Homeಕರ್ನಾಟಕಸೇವ್ ಉತ್ತರ ಕನ್ನಡ: ನೋ ಎನ್ನುತ್ತಿದ್ದಾರೆ ಸಂಸದ ಅನಂತ್ ಕುಮಾರ್ ಹೆಗಡೆ ಮತ್ತು ಸರ್ಕಾರ

ಸೇವ್ ಉತ್ತರ ಕನ್ನಡ: ನೋ ಎನ್ನುತ್ತಿದ್ದಾರೆ ಸಂಸದ ಅನಂತ್ ಕುಮಾರ್ ಹೆಗಡೆ ಮತ್ತು ಸರ್ಕಾರ

- Advertisement -
- Advertisement -

ಮಳೆಗೆ ಉತ್ತರಕನ್ನಡ ಒದ್ದೆಮುದ್ದೆಯಾಗಿ ಒದ್ದಾಡುತ್ತಿದೆ! ಬದುಕು ಅಕ್ಷರಶಃ ಮುಳುಗಿದೆ. ಜಿಲ್ಲೆಯ ಒಟ್ಟು ಹನ್ನೆರಡೂ ತಾಲ್ಲೂಕಿನಲ್ಲಿ ಎಲ್ಲಿ ನಿಂತು ನೋಡಿದರೂ ನೀರೇ ನೀರು!! ಆಗಸ್ಟ್ 1ರಿಂದ 7ರ ತನಕ ಬರೋಬ್ಬರಿ 571 ಮಿಮೀ ಮಳೆ ದೋ ಎಂದು ಒಂದೇಸಮನೆ ಜಡಿದು ಸಾವಿರಾರು ಕುಟುಂಬಗಳನ್ನು ಬೀದಿ ಪಾಲಾಗಿಸಿದೆ. ಗದ್ದೆ-ತೋಟ, ಮನೆ, ರಸ್ತೆ, ಶಾಲೆ, ವಿದ್ಯುತ್ ಸಂಪರ್ಕ…… ಎಲ್ಲವೂ ನೆರೆಯಲ್ಲಿ ಕದಡಿಹೋಗಿದೆ. ಜಿಲ್ಲೆಯ ಜೀವವಾಹಿನಿಗಳು ಎನಿಸಿದ್ದ ಕಾಳಿ, ಗಂಗಾವಳಿ, ಬೇಡ್ತಿ, ಶರಾವತಿ, ಅಘನಾಶಿನಿ, ವರಧಾಮ ಶಾಲ್ಮಲಾ, ಪಾಂಡ್ರಿ, ಚೌಥನಿ, ವೆಂಕಟಾಪುರ ನದಿಗಳು ಉಕ್ಕುಕ್ಕಿ ಹರಿದು ಅಮಾಯಕರ ಜೀವ-ಜೀವನ ಆಪೋಷನ ಪಡೆದಿದೆ!!!

ಸದಾ ಮಳೆಯಿಲ್ಲದೆ ಬರದಲ್ಲಿ ಬಸವಳಿಯುತ್ತಿದ್ದ ಮುಂಡಗೋಡ ಮತ್ತು ಹಳಿಯಾಳ ತಾಲ್ಲೂಕುಗಳೂ ಈ ಯಮ ಮಳೆಗೆ ಕೊಚ್ಚಿಹೋಗಿವೆ. ಸರ್ಕಾರಿ ಲೆಕ್ಕಾಚಾರ ಏನೇ ಇರಲಿ, ನೆರೆಹಾವಳಿಯಿಂದ ಹತ್ತಿರತ್ತಿರ ಎರಡು ನೂರು ಗ್ರಾಮಗಳು ಮುಳುಗಡೆ ಆಗಿವೆ. 24 ಸೇತುವೆಗಳು ಪ್ರವಾಹದಲ್ಲಿ ಕಣ್ಮರೆಯಾಗಿದ್ದವು. ಅಷ್ಟೇ ಪ್ರಮಾಣದ ರಸ್ತೆಗಳು ಚಿಂದಿ ಎದ್ದುಹೋಗಿವೆ. 2,000ದಷ್ಟು ಮನೆಗಳು ಜಲಯಜ್ಞಕ್ಕೆ ಹವಿಸ್ಸಾಗಿವೆ. ಕಣ್ಮರೆಯಾದ ಜನ-ಜಾನುವಾರುಗಳ ಲೆಕ್ಕ ಇನ್ನೂ ಸರಿಯಾಗಿ ಸಿಗುತ್ತಿಲ್ಲ. ಸಾವಿರಾರು ಕುಟುಂಬಗಳ ಕಮ್ಮಿಯೆಂದರೂ 10,000 ಮಂದಿ ತಾತ್ಕಾಲಿಕ ಕ್ಷೇಮ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ. ಹತ್ತಿರತ್ತಿರ ನೂರು ಪರಿಹಾರ ಕೇಂದ್ರಗಳನ್ನು ಜಿಲ್ಲಾಡಳಿತ ತೆರೆದಿದೆ.

ರಾಜ್ಯ ಹೆದ್ದಾರಿಗಳಲ್ಲಿ ಗುಡ್ಡ ಕುಸಿದು ಅಥವಾ ರಸ್ತೆಗಳೇ ಬಿರುಕುಬಿಟ್ಟು, ಸೇತುವೆಗಳು ಜಖಮ್ ಆಗಿ ನೂರಾರು ಹಳ್ಳಿಗಳು ನಡುಗಡ್ಡೆಗಳಂತಾಗಿವೆ. ದೇವಿಮನೆ, ಅರಬೈಲ್, ಕೋಗಾರ, ಬಡಳ, ವಡ್ಡಿ, ಶೇವಕಾರ ಘಟ್ಟ ಪ್ರದೇಶದಲ್ಲಿ ಸಂಚಾರ ಅಪಾಯಕಾರಿಯಾಗಿದೆ. ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ಕಂಬಗಳು ಸಾಲಾಗಿ ಮುರಿದು ಬಿದ್ದಿವೆ; ಮೊಬೈಲ್ ಟವರ್‍ಗಳು ಸ್ಥಗಿತಗೊಂಡಿವೆ. ಹಳ್ಳಿ-ಹಳ್ಳಿಗಳು ವಿದ್ಯುತ್ ದೀಪ ಬೆಳಗದೆ ಗಾಡಾಂಧಕಾರದಲ್ಲಿ ಮುಳುಗಿವೆ. ಇದೆಲ್ಲ ಸರಿ ಮಾಡಲು ಜಿಲ್ಲಾಡಳಿತಕ್ಕೆ ತಿಂಗಳುಗಳೇ ಬೇಕು! ಜನರ ಪರದಾಟ ಹೇಳತೀರದು.

ಈ ವರದಿ ಸಿದ್ಧವಾಗುತ್ತಿರುವ ಹೊತ್ತಿಗೆ ಮಳೆಯ ಆರ್ಭಟ ನಿಂತಿದೆ. ಎಲ್ಲಾ ನದಿ-ಹೊಳೆಗಳ ನೆರೆ ಇಳಿದಿದೆ. ಜಿಲ್ಲೆಯ ಅಷ್ಟೂ ನದಿ ದಡದ ಹಳ್ಳಗಳಲ್ಲೀಗ ಕಾಣುತ್ತಿರುವುದು ನರಕಸದೃಶ ಪರಿಸ್ಥಿತಿ! ಅಡಿಗಟ್ಟಲೆ ಕೆಸರು, ಉರುಳಿದ ಮನೆ, ಅಂಗಡಿ ಮುಂಗಟ್ಟುಗಳು; ಕೊಚ್ಚಿಹೋದ ಅಡಿಕೆ ತೋಟ, ಭತ್ತದ ಗದ್ದೆ, ಮೂಲಭೂತ ಸೌಕರ್ಯದ ಅವಶೇಷಗಳು. ನಿಧಾನವಾಗಿ ಕ್ಷೇಮ ಕೇಂದ್ರಗಳಿಂದ ಸಂತ್ರಸ್ತರು ಮನೆಗಳತ್ತ ಹೋಗುತ್ತಿದ್ದಾರೆ. ಸಂಗ್ರಹಿಸಿಟ್ಟುಕೊಂಡಿದ್ದ ಅಕ್ಕಿ, ಬೇಳೆ, ಬಟ್ಟೆ, ಮಕ್ಕಳ ಪಾಟಿ ಪುಸ್ತಕ, ನೋಟ್‍ಬುಕ್, ರೇಷನ್ ಕಾರ್ಡು, ಆಧಾರ್ ಕಾರ್ಡು, ಗ್ಯಾಸ್ ಒಲೆ……. ಹೀಗೆ ಎಲ್ಲವೂ ನೀರುಪಾಲಾಗಿವೆ. ಮನೆ ಬಾಗಿಲು ತೆರೆದರೆ ನೆರೆಯಲ್ಲಿ ತೇಲಿಬಂದ ವಿಷಕಾರಿ ಹಾವು-ಸರೀಸೃಪಗಳು ಬುಸುಗುಡುತ್ತಿವೆ. ಸತ್ತ ಪ್ರಾಣಿಗಳ ದುರ್ನಾತ! ಬದುಕು ಮುಂದ್ಹೇಗೆಂಬ ಆತಂಕದಲ್ಲಿ ಜನರು ದಿಕ್ಕೆಟ್ಟು ನಿಂತಿದ್ದಾರೆ.

ಈ ಭೀಭತ್ಸ ನೆರೆಯಿಂದ ಸಂತ್ರಸ್ತರಾದವರಿಗೆ ಜಿಲ್ಲಾಧಿಕಾರಿ ಹರೀಶ್‍ಕುಮಾರ್ ಕೆಪ್ಟನಿಕೆಯ ಜಿಲ್ಲಾಡಳಿತ ಬದ್ಧತೆಯಿಂದ, ಕರ್ತವ್ಯನಿಷ್ಠೆಯಿಂದ ನೆರವಾಗಿದೆ ಎಂಬುದಕ್ಕೆ ಎರಡು ಮಾತೇ ಇಲ್ಲ. ಜಿಲ್ಲಾಡಳಿತ ಸುರಿವ ಅನಾಹುತಕಾರಿ ಮಳೆಯಲ್ಲಿ ಹಗಲಿರುಳೂ ನೊಂದವರಿಗೆ ಸ್ಪಂದಿಸಿದೆ. ಸರ್ಕಾರೇತರ ಸಂಘ-ಸಂಸ್ಥೆಗಳೂ ನೆಲೆ ಕಳಕೊಂಡವರಿಗೆ ಕಳಕಳಿಯಿಂದ ಸಹಾಯ ಮಾಡಿದ್ದಾರೆ. ಆದರೆ ಯಡ್ಡಿ ಮಹಾತ್ಮನ ‘ಏಕವ್ಯಕ್ತಿ’ ಸರ್ಕಾರದಿಂದ ಉತ್ತರ ಕನ್ನಡದ ನೆರೆ ಪೀಡಿತರಿಗೆ ತಕ್ಷಣದ ಪರಿಹಾರ-ಸಾಂತ್ವನ ಯಾವುದೂ ಸಿಗಲಿಲ್ಲ. ನೆರೆ ನೋಡಲು ಬಾಗಲಕೋಟೆ, ಬೆಳಗಾವಿಗೆ ಹೋಗಿದ್ದ ಯಡ್ಡಿಯ ಕಾಪ್ಟರ್ ಉತ್ತರ ಕನ್ನಡದತ್ತ ಹೊರಳಲೇ ಇಲ್ಲ.

ಆಳುವ ಸರ್ಕಾರಗಳಿಗೆ ನಮ್ಮತ್ತ ಯಾಕಿಂಥ ತಾತ್ಸಾರ ಎಂದು ಉತ್ತರ ಕನ್ನಡ ಜಿಲ್ಲೆಯ ಜನ ಕೇಳಿಕೊಳ್ಳಲು ಶುರು ಮಾಡಿದ್ದಾರೆ. ಹಾಗೆ ನೋಡಿದರೆ, ಜಿಲ್ಲೆ ತನ್ನ ಸಿರಿಸಂಪತ್ತನ್ನೆಲ್ಲಾ ರಾಜ್ಯ-ರಾಷ್ಟ್ರದ ಕಲ್ಯಾಣಕ್ಕಾಗಿ ಕೊಡುತ್ತಲೇ ಬಂದಿದೆ. ಇಲ್ಲಾಗಿರುವ ಜಲವಿದ್ಯುತ್ ಯೋಜನೆಯಿರಲಿ, ಕೈಗಾ ಅಣು ಸ್ಥಾವರವಿರಲಿ, ಕುದಂಬ ನೌಕಾನೆಲೆಯಾಗಲಿ ಸ್ಥಳೀಯ ಉದ್ಧಾರಕ್ಕೆ ಬಂದಿದ್ದಲ್ಲ. ಜಿಲ್ಲೆ ಮಾಡಿರುವ ಪ್ರತಿ ತ್ಯಾಗದ ಹಿಂದೆ ರಾಜ್ಯ-ರಾಷ್ಟ್ರದ ಹಿತವೇ ಅಡಗಿದೆ. ಇಲ್ಲಿನ ಮರ-ಮಟ್ಟು, ವನಸ್ವತಿ, ನೀರು, ಮೀನು, ವಿದ್ಯುತ್, ಉಪ್ಪು, ಪ್ರವಾಸಿತಾಣಗಳ ಮೂಲಕ ದೊಡ್ಡ ಮಟ್ಟದ ಆದಾಯ ಗಳಿಸುತ್ತಿರುವ ರಾಜ್ಯ ಸರ್ಕಾರ ಇಷ್ಟೇಕೆ ಕಡೆಗಣಿಸುತ್ತಿದೆ ಉತ್ತರ ಕನ್ನಡವನ್ನು? ಪ್ರವಾಹದಿಂದ ಬದುಕು ಕಳೆದುಕೊಂಡ ಜನರ ನಡುವೆ ಇಂತಹದ್ದೊಂದು ಆಕ್ರೋಶದ ಪ್ರಶ್ನೆ ಹುಲುಸಾಗೇ ಬೆಳೆಯುತ್ತಿದೆ.

ಹೀಗಾಗಿಯೇ ಈಗ ಸಾಮಾಜಿಕ ಜಾಲತಾಣಗಳಲ್ಲಿ “ಸೇವ್ ಉತ್ತರ ಕನ್ನಡ” ಎಂಬ ಕೂಗೆದ್ದಿದೆ. ಜಲಪ್ರಳಯದ ಸಂತ್ರಸ್ತರ ವಾಟ್ಸಪ್ ಗ್ರೂಪ್ ಹುಟ್ಟುಹಾಕಲಾಗಿದೆ. ಜಲಕಂಟಕದ ಚಿತ್ರಣಗಳು ಎಲ್ಲೆಡೆ ಹರಿದಾಡುತ್ತಿವೆ. ಚಲನಚಿತ್ರರಂಗ, ಸಾಹಿತಿಗಳು, ಉದ್ಯೋಗಿಗಳು, ಉದ್ಯಮಿಗಳು ಯಾನದಲ್ಲಿ ಸೇರಿಕೊಂಡಿದ್ದಾರೆ. ನಟ ಉಪೇಂದ್ರ ಐದು ಲಕ್ಷ ಪರಿಹಾರ ಧನ ಕೊಟ್ಟು ತಕ್ಷಣಕ್ಕೆ ಸ್ಪಂದಿಸಿದ್ದಾರೆ. ಯಾಕೆ ಆಳುವವರು ಉತ್ತರ ಕನ್ನಡವನ್ನು ನಿರ್ಲಕ್ಷ್ಯ ಮಾಡುತ್ತಾರೆ? ಕೇರಳ-ಕೊಡಗಲ್ಲಿ ಮಳೆ ಪ್ರಳಯ ಆದಾಗ ಧಾವಿಸಿದವರಿಗೇಕೆ ಜಿಲ್ಲೆಯ ಗೋಳು ಕಾಣಿಸುತ್ತಿಲ್ಲ? ಶರಾವತಿ ನೀರು, ಅಘನಾಶಿನಿ ನೀರು ಬೇಕೆನ್ನುವವರು, ಕಾಳಿ, ಶರಾವತಿ ನದಿ ನೀರಿಂದಾದ ವಿದ್ಯುತ್ ಪ್ರಯೋಜನ ಪಡೆಯುತ್ತಿರುವವರಿಗೆಲ್ಲ ಋಣ ತೀರಿಸಬೇಕೆಂಬ ಸಣ್ಣ ಮಾನವೀಯತೆಯೂ ಇಲ್ಲದಾಯಿತಾ? ಈ ಪ್ರಶ್ನೆ ಸೇವ್ ಉತ್ತರ ಕನ್ನಡ ಅಭಿಯಾನವನ್ನು ಕಾಡುತ್ತಿದೆ.

ಆಳುವವರು ಉತ್ತರ ಕನ್ನಡದ ನೆರೆಪೀಡಿತರಿಗೆ ನ್ಯಾಯ ಕೊಡಿಸಿ ಅವರು ಸ್ವಾವಲಂಬನೆಯಿಂದ ಬದುಕಲು ಅವಕಾಶ ಮಾಡಿಕೊಡುತ್ತದೆಂಬ ಯಾವ ಭರವಸೆಯೂ ಇಲ್ಲ. ಈ ಸಂಶಯಕ್ಕೆ ಹಿಂದೆಲ್ಲಾ ನೆರೆಯಿಂದ ನೊಂದವರಿಗೆ ಸರ್ಕಾರಿ ಮಂದಿಯಿಂದಾದ ಅನ್ಯಾಯವೇ ಕಾರಣ. ಈಗ ನೊಂದವರಿಗಾಗಿ ಪರಿಹಾರ ಸಾಮಗ್ರಿ ಎಲ್ಲೆಲ್ಲಿಂದಲೋ ಹರಿದುಬರುತ್ತಿದೆ. ಅವೆಲ್ಲ ಸರಿಯಾಗಿ ಹಂಚಿಕೆಯಾಗುತ್ತವೆಂದು ಹೇಳಲಾಗದು. ಇದು ಹಿಂದಿನ ಅನುಭವ. ಆಧಾರ್, ರೇಷನ್ ಕಾರ್ಡ್‍ನಂಥ ದಾಖಲೆಗಳನ್ನೇ ನೆರೆಯಲ್ಲಿ ಕಳಕೊಂಡವರನ್ನು ಕಳ್ಳರಂತೆ ಅಧಿಕಾರಿಗಳು ನೋಡುವ ಸಾಧ್ಯತೆಯೇ ಹೆಚ್ಚು. ಹಿಂದೆಲ್ಲ ಪ್ರವಾಹ ಪೀಡಿತರಿಗೆ ಪರಿಹಾರದ ಚೆಕ್ ಕೊಡುವಾಗ ಪರ್ಸೆಂಟೇಜ್ ಕೇಳಿದ್ದೂ ಇದೆ. ಸಂತ್ರಸ್ತರೊಂದಿಗೆ ಗೌರವಯುತವಾಗಿ, ಮಾನವೀಯವಾಗಿ ನಡೆದುಕೊಳ್ಳುವ ಪಾಠ ಅಧಿಕಾರಿ ವರ್ಗಕ್ಕೆ ಆಡಳಿತಗಾರರು ಕಲಿಸಬೇಕಾಗಿದೆ. ಪ್ರವಾಹಪೀಡಿತರ ಮನೆ ಮುಳುಗಿರಬಹುದು, ಮಾನ ಮುಳುಗಿಲ್ಲ ಎಂಬ ಎಚ್ಚರಿಕೆ ಅಧಿಕಾರಿ ಗಣಕ್ಕೆ ಇರಬೇಕು!!

ಉತ್ತರ ಕನ್ನಡದಲ್ಲಷ್ಟೇ ಅಲ್ಲ, ಇಡೀ ರಾಜ್ಯದಲ್ಲಾಗಿರುವ ಪ್ರವಾಹ ಪ್ರಕೋಪದ ಗಂಡಾಂತರ ಆಪರೇಷನ್ ಕಮಲದ ಅಡ್ಡ ಪರಿಣಾಮ ಎಂದರೂ ತಪ್ಪಾಗಲಿಕ್ಕಿಲ್ಲ. ಎರಡು ತಿಂಗಳ ಹಿಂದೆಯೇ ಅಧಿಕಾರಿಗಳ ಸಭೆ ಸಡೆಸಿ ಪ್ರವಾಹ, ಅತಿವೃಷ್ಟಿ ಸಮಸ್ಯೆ ಎದುರಿಸುವ ಸಿದ್ಧತೆ ಮಾಡಿಕೊಳ್ಳಬೇಕಿತ್ತು. ಆದರೆ ಈ ಅವಧಿಯಲ್ಲಿ ಬಿಜೆಪಿಗರು ಸರ್ಕಾರ ಉರುಳಿಸುವ ಚಟಕ್ಕೆ ಬಿದ್ದರೆ, ಸಿಎಂ ಆಗಿದ್ದ ಕುಮ್ಮಿ ಅಧಿಕಾರ ಉಳಿಸಿಕೊಳ್ಳುವ ತೆವಲಿಗೆ ಬಿದ್ದರು. ಹೀಗಾಗಿ ಅಧಿಕಾರಿಗಳು ಲಂಗು-ಲಗಾಮಿಲ್ಲದೆ ಹಾಯಾಗಿ ಉಳಿದುಬಿಟ್ಟರು. ಇಂಥ ಗತಿಗೇಡಿ ಸಂದರ್ಭದಲ್ಲಿ ಅಧಿಕಾರಿಗಳಿಗೆ ಪ್ರವಾಹ ಪ್ರಕೋಪ, ಮಳೆ ಅನಾಹುತದ ಬಗ್ಗೆ ತಲೆಕೆಡಿಸಿಕೊಳ್ಳಲು ಸಾಧ್ಯವಾ?
ಹೀಗಾಗಿ ರಾಜ್ಯ ಮುಳುಗಿದೆ!!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಡ ಜನರಿಗೆ ಬದುಕು ಕಟ್ಟಿಕೊಳ್ಳಲು ನೆರವಾದ ‘ಕಾಂಗ್ರೆಸ್‌’ ಸರಕಾರದ ‘ಗ್ಯಾರಂಟಿ ಯೋಜನೆ’ ಬಗ್ಗೆ ತೇಜಸ್ವಿ...

0
ಕರ್ನಾಟಕದ ಕಾಂಗ್ರೆಸ್‌ ಸರಕಾರ ಜಾರಿಗೆ ತಂದಿದ್ದ ಪಂಚ ಗ್ಯಾರಂಟಿಗಳ ಬಗ್ಗೆ ತುಚ್ಛವಾಗಿ ಮಾತನಾಡಿದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ, ರಾಜ್ಯದ ಕೋಟ್ಯಾಂತರ ಜನರಿಗೆ ಆಶ್ರಯವಾದ ಗ್ಯಾರಂಟಿ ಯೋಜನೆಗಳನ್ನು 'ಮತಿ ಹೀನ ಉಚಿತ ಕೊಡುಗೆ'...