Homeಅಂತರಾಷ್ಟ್ರೀಯಅನ್ನ ಹಳಸಿತ್ತು, ನಾಯಿ ಹಸಿದಿತ್ತು. ಹಸಿದ ಮೋದಿಗೆ ಜನ ಮತ ಹಾಕಿ ಗೆಲ್ಲಿಸಿದರು: ಎಚ್.ಎಸ್ ದೊರೆಸ್ವಾಮಿ

ಅನ್ನ ಹಳಸಿತ್ತು, ನಾಯಿ ಹಸಿದಿತ್ತು. ಹಸಿದ ಮೋದಿಗೆ ಜನ ಮತ ಹಾಕಿ ಗೆಲ್ಲಿಸಿದರು: ಎಚ್.ಎಸ್ ದೊರೆಸ್ವಾಮಿ

- Advertisement -
- Advertisement -

ಅಖಿಲ ಭಾರತದಲ್ಲಿ ಬಲಶಾಲಿಯಾಗಿದ್ದ ಏಕೈಕ ರಾಜಕೀಯ ಸಂಸ್ಥೆ ಕಾಂಗ್ರೆಸ್. ಹಳ್ಳಿಯವರೆಗೆ ವ್ಯಾಪಿಸಿದ್ದ ಸಂಸ್ಥೆ ಅದು ಪಂಡಿತ ಜವಾಹರಲಾಲ್ ನೆಹರೂ, ಲಾಲ್‍ಬಹದ್ದೂರ್ ಶಾಸ್ತ್ರಿ ಪ್ರಧಾನಿಗಳಾಗಿರುವವರೆಗೆ ಕಾಂಗ್ರೆಸ್ ಸಂಸ್ಥೆ ಉಚ್ಛ್ರಾಯಸ್ಥಿತಿಯಲ್ಲಿತ್ತು. ಬಿಹಾರದಲ್ಲಿ ಬಾಬು ರಾಜೇಂದ್ರಪ್ರಸಾದ್, ಬಾಬು ಜಗಜೀವನರಾಮ್, ಉತ್ತರ ಪ್ರದೇಶದಲ್ಲಿ ಮೋತಿಲಾಲ್ ನೆಹರೂ, ಜವಾಹರಲಾಲ್ ನೆಹರೂ, ಗೋವಿಂದ ವಲ್ಲಭಪಂತ್, ಜಿ.ಕೃಪಲಾನಿ, ಬಂಗಾಳದಲ್ಲಿ ಶರತ್‍ಚಂದ್ರ ಬೋಸ್, ಸುಭಾಷ್‍ಚಂದ್ರ ಬೋಸ್, ಮೌಲಾನ ಅಬ್ದುಲ್‍ಕಲಾಂ ಆಜಾದ್, ಡಾ.ಬಿಪಿನ್‍ಚಂದ್ರ ರಾಯ್, ಗುಜರಾತಿನಲ್ಲಿ ವಿಠ್ಠಲಭಾಯ್ ಪಟೇಲ್, ಸರ್ದಾರ್ ವಲ್ಲಭಭಾಯಿ ಪಟೇಲ್, ಮಹಾತ್ಮ ಗಾಂಧಿ, ಮಹಾರಾಷ್ಟ್ರದಲ್ಲಿ ಬಿಪಿನ್‍ಖೇರ್, ಶಂಕರರಾವ್ ದೇವ್, ಗೋಪಾಲಕೃಷ್ಣ ಗೋಖಲೆ, ಬಾಲಗಂಗಾಧರ ತಿಲಕ್, ಆಂಧ್ರದಲ್ಲಿ ಟಿ.ಪ್ರಕಾಶಂ, ಡಾ.ಪಟ್ಟಾಭಿಸೀತಾರಾಮಯ್ಯ, ಬುಲುಸು ಸಾಂಬಮೂರ್ತಿ, ಕೇರಳದಲ್ಲಿ ಪಟ್ಟಂತಾಸು ಪಿಳ್ಳೈ, ಇಕ್ಕಂಡಿ ವಾರಿಯರ್, ತಮಿಳುನಾಡಿನಲ್ಲಿ ಸಿ.ರಾಜಗೋಪಾಲಾಚಾರಿ, ಸಂತಾನಂ, ಕಾಮರಾಜನಾಡಾರ್, ಕರ್ನಾಟಕದಲ್ಲಿ ದಿವಾಕರ ರಂಗರಾಯರು, ಗಂಗಾಧರ ರಾವ್ ದೇಶಪಾಂಡೆ, ಮುದುವೀಡು ಕೃಷ್ಣರಾಯರು- ಹೀಗೆ ಎಲ್ಲಾ ರಾಜ್ಯಗಳಲ್ಲೂ ಕಾಂಗ್ರೆಸ್ ನಾಯಕರು ಇದ್ದರು. ಸಂಘಟನಾ ಚಾತುರ್ಯದಿಂದ ಜನರ ನೆಚ್ಚಿನ ನಾಯಕರಾಗಿದ್ದರು. ಇವರು ಕರೆ ಕೊಟ್ಟರೆ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಜನ, ಜನಪರ ಚಳವಳಿಗೆ ಧುಮುಕುತ್ತಿದ್ದರು.

ಇಂದಿರಾಗಾಂಧಿ ಪ್ರಧಾನಿಯಾದ ಮೇಲೆ ಕಾಂಗ್ರೆಸ್ ಇಬ್ಭಾಗವಾಯಿತು. ಮೊದಲಿನ ರಾಷ್ಟ್ರೀಯ ಕಾಂಗ್ರೆಸ್ ಕಾಣೆಯಾಯಿತು. ಭ್ರಷ್ಟಾಚಾರಕ್ಕೆ ಎತ್ತಿದ ಕೈಯಾಗಿದ್ದ ಇಂದಿರಾ ಕಾಂಗ್ರೆಸ್ ಅಸ್ತಿತ್ವಕ್ಕೆ ಬಂತು. ಅಂದಿನಿಂದ ಕಾಂಗ್ರೆಸ್ಸಿನ ಅವನತಿ ಆರಂಭವಾಯಿತು. ಕಮ್ಯುನಿಸ್ಟ್ ಪಕ್ಷ ಇಬ್ಭಾಗವಾಗಿ ಬಂಗಾಳದಲ್ಲಿ, ತ್ರಿಪುರಾದಲ್ಲಿ ಮತ್ತು ಕೇರಳದಲ್ಲಿ ಸಿಪಿಎಂ ಪಕ್ಷ ಅಧಿಕಾರಕ್ಕೂ ಬಂದಿತು. ಕಾಲಕ್ರಮೇಣ, ಬಂಗಾಳದಲ್ಲಿ ಸಿಪಿಐ ಪಕ್ಷ ಅಧಿಕಾರ ಕಳೆದುಕೊಂಡು ಮತ್ತೆ ಕಾಂಗ್ರೆಸ್ ಆಡಳಿತಕ್ಕೆ ಬಂದಿತು. ಕೇರಳದಲ್ಲಿ ಸಿಪಿಎಂ ಪಕ್ಷ ಇನ್ನೂ ಅಧಿಕಾರದಲ್ಲಿದೆ. ಕೇರಳದಲ್ಲಿ ಒಂದು ಅವಧಿಗೆ ಕಾಂಗ್ರೆಸ್, ಇನ್ನೊಂದು ಅವಧಿಗೆ ಸಿಪಿಎಂ ಅಧಿಕಾರ ಹಿಡಿಯುತ್ತಿವೆ.

ಮನಮೋಹನಸಿಂಗರು ಕಾಂಗ್ರೆಸ್ ಪಕ್ಷದ ಪ್ರಧಾನಿಯಾಗಿ ಆಯ್ಕೆಯಾದ ಮೇಲೆ ಕಾಂಗ್ರೆಸ್ಸಿನ ಅವನತಿ ಮತ್ತಷ್ಟು ಬಿರುಸಾಗಿ ಆಯಿತು. ಸ್ವತಃ ಕಳಂಕರಹಿತರಾದ ಮನಮೋಹನಸಿಂಗರ ಆಳ್ವಿಕೆಯಲ್ಲಿ, ಮಂತ್ರಿಮಂಡಲದ ಕೆಲ ಸದಸ್ಯರು ಕೋಟಿ ಕೋಟಿ ರೂ.ಗಳ ಭ್ರಷ್ಟಾಚಾರ ನಡೆಸಿದರೂ ಅದನ್ನು ತಡೆಹಿಡಿಯದೇ ಹೋದರು ಪ್ರಧಾನಿ ಮನಮೋಹನಸಿಂಗರು.

ಮತದಾರರು ಕ್ರುದ್ಧರಾದರು. ಚುನಾವಣೆಯಿಂದ ಚುನಾವಣೆಗೆ ಕಾಂಗ್ರೆಸ್ಸನ್ನು ಪರಾಭವಗೊಳಿಸುವ ಪ್ರಕ್ರಿಯೆ ಆರಂಭವಾಯಿತು. ಮೋದಿಯ ಅದೃಷ್ಟ ಖುಲಾಯಿಸಿತು. ಅನ್ನ ಹಳಸಿತ್ತು, ನಾಯಿ ಹಸಿದಿತ್ತು. ಹಸಿದ ಮೋದಿಗೆ ಜನ ಮತ ಹಾಕಿ ಗೆಲ್ಲಿಸಿದರು. ಇಂದು ಲೋಕಸಭೆಯಲ್ಲಿ ಭಾರತೀಯ ಜನತಾ ಪಕ್ಷ ಬ್ರೂಟ್ ಮೆಜಾರಿಟಿ ಪಡೆದಿದೆ. ಮೋದಿಗೆ ಚತುರ್ಭುಜ ಬಂದಂತಾಗಿದೆ.

ರಾಹುಲ್ ಗಾಂಧಿ ಈ ಸಂದರ್ಭದಲ್ಲಿ ಕಾಂಗ್ರೆಸ್ಸಿನ ಅಧ್ಯಕ್ಷ ಗದ್ದುಗೆ ಏರಿದರು. ಮೋದಿ ಜವಾಹರಲಾಲ್ ನೆಹರೂ ಮನೆತನದ ಬಗ್ಗೆ ಅಪಮಾನಕರ ಹೇಳಿಕೆಗಳನ್ನು ಕೊಡಲು ಆರಂಭ ಮಾಡಿದರು. ಕಾಂಗ್ರೆಸ್ಸನ್ನು ನಾಶಗೊಳಿಸುವುದಾಗಿ ನೆಹರೂ ಸಂತಾನವನ್ನು ಹೇಳಹೆಸರಿಲ್ಲದಂತೆ ಮಾಡುವುದಾಗಿ ಹೇಳಿ ಪುಂಖಾನುಪುಂಖವಾಗಿ ಅಪಪ್ರಚಾರ ಮಾಡಲು ಸನ್ನದ್ಧರಾದರು.

ಎಲ್ಲಾ ಪಕ್ಷಗಳಲ್ಲಿದ್ದಂತೆ ಕ್ರಿಮಿನಲ್‍ಗಳು, ಸ್ವಾರ್ಥಿಗಳು, ಕಾರ್ಪೊರೇಟ್‍ಗಳ ಏಜೆಂಟರು, ಕೋಟ್ಯಾಧಿಪತಿಗಳು ಬಿಜೆಪಿ ಮತ್ತು ಕಾಂಗ್ರೆಸ್ ಸಂಸ್ಥೆಗಳಲ್ಲಿ ನುಸುಳಿದರು. ಇವರಿಗೆಲ್ಲ ದೇಶದ ಹಿತಕ್ಕಿಂತ ತಮ್ಮ ಅಭ್ಯುದಯವನ್ನು ಸಾಧಿಸುವ ದುರುದ್ದೇಶ ಇದೆಯಾಗಿ, ಈ ಕಳಂಕಿತರಿಂದ ಪಕ್ಷ ಕಟ್ಟುವ ಕೆಲಸ ಹಿಂಬಡ್ತಿ ಪಡೆಯಿತು. ನಾಯಕತ್ವ ಅಭಾವದಿಂದ ಕಾಂಗ್ರೆಸ್ ನೆಲ ಕಚ್ಚಿತು.

ಮನೆತನದ ರಾಜಕೀಯದ ಮೇಲೆ ಪ್ರಹಾರ ಮಾಡಿ ಮೋದಿ ತನ್ನ ಇಚ್ಛೆಯನ್ನು ಪೂರೈಸಿಕೊಂಡಿದ್ದನ್ನು ಮನಗಂಡ ರಾಹುಲ್ ಗಾಂಧಿ ನೆಹರೂ ಮನೆತನದವರ ಕೈಲಿದ್ದ ಅಧ್ಯಕ್ಷ ಪದವಿಯನ್ನು ಬೇರೆಯವರಿಗೆ ಹಸ್ತಾಂತರಿಸಲು ನಿರ್ಧರಿಸಿದರು. ಕಾಂಗ್ರೆಸ್ಸಿನಲ್ಲಿ ನಾಯಕತ್ವ ವಹಿಸಿ, ಮೋದಿಯವರ ಸರ್ವಾಧಿಕಾರವನ್ನು ಕಿತ್ತೆಸೆಯುವ ಮಹಾನುಭಾವರು ಯಾರು ಎಂದು ತಲಾಷೆ ಮಾಡಲಾಯಿತು. ಬೂದುಗನ್ನಡಿ ಹಾಕಿಕೊಂಡು ಭಾರತದಲ್ಲೆಲ್ಲ ಹುಡುಕಿದರೂ ಅಂತಹ ಒಬ್ಬ ಭೂಪ ದೊರೆಯದಷ್ಟು ಬಲಹೀನವಾಗಿದೆ ಕಾಂಗ್ರೆಸ್.

ಹಳೆ ಗಂಡನ ಪಾದವೇ ಸರಿ ಎಂದು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸೋನಿಯಾ ಗಾಂಧಿಯವರನ್ನೇ ಮತ್ತೆ ಅಧ್ಯಕ್ಷರನ್ನಾಗಿ ಚುನಾಯಿಸಿದೆ. ಸೋನಿಯಾಗಾಂಧಿಯನ್ನು ಸುತ್ತುವರಿದು, ಕೆಲ ವಂದಿಮಾಗಧರಿದ್ದಾರೆ. ಅವರ ಹಿಡಿತದಿಂದ ತಪ್ಪಿಸಿಕೊಳ್ಳಲು ಸೋನಿಯಾಗಾಂಧಿಗೆ ಸಾಧ್ಯವೇ ಇಲ್ಲ. ಅಲ್ಲದೆ ಸೋನಿಯಾಗಾಂಧಿಗೆ ನಾಯಕತ್ವದ ಗುಣಗಳಿಲ್ಲ. ದೇಶವನ್ನು ಸುತ್ತಾಡಿ ಜನರನ್ನು ಸಂಘಟಿಸುವ ಶಕ್ತಿ ಅವರಿಗಿಲ್ಲ.
ದುರ್ಬಲಗೊಂಡಿರುವ ಕಾಂಗ್ರೆಸ್ ಮೊದಲ್ಗೊಂಡು ಭಾರತದಲ್ಲಿ ಎಲ್ಲ ಪಕ್ಷಗಳೂ ಸೊರಗಿನಿಂತಿವೆ. ಹೀಗಾಗಿ ಮೋದಿಯವರ ಏಕಚಕ್ರಾಧಿಪತ್ಯ ಅಡೆತಡೆಯಿಲ್ಲದೆ ನಡೆಯಲು ಸನ್ನಿವೇಶ ಅನುಕೂಲಕರವಾಗಿದೆ.

ರಾಜಕೀಯ ಪಕ್ಷಗಳೆಲ್ಲ ನಾಯಕರ ಅಭಾವದಿಂದ ಸೊರಗಿರುವಾಗ ಮೋದಿಯವರು ಪ್ರಜಾಪ್ರಭುತ್ವವನ್ನು ಉಳಿಸುವರೋ ಇಲ್ಲವೇ ಸರ್ವಾಧಿಕಾರಿ ನೀತಿಯನ್ನು ಅನುಸರಿಸುವರೋ ಎಂಬ ಆತಂಕ ಉಂಟಾಗಿದೆ. ಎಲ್ಲಾ ರಾಜಕೀಯ ಪಕ್ಷಗಳೂ ಅದರಲ್ಲೂ ಅಖಿಲ ಭಾರತ ವ್ಯಾಪ್ತಿಯ ಕಾಂಗ್ರೆಸ್ ಸಂಸ್ಥೆ ನಾಯಕತ್ವದ ಕೊರತೆಯಿಂದಾಗಿ ತತ್ತರಿಸುತ್ತಿರುವಾಗ ಪ್ರಜಾಸತ್ತೆಯನ್ನು ಉಳಿಸಿಕೊಳ್ಳುವ ಹೊಣೆಗಾರಿಕೆಯನ್ನು ಜನತೆ ವಹಿಸಿಕೊಳ್ಳುವುದು ಅನಿವಾರ್ಯವಾಗಿದೆ. ಪ್ರಜಾಪ್ರಭುತ್ವ ಮತ್ತು ರಾಜ್ಯಾಂಗವನ್ನು ರಕ್ಷಿಸುವ ಸಲುವಾಗಿ ಪ್ರಜೆಗಳು ಸಂಘಟಿತರಾಗಬೇಕಿದೆ. ದುರ್ಬಲ ರಾಜಕೀಯ ಪಕ್ಷಗಳು ಸೋತು ಸುಣ್ಣವಾಗಿರುವಾಗ ಪ್ರತಿಯೊಬ್ಬ ಪ್ರಜೆಯೂ ಪ್ರಜಾಪ್ರಭುತ್ವ ಉಳಿಸುವುದಕ್ಕೆ ನನ್ನ ಕಾಣಿಕೆ ಏನು ಎಂದು ವಿಚಾರ ಮಾಡಬೇಕಿದೆ.

ಜರ್ಮನಿಯ ಸರ್ವಾಧಿಕಾರಿ ಹಿಟ್ಲರ್ ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಒಂದೊಂದೇ ರಾಷ್ಟ್ರವನ್ನು ಯುದ್ಧದಲ್ಲಿ ಸೋಲಿಸುತ್ತಾ, ಪರ್ಲ್ ಹಾರ್ಬರ್ ವಶಪಡಿಸಿಕೊಳ್ಳುತ್ತಾನೆ. ಮದ್ರಾಸ್ ಕಡೆಗೆ ಅವನ ಸೈನ್ಯ ಹೊರಟಿದೆ ಎಂಬ ಸುದ್ದಿ ಗಾಂಧೀಜಿಗೆ ತಿಳಿಯುತ್ತದೆ. ಒಂದುವೇಳೆ ಭಾರತವನ್ನು ವಶಪಡಿಸಿಕೊಳ್ಳಲು ಹಿಟ್ಲರ್ ಬರುವುದಾದರೆ ಭಾರತೀಯ ಪ್ರಜೆಯಾಗಿ ನನ್ನ ಕರ್ತವ್ಯವೇನು ಎಂದು ಚಿಂತಿಸುತ್ತಾರೆ. ‘ಹಿಟ್ಲರ್‍ನ ಸೈನ್ಯವನ್ನು ನಾನು ಒಬ್ಬನೇ ಆದರೂ ಪ್ರತಿಭಟಿಸಬೇಕು’ ಎಂದು ತೀರ್ಮಾನಿಸುತ್ತಾರೆ.

‘ನನ್ನ ಹೆಣದ ಮೇಲೆ ಹಿಟ್ಲರ್ ತನ್ನ ಬಾವುಟ ಹಾರಿಸಬೇಕು’ ಎಂದು ನಿರ್ಧಾರ ಕೈಗೊಂಡು ಆಶ್ರಮವಾಸಿಗಳಲ್ಲಿ ಕುರಿತು ಚರ್ಚಿಸುತ್ತಾರೆ. ಆಶ್ರಮವಾಸಿಗಳೆಲ್ಲರೂ ಗಾಂಧಿಯವರೊಡನೆ ಕೈಜೋಡಿಸಲು ನಿರ್ಧರಿಸುತ್ತಾರೆ. ಗಾಂಧೀಜಿ ಹೇಳುತ್ತಾರೆ ‘ನಾವು 58 ಜನ ಈ ತೀರ್ಮಾನ ತೆಗೆದುಕೊಳ್ಳುವುದಾದರೆ, ಕಾಂಗ್ರೆಸ್ಸಿನ ಹತ್ತು ಸಾವಿರ ಮಂದಿ ಹಿಟ್ಲರ್‍ನನ್ನು ಎದುರಿಸಲು ನಿಲ್ಲುತ್ತಾರೆ. ಭಾರತದ ಒಂದು ಲಕ್ಷ ಜನ ಈ ಬಗೆಯ ಬಲಿದಾನಕ್ಕೆ ತಯಾರಾಗುತ್ತಾರೆ!’.

ಮೋದಿ ಸರ್ಕಾರ ಸರ್ವಾಧಿಕಾರಿ ಮನೋವೃತ್ತಿ ಬೆಳೆಸಿಕೊಂಡರೆ, ಗಾಂಧೀಜಿ ಹೇಳಿದಂತೆ ಪ್ರಜಾಪ್ರಭುತ್ವದ ಉಳಿವಿಗಾಗಿ ಭಾರತದ ಜನತೆ ಸರ್ವಾಧಿಕಾರದ ವಿರುದ್ಧ ಹೋರಾಡಲು ಸಿದ್ಧರಾಗಬೇಕು.

Swaraj is Abandonment of fear of Death. A nation which allows itself to be influenced by the fear of death cannot attain Swaraj and cannot retain it even if somehow attained.

– Gandiji in ‘Young – India’

13-10-1921

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿ ‘ಸಂವಿಧಾನ ಮತ್ತು ಮೀಸಲಾತಿ’ಯನ್ನು ರದ್ದುಗೊಳಿಸಲು ಬಯಸುತ್ತಿದೆ: ಲಾಲು ಪ್ರಸಾದ್ ಯಾದವ್

0
ಬಿಜೆಪಿ ಸಂವಿಧಾನ ಮತ್ತು ಮೀಸಲಾತಿಯನ್ನು ರದ್ದುಗೊಳಿಸಲು ಬಯಸುತ್ತಿದೆ, ಸರ್ಕಾರಿ ಉದ್ಯೋಗ ಮತ್ತು ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಮುಸ್ಲಿಮರು ಕೂಡ ಮೀಸಲಾತಿಯನ್ನು ಪಡೆಯಬೇಕು, ಅವರ ಮೀಸಲಾತಿ ಪರವಾಗಿ ನಾನಿದ್ದೇನೆ ಎಂದು ರಾಷ್ಟ್ರೀಯ ಜನತಾ ದಳ(ಆರ್‌ಜೆಡಿ)...