ಕ್ರಿಶ್ಚಿಯನ್ ಪ್ರಾರ್ಥನಾ ಸ್ಥಳದ ಮೇಲೆ ಹಿಂದೂತ್ವ ಗುಂಪಿನ ಸುಮಾರು 30 ರಿಂದ 40 ಸದಸ್ಯರು ದಾಳಿ ನಡೆಸಿರುವ ಘಟನೆ ಛತ್ತೀಸ್ಗಢದ ದುರ್ಗ್ ಜಿಲ್ಲೆಯಲ್ಲಿ ಭಾನುವಾರ ನಡೆದಿದೆ. ಕ್ರಿಶ್ಚಿಯನ್ರ ಪ್ರಾರ್ಥನೆಗೆ ಅಡ್ಡಿಪಡಿಸಿ, ಆ ಸ್ಥಳವನ್ನು ಧ್ವಂಸಗೊಳಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರ ಪಟಾನ್ ವಿಧಾನಸಭಾ ಕ್ಷೇತ್ರದ ಅಮಲೇಶ್ವರ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಈ ಬಗ್ಗೆ ಮಾತನಾಡಿದ ಛತ್ತೀಸ್ಗಢ ಕ್ರಿಶ್ಚಿಯನ್ ಫೋರಂನ ಅಧ್ಯಕ್ಷ ಅರುಣ್ ಪನ್ನಾಲಾಲ್ ಅವರು, ”ಪ್ರಾರ್ಥನೆ ಸೇವೆಗೆ ಅಡ್ಡಿಪಡಿಸಿದವರು ಬಜರಂಗದಳದ ಸದಸ್ಯರೆಂದು ಆರೋಪಿಸಿರುವುದಾಗಿ ಎಂದು ಟೆಲಿಗ್ರಾಫ್ ವರದಿ ಮಾಡಿದೆ.
ಈ ಪ್ರರ್ಥನಾ ಸಭೆಯ ಸದಸ್ಯರಾದ ಲಾಲ್ಚಂದ್ ಸಾಹು ಅವರು ಘಟನೆ ಕುರಿತು ಸ್ಕ್ರಾಲ್ಗೆ ಮಾಹಿತಿ ನೀಡಿದ್ದು, ”ಹಿಂದುತ್ವ ಗುಂಪಿನ ಸದಸ್ಯರು “ಜೈ ಶ್ರೀ ರಾಮ್” ಎಂದು ಘೋಷಣೆಗಳನ್ನು ಕೂಗುತ್ತಾ ಪ್ರಾರ್ಥನಾ ಸೇವೆ ಮಾಡುತ್ತಿದ್ದ ಮನೆಯ ಕಡೆಗೆ ನುಗ್ಗಲು ಯತ್ನಿಸಿದರು. ಆದರೆ ಆ ಗುಂಪು ಒಳಗೆ ಪ್ರವೇಶಿಸುವುದನ್ನು ತಡೆಯಲು ಸಭೆಯ ಸದಸ್ಯರು ಬಾಗಿಲು ಮುಚ್ಚಿದರು” ಎಂದು ಅವರು ಹೇಳಿದರು.
ಆ ಬಳಿಕ ಆ ಗುಂಪು ಬಾಗಿಲುಗಳಿಗೆ ಕೋಲುಗಳಿಂದ ಹೊಡೆಯಲು ಪ್ರಾರಂಭಿಸಿತು. ಅಷ್ಟೇ ಅಲ್ಲದೇ ಮನೆಯಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾಗಳನ್ನು ಧ್ವಂಸಗೊಳಿಸಿದ್ದು, ಮನೆಯ ವಿದ್ಯುತ್ ಸಂಪರ್ಕ ಕಡಿತಗೊಳಿಸಿದೆ” ಎಂದು ಸಾಹು ತಿಳಿಸಿದ್ದಾರೆ.
”ಅರ್ಧ ಗಂಟೆಯ ಬಳಿಕ ಸ್ಥಳಕ್ಕೆ ಪೊಲೀಸರು ಬಂದರು. ಆ ನಂತರವಷ್ಟೇ ನಾವು ಮನೆಯ ಗೇಟ್ನ್ನು ತೆರೆದಿದ್ದೇವೆ. ಪೊಲೀಸರು ಒಳಗೆ ಬಂದಾಗ, ಅವರು ಏನಾಗುತ್ತಿದೆ ಎಂದು ನಮ್ಮನ್ನು ಕೇಳಿದರು ಮತ್ತು ನೋಂದಣಿ ಪತ್ರಗಳನ್ನು ಹುಡುಕಿದರು. ಆದರೆ ಪೊಲೀಸರು ಆ ಗುಂಪಿನ ವಿರುದ್ಧ ಏನೂ ಕ್ರಮ ತೆಗೆದುಕೊಳ್ಳಲಿಲ್ಲ” ಎಂದು ಹೇಳಿದರು.
ಪೊಲೀಸರು ಕ್ರಿಶ್ಚಿಯನ್ ಮುಖಂಡರನ್ನು ಬಂಧಿಸಿ ಠಾಣೆಗೆ ಕರೆದೊಯ್ದರು. ಈ ವೇಳೆ ಆ ಗುಂಪಿನ ಸದಸ್ಯರು ಅವಹೇಳನಕಾರಿಯಾಗಿ ಮಾತನಾಡುತ್ತ ಕ್ರಿಶ್ಚಿಯನ್ ಮುಖಂಡನ ಮೇಲೆ ದಾಳಿ ಮಾಡಲು ಮುಂದಾದರು. ಅಷ್ಟೇ ಅಲ್ಲದೇ ಈ ವೇಳೆ ಜೈ ಶ್ರೀರಾಮ್ ಘೋಷಣೆ ಕೂಗಲಾಯಿತು ಎಂದು ಸಾಹು ಹೇಳಿದ್ದಾರೆ.
ಇದನ್ನೂ ಓದಿ: ಬಿಹಾರ: ರಾಮನವಮಿ ಹಿಂಸಾಚಾರದ ಮಾಸ್ಟರ್ ಮೈಂಡ್, ಬಜರಂಗದಳ ಸಂಚಾಲಕ ಪೊಲೀಸರಿಗೆ ಶರಣು
”ಪ್ರಾರ್ಥನೆಯನ್ನು ವಿರೋಧಿಸಿದ ಹಿಂದುತ್ವವಾದಿಗಳ ಗುಂಪಿನ ವಿರುದ್ಧ ಪೊಲೀಸರು ಪ್ರಕರಣವನ್ನು ದಾಖಲಿಸಿಲ್ಲ ಆದರೆ ಕ್ರಿಶ್ಚಿಯನ್ ಮುಖಂಡರನ್ನು ಐಪಿಸಿ ಸೆಕ್ಷನ್ 151 (ಅದು ಚದುರಿಸಲು ಆದೇಶಿಸಿದ ನಂತರ ಐದು ಅಥವಾ ಅದಕ್ಕಿಂತ ಹೆಚ್ಚು ವ್ಯಕ್ತಿಗಳ ಸಭೆಗೆ ಸೇರುವುದು ಅಥವಾ ಮುಂದುವರೆಯುವುದು) ಅಡಿಯಲ್ಲಿ ಬಂಧಿಸಿದ್ದಾರೆ” ಎಂದು ಅವರು ಹೇಳಿದರು.
ಇನ್ನು ವಿನಯ್ ಸಾಹು ಎನ್ನುವವರು ಮಾತನಾಡಿ, ಹಿಂದುತ್ವವಾದಿಗಳ ಗುಂಪು ಕ್ರಿಶ್ಚಿಯನ್ರ ಮೇಲೆ ದಾಳಿ ನಡೆಸಿದ ವೇಳೆ ಐವರಿಗೆ ಮೂಗೇಟಾಗಿದೆ ಎಂದು ಹೇಳಿದ್ದಾರೆ.
”ಬಜರಂಗದಳದ ಸದಸ್ಯರು ನಮ್ಮ ಸದಸ್ಯರ ಮೇಲೆ ಹಲ್ಲೆ ನಡೆಸುತ್ತಿದ್ದರು ಪೊಲೀಸರು ಮೂಕ ಪ್ರೇಕ್ಷಕರಾಗಿ ನಿಂತಿದ್ದು ನಮಗೆ ಆಶ್ಚರ್ಯ ತಂದಿದೆ” ಎಂದು ಅವರು ಆರೋಪಿಸಿದ್ದಾರೆ ಎಂದು ದಿ ಟೆಲಿಗ್ರಾಫ್ ವರದಿ ಮಾಡಿದೆ.
ಪೊಲೀಸರು ಈ ಹಲ್ಲೆ ಮತ್ತು ವಿಧ್ವಂಸಕ ಆರೋಪಗಳನ್ನು ತಳ್ಳಿಹಾಕಿದ್ದಾರೆ.
ಅಮಲೇಶ್ವರ ಪೊಲೀಸ್ ಠಾಣೆಯ ಪ್ರಭಾರ ಪೊಲೀಸ್ ಅಧಿಕಾರಿ ಜಗದೀಶ್ ಪ್ರಸಾದ್ ಅವರು ಸ್ಕ್ರೋಲ್ಗೆ ತಿಳಿಸಿದ್ದು, ”ನಾವು ಯಾರ ವಿರುದ್ಧವೂ ಎಫ್ಐಆರ್ ದಾಖಲಿಸಿಲ್ಲ. ಪ್ರಾರ್ಥನಾ ಸಭೆ ನಡೆಯುತ್ತಿದೆ ಎಂದು ಅವರು ಹೇಳಿದರು. ಆ ನಂತರ, ನಾವು ತಡೆಗಟ್ಟುವ ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ನಾವು ಯಾವುದೇ ಎಫ್ಐಆರ್ ದಾಖಲಿಸಿಲ್ಲ” ಎಂದು ಹೇಳಿದ್ದಾರೆ.
ಛತ್ತೀಸ್ಗಢದಲ್ಲಿ ಕ್ರೈಸ್ತರ ಮೇಲೆ ಹಲ್ಲೆ ನಡೆದಿರುವುದು ಇದೇ ಮೊದಲಲ್ಲ. ಈ ಹಿಂದೆ ಎಪ್ರಿಲ್ನಲ್ಲಿ ಛತ್ತೀಸ್ಗಢದ ಜಗದಲ್ಪುರದಲ್ಲಿ ಬಿಜೆಪಿ ಮತ್ತು ಹಿಂದುತ್ವ ಗುಂಪು ವಿಶ್ವ ಹಿಂದೂ ಪರಿಷತ್ ಸದಸ್ಯರು ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರ ಆರ್ಥಿಕ ಬಹಿಷ್ಕಾರದ ಪ್ರತಿಜ್ಞೆ ಮಾಡಿದ್ದರು. ಜನವರಿಯಲ್ಲಿ ನಾರಾಯಣಪುರ ಜಿಲ್ಲೆಯಲ್ಲಿ ಗುಂಪೊಂದು ಚರ್ಚ್ ಅನ್ನು ಧ್ವಂಸಗೊಳಿಸಿತ್ತು ಮತ್ತು ಪೊಲೀಸ್ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿತ್ತು.