Homeಸಿನಿಮಾಕ್ರೀಡೆಈಗ ಎಲ್ಲೆಲ್ಲೂ ಕಬಡ್ಡಿ.. ಕಬಡ್ಡಿ...

ಈಗ ಎಲ್ಲೆಲ್ಲೂ ಕಬಡ್ಡಿ.. ಕಬಡ್ಡಿ…

- Advertisement -
- Advertisement -

ಪ್ರೊ.ಕಬಡ್ಡಿ: ಐದು ವರ್ಷಗಳ ಹಿಂದೆ ಆರಂಭವಾದ ಈ ಲೀಗ್ ಕಬಡ್ಡಿಯ ಕಂಪನ್ನು ವಿಶ್ವದಾದ್ಯಂತ ಪಸರಿಸಿದೆ. ಅಳಿವಿನ ಅಂಚಿನತ್ತ ಸಾಗಿದ್ದ ಗ್ರಾಮೀಣ ಕ್ರೀಡೆಗೆ ಹೊಸ ಮೆರಗು ನೀಡಿದೆ.

ಹಳ್ಳಿಜನರ ಜೀವನಾಡಿಯಾಗಿದ್ದ ಈ ಆಟ ಈಗ ಮಹಾನಗರಗಳಿಗೂ ವ್ಯಾಪಿಸಿದೆ. ಸಂಜೆಯಾಯಿತೆಂದರೆ ಪಟ್ಟಣದ ರಸ್ತೆಗಳಲ್ಲಿ ಮಕ್ಕಳು ಕ್ರಿಕೆಟ್ ಬದಲು ಕಬಡ್ಡಿ ಆಡುವುದು ಸಾಮಾನ್ಯವಾಗಿದೆ.

ಕೆಳ ಮತ್ತು ಮಧ್ಯಮ ವರ್ಗದವರ ಮೆಚ್ಚಿನ ಆಟ ಕಬಡ್ಡಿ. ಇದು ಬಾಂಗ್ಲಾದೇಶದ ರಾಷ್ಟ್ರೀಯ ಕ್ರೀಡೆಯೂ ಹೌದು. ಅಲ್ಲಿ ಈ ಆಟವನ್ನು ಹಾ-ಡು-ಡು ಎಂದು ಕರೆಯುತ್ತಾರೆ. ನಮ್ಮ ಪೂರ್ವಿಕರ ಕಾಲದಲ್ಲಿ ಮಣ್ಣಿನ ಅಂಕಣದಲ್ಲಿ ಈ ಆಟ ಆಡಲಾಗುತ್ತಿತ್ತು. ಹೀಗಾಗಿ ಮೇಲ್ವರ್ಗದವರಿಗೆ ಈ ಆಟ ಅಷ್ಟಾಗಿ ರುಚಿಸುತ್ತಿರಲಿಲ್ಲ. ಆದರೆ ಈಗ ಎಲ್ಲವೂ ಬದಲಾಗಿದೆ. ಕಬಡ್ಡಿ ಎಂದರೆ ಮೂಗು ಮುರಿಯುತ್ತಿದ್ದ ಮೇಲ್ವರ್ಗದ ಮಂದಿ ಈ ಕ್ರೀಡೆಯನ್ನು ವೃತ್ತಿಪರವಾಗಿ ಸ್ವೀಕರಿಸಿ ಇದರಲ್ಲಿ ಬದುಕು ಕಟ್ಟಿಕೊಳ್ಳಲು ಮುಂದಾಗುತ್ತಿದ್ದಾರೆ. ಇಂತಹದೊಂದು ಮಹತ್ತರ ಬದಲಾವಣೆಗೆ ಕಾರಣವಾಗಿರುವುದು ಪ್ರೊ.ಕಬಡ್ಡಿ.

ಭಾರತದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್ ಟೂರ್ನಿ ಸೃಷ್ಟಿಸಿದ ಸಂಚಲನ ಅಷ್ಟಿಷ್ಟಲ್ಲ. ಈ ಲೀಗ್ ಆರಂಭವಾದ ಬಳಿಕ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಬೊಕ್ಕಸಕ್ಕೆ ಹಣವು ಹೊಳೆಯಾಗಿ ಹರಿದು ಬಂದಿತ್ತು. ಬಿಸಿಸಿಐ, ವಿಶ್ವ ಕ್ರಿಕೆಟ್‍ನ ದೊಡ್ಡಣ್ಣನಾಗಿ ಮೆರೆಯುವಲ್ಲಿ ‘ಮಿಲಿಯನ್ ಡಾಲರ್ ಬೇಬಿ’ ಐಪಿಎಲ್‍ನ ಕೊಡುಗೆ ಮಹತ್ವದ್ದಾಗಿತ್ತು. ಈ ಲೀಗ್‍ನ ಯಶಸ್ಸಿನಿಂದ ಪ್ರೇರಣೆ ಪಡೆದು ಶುರುವಾಗಿದ್ದೇ ಪ್ರೊ.ಕಬಡ್ಡಿ ಲೀಗ್ (ಪಿಕೆಎಲ್).

ಸ್ಟಾರ್ ಇಂಡಿಯಾ ಹಾಗೂ ಮಷಾಲ್ ಸ್ಪೋರ್ಟ್ಸ್ ಸಂಸ್ಥೆಗಳ ಕನಸಿನ ಕೂಸಾಗಿರುವ ಪಿಕೆಎಲ್ ಆರಂಭವಾಗಿದ್ದು 2014ರಲ್ಲಿ. ಅದಾಗಲೇ ಭಾರತದಲ್ಲಿ ಲೀಗ್‍ಗಳ ಪರ್ವ ಶುರುವಾಗಿತ್ತು. ಹಲವು ಲೀಗ್‍ಗಳು ನೆಲ ಕಚ್ಚಿದ್ದವು. ಹೀಗಾಗಿ ಪಿಕೆಎಲ್ ಯಶಸ್ವಿಯಾಗುವ ನಂಬಿಕೆ ಯಾರಿಗೂ ಇರಲಿಲ್ಲ. ಆದರೆ ಈ ಲೀಗ್ ಚೊಚ್ಚಲ ಆವೃತ್ತಿಯಲ್ಲೇ ಮೋಡಿ ಮಾಡಿ ಹೊಸ ಮನ್ವಂತರಕ್ಕೆ ನಾಂದಿ ಹಾಡಿತ್ತು. ದಾಖಲೆಯ 43.5 ಕೋಟಿ ಮಂದಿ ಟಿ.ವಿ.ಯಲ್ಲಿ ಪಂದ್ಯಗಳನ್ನು ವೀಕ್ಷಿಸಿದ್ದರು. ಪಂದ್ಯಗಳು ನಡೆಯುವ ದಿನ ಕ್ರೀಡಾಂಗಣಗಳೂ ಪ್ರೇಕ್ಷಕರಿಂದ ತುಂಬಿಹೋಗಿದ್ದವು. ಎರಡನೇ ಆವೃತ್ತಿ ಕೂಡ ಯಶಸ್ವಿಯಾಯಿತು.

ಪ್ರೇಕ್ಷಕರ ನಾಡಿಮಿಡಿತ ಅರಿತ ಮಷಾಲ್ ಸ್ಪೋರ್ಟ್ಸ್ 2016ರಲ್ಲಿ ದೊಡ್ಡ ಸಾಹಸಕ್ಕೆ ಕೈಹಾಕಿತು. ಒಂದೇ ವರ್ಷದಲ್ಲಿ ಎರಡು ಬಾರಿ ಲೀಗ್ ನಡೆಸುವ ನಿರ್ಧಾರ ಕೈಗೊಂಡಿತು. ಜನವರಿ-ಫೆಬ್ರವರಿ ಹಾಗೂ ಜೂನ್-ಜುಲೈನಲ್ಲಿ ಲೀಗ್ ಆಯೋಜನೆಯಾಗಿತ್ತು. ಇವುಗಳಿಗೂ ಅಪಾರ ಜನಮನ್ನಣೆ ಲಭಿಸಿತು.

ಬಣ್ಣಬಣ್ಣದ ಬೆಳಕಿನಲ್ಲಿ, ಅತ್ಯಾಧುನಿಕ ಟರ್ಫ್ ಅಂಗಳದಲ್ಲಿ ನಡೆದ ಪಂದ್ಯಗಳು ಅಭಿಮಾನಿಗಳನ್ನು ಆಕರ್ಷಿಸಿದವು. ರೋಚಕ ತಿರುವುಗಳೊಂದಿಗೆ ಸಾಗುತ್ತಿದ್ದ 40 ನಿಮಿಷಗಳ ಆಟ ಅಭಿಮಾನಿಗಳನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿತ್ತು. ಅನೂಪ್ ಕುಮಾರ್, ರಾಕೇಶ್‍ಕುಮಾರ್, ಮಂಜೀತ್ ಚಿಲ್ಲರ್, ಅಜಯ್‍ಠಾಕೂರ್, ರಿಷಾಂಕ್ ದೇವಾಡಿಗ, ಪ್ರದೀಪ್ ನರ್ವಾಲ್, ದೀಪಕ್ ನಿವಾಸ್ ಹೂಡಾ ಅವರ ಮಿಂಚಿನ ರೈಡ್‍ಗಳು, ಆಕರ್ಷಕ ಕಿಕ್ ಮತ್ತು `ಡುಬ್ಕಿ’ಗಳಿಗೆ ಪ್ರೇಕ್ಷಕರು `ಫಿದಾ’ ಆದರು. ಪ್ರಮುಖ ಡಿಫೆಂಡರ್‍ಗಳ ‘ಸೂಪರ್ ಟ್ಯಾಕಲ್’ಗಳು ಅಭಿಮಾನಿಗಳನ್ನು ಪುಳಕಿತರನ್ನಾಗಿಸಿದ್ದವು.

ಇದರ ಫಲವಾಗಿ ಭಾರತದಲ್ಲಿ ಐಪಿಎಲ್ ನಂತರ ಅತೀ ಹೆಚ್ಚು ಮಂದಿ ಟಿ.ವಿ.ಯಲ್ಲಿ ವೀಕ್ಷಿಸಿದ ಲೀಗ್ ಎಂಬ ಹಿರಿಮೆಗೆ ಪಿಕೆಎಲ್ ಭಾಜನವಾಯಿತು. 2016ರಿಂದ 2017ರ ಅವಧಿಯಲ್ಲಿ ಟಿ.ವಿ.ಯಲ್ಲಿ ಪ್ರೊ.ಕಬಡ್ಡಿ ವೀಕ್ಷಿಸಿದವರ ಸಂಖ್ಯೆ ಬರೋಬ್ಬರಿ 10 ಕೋಟಿ ಹೆಚ್ಚಳವಾಯಿತು. ಹೀಗಾಗಿ ಕಾಂಚಾಣವೂ ಕುಣಿಯಲಾರಂಭಿಸಿತು. ನಾಲ್ಕನೇ ಆವೃತ್ತಿಯಲ್ಲಿ ಜಾಹೀರಾತು ಮೂಲಗಳಿಂದ ಆಯೋಜಕರ ಖಜಾನೆಗೆ 70 ಕೋಟಿ ರೂಪಾಯಿ ಸಂದಾಯವಾಗಿತ್ತು. ಐದನೇ ಆವೃತ್ತಿ ವೇಳೆಗೆ ಈ ಮೊತ್ತ 150 ಕೋಟಿ ತಲುಪಿತು.

ಈ ನಡುವೆ ವಿವೊ ಮೊಬೈಲ್ ಸಂಸ್ಥೆ 300 ಕೋಟಿ ಮೊತ್ತಕ್ಕೆ ಪಿಕೆಎಲ್‍ನ ಪ್ರಾಯೋಜಕತ್ವದ ಹಕ್ಕು (ಐದು ವರ್ಷಗಳ ಅವಧಿಗೆ) ಖರೀದಿಸಿ ಎಲ್ಲರ ಹುಬ್ಬೇರುವಂತೆ ಮಾಡಿತ್ತು. ಸಹಾಯಕ ಪ್ರಾಯೋಜಕತ್ವ ಹೊಂದಿದ್ದ ನಾಲ್ಕು ಕಂಪನಿಗಳಿಂದ ವಾರ್ಷಿಕ ತಲಾ 10 ಕೋಟಿ ಹಣವೂ ಪಿಕೆಎಲ್ ಬೊಕ್ಕಸಕ್ಕೆ ಸೇರಿತು. ಐಪಿಎಲ್ ನಂತರ ಅತಿಹೆಚ್ಚು ಪ್ರಾಯೋಜಕತ್ವ ಪಡೆದ ಲೀಗ್ ಎಂಬ ಶ್ರೇಯವೂ ಪ್ರೊ.ಕಬಡ್ಡಿಗೆ ಸಂದಿತು.

ಲೀಗ್‍ನ ಮೆರಗು ಹೆಚ್ಚಿಸುವ ಮತ್ತು ಇದರ ಬೇರುಗಳನ್ನು ಇನ್ನಷ್ಟು ಆಳಕ್ಕೆ ಇಳಿಸುವ ಉದ್ದೇಶದಿಂದ ಆಯೋಜಕರು 2017ರಲ್ಲಿ ಒಟ್ಟು ತಂಡಗಳ ಸಂಖ್ಯೆಯನ್ನು 12ಕ್ಕೆ ಹೆಚ್ಚಿಸಿದರು. ಜೊತೆಗೆ ಹೊಸದಾಗಿ ಆಟಗಾರರ ಹರಾಜನ್ನೂ ನಡೆಸಿದರು. ದೇಶ ವಿದೇಶದ 400 ಮಂದಿಗೆ ಹರಾಜು ಪಟ್ಟಿಯಲ್ಲಿ ಸ್ಥಾನ ಲಭಿಸಿತ್ತು. ಇವರನ್ನು ಖರೀದಿಸಲು 12 ಫ್ರಾಂಚೈಸ್‍ಗಳು ಒಟ್ಟು 46.99 ಕೋಟಿ ಹಣ ವಿನಿಯೋಗಿಸಿದವು. ಇದು ಲೀಗ್‍ನ ‘ಶ್ರೀಮಂತಿಕೆ’ಯನ್ನು ಸಾರಿ ಹೇಳಿತ್ತು.

ಕೋಟಿ ಕುಳಗಳಾದ ಆಟಗಾರರು
ಲೀಗ್ ಶುರುವಾದ ಬಳಿಕ ಆಟಗಾರರ ಬದುಕು ಬದಲಾಯಿತು. ಕೋಚ್‍ಗಳು, ರೆಫರಿಗಳು ಹಾಗೂ ಇತರೆ ಸಿಬ್ಬಂದಿಗಳಿಗೂ `ಬೆಲೆ’ ಸಿಕ್ಕಿತು. ಆಟಗಾರರು ಕುಬೇರರಾಗಿದ್ದಾರೆ. ಕ್ರಿಕೆಟಿಗರಂತೆ ಅವರಿಗೂ ತಾರಾ ವರ್ಚಸ್ಸು ಸಿಕ್ಕಿದೆ. ಹೋದಲ್ಲೆಲ್ಲಾ ಅವರನ್ನು ಜನ ಗುರ್ತಿಸುತ್ತಾರೆ. ಅವರ ಜೊತೆ ಸೆಲ್ಫಿ ತೆಗೆದುಕೊಳ್ಳಲು, ಆಟೋಗ್ರಾಫ್ ಪಡೆಯಲು ಮುಗಿಬೀಳುತ್ತಾರೆ.

ಹರಾಜಿನಲ್ಲಿ ಅವರಿಗೆ ಕೋಟಿ ಕೋಟಿ ಕಾಂಚಾಣ ಲಭಿಸುತ್ತಿದೆ. ಆರನೇ ಆವೃತ್ತಿಯ ಹರಾಜಿನಲ್ಲಿ ಹರಿಯಾಣದ ಮೋನು ಗೋಯತ್ ಅವರನ್ನು ಹರಿಯಾಣ ಸ್ಟೀಲರ್ಸ್ ಫ್ರಾಂಚೈಸ್ 1 ಕೋಟಿ 51 ಲಕ್ಷ ನೀಡಿ ಖರೀದಿಸಿದ್ದು ಇದಕ್ಕೊಂದು ನಿದರ್ಶನ. ರಾಹುಲ್ ಚೌಧರಿ (1.29 ಕೋಟಿ), ದೀಪಕ್ ನಿವಾಸ್ ಹೂಡಾ (1.15 ಕೋಟಿ), ರಿಷಾಂಕ್ ದೇವಾಡಿಗ (1.11 ಕೋಟಿ) ಅವರೂ ಉತ್ತಮ `ಮೌಲ್ಯ’ ಪಡೆದಿದ್ದರು. ಏಳನೇ ಆವೃತ್ತಿಯಲ್ಲಿ 1.45 ಕೋಟಿಗೆ ತೆಲುಗು ಟೈಟನ್ಸ್ ಪಾಲಾಗಿದ್ದ ಮಹಾರಾಷ್ಟ್ರದ ರೈಡರ್ ಸಿದ್ದಾರ್ಥ್ ದೇಸಾಯಿ ಕೂಡ ‘ಕುಬೇರರ ಕ್ಲಬ್’ ಸೇರಿದ್ದು ವಿಶೇಷ.

ಸಿದ್ದಾರ್ಥ್ ದೇಸಾಯಿ

ತಾರಾ ವರ್ಚಸ್ಸು
ಪ್ರೊ.ಕಬಡ್ಡಿ ಜನಸಾಮಾನ್ಯರನ್ನಷ್ಟೇ ಅಲ್ಲ, ಜನಪ್ರಿಯ ತಾರೆಯರನ್ನೂ ಆಕರ್ಷಿಸಿದೆ. ಬಾಲಿವುಡ್ ನಟ ಅಭಿಷೇಕ್ ಬಚ್ಚನ್, ಜೈಪುರ ಪಿಂಕ್ ಪ್ಯಾಂಥರ್ಸ್ ತಂಡದ ಒಡೆಯರಾಗಿದ್ದಾರೆ. ಭಾರತದ ‘ಕ್ರಿಕೆಟ್ ದೇವರು’ ಸಚಿನ್ ತೆಂಡೂಲ್ಕರ್, ತಮಿಳ್ ತಲೈವಾಸ್ ತಂಡದ ಸಹ ಮಾಲೀಕತ್ವ ಹೊಂದಿದ್ದಾರೆ.

ಸ್ಯಾಂಡಲ್‍ವುಡ್ ನಟರಾದ ಪುನೀತ್ ರಾಜ್‍ಕುಮಾರ ಮತ್ತು ರಾಕಿಂಗ್ ಸ್ಟಾರ್ ಯಶ್ ಅವರು ಬೆಂಗಳೂರು ಬುಲ್ಸ್ ತಂಡದ ರಾಯಭಾರಿಗಳಾಗಿದ್ದಾರೆ. ಇತರ ತಂಡಗಳೂ ಜನಪ್ರಿಯ ನಟ-ನಟಿಯರನ್ನು ಪ್ರಚಾರ ರಾಯಭಾರಿಗಳನ್ನಾಗಿ ನೇಮಿಸಿಕೊಂಡಿವೆ. ಹೀಗಾಗಿ ಲೀಗ್ ಜನರಿಗೆ ಇನ್ನಷ್ಟು ಹತ್ತಿರವಾಗಿದೆ.

ಎಂಟು ಭಾಷೆಗಳಲ್ಲಿ ನೇರ ಪ್ರಸಾರ
ಲೀಗ್‍ನ ಮಾಧ್ಯಮ ಹಕ್ಕು ಹೊಂದಿರುವ ಸ್ಟಾರ್ ಇಂಡಿಯಾ, ಇಂಗ್ಲಿಷ್ ಮತ್ತು ಹಿಂದಿ ಹೊರತುಪಡಿಸಿ, ಕನ್ನಡ ತಮಿಳು ಹಾಗೂ ತೆಲುಗು ಸೇರಿದಂತೆ ಒಟ್ಟು ಆರು ಪ್ರಾದೇಶಿಕ ಭಾಷೆಗಳಲ್ಲಿ ಪಂದ್ಯಗಳ ನೇರ ಪ್ರಸಾರ ಮಾಡುತ್ತಿದೆ. ಆಯಾ ಭಾಷೆಯಲ್ಲೇ ವೀಕ್ಷಕ ವಿವರಣೆ ನೀಡುವ ಪದ್ಧತಿಗೂ ನಾಂದಿ ಹಾಡಿದೆ. ಜೊತೆಗೆ ಆನ್‍ಲೈನ್‍ನಲ್ಲೂ ಪಂದ್ಯಗಳ ನೇರ ಪ್ರಸಾರ ಮಾಡಿ ವೀಕ್ಷಕರನ್ನು ಹಿಡಿದಿಟ್ಟುಕೊಳ್ಳುವ ಕೆಲಸ ಮಾಡಿದೆ.

ಕನ್ನಡಿಗರ ಕಮಾಲ್
ಲೀಗ್‍ನಲ್ಲಿ ಕರ್ನಾಟಕದ ಆಟಗಾರರೂ ಕಮಾಲ್ ಮಾಡುತ್ತಿದ್ದಾರೆ. ರಿಷಾಂಕ್ ದೇವಾಡಿಗ, ಕೆ.ಪ್ರಪಂಜನ್, ಸುಕೇಶ್ ಹೆಗ್ಡೆ, ಪ್ರಶಾಂತ್ ಕುಮಾರ್ ರೈ ಅವರು `ಸ್ಟಾರ್’ ರೈಡರ್‍ಗಳೆಂದು ಖ್ಯಾತಿ ಹೊಂದಿದ್ದಾರೆ. ಜೀವಕುಮಾರ್, ಶಬೀರ್ ಬಾಪು, ಜೆ.ದರ್ಶನ್, ಜವಾಹರ ವಿವೇಕ್ ಮತ್ತು ಹರೀಶ್ ನಾಯಕ್ ಅವರೂ ಛಾಪು ಒತ್ತಿದ್ದಾರೆ. ಈ ಸಲದ ಲೀಗ್‍ನಲ್ಲಿ ರಾಜ್ಯದ 11 ಮಂದಿ ವಿವಿಧ ತಂಡಗಳಲ್ಲಿ ಆಡುತ್ತಿದ್ದಾರೆ.

ರಿಷಾಂಕ್ ದೇವಾಡಿಗ

ಕನ್ನಡಿಗ ಬಿ.ಸಿ.ರಮೇಶ್, ಬೆಂಗಾಲ್ ವಾರಿಯರ್ಸ್ ತಂಡದ ಮುಖ್ಯ ಕೋಚ್ ಆಗಿದ್ದಾರೆ. ಹೋದವರ್ಷ ಬೆಂಗಳೂರು ಬುಲ್ಸ್ ತಂಡ ಚೊಚ್ಚಲ ಪ್ರಶಸ್ತಿ ಗೆಲ್ಲುವಲ್ಲಿ ರಮೇಶ್ ಪಾತ್ರ ನಿರ್ಣಾಯಕ ಎನಿಸಿತ್ತು. ಜಗದೀಶ್ ಕುಂಬ್ಳೆ ತಂಡವೊಂದರ ಸಹಾಯಕ ಕೋಚ್ ಆಗಿದ್ದಾರೆ. ರಾಜ್ಯದ ಹಲವರು ಲೀಗ್‍ನಲ್ಲಿ ರೆಫರಿಗಳಾಗಿಯೂ ಕಾರ್ಯನಿರ್ಹಿಸುತ್ತಿದ್ದಾರೆ. ಈ ಖುಷಿಯ ನಡುವೆ ಬೆಂಗಳೂರಿನ ತಂಡದಲ್ಲಿ ಕನ್ನಡಿಗರಿಲ್ಲವಲ್ಲ ಎಂಬ ಕೊರಗು ಅಭಿಮಾನಿಗಳನ್ನು ಕಾಡುತ್ತಿದೆ. ಹೀಗಿದ್ದರೂ ಉದ್ಯಾನನಗರಿಯ ಜನ, ಬುಲ್ಸ್ ಬೆನ್ನಿಗೆ ನಿಲ್ಲುವುದನ್ನು ಮರೆತಿಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...