“ಪ್ರಿಯ ಪ್ರಕಾಶ್ ರಾಜ್, ನಿಮ್ಮ ಮತ್ತು ನಿಮ್ಮ ಕುಟುಂಬದ ವಿರುದ್ಧ 2017ರ ಅಕ್ಟೋಬರ್ 2 & 3 ರಂದು ಕೀಳುಮಟ್ಟದ ಲೇಖನವನ್ನು ಪೋಸ್ಟ್ ಮಾಡಿದ್ದೆ. ಆದರೆ ಅದು ಅನಗತ್ಯವಾಗಿತ್ತು ಮತ್ತು ನಿಮಗೆ ನೋಯಿಸುವಂತದ್ದಾಗಿತ್ತು ಎಂದು ನನಗೀಗ ಅರ್ಥವಾಗಿದೆ. ಆದ್ದರಿಂದ ನಾನು ಅದನ್ನು ವಾಪಸ್ ಪಡೆಯುತ್ತಿದ್ದೇನೆ ಮತ್ತೆ ಟ್ವಿಟ್ಟರ್ ಫೇಸ್ ಬುಕ್ ಮೂಲಕ ಕ್ಷಮೆಯಾಚಿಸುತ್ತೇನೆ” ಎಂದು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ತಮ್ಮ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಬಹುಭಾಷ ನಟ ಮತ್ತು ರಾಜಕಾರಣಿ ಪ್ರಕಾಶ್ ರಾಜ್ ಅವರು “ಕ್ಷಮಾಪಣೆಯನ್ನು ನಾನು ಸ್ವೀಕರಿಸಿದ್ದೇನೆ. ನಮ್ಮಲ್ಲಿ ಸೈದ್ಧಾಂತಿಕ ಭಿನ್ನಾಭಿಪ್ರಾಯವಿರಬಹುದು, ಆದರೆ ಸಾಮಾಜಿಕ ಜಾಲತಾಣಗಳಲ್ಲಿ ವಯಕ್ತಿಕ ತೇಜೋವಧೆ ಮಾಡಬಾರದು. ನಾವಿಬ್ಬರು ನಮ್ಮ ನಮ್ಮ ಕ್ಷೇತ್ರಗಳಲ್ಲಿ ಯಶಸ್ವಿ ವ್ಯಕ್ತಿಗಳಾಗಿದ್ದೇವೆ. ಹಾಗಾಗಿ ಸಮಾಜದಲ್ಲಿ ಒಳ್ಳೆಯ ಮಾದರಿಯನ್ನು ಹುಟ್ಟುಹಾಕುವುದ ನಮ್ಮ ಜವಾಬ್ದಾರಿ” ಎಂದಿದ್ದಾರೆ.
Thank you @mepratap ..I accept your apology… we may have differences with our ideology.. but let us not get Personel and dirty on social media .. as we both are successful individuals in our respective fields .. it’s our responsibility to set good examples.. .. all the best https://t.co/TSr0RF73qa
— Prakash Raj (@prakashraaj) August 8, 2019
ಪ್ರತಾಪ್ ಸಿಂಹ ಪ್ರಕಾಶ್ ರಾಜ್ ವಿರುದ್ಧ ತೀರಾ ಕೆಟ್ಟ ಭಾಷೆಯಲ್ಲಿ ಹಲವು ಲೇಖನಗಳನ್ನು ಬರೆದಿದ್ದರು. ಅವರ ಕುಟುಂಬದ ತೇಜೋವಧೆ ಮಾಡಿದ್ದರು. ಇದರ ವಿರುದ್ಧ ನಟ ಪ್ರಕಾಶ್ ರಾಜ್ ಮಾನನಷ್ಟ ಮೊಕದ್ದಮೆ ಹೂಡಿದ್ದರು. ನನಗೆ ಹಣ ಬೇಕಿಲ್ಲ ಆದರೆ ಅವರು ತಮ್ಮ ತಪ್ಪನ್ನು ತಿದ್ದಿಕೊಳ್ಳಬೇಕೆಂದು 1 ರೂಗಳ ಮಾನನಷ್ಟ ಮೊಕದ್ದಮೆ ದಾಖಲಿಸಿ ನೋಟಿಸ್ ಕಳಿಸಿದ್ದರು.
ಆದರೆ ಇದಕ್ಕೆ ಪ್ರತಾಪ್ ಸಿಂಹ ಉತ್ತರಿಸಿರಲಿಲ್ಲ. ಬದಲಿಗೆ ನಿಮ್ಮ ಮಾನ ಕೇವಲ 1 ರೂಪಾಯಿ ಅಷ್ಟೇನಾ ಎಂದು ದಾರ್ಷ್ಟ್ಯ ತೋರಿಸಿದ್ದರು. ಆ ನಂತರ ಕರ್ನಾಟದಕ ವಿಶೇಷ ನ್ಯಾಯಾಲಯ ವಿಚಾರಣೆಯನ್ನು ಕೈಗೆತ್ತಿಕೊಂಡಿಕೊಂಡಿತ್ತು. ವಿಚಾರಣೆಯಲ್ಲಿ ಪ್ರತಾಪ್ ಸಿಂಹ ತಪ್ಪೆಸೆಗಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಕೂಡಲೇ ಪ್ರತಾಪ್ ಸಿಂಹ ಪ್ರಕಾಶ್ ರಾಜ್ ರವರ ಬಳಿ ಬಹಿರಂಗ ಕ್ಷಮೆಯಾಚಿಸಬೇಕೆಂದು ಆದೇಶ ನೀಡಿತ್ತು.
ಈ ಕುರಿತ ಮಾತನಾಡಿರುವ ಪ್ರಕಾಶ್ ರಾಜ್ “ಇಂದು ವಿಚಾರಣೆಗೂ ಮುನ್ನ ಪ್ರತಾಪ್ ಸಿಂಹ ರಾಜಿಯಾಗಲು ಬಯಸಿದರು. ಆಗ ಸಾರ್ವಜನಿಕವಾಗಿ ಕ್ಷಮೆ ಕೇಳುವುದು ಒಳ್ಳೆಯದು ಎಂದು ಹೇಳಿದ್ದೆ. ಈಗ ಅವರು ಕ್ಷಮೆ ಕೇಳಿದ್ದಾರೆ. ನಮ್ಮ ನಡುವೆ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿರಬಹುದು. ಅದರೆ ನಾವು ಸಾರ್ವಜನಿಕ ಚರ್ಚೆಗಳಲ್ಲಿ ಘನತೆಯನ್ನು ಕಾಪಾಡಬೇಕಿದೆ. ಕ್ಷಮೆಯನ್ನು ಅಂಗೀಕರಿಸುವುದು ಮನುಷ್ಯತ್ವ. ಕ್ಷಮಿಸುವುದು ದೊಡ್ಡ ವ್ಯಕ್ತಿತ್ವ ಎಂದು ನಂಬಿದ್ದೇನೆ. ಈ ಘಟನೆ ನನಗೆ ನೈತಿಕವಾಗಿ ದೊಡ್ಡ ವಿಜಯವಾಗಿದೆ. ಆದರೆ ಅದಕ್ಕಾಗಿ ನಾನು ಎರಡು ವರ್ಷಗಳನ್ನು ವ್ಯಯಿಸಬೇಕಾಯಿತು. ಕೊನೆಗೂ ಅವರು ಕ್ಷಮೆ ಕೇಳಿದ್ದಾರೆ. ನಾನು ಸ್ವೀಕರಿಸಿದ್ದೇನೆ” ಎಂದಿದ್ದಾರೆ.