೇಲ್ಜಾತಿಗಳಿಗೂ ಔದ್ಯೋಗಿಕ ಹಾಗು ಶೈಕ್ಷಣಿಕ ಮೀಸಲಾತಿಯನ್ನು ಕಲ್ಪಿಸಲಾಗಿದೆ. ಇದರಿಂದ ಬ್ರಾಹ್ಮಣರು ಮತ್ತು ಬನಿಯಾಗಳನ್ನೂ ಸಹ ಮೀಸಲಾತಿ ಪರಿಧಿಯೊಳಗೆ ತರಲಾಗಿದೆ. ಇದರ ಜೊತೆಗೆ ಶೇ.25 ರಷ್ಟು ಶ್ರೀಮಂತರ ಮಕ್ಕಳಿಗೆ ‘ಪೇಮೆಂಟ್ ಸೀಟ್’ ಎಂಬ ಮೀಸಲಾತಿಯನ್ನೂ ಶೈಕ್ಷಣಿಕ ಕ್ಷೇತ್ರದಲ್ಲಿ ನೀಡಲಾಗುತ್ತಿದೆ. ಇದರ ಹೊರತಾಗಿ ದಲಿತರಿಗೆ ಹತ್ತು ವರ್ಷಗಳಿಗೊಮ್ಮೆ ಮರುಪರಿಶೀಲನೆಗೊಳಗಾಗುವ ‘ರಾಜಕೀಯ ಮೀಸಲು ಕ್ಷೇತ್ರಗಳು’ ಸಹ ಜಾರಿಯಲ್ಲಿದೆ.

ಮೀಸಲಾತಿ ಪರಿಕಲ್ಪನೆಯು ತೀರ ಹೊಸತಾದದ್ದು ಎಂದು ಎಲ್ಲರೂ ಭಾವಿಸಿದ್ದಾರೆ. ಶಾಹು ಮಹಾರಾಜ್ ಮತ್ತು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಬ್ರಾಹ್ಮಣೇತರರಿಗೆ ನೀಡಿದ ಮೀಸಲಾತಿಯಿಂದ ಈ ಭಾರತದ ಮೀಸಲಾತಿ ಚರಿತ್ರೆ ಆರಂಭವಾಗಿದೆ ಎಂದು ನಾವೆಲ್ಲರೂ ತಿಳಿದಿದ್ದೇವೆ. ಆದರೆ ಜಂಬೂದ್ವೀಪದಲ್ಲಿ ಈ ಹಿಂದೆ ಮೇಲ್ಜಾತಿ/ಮೇಲ್ವರ್ಣಗಳಿಗೆ ಮೀಸಲಾತಿ ಇರಲಿಲ್ಲವೆ? ಎಂದು ನಾವು ಪ್ರಶ್ನೆ ಹಾಕಿಕೊಂಡದ್ದೇ ಇಲ್ಲ. ಸತ್ಯವೆಂದರೆ ಈ ನಮ್ಮ ನೆಲದಲ್ಲಿ ಋಗ್ವೇದ ಕಾಲದಿಂದಲೇ ಮೀಸಲಾತಿ ಜಾರಿಯಲ್ಲಿದೆ. ಋಗ್ವೇದದ ಪುರುಷಸೂಕ್ತದ ಹತ್ತನೇ ಮಂಡಲವು ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರರೆಂದು ಮಾನವ ಜನಾಂಗವನ್ನು ವಿಭಜಿಸಿದ ದಿನವೇ ಮೀಸಲಾತಿಗೆ ಅಡಿಪಾಯ ಹಾಕಲಾಯಿತು. ಋಗ್ವೇದದಲ್ಲಿಯೇ ಬಡಗಿ, ರಥಕಾರ, ನೇಕಾರ, ಚಮ್ಮಾರ, ಕುಂಬಾರ ಮುಂತಾದ ಕುಶಲಕರ್ಮಿಗಳ ಪ್ರಸ್ತಾಪವಿದೆ. ಅಂದರೆ ಋಗ್ವೇದ ಸಮಾಜದಲ್ಲಿ ವೃತ್ತೀಯ ಆಧಾರದಲ್ಲಿ ವಿಭಜನೆ ಕಂಡು ಬಂದಿತ್ತಾದರೂ ಅದು ಜನಾಂಗಗಳನ್ನು ವಿಭಜಿಸಿದ್ದಿಲ್ಲ. ಆದರೆ ಋಗ್ವೇದದ ಅಂತ್ಯಕಾಲದಲ್ಲಿ ಮಾನವ ಜನಾಂಗದ ವಿಭಜನೆಗೆ ಕೈ ಹಾಕಿರುವುದು ನಿಚ್ಚಳವಾಗಿ ಗೋಚರವಾಗುತ್ತದೆ. ಅಂಬೇಡ್ಕರರು ಉಲ್ಲೇಖಿಸುವಂತೆ ಅದು ಗೋಚರವಾಗುವುದು ಋಗ್ವೇದದ ಹತ್ತನೇ ಮಂಡಲದ ಪುರುಷಸೂಕ್ತದಿಂದ. ಇದರಲ್ಲಿ ಜಗತ್ ಸೃಷ್ಟಿಯ ಸಿದ್ಧಾಂತವಿದೆಯಾದರೂ ವೈದಿಕ ಬ್ರಾಹ್ಮಣರು ಪ್ರಚುರ ಪಡಿಸಿದ್ದು ಮಾತ್ರ ಚಾತುರ್ವರ್ಣ ಸಿದ್ಧಾಂತವನ್ನು. ಇದರ 11 ಮತ್ತು 12ನೇ ಶ್ಲೋಕಗಳು ಹೀಗೆ ಹೇಳುತ್ತವೆ.

11. ಈ ಪುರುಷನನ್ನು (ವಿರಾಟ್ ಪುರುಷ) ದೇವತೆಗಳು ಎಷ್ಟು ಭಾಗಗಳಾಗಿ ಕತ್ತರಿಸಿದರು? (ಯಜ್ಞದಲ್ಲಿ) ಈ ಪುರುಷನ ಮುಖ ಯಾವುದು? ಇವನ ಬಾಹುಗಳು ಯಾವುವು? ಇವನ ತೊಡೆಗಳು, ಪಾದಗಳು ಯಾವುವು?

12. ಅವನ ಮುಖದಿಂದ ಬ್ರಾಹ್ಮಣನು ಉದಯಿಸಿದನು, ಅವನ ತೋಳುಗಳಿಂದ ಕ್ಷತ್ರಿಯನು ಉದಯಿಸಿದನು. ಅವನ ತೊಡೆಗಳಿಂದ ವೈಶ್ಯನೂ, ಅವನ ಪಾದಗಳಿಂದ ಶೂದ್ರನೂ ಉದಿಸಿದನು.

ಈ ಋಗ್ವೇದದ ಪುರುಷಸೂಕ್ತವನ್ನೇ ಆಧಾರವಾಗಿಟ್ಟುಕೊಂಡು ಬುದ್ಧೋತ್ತರ ಭಾರತದಲ್ಲಿ ಬೋಧಾಯನ ಧರ್ಮ ಸೂತ್ರ, ಗೌತಮ ಧರ್ಮ ಸೂತ್ರ, ಅಪಸ್ತಂಬ ಧರ್ಮ ಸೂತ್ರ ಮತ್ತು ವಸಿಷ್ಠ ಧರ್ಮಸೂತ್ರಗಳು ಪ್ರಜ್ಞಾಪೂರ್ವಕವಾಗಿ ನಾಲ್ಕು ವರ್ಣಗಳನ್ನು ಪ್ರತ್ಯೇಕಿಸಿ ವರ್ಣಾಧಾರಿತ ಶ್ರೇಣೀಕೃತ ಅಸಮಾನತೆಗಾಗಿ ಮೀಸಲಾತಿ ನೀಡುತ್ತವೆ.

* ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರರೆಂಬ ನಾಲ್ಕು ವರ್ಣಗಳಿವೆ. ಇವುಗಳಲ್ಲಿ ಪ್ರತಿಯೊಂದು ವರ್ಣವೂ ಹುಟ್ಟಿನಿಂದ ತನ್ನ ಕೆಳವರ್ಣಕ್ಕಿಂತ ಶ್ರೇಷ್ಠವಾದುದು. (ಆಪಸ್ತಂಭ ಸೂತ್ರ)

* ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರ ಎಂಬ ನಾಲ್ಕು ವರ್ಣಗಳಿವೆ. ಬ್ರಾಹ್ಮಣ ಕ್ಷತ್ರಿಯ ವೈಶ್ಯ ಈ ಮೂರು ವರ್ಣಗಳನ್ನು ದ್ವಿಜರೆಂದು ಕರೆಯುತ್ತಾರೆ (ವಸಿಷ್ಠ ಸೂತ್ರ)

ದ್ವಿಜರೆಂದರೆ ಎರಡು ಬಾರಿ ಜನಿಸಿದವರು ಎಂದರ್ಥ. ಮೊದಲ ಜನನ ತಾಯಿಯ ಗರ್ಭದಲ್ಲಿ ಮತ್ತು ಎರಡನೆಯದ್ದು ಉಪನಯನ ಸಂಸ್ಕಾರದಲ್ಲಿ. ಎರಡನೆಯ ಜನ್ಮವನ್ನು ಶೂದ್ರರಿಗೆ ನಿರಾಕರಿಸುವುದರ ಮೂಲಕ ವರ್ಣಾಧಾರಿತ ಶ್ರೇಣೀಕೃತ ಮೀಸಲಾತಿಯಿಂದ ಶೂದ್ರರನ್ನು ಹೊರಗಿಡುತ್ತಾರೆ.

ಅಂಬೇಡ್ಕರರು ಸಾರಾಂಶೀಕರಿಸುವಂತೆ ಧರ್ಮ ಸೂತ್ರಕಾರರ ಕಾನೂನುಗಳು ಮತ್ತು ಬ್ರಾಹ್ಮಣ ಕ್ಷತ್ರಿಯರ ಜುಗಲ್ ಬಂಧಿ ಮಾಡಿದ್ದೇನೆಂದರೆ
1. ವರ್ಣಾಶ್ರಮಧರ್ಮದ ಸಾಮಾಜಿಕ ವ್ಯವಸ್ಥೆಯಲ್ಲಿ ಶೂದ್ರನಿಗೆ ಕೊನೆಯ ಸ್ಥಾನ ನೀಡಿತು.
2. ಶೂದ್ರನನ್ನು ಅಶುದ್ಧನನ್ನಾಗಿಸಿ, ಧಾರ್ಮಿಕ ವಿಧಿಗಳಿಂದ ದೂರವಿಟ್ಟಿತು
3. ಶೂದ್ರ ಜ್ಞಾನವನ್ನು ಗಳಿಸಕೂಡದು. ಅವನಿಗೆ ವಿದ್ಯೆ ಕೊಡುವುದೇ ಅಪರಾಧ.
4. ಶೂದ್ರನಿಗೆ ಆಸ್ತಿ ಹಕ್ಕಿಲ್ಲದಂತೆ ಮಾಡಿದ್ದು
5. ಸರ್ಕಾರಿ ಸೇವೆಯಿಂದ ಶೂದ್ರರನ್ನು ದೂರವಿಟ್ಟಿದ್ದು
6. ಶೂದ್ರರನ್ನ ಸದಾ ಗುಲಾಮಗಿರಿಯಲ್ಲಿಯೇ ಇಟ್ಟಿರಬೇಕು
ನಂತರ ಈ ವರ್ಣಾಧಾರಿತ ಶ್ರೇಣೀಕೃತ ಮೀಸಲಾತಿಯನ್ನು ವ್ಯವಸ್ಥಿತವಾಗಿ, ನಿಯಮಬದ್ಧವಾಗಿ ರೂಪಿಸಿದ್ದು ಮೌರ್ಯ ಸಾಮ್ರಾಜ್ಯವನ್ನು ಪಥನಗೊಳಿಸಿದ ಪುಶ್ಯಮಿತ್ರ ಶುಂಗ. ಇವನು ಮನುಸ್ಮೃತಿಯನ್ನು ಸುಮತಿ ಭಾರ್ಗವನಿಂದ ರಚಿಸಿ ದ್ವಿಜರಿಗೆ ಹಲವಾರು ಹಕ್ಕು ಮತ್ತು ಸವಲತ್ತುಗಳಲ್ಲಿ ಮೀಸಲಾತಿ ನೀಡಿದ. ಅದರಲ್ಲೂ ಬ್ರಾಹ್ಮಣರಿಗೆ ಅತಿ ಹೆಚ್ಚು ಮೀಸಲಾತಿ ಕಲ್ಪಿಸಿದ. ಏಕೆಂದರೆ ಪುಶ್ಯಮಿತ್ರ ಶುಂಗ ಮತ್ತು ಸುಮತಿ ಭಾರ್ಗವ ಸ್ವತಃ ಬ್ರಾಹ್ಮಣರಾಗಿದ್ದರು. ಮನುಸ್ಮೃತಿಯು ಈ ಕೆಳಗಿನ ಕರ್ಮಗಳನ್ನು (ಕಾರ್ಯಗಳು) ಚಾತುರ್ವರ್ಣಗಳಿಗೆ ವಿಧಿಸುವುದರ ಮೂಲಕ ವರ್ಣಾಧಾರಿತ ಮೀಸಲಾತಿಯನ್ನು ಜಾತ್ಯಾಧಾರಿತವಾಗಿ ಗಟ್ಟಿಗೊಳಿಸಿತು.

* ಅಧ್ಯಾಪನ, ಅಧ್ಯಯನ, ಯಜ್ಞ ಮಾಡುವುದು-ಮಾಡಿಸುವುದು, ದಾನ ಕೊಡುವುದು, ದಾನವನ್ನು ತೆಗೆದುಕೊಳ್ಳುವುದು ಇವು ಆರು ಬ್ರಾಹ್ಮಣನ ಕರ್ಮಗಳು.-88

* ಪ್ರಜೆಗಳ ರಕ್ಷಣೆ, ದಾನ ಕೊಡುವುದು, ಯಾಗ ಮಾಡುವುದು, ಅಧ್ಯಯನ ಮಾಡುವುದು, ವಿಷಯಗಳಲ್ಲಿ (ಭೋಗಗಳಲ್ಲಿ) ಆಸಕ್ತಿ ಇಲ್ಲದಿರುವುದು ಇವು ಕ್ಷತ್ರಿಯನ ಕರ್ತವ್ಯಗಳು.-89

* ಪಶುಪಾಲನೆ, ದಾನ ಕೊಡುವುದು, ಹೋಮ ಮಾಡುವುದು, ಅಧ್ಯಯನ ಮಾಡುವುದು, ನೆಲ ಜಲಗಳಲ್ಲಿ ವ್ಯಾಪಾರ, ಬಡ್ಡಿಸಾಲ ಕೊಡುವುದು, ಕೃಷಿ ಇವು ವೈಶ್ಯನ ಕರ್ಮಗಳು-90

* ಆ ಮಹಾಪ್ರಭುವಾದ ಬ್ರಹ್ಮನು ಈ ಮೇಲಿನ ಮೂರು ವರ್ಣಗಳ ಜನರ ನಿಸ್ವಾರ್ಥ ಸೇವೆ ಮಾಡಿಕೊಂಡಿರುವುದನ್ನೆ ಶೂದ್ರನಿಗೆ ಕರ್ತವ್ಯವೆಂದು ಆದೇಶಿಸಿದ್ದಾನೆ.-91

ಮನುಸ್ಮೃತಿಯು ತನ್ನ ಇಡೀ 1034 ಶ್ಲೋಕಗಳಲ್ಲಿ (ಅವು ಕಾನೂನುಗಳು ಸಹ) ದ್ವಿಜರಿಗೆ ಶ್ರೇಣೀಕೃತ ಮೀಸಲಾತಿಯನ್ನು ನೀಡಿತು. ಅದರಲ್ಲಿಯೂ ಎಲ್ಲರಿಗಿಂತಲೂ ಮಿಗಿಲಾಗಿ ಬ್ರಾಹ್ಮಣರಿಗೆ ಮೀಸಲಾತಿ ನೀಡಿತು. ಶೂದ್ರರು ಮತ್ತು ಸ್ತ್ರೀಯರನ್ನು ಮೀಸಲಾತಿ ಪರಿದಿಯಿಂದಲೇ ಹೊರಗಿಟ್ಟಿತು.

ಈ ದೇಶವನ್ನು ನಂತರ ಆಳಿದ ಬಹುತೇಕ ರಾಜ ಮಹಾರಾಜರು ಮನುಸ್ಮೃತಿಯನ್ನು ಸಂವಿಧಾನವನ್ನಾಗಿ ಸ್ವೀಕರಿಸಿದರು. ಮುಸಲ್ಮಾನರೂ ಸಹ ಮನುಸ್ಮೃತಿಯನ್ನೇ ಮುಸ್ಲಿಮೇತರ ಜನರಿಗೆ ಅನ್ಯಯಿಸುತ್ತಿದ್ದರು.

ಕ್ರಿ.ಶ 4 ನೇ ಶತಮಾನದಲ್ಲಿ ಈ ನೆಲದಲ್ಲಿ ಕಾನೂನುಬದ್ಧವಾಗಿ ಅಸ್ಪೃಶ್ಯ ರನ್ನು ವಿಂಗಡಿಸಿ (ದಲಿತರು) ಎಲ್ಲಾ ರಾಜಮನೆತನಗಳೂ ಮನುಸ್ಮೃತಿಯನ್ನು ಆಧಾರವಾಗಿಟ್ಟುಕೊಂಡು, ಇತರೆ ಬ್ರಾಹ್ಮಣೀಯ ಪಠ್ಯಗಳನ್ನು ಆಧರಿಸಿ, ದಲಿತರನ್ನು ಶೂದ್ರರಿಗಿಂತಲೂ ಕೆಳಕ್ಕೆ ತುಳಿದು ಊರಿನ ಹೊರಗೆ ವಾಸಿಸುವಂತೆ ಬ್ರಾಹ್ಮಣ-ಕ್ಷತ್ರಿಯ ಜುಗಲ್‍ಬಂಧಿ ಮಾಡಿದೆ. ಮುಟ್ಟಿಸಿಕೊಳ್ಳುವುದೂ ಸಹ ಅಪಾಯವೆಂಬಂತೆ ಬಿಂಬಿಸಿ ಸಾಮಾನ್ಯ ಮನುಷ್ಯರಿಂದ ಅವರನ್ನು ಬೇರ್ಪಡಿಸಿ ಮೀಸಲಾತಿಯ ಪರಿದಿಯಿಂದಲೇ ಹೊರಗೆ ಇಟ್ಟಿದ್ದರು. ಕತ್ತೆ, ನಾಯಿ, ಒಡೆದ ಪಾತ್ರೆಗಳು, ಸ್ಮಶಾನ, ಹಳಸಲು ಅನ್ನವೇ ಅವರ ಆಸ್ತಿಯೆಂದು ಕಾನೂನು ಮಾಡಿ ಚಿತ್ರಹಿಂಸೆ ನೀಡಿ ಪ್ರಾಣಿಗಳಿಗಿಂತಲೂ ಹೀನಾಯವಾಗಿ ನಡೆಸಿಕೊಂಡಿದ್ದಾರೆ.

ಬ್ರಾಹ್ಮಣರು ಅಧ್ಯಯನ, ಯಾಗ ಯಜ್ಞ, ದೇವಾದಾಯ (ದೇವಾಲಯಕ್ಕೆ ಭೂಮಿಯನ್ನು ದಾನವಾಗಿ ಪಡೆಯುವುದು), ಬ್ರಹ್ಮಾದೇಯ (ಬ್ರಾಹ್ಮಣ ಕುಟುಂಬಗಳಿಗೆ ಭೂಮಿಯನ್ನು ದಾನವಾಗಿ ನೀಡುವುದು), ಅಗ್ರಹಾರಗಳಿಗೆ ಭೂಮಿ ಮೀಸಲು, ತೆರಿಗೆಯಿಂದ ವಿನಾಯಿತಿ, ಪ್ರಧಾನಮಂತ್ರಿ ಪದವಿ ಮೀಸಲು, ನ್ಯಾಯಾಧೀಶ ಪದವಿ ಮೀಸಲು ಹೀಗೆ ನೂರಾರು ಆರ್ಥಿಕ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಮೀಸಲಾತಿಯನ್ನು ಕ್ರಮೇಣ ಏರುಗತಿಯಲ್ಲಿ ವೇದ ಕಾಲದಿಂದಲೂ ಅನುಭವಿಸಿಕೊಂಡು ಬರುತ್ತಿದ್ದಾರೆ. ಇವರ ನಂತರದಲ್ಲಿ ಕ್ಷತ್ರಿಯರು ಹಾಗೂ ವೈಶ್ಯರೂ ಸಹ ಶ್ರೇಣೀಕೃತವಾಗಿ ಮೀಸಲಾತಿಯನ್ನು ಪಡೆದುಕೊಂಡು ಬಂದಿದ್ದಾರೆ. ಮುಸಲ್ಮಾನರ ಆಡಳಿತದಲ್ಲಿಯೂ ಸಹ ನೊಬೆಲ್ ವರ್ಗದಲ್ಲಿ ಬ್ರಾಹ್ಮಣರು, ರಜಪೂತರು, ಮರಾಠರು ಮತ್ತಿತರ ಮೇಲ್ಜಾತಿಗಳು ಅತಿ ಹೆಚ್ಚು ಮೀಸಲಾತಿಯನ್ನು ಅನುಭವಿಸಿದ್ದಾರೆ. ಸ್ವತಂತ್ರ ಪೂರ್ವದಲ್ಲಿ ಬ್ರಿಟಿಷ್ ಭಾರತದ ಅಡಿಯಲ್ಲಿ ಅಥವಾ ಸ್ವತಂತ್ರ ರಾಜ್ಯಗಳಾಗಿದ್ದ ಕೆಲವು ಸಂಸ್ಥಾನಗಳ ದಿವಾನರ ಜಾತಿ ಮೂಲ ಹುಡುಕಿದರೆ ಸಾಕು ದ್ವಿಜರಿಗಿದ್ದ ಮೀಸಲಾತಿ ತಿಳಿದುಬಿಡುತ್ತದೆ. ಮಿಲ್ಲರ್ ಸಮಿತಿಯು ಸಹ ಸರ್ಕಾರಿ ಹುದ್ದೆಗಳಲ್ಲಿ ಬ್ರಾಹ್ಮಣರ ಪಾರುಪತ್ಯವನ್ನು ಬಹಿರಂಗಪಡಿಸಿದೆ.

ನಮ್ಮ ದೇಶದ ಮೀಸಲಾತಿ ವ್ಯವಸ್ಥೆಯ ಇತಿಹಾಸ ಹೀಗೆ ಮೇಲ್ಜಾತಿ ಪರವಾಗಿಯೇ ಇದ್ದು ಬುದ್ಧ, ಮೌರ್ಯರು, ಹರ್ಷವರ್ಧನ, ಕಲಭ್ರರ ಕಾಲದಲ್ಲಿ ಮಾತ್ರ ಸ್ವಲ್ಪ ಮಟ್ಟಿಗೆ ಶೂದ್ರರು ಮತ್ತು ದಲಿತರಿಗೆ ಮೀಸಲಾತಿ ಲಭಿಸಿತ್ತು. ಆದರೆ ಅದನ್ನು ನೆಲಸಮಗೊಳಿಸಿಯೇ ಮನುಸ್ಮೃತಿ ತನ್ನ ದ್ವಿಜಪರತೆಯನ್ನು ಮೆರೆಯಿತು.

ಇಂತಹ ಮೇಲ್ಜಾತಿ ಪರ ಮೀಸಲಾತಿಗೆ ಬದಲಾಗಿ ಶೂದ್ರರಿಗೆ, ದಲಿತರಿಗೆ ಮತ್ತು ಮಹಿಳೆಯರಿಗೆ ಕಳೆದ 100 ವರ್ಷಗಳಿಂದ ಸಮಾನತೆಗಾಗಿ ಕೆಳಗಿನಿಂದ ಮೇಲಕ್ಕೆ ಶ್ರೇಣೀಕೃತ ಮೀಸಲಾತಿ ಜಾರಿಯಲ್ಲಿದೆ. ಆದರೆ ಈ ಜನಪರ ಮೀಸಲಾತಿ ವಿರುದ್ಧ ಮನುವಾದಿಗಳು ಕೆಳಜಾತಿಗಳನ್ನೇ ಎತ್ತಿ ಕಟ್ಟುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ಇಂತಹ ಹುನ್ನಾರವನ್ನು ಮೀಸಲಾತಿ ಅನುಭವಿಸುತ್ತಿರುವ ಶೂದ್ರರಿಗೆ, ದಲಿತರಿಗೆ, ಮಹಿಳೆಯರಿಗೆ ಮತ್ತು ಉದಾರವಾದಿ ಮೇಲ್ಜಾತಿಗಳಿಗೆ ಅರ್ಥ ಮಾಡಿಸುವ ಸಲುವಾಗಿ ಈ ಅಂಕಣವನ್ನು ಆರಂಭಿಸಿದ್ದೇವೆ. ಈ ಅಂಕಣದಲ್ಲಿ ಮೀಸಲಾತಿಯ ಇತಿಹಾಸ, ಬೆಳವಣಿಗೆ ಮತ್ತು ಅನಿವಾರ್ಯತೆಯನ್ನು ಸಮಕಾಲೀನವಾಗಿ ಚರ್ಚಿಸುತ್ತೇವೆ. ಜೊತೆಗೆ ವಿದ್ಯಾರ್ಥಿಗಳಿಂದಲೂ ಪ್ರತಿಕ್ರಿಯೆ ಪಡೆದು ಮೀಸಲಾತಿಯ ಪ್ರಾಮುಖ್ಯತೆಯನ್ನು ಅರಿಯುವ ಕೆಲಸ ಈ ಅಂಕಣದಿಂದ ಎಳ್ಳಷ್ಟಾದರೂ ಆಗಲಿ ಎಂಬುದೇ ನಮ್ಮ ಆಶಯ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. ವಿಕಾಸರ ವಾದ ಸಮರ್ಥನೀಯ. ಸಾವಿರಾರು ವರ್ಷಗಳಿಂದ ಮೀಸಲಾತಿಯ ಲಾಭವನ್ನು ಪಡೆದಿರುವ ಮೇಲ್ಜಾತಿಯವರು, ಈಗ ಕೇವಲ ಏಳು ದಶಕಗಳಿಂದೀಚೆಗೆ ದಲಿತರು ಪಡೆಯುತ್ತಿರುವ ಮೀಸಲಾತಿಯನ್ನು ಸಹಿದಿರುವುದು ಸರಿಯಲ್ಲ.

  2. ಪಂಗಡಗಳ ಒಳಗಡೆ ಹಣಕಾಸು ಮಾನದಂಡವಿಟ್ಟು ಬ್ರಾಹ್ಮಣರು ಸೇರಿದಂತೆ population ನೆಲೆಗಟ್ಟಿನಲ್ಲಿ ಮೀಸಲಾತಿ ಯನ್ನು ಶೇ.೧೦೦ ರಶ್ಟಕ್ಕೇ ಏರಿಸಿದರೆ, ಮೀಸಲಾತಿಯ ಜಗಳಕ್ಕೆ ಹೆಚ್ಚಿನಪಾಲು ಕೊನೆಹಾಡಬಹುದು.

LEAVE A REPLY

Please enter your comment!
Please enter your name here

- Advertisment -

ಜಂತರ್ ಮಂತರ್ ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಕೇಜ್ರಿವಾಲ್ ಭೇಟಿ

ದೇಶಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿರುವ ನೀಟ್ (NEET) ಪರೀಕ್ಷಾ ಅಕ್ರಮ ಹಾಗೂ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಜಂತರ್ ಮಂತರ್‌ನಲ್ಲಿ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಖ್ಯಾತ ಶಿಕ್ಷಣ ತಜ್ಞ ಹಾಗೂ ಪರಿಸರ...

E20 ಪೆಟ್ರೋಲ್ ಪ್ರಕರಣ : ‘ಗ್ರ್ಯಾಂಡ್ ವಿಟಾರಾ’ ಕಾರು ಬದಲಾಯಿಸಿ ಕೊಡಲು ಮಾರುತಿ ಸುಝುಕಿಗೆ ಗ್ರಾಹಕ ನ್ಯಾಯಾಲಯ ಆದೇಶ

ಛತ್ತೀಸ್‌ಗಢದ ರಾಯ್‌ಪುರದ ಜಿಲ್ಲಾ ಗ್ರಾಹಕ ವಿವಾದಗಳ ಪರಿಹಾರ ಆಯೋಗವು (ಡಿಸಿಡಿಆರ್‌ಸಿ), E20 ಇಂಧನ (ಪೆಟ್ರೋಲ್) ಬಳಕೆಯಿಂದಾಗಿ ಕಾರು ಕೆಟ್ಟುಹೋಗಿದೆ ಎಂದು ಆರೋಪಿಸಿದ ವ್ಯಕ್ತಿಗೆ ಹೊಸ 'ಗ್ರಾಂಡ್ ವಿಟಾರಾ' ಕಾರನ್ನು ನೀಡುವಂತೆ ಕಾರು ತಯಾರಿಕಾ...

ಸಿಜೆಪಿ ಶಾಂತಿಯುತ ಪ್ರತಿಭಟನೆಗೆ ನಿರಂತರ ಪೊಲೀಸ್ ಕಣ್ಗಾವಲು ಪ್ರಶ್ನಿಸಿ ದೆಹಲಿ ಹೈಕೋರ್ಟ್‌ಗೆ ಅರ್ಜಿ

ರಾಷ್ಟ್ರ ರಾಜಧಾನಿ ದೆಹಲಿಯ ಜಂತರ್ ಮಂತರ್‌ನಲ್ಲಿ ಜಿರಳೆ ಜನತಾ ಪಕ್ಷ (ಸಿಜೆಪಿ) ಆಯೋಜಿಸಿರುವ ಶಾಂತಿಯುತ ಧರಣಿ ಮತ್ತು ಉಪವಾಸ ಸತ್ಯಾಗ್ರಹದಲ್ಲಿ ಭಾಗವಹಿಸುವ ನಾಗರಿಕರ ಮೇಲೆ ದೆಹಲಿ ಪೊಲೀಸರು ನಿರಂತರ ಮತ್ತು ವ್ಯಾಪಕ ಕಣ್ಗಾವಲು...

IAS ಆಗುವ ಮುನ್ನ ‘ಪರಿಪೂರ್ಣ ತಾಯಿ’ಯಾಗಿ ಎಂದ ರಾಜ್ಯಪಾಲರ ಸಲಹೆ ಪುರುಷ ಪ್ರಾಧ್ಯಾನ್ಯತೆಯ ಮುಂದುವರೆದ ಆಚರಣೆ ಅಲ್ಲವೆ?

ಇತ್ತೀಚೆಗೆ ಉತ್ತರ ಪ್ರದೇಶದ ರಾಜ್ಯಪಾಲರಾದ ಆನಂದಿಬೆನ್ ಪಟೇಲ್ ಅವರು, "ಮಹಿಳೆಯರು IAS ಅಧಿಕಾರಿ ಅಥವಾ ಶಿಕ್ಷಕಿಯಾಗುವ ಕನಸು ಕಾಣುವ ಮೊದಲು 'ಪರಿಣಿತ ತಾಯಿ' ಆಗುವುದನ್ನು ಕಲಿಯಬೇಕು ಎಂದು ಸಲಹೆ ನೀಡಿದ್ದರು. ಕಾನ್ಪುರದ ಛತ್ರಪತಿ...

ಹಿಂದಿನ ಮದುವೆ, ಮಗು ವಿಚಾರ ಮುಚ್ಚಿಟ್ಟಿದ್ದಕ್ಕೆ ಸಹೋದರನೊಂದಿಗಿನ ಸಂಬಂಧ ಮುರಿದುಕೊಂಡಿದ್ದ ಕಾನೂನು ವಿದ್ಯಾರ್ಥಿನಿಯನ್ನು ಇರಿದು ಕೊಂದ ತಮ್ಮ

ಬೆಂಗಳೂರು: ಮೊದಲ ಮದುವೆ ಹಾಗೂ ಮಗುವಿದ್ದ ವಿಷಯವನ್ನು ಮುಚ್ಚಿಟ್ಟು ವಂಚಿಸಿದ್ದ ಪ್ರಿಯಕರನೊಂದಿಗಿನ ಸಂಬಂಧವನ್ನು ಮುರಿದುಕೊಂಡ ಕಾರಣಕ್ಕೆ, ಆತನ ಸಹೋದರನಿಂದಲೇ ಚಾಕು ಇರಿತಕ್ಕೊಳಗಾಗಿದ್ದ ಕಾನೂನು ವಿದ್ಯಾರ್ಥಿನಿಯೊಬ್ಬಳು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ...

ಮಕ್ಕಳ ಕ್ಯಾನ್ಸರ್ ಆಸ್ಪತ್ರೆಯ ಮೇಲೆ ಅಮೆರಿಕ ದಾಳಿಗೆ ಇರಾನ್‌ನಿಂದ ಪ್ರತೀಕಾರ

ಕಳೆದ ಗುರುವಾರ (ಜು.16) ಖುಜೆಸ್ತಾನ್ ಪ್ರಾಂತ್ಯದಲ್ಲಿರುವ ಮಕ್ಕಳ ಕ್ಯಾನ್ಸರ್ ಆಸ್ಪತ್ರೆಯ ಮೇಲೆ ನಡೆದ ದಾಳಿಗೆ ಪ್ರತೀಕಾರವಾಗಿ, ಕುವೈತ್ ಮತ್ತು ಬಹ್ರೇನ್ ಸೇರಿದಂತೆ ಗಲ್ಫ್ ರಾಷ್ಟ್ರಗಳಲ್ಲಿರುವ ಅಮೆರಿಕದ ವಾಯು ನೆಲೆಗಳ ಮೇಲೆ ಇರಾನ್ ಪ್ರತಿದಾಳಿ...

Lazarus To World Leaks : ಆತಂಕ ಸೃಷ್ಟಿಸಿದ ಕೂಡಂಕುಳಂ ಸೈಬರ್ ದಾಳಿಗಳು

ಭಾರತದ ಅತಿ ದೊಡ್ಡ ಪರಮಾಣು ವಿದ್ಯುತ್ ಕೇಂದ್ರವಾದ ತಮಿಳುನಾಡಿನ  ತಿರುನೆಲ್ವೇಲಿಯ ಕೂಡಂಕುಳಂ, ಕಳೆದ ಏಳು ವರ್ಷಗಳ ಅವಧಿಯಲ್ಲಿ ಎರಡು ಬಾರಿ ಪ್ರಮುಖ ಸೈಬರ್ ಭದ್ರತಾ ಆತಂಕಗಳಿಗೆ ಕೇಂದ್ರ ಬಿಂದುವಾಗಿದೆ. 2019ರ ಮೊದಲ ಘಟನೆಯು...

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ: ಪ್ರಶ್ನೆಗಳನ್ನು ಖರೀದಿಸಲು 5 ಲಕ್ಷ ರೂ. ಪಾವತಿಸಿದ್ದ ಲಾತೂರ್ ಕೋಚಿಂಗ್ ಮಾಲೀಕ: ನ್ಯಾಯಾಲಯಕ್ಕೆ ಸಿಬಿಐ ಮಾಹಿತಿ

ದೇಶಾದ್ಯಂತ ಕೋಟ್ಯಂತರ ವಿದ್ಯಾರ್ಥಿಗಳ ಭವಿಷ್ಯವನ್ನು ಕತ್ತಲಿಗೆ ತಳ್ಳಿದ ನೀಟ್ (NEET-UG) ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣದಲ್ಲಿ ದಿನಕ್ಕೊಂದು ಆಘಾತಕಾರಿ ಸತ್ಯಗಳು ಹೊರಬರುತ್ತಿದ್ದು, ಇಡೀ ಶಿಕ್ಷಣ ವ್ಯವಸ್ಥೆಯನ್ನು ಜರ್ಜರಿತಗೊಳಿಸಿರುವ ಈ ದಂಧೆಯ ಆಳ ಎಷ್ಟು...

ನಾನು ಸತ್ತರೂ ಪರ್ವಾಗಿಲ್ಲ, ಉಪವಾಸ ಹಿಂಪಡೆಯಲ್ಲ: ಜುಲೈ 20ರ ಸಂಸತ್ ಚಲೋಗೆ ವಾಂಗ್‌ಚುಕ್ ಕರೆ

ದೇಶದ ಶಿಕ್ಷಣ ವ್ಯವಸ್ಥೆಯಲ್ಲಿನ ಸರಣಿ ಪರೀಕ್ಷಾ ಅಕ್ರಮ ಹಾಗೂ ನೀಟ್ (NEET) ಹಗರಣದ ವಿರುದ್ಧ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ನಡೆಯುತ್ತಿರುವ ಆಮರಣಾಂತ ಉಪವಾಸ ಸತ್ಯಾಗ್ರಹವನ್ನು ತಕ್ಷಣವೇ...

ಉತ್ತರ ಪ್ರದೇಶ : ಮೊಹಮ್ಮದ್ ಅಲಿ ಜೌಹರ್ ವಿವಿಯ 38 ಕಟ್ಟಡಗಳನ್ನು ಕೆಡವಲು ಮುಂದಾದ ಸರ್ಕಾರ!

ಸಮಾಜವಾದಿ ಪಕ್ಷದ (ಎಸ್‌ಪಿ) ಮುಖಂಡ ಆಝಂ ಖಾನ್ ಅವರಿಗೆ ಸೇರಿದ ಮೊಹಮ್ಮದ್ ಅಲಿ ಜೌಹರ್ ವಿಶ್ವವಿದ್ಯಾಲಯದ 38 ಕಟ್ಟಡಗಳನ್ನು ಕೆಡವಲು ಉತ್ತರ ಪ್ರದೇಶದ ರಾಂಪುರ ನಗರಾಭಿವೃದ್ಧಿ ಪ್ರಾಧಿಕಾರ (ಆರ್‌ಡಿಎ) ಆದೇಶಿಸಿದೆ ಎಂದು ಬುಧವಾರ...