Homeಮುಖಪುಟಸಹಕಾರ ಖಾತೆ ರಚನೆ: ಒಕ್ಕೂಟ ಸರ್ಕಾರದಿಂದ ರಾಜ್ಯದ ಹಕ್ಕುಗಳ ಮೇಲೆ ದಾಳಿ

ಸಹಕಾರ ಖಾತೆ ರಚನೆ: ಒಕ್ಕೂಟ ಸರ್ಕಾರದಿಂದ ರಾಜ್ಯದ ಹಕ್ಕುಗಳ ಮೇಲೆ ದಾಳಿ

ರಾಜ್ಯ ಸರ್ಕಾರಗಳು ಮತ್ತು ಅವುಗಳನ್ನು ಆರಿಸಿದ ಪ್ರಜಾಪ್ರಭುಗಳು ಪಂಕದಲ್ಲಿ ಬಿದ್ದ ಪಶುವಿನಂತೆ ಒದ್ದಾಡುತ್ತಿರುವುದು ಈಗಾಗಲೇ ಗೋಚರಿಸುತ್ತಿದೆ. ಭವಿಷ್ಯದಲ್ಲಿ ಇದರ ಪರಿಸ್ಥಿತಿ ಇನ್ನಷ್ಟು ಭೀಕರವಾಗುತ್ತದೆ

- Advertisement -
- Advertisement -

ಒಕ್ಕೂಟ ಸರ್ಕಾರ ‘ಸಹಕಾರ ಖಾತೆ’ ಹೆಸರಿನಲ್ಲಿ ಹೊಸ ಇಲಾಖೆಯನ್ನು ಆರಂಭಿಸಿದೆ. ಸಂವಿಧಾನದ ಪ್ರಕಾರ ಸಹಕಾರಿ ಕ್ಷೇತ್ರ ರಾಜ್ಯ ಪಟ್ಟಿಯಲ್ಲಿದೆ. ಇದರ ಪ್ರಕಾರ, ಒಕ್ಕೂಟ ಸರ್ಕಾರಕ್ಕೆ ರಾಜ್ಯದ ಹಕ್ಕಿನ ಮೇಲೆ ಸವಾರಿ ಮಾಡುವ ಅಧಿಕಾರವಿಲ್ಲ. ಸಂವಿಧಾನದ 7ನೇ ಪರಿಚ್ಛೇದದಲ್ಲಿ ಸಹಕಾರಿ ಕ್ಷೇತ್ರಗಳ ಕುರಿತು ವಿಸ್ತೃತವಾಗಿ ಚರ್ಚಿಸಲಾಗಿದೆ. ರಾಜ್ಯದ ಹಕ್ಕಿನಲ್ಲಿ ಮಧ್ಯಪ್ರವೇಶಿಸುವುದು ಅಸಾಂವಿಧಾನಿಕ ನಡೆ ಎಂದು ಗೊತ್ತಿದ್ದೂ ಒಕ್ಕೂಟ ಸರ್ಕಾರ ಸಹಕಾರ ಇಲಾಖೆಯನ್ನು ಆರಂಭಿಸಿದೆ. ಇದರ ಹಿಂದೆ ರಾಜ್ಯಗಳ ಒಡೆತನದಲ್ಲಿರುವ ಸಹಕಾರಿ ಕ್ಷೇತ್ರವನ್ನು ತನ್ನ ವಶಕ್ಕೆ ಪಡೆಯುವ ದೀರ್ಘಕಾಲೀನ ಹುನ್ನಾರವಿದೆ.

ವಿವಾದಾತ್ಮಕ ಕೃಷಿ ಮಸೂದೆಗಳಿಂದ ರಾಜ್ಯದ ಹಕ್ಕು ಮೊಟಕು

ವಿವಾದಾತ್ಮಕ ಮೂರು ಕೃಷಿ ಮಸೂದೆಗಳನ್ನು ರೂಪಿಸಿ ರಾಜ್ಯದ ಪಾಲಿನಲ್ಲಿದ್ದ ಕೃಷಿ ಕ್ಷೇತ್ರವನ್ನು ತನ್ನ ಹಿಡಿತಕ್ಕೆ ಪಡೆಯಲು ಒಕ್ಕೂಟ ಸರ್ಕಾರ ಮುಂದಾಗಿತ್ತು. ಇದನ್ನು ವಿರೋಧಿಸಿ ದೇಶದ ಅನ್ನದಾತರು 7 ತಿಂಗಳಿಂದ ದೆಹಲಿ ಗಡಿಗಳಲ್ಲಿ ಮಳೆ, ಬಿಸಿಲು, ಚಳಿಗಳನ್ನು ಲೆಕ್ಕಿಸದೆ ಪ್ರತಿಭಟನೆಯಲ್ಲಿ ನಿರತರಾಗಿದ್ದಾರೆ. ವಿವಿಧ ರಾಜ್ಯಗಳ ಚುನಾವಣೆಗಳಲ್ಲಿ, ಸಂಪುಟ ವಿಸ್ತರಣೆಯಲ್ಲಿ ಬಿಜಿಯಾಗುವ ಒಕ್ಕೂಟ ಸರ್ಕಾರ ಮತ್ತು ಪ್ರಧಾನಿ, ಸಚಿವರಿಗೆ ದೆಹಲಿ ಗಡಿಯಲ್ಲಿ ಪ್ರತಿಭಟಿಸುತ್ತಿರುವ ಅನ್ನದಾತರ ಅಳಲನ್ನು ಕೇಳುವ ವ್ಯವಧಾನವಿಲ್ಲ. ಸುಮಾರು 250ಕ್ಕೂ ಹೆಚ್ಚು ರೈತರು ಇಲ್ಲೇ ಬಲಿಯಾದರೂ ಅವರೆಡೆಗೆ ಎಳ್ಳಷ್ಟು ಕನಿಕರವೂ ದೇಶವನ್ನು ಆಳುತ್ತಿರುವ 56 ಎದೆಯಿದೆ ಎಂದು ಬಡಾಯಿ ಕೊಚ್ಚಿಕೊಳ್ಳುವ ವ್ಯಕ್ತಿಗೆ ಇಲ್ಲ.

ಹೊಸ ಶಿಕ್ಷಣ ನೀತಿಯಿಂದ ರಾಜ್ಯಗಳ ಹಿಡಿತ ಕಳೆದುಕೊಳ್ಳದೆ ಶಿಕ್ಷಣ

ಇನ್ನು ರಾಜ್ಯಪಟ್ಟಿಯಲ್ಲೇ ಇರುವ ಶಿಕ್ಷಣವನ್ನು ಕೂಡ ಈಗಾಗಲೇ ಒಕ್ಕೂಟ ಸರ್ಕಾರ ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಇದರ ಭಾಗವಾಗಿಯೇ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ(NEP)ಯನ್ನು ಜಾರಿಗೆ ತರಲಾಗಿದೆ. ಇದರ ಹಿಂದಿರುವ ಹುನ್ನಾರವೆಂದರೆ ಭವಿಷ್ಯದಲ್ಲಿ ತಳಸಮುದಾಯದವರು, ದೀನದಲಿತರು, ಹಿಂದುಳಿದವರು, ಬಡವರು, ಅಸಂಘಟಿತ ವಲಯದವರು, ಮಹಿಳೆಯರು ಶಿಕ್ಷಣದಿಂದ ವಂಚಿತರನ್ನಾಗಿಸುವುದು.

ಇದನ್ನೂ ಓದಿ: ಗ್ರಾಮೀಣ ಆರ್ಥಿಕತೆಯ ಬೆನ್ನೆಲುಬಾದ ಸಹಕಾರಿ ಬ್ಯಾಂಕುಗಳನ್ನು ರಕ್ಷಿಸಿ: ಶರದ್ ಪವಾರ್

ರಾಜ್ಯಪಟ್ಟಿಯಲ್ಲಿರುವ ಶಿಕ್ಷಣ ವ್ಯವಸ್ಥೆಯಿಂದಾಗಿ ಸೈಕಲ್, ಬಿಸಿಯೂಟ, ಬಟ್ಟೆ, ಕ್ಷೀರಭಾಗ್ಯ, ಉಚಿತಪಠ್ಯಪುಸ್ತಕ ವಿತರಣೆ ಮತ್ತಿತರ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಇದರಿಂದಾಗಿ ದೇಶದ ಜನಸಂಖ್ಯೆಯ ಅರ್ಧದಷ್ಟಿರುವ ಮಹಿಳೆಯರನ್ನೂ ಒಳಗೊಂಡು ಶೇ. 97ರಷ್ಟು ಪ್ರಮಾಣದಲ್ಲಿರುವ ಹಿಂದುಳಿದ ವರ್ಗ ಮತ್ತು ಇತರ ಜಾತಿಯವರಿಗೆ ಶಿಕ್ಷಣ ಸಿಗುತ್ತಿದೆ. ಇದರಿಂದಾಗಿ ಶಿಕ್ಷಣ, ದುಡಿಮೆ, ವೈಜ್ಞಾನಿಕ ಮನೋಭಾವ, ಆರೋಗ್ಯ, ವಸತಿ ಇತ್ಯಾದಿಗಳು ಈ ವರ್ಗಗಳಲ್ಲಿ ಸುಧಾರಿಸುತ್ತಿವೆ. ಆದರೆ, ಇದನ್ನು ಹತ್ತಿಕ್ಕಲು ಹೊಸ ಶಿಕ್ಷಣ ನೀತಿಯನ್ನು ಒಕ್ಕೂಟ ಸರ್ಕಾರ ಕುತಂತ್ರದಿಂದ ಜಾರಿಗೆ ತಂದಿದೆ.

ಇದರಲ್ಲಿರುವ ನಿಯಮಗಳು ಇನ್ನು 10-15 ವರ್ಷಗಳಲ್ಲಿ ದೇಶದ ಶೈಕ್ಷಣಿಕ ವ್ಯವಸ್ಥೆಯನ್ನು ಉಳ್ಳವರಿಗೆ ಮಾತ್ರ ಮತ್ತು ಮೇಲ್ವರ್ಗದವರಿಗೆ ಸೀಮಿತಗೊಳಿಸುವ ದುಷ್ಟ ಚಿಂತನೆಯನ್ನು ಜಾರಿಗೆ ತರಲಿವೆ. ಇದರಿಂದ ಕೇವಲ ದೇಶದ ಶೈಕ್ಷಣಿಕ ವ್ಯವಸ್ಥೆ ಮಾತ್ರ ಹಾಳಾಗುವುದಿಲ್ಲ. ಆರ್ಥಿಕ ಪರಿಸ್ಥಿತಿ ಕೂಡ ಅಧೋಗತಿಗೆ ಇಳಿಯುತ್ತದೆ. ವೈಜ್ಞಾನಿಕ ಮನೋಭಾವ ನಷ್ಟವಾಗುತ್ತದೆ. ಇದು ಸಂವಿಧಾನದ ಪ್ರಕಾರ ಕೂಡ ದ್ರೋಹವೆಂದೇ ಹೇಳಬೇಕು. ಸಂವಿಧಾನದಲ್ಲಿ ವೈಜ್ಞಾನಿಕ ಮನೋಭಾವಕ್ಕೆ ಒತ್ತು ನೀಡಲಾಗಿದೆ. ಆದರೆ, ಶಿಕ್ಷಣವನ್ನೇ ಕೊಡದೆ ಹೋದಲ್ಲಿ ವೈಜ್ಞಾನಿಕ ಮನೋಭಾವಕ್ಕೆ ಧಕ್ಕೆಯಾಗುವುದು ನಿಶ್ಚಿತ.

ಜೂದಾಸ್ ಏಸು ಕ್ರಿಸ್ತನಿಗೆ ಮಾಡಿದಂತೆ ಕೇರಳ ಸರ್ಕಾರ ರಾಜ್ಯಕ್ಕೆ ಮೋಸ ಮಾಡಿದೆ: ಮೋದಿ| NaanuGauri

ವಿದ್ಯೆ ಕಲಿತವರಿಗೆ ಸೇವಾವಲಯ, ಸರ್ಕಾರಿ ಹುದ್ದೆಗಳು, ವಿದೇಶದಲ್ಲಿ ವಿವಿಧ ಹುದ್ದೆಗಳು ಸಿಗುತ್ತಿವೆ. ನಿರ್ದಿಷ್ಟ ವಿದ್ಯಾರ್ಹತೆಯ ಅಭ್ಯರ್ಥಿಗಳು ನೂತನ ಶಿಕ್ಷಣ ನೀತಿಯ ದುಷ್ಪರಿಣಾಮದಿಂದ ದೇಶದಲ್ಲೇ ಸಿಗದೆ ಇರುವ ಸಾಧ್ಯತೆಗಳು ಇವೆ. ಜೊತೆಗೆ, ಶಿಕ್ಷಣವನ್ನು ಸಂಪೂರ್ಣ ಖಾಸಗೀಕರಿಸುವ ಹುನ್ನಾರದ ಭಾಗವಾಗಿ ಶಿಕ್ಷಣ ನೀತಿಯಲ್ಲಿ ಅನೇಕ ವಿಷಯಗಳನ್ನು ಸೇರಿಸಲಾಗಿದೆ. ಸ್ಥಳೀಯ ಭಾಷೆ ಮತ್ತು ವಿಷಯ ಹಾಗೂ ಕೌಶಲಗಳನ್ನು ಕಡೆಗಣಿಸಲಾಗಿದೆ. ಇವೆಲ್ಲವುಗಳಿಂದಾಗಿ ಶಿಕ್ಷಣ ಕೇವಲ ಉಳ್ಳವರ ಪಾಲಾಗುತ್ತದೆ.

ಜಿ.ಎಸ್.ಟಿ. ಜಾರಿಯೆಂಬ ಮಧ್ಯರಾತ್ರಿ ನಾಟಕದಿಂದ ರಾಜ್ಯಗಳಿಗೆ ನಷ್ಟ

ಮಧ್ಯರಾತ್ರಿ ವಿಶೇಷ ಅಧಿವೇಶನ ನಡೆಸಿ ಅವೈಜ್ಞಾನಿಕ ಜಿ.ಎಸ್.ಟಿ.ಯನ್ನು ಒಕ್ಕೂಟ ಸರ್ಕಾರ ಜಾರಿಗೆ ತಂದಿತ್ತು. ದುರಂತವೆಂದರೆ, ಸರಳ, ಕನಿಷ್ಠ ಎಂದು ಹೇಳಿದ ತನ್ನ ಮಾತನ್ನು ಸರ್ಕಾರ ಉಳಿಸಿಕೊಳ್ಳುವಲ್ಲಿ ವಿಫಲವಾಯಿತು. ಜಗತ್ತಿನಲ್ಲೇ ಅತಿಹೆಚ್ಚು ತೆರಿಗೆ ವಸೂಲಿ ಮಾಡಿದ ದೇಶಗಳ ಪಟ್ಟಿಯಲ್ಲಿ ಸ್ಥಾನ ಪಡೆಯಿತು. ಶೇ. 28ರಷ್ಟು ತೆರಿಗೆಯನ್ನು ಜನರಿಂದ ಸುಲಿದು, ರಾಜ್ಯಗಳಿಗೆ ಇದ್ದ ತೆರಿಗೆ ಸಂಗ್ರಹಿಸುವ ಅವಕಾಶವನ್ನು ಕಬಳಿಸಿತು. ಮತ್ತೆ ರಾಜ್ಯಗಳ ಪಾಲು ಕೊಡುತ್ತೇನೆ ಎಂದು, 5 ವರ್ಷಗಳ ಕಾಲ ರಾಜ್ಯಗಳಿಗೆ ಆಗುವ ನಷ್ಟವನ್ನು ಭರಿಸುವುದಾಗಿ ಕೊಟ್ಟ ಮಾತನ್ನು ಸರ್ಕಾರ ಮರೆತುಬಿಟ್ಟಿತು. ಕೊರೊನ ನಂತರ ಕರ್ನಾಟಕದ ಜಿ.ಎಸ್.ಟಿ. ಪಾಲನ್ನು ಕೇಳಿದರೆ, ಸಾಲ ಮಾಡಿ ಎಂದು ಹೇಳಿತು. ಈ ಮಾತನ್ನು ಶಿರಸಾವಹಿಸಿ ಪಾಲಿಸಿದ ರಾಜ್ಯ ಸರ್ಕಾರ ಬರೋಬ್ಬರಿ 35,000 ಕೋಟಿ ಸಾಲ ಮಾಡಿತು. ಹೀಗೆ ರಾಜ್ಯಗಳ ಸ್ವಾಯತ್ತತೆಯ ಮೇಲೆ ಒಕ್ಕೂಟ ಸರ್ಕಾರ ನಿರಂತರವಾಗಿ ದಾಳಿ ಮಾಡಿ ಅಶಕ್ತರನ್ನಾಗಿಸುತ್ತಲೇ ಇದೆ.

ಸಹಕಾರ ಖಾತೆಯಿಂದ ರಾಜ್ಯಗಳ ಸ್ಥಿತಿ ದಿವಾಳಿ

ಇನ್ನು ಸಹಕಾರ ಕ್ಷೇತ್ರಕ್ಕೆ ಒಕ್ಕೂಟ ಸರ್ಕಾರ ಬಾಯಿ ಹಾಕುತ್ತಿರುವುದೇಕೆ? ನೋಡೋಣ. ರಾಜ್ಯದ ಪಾಲಿನಲ್ಲಿದ್ದ ಕೃಷಿ, ಶಿಕ್ಷಣವನ್ನು ತನ್ನ ಕಪಿಮುಷ್ಠಿಯ ಬಿಗಿಹಿಡಿತಕ್ಕೆ ತೆಗೆದುಕೊಂಡಿರುವ ಒಕ್ಕೂಟ ಸರ್ಕಾರ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಮಾಡಿರುವುದೇನು ಒಮ್ಮೆ ಆಲೋಚಿಸಿ. ಸಾಲ ಮತ್ತು ಬಡ್ಡಿ ಸೇರಿ 9000 ಕೋಟಿ ರೂಪಾಯಿಗಳನ್ನು ಕೊಡಬೇಕಿರುವ ವಿಜಯ್ ಮಲ್ಯ, 13,500 ಕೋಟಿ ರೂ. ಪಾವತಿಸಬೇಕಿರುವ ಮೇಹುಲ್ ಚೋಕ್ಸಿ ಮೊದಲಾದವರು ದೇಶಭಕ್ತರು ಎಂದು ಬಿಂಬಿಸುವ ಬಿಜೆಪಿಗರು ಅಧಿಕಾರ ನಡೆಸುತ್ತಿರುವ ಸಮಯದಲ್ಲಿ ದೇಶಬಿಟ್ಟು ಪರಾರಿಯಾಗಿದ್ದಾರೆ.

ಇದನ್ನೂ ಓದಿ: ಒಕ್ಕೂಟ ಸರ್ಕಾರದ ಹೊಸ ‘ಸಹಕಾರ ಸಚಿವಾಲಯ’ ಅಮಿತ್‌ ಶಾ ತೆಕ್ಕೆಗೆ!

ಇನ್ನು ದೇಶದ ಪ್ರಧಾನಿಗೆ ಪ್ರಿಯವಾದ ಅನಿಲ್ ಅಂಬಾನಿಯವರು ಡಿಸೆಂಬರ್ 31, 2019ರವರೆಗೆ ದೇಶದ ಬ್ಯಾಂಕುಗಳಿಗೆ ಒಟ್ಟು ಪಾವತಿಸಬೇಕಾದ ಮೊತ್ತ 43,800 ಕೋಟಿ ರೂಪಾಯಿಗಳು ಮಾತ್ರ! ಇವರನ್ನು ಬ್ಯಾಂಕುಗಳು ಈಗಾಗಲೇ ಡಿಫಾಲ್ಟರ್ ಪಟ್ಟಿಗೆ ಸೇರಿಸಿಯಾಗಿದೆ. ಎಚ್.ಡಿ.ಎಫ್.ಸಿ ಸೇರಿದಂತೆ ಇನ್ನಿತರ ಬ್ಯಾಂಕುಗಳಿಗೆ ಬರೋಬ್ಬರಿ 23,000 ಕೋಟಿ ರೂ.ಗಳನ್ನು ಅನಿಲ್ ಅಂಬಾನಿ ಪಾವತಿಸಬೇಕಿದೆ. ಎಸ್.ಬಿ.ಐ ನಲ್ಲಿ ರಾಜ್ಯ ಬ್ಯಾಂಕುಗಳ ವಿಲೀನ, ಸಿಂಡಿಕೇಟ್, ವಿಜಯ ಬ್ಯಾಂಕ್ ಗಳ ವಿಲೀನ ಇತ್ಯಾದಿ ಪ್ರಕ್ರಿಯೆಗಳ ಹಿಂದೆ ಕೇಂದ್ರ ಸರ್ಕಾರ 2.41 ಲಕ್ಷ ಕೋಟಿ ರೂಪಾಯಿಗಳಷ್ಟು ಬೃಹತ್ ಮೊತ್ತವನ್ನು ವಸೂಲಾಗದ ಸಾಲದ ಮೊತ್ತಕ್ಕೆ ಸೇರಿಸಿದ್ದೇ ಕಾರಣ.

ಬ್ಯಾಂಕುಗಳ ನಷ್ಟದ ಮೊತ್ತವನ್ನು ಕೇಳಿ ಗಣಿತ ಬರುವ ದೇಶದ ನಾಗರಿಕರು ಎದೆ ಹೊಡೆದು ಸತ್ತಾರು ಎಂದು ದೇಶವನ್ನು ಆಳುತ್ತಿರುವ ಮೋದಿ ಸರ್ಕಾರ ಬ್ಯಾಂಕುಗಳನ್ನು ವಿಲೀನಗೊಳಿಸುತ್ತಿದೆ. ಇಷ್ಟೆಲ್ಲ ಅವಘಡಗಳ ನಡುವೆ ಒಕ್ಕೂಟ ಸರ್ಕಾರ ಆರ್.ಬಿ.ಐ ಅನ್ನೂ ಬಿಡದೆ ಲಕ್ಷ ಕೋಟಿಗಟ್ಟಲೇ ಹಣವನ್ನು ಪಡೆದಿದೆ. ಕಳ್ಳ ಹೊಕ್ಕ ಮನೆಯಲ್ಲಿ ಏನಾದರೂ ಉಳಿದಿರಬಹುದು, ಕೊಳ್ಳಿ ಹೊಕ್ಕ ಮನೆಯಲ್ಲಿ ಉಳಿಯಲು ಸಾಧ್ಯವೇ? ಎಂಬ ಮಾತಿನಂತೆ ಒಕ್ಕೂಟ ಸರ್ಕಾರ ಆರ್.ಬಿ.ಐ ಅನ್ನೂ ಬಿಟ್ಟಿಲ್ಲ. ಇನ್ನು ಸಹಕಾರಿ ಬ್ಯಾಂಕುಗಳು ಯಾವ ಲೆಕ್ಕ? ಆಲೋಚಿಸಿ.

ಹಣ ವಂಚನೆ ಆರೋಪಿ ನೀರವ್‌ ಮೋದಿಯನ್ನು ಭಾರತಕ್ಕೆ ಹಸ್ತಾಂತರಿಸಿ - ಇಂಗ್ಲೇಂಡ್ ಕೋರ್ಟ್‌ ತೀರ್ಪು
ನೀರವ್‌ ಮೋದಿ

ಒಕ್ಕೂಟ ಸರ್ಕಾರ ರಾತ್ರೋರಾತ್ರಿ ಗರಿಷ್ಠ ಮುಖಬೆಲೆಯ ನೋಟುಗಳನ್ನು ನಿಷೇಧಿಸಿ, ಜಿ.ಎಸ್.ಟಿಯನ್ನು ಅವೈಜ್ಞಾನಿಕವಾಗಿ ಜಾರಿಗೆ ತಂದ ಪರಿಣಾಮದಿಂದಾಗಿ ಬ್ಯಾಂಕುಗಳು, ದೇಶದ ಆರ್ಥಿಕತೆ, ಭಾರತೀಯ ಸಣ್ಣ ಮತ್ತು ಮಧ್ಯಮ ಉದ್ಯಮಗಳು, ಇವುಗಳನ್ನು ನಂಬಿಕೊಂಡಿದ್ದ 20 ಕೋಟಿ ನೌಕರರು ಬೀದಿಗೆ ಬಿದ್ದಿದ್ದಾರೆ. ಇದೀಗ ಒಕ್ಕೂಟ ಸರ್ಕಾರದ ಕಣ್ಣು ರಾಜ್ಯದ ಒಡೆತನದಲ್ಲಿರುವ ಸಹಕಾರಿ ಬ್ಯಾಂಕುಗಳ ಮೇಲೆ ಬಿದ್ದಿದೆ.

ಒಕ್ಕೂಟ ಸರ್ಕಾರ ಸಹಕಾರಿ ಖಾತೆಯನ್ನು ತೆರೆಯುವ ಹಿಂದೆ ರಾಜ್ಯ ಸರ್ಕಾರಗಳ ಕೈಯಲ್ಲಿರುವ ಅಧಿಕಾರವನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಮುಂದಾಗಿದೆ. ಏಕೆಂದರೆ, ಈಗ ಚೂರುಪಾರು ಜೀವ ಹಿಡಿದುಕೊಂಡು ತೆವಳುತ್ತಿರುವ ಸಹಕಾರಿ ಬ್ಯಾಂಕುಗಳು ದೇಶ ಆಳುತ್ತಿರುವ ಮೋದಿಯ ಕಣ್ಣಿಗೆ ಬಿದ್ದಿವೆ. ಏಕೆಂದರೆ, ಸಹಕಾರಿ ಬ್ಯಾಂಕುಗಳ ವಹಿವಾಟಿನಿಂದ ಮತ್ತದೆ ಮಹಿಳೆಯರು, ಶೂದ್ರರು, ದಲಿತರು, ಅಲ್ಪಸಂಖ್ಯಾತರು ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ. ಹೀಗೆ ಜನ ನೆಮ್ಮದಿಯಿಂದ ಇದ್ದರೆ ಒಕ್ಕೂಟ ಸರ್ಕಾರಕ್ಕೆ ಅಸ್ತಿತ್ವವೆಲ್ಲಿಯದು? ಏಕೆಂದರೆ, ದೇಶ “ಜನ ಪಕೋಡ ಮಾರಿ ಇನ್ನೂರು ರೂ. ಗಳಿಸುತ್ತಿದ್ದಾರೆ. ಆಮೂಲಕ ಉದ್ಯೋಗ ಸೃಷ್ಟಿಯಾಗಿದೆ” ಎಂದವರ ಕೈಯಲ್ಲಿದೆಯಲ್ಲವೇ? ಅವರ ಪ್ರಕಾರ, ದೇಶದ ಶೇ. 97ರಷ್ಟು ಜನ ನೆಮ್ಮದಿಯಾಗಿರಬಾರದು.

ಇದನ್ನೂ ಓದಿ: ಸರ್ವಾಧಿಕಾರಿ ಹಿಟ್ಲರ್ ಮತ್ತು ಆತನ ಬಗೆಗಿನ ಗಮನ ಸೆಳೆದ ವ್ಯಂಗ್ಯಚಿತ್ರಗಳು

ಕೊರೊನಾ ಅವಧಿಯಲ್ಲಿ ಸರ್ಕಾರ ಕೊಡುವ ಅಕ್ಕಿ, ಗೋಧಿಗೆ ಭಿಕ್ಷೆಗೆ ನಿಲ್ಲುವಂತೆ ಮಾಡಲಿಲ್ಲವೇ? ಹಾಗೆ ಜನರನ್ನು ಖಾಯಂ ಆಗಿ ಭಿಕ್ಷುಕರನ್ನಾಗಿಸಬೇಕು. ಆ ಮಹೋದ್ದೇಶ ಸಾಧನೆಗಾಗಿ ಇದೀಗ ಸಹಕಾರಿ ಬ್ಯಾಂಕುಗಳ ಒಕ್ಕೂಟ ಸರ್ಕಾರಕ್ಕೆ ಸಹಕರಿಸಬೇಕು.

ಇದೀಗ ಸಂವಿಧಾನದತ್ತ ರಾಜ್ಯದ ಎಲ್ಲ ಅವಕಾಶ, ಅಧಿಕಾರಗಳನ್ನು ಕಟ್ಟಿಹಾಕಿ, ಭವಿಷ್ಯದಲ್ಲಿ ಎಲ್ಲವನ್ನೂ ಒಕ್ಕೂಟದ ಕಬಂಧಬಾಹುವಿನ ತೆಕ್ಕೆಗೆ ಎಳೆದುಕೊಳ್ಳಲು ಒಕ್ಕೂಟ ಸರ್ಕಾರ ಮುಂದಾಗಿದೆ. ಈ ಮೂಲಕ ರಾಜ್ಯಗಳ ಸ್ವಾಯತ್ತತೆಗೆ ಧಕ್ಕೆ ತರುವುದು, ರಾಜ್ಯದ ಆರ್ಥಿಕತೆಯನ್ನು ಹದಗೆಡಿಸುವುದು, ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಒಕ್ಕೂಟ ಸರ್ಕಾರದ ಬಳಿ ಭಿಕ್ಷೆಗೆ ಸರಿಯಲ್ಲಿ ನಿಲ್ಲುವ ವ್ಯವಸ್ಥೆ ಜಾರಿಯಾಗುತ್ತದೆ.

1,169 ಕೋಟಿಗೆ ಒಡಿಶಾ ಹೆದ್ದಾರಿ ಟೆಂಡರ್‌ ಯೋಜನೆ ಗೆದ್ದುಕೊಂಡ ಅದಾನಿ! | Naanu gauri
ಅದಾನಿ

ಈಗಾಗಲೇ ನೋಡಿರುವ ಪ್ರಕಾರ, ಚುನಾವಣೆಗಳಿರುವ ರಾಜ್ಯಕ್ಕೆ ಒಕ್ಕೂಟ ಸರ್ಕಾರ ಉದಾರವಾಗಿ ಹಣ ಹಂಚಿಕೆ ಮಾಡುವುದು, ತನ್ನ ಪಕ್ಷವೇ ಅಧಿಕಾರದಲ್ಲಿದ್ದ ರಾಜ್ಯಗಳಿಗೆ ಹೆಚ್ಚಿನ ಅನುದಾನ ಕೊಡುವುದು, ಕೇಂದ್ರದ ಮಾತು ಕೇಳದಿರುವ ನಾಯಕರಿರುವ ರಾಜ್ಯದ ಕಣ್ಣಿಗೆ ಸುಣ್ಣ ಬಳಿಯುವುದನ್ನೆಲ್ಲ ನೋಡಿಯಾಗಿದೆ. ಇವುಗಳ ನಡುವೆ ಕೂಡ ರಾಜ್ಯಗಳು ಹೇಗೋ ಉಸಿರಾಡುತ್ತಿವೆ. ರಾಜ್ಯಗಳ ಆರ್ಥಿಕತೆಯ ಉಸಿರು ನಿಲ್ಲಿಸಲು ಸಹಕಾರ ಖಾತೆ ಸಹಕರಿಸಲಿದೆ ಎಂಬ ದಟ್ಟ ಅನುಮಾನ ಇದೀಗೆ ಎದ್ದಿದೆ. ಈ ಮೂಲಕ ಸಹಕಾರ ಕ್ಷೇತ್ರದ ಮೇಲೆ ಕೂಡ ಒಕ್ಕೂಟ ಸರ್ಕಾರ ಹಿಡಿತ ಮತ್ತು ಕೇಂದ್ರೀಕೃತ ವ್ಯವಸ್ಥೆಗೆ ಅಳವಡಿಸುವ ಹುನ್ನಾರವನ್ನು ಜಾರಿಗೆ ತರಲಾಗುತ್ತದೆ.

ಇದಕ್ಕಿಂತ ಭೀಕರ ಪರಿಸ್ಥಿತಿಯೊಂದು ಉದ್ಭವಿಸುವ ಸಾಧ್ಯತೆ ಕೂಡ ಇದೆ. ಮೇಲೆ ಉದಾಹರಿಸಿರುವ ವಿಜಯ್ ಮಲ್ಯ, ಮೇಹುಲ್ ಚೋಕ್ಸಿ, ಅನಿಲ್ ಅಂಬಾನಿಯಂತವರಿಂದ ರಾಷ್ಟ್ರೀಕೃತ ಬ್ಯಾಂಕುಗಳು ಅಧೋಗತಿಗೆ ಇಳಿದಿವೆ. ಪ್ರಾಯಶಃ ಇನ್ನಷ್ಟು ಅವುಗಳನ್ನು ಪಾತಾಳಕ್ಕೆ ತುಳಿಯಲು ಅಸಾಧ್ಯವೆಂಬ ಸತ್ಯವನ್ನು ಅರಿತ ಒಕ್ಕೂಟ ಸರ್ಕಾರ ಇದೀಗ ಸಹಕಾರಿ ಬ್ಯಾಂಕುಗಳಿಗೆ ಬಾಯಿ ಹಾಕಲು ಸನ್ನದ್ಧವಾಗಿದೆ. ಜಿ.ಎಸ್.ಟಿ, ವಿವಾದಾತ್ಮಕ ಕೃಷಿ ಮಸೂದೆಗಳು, ಹೊಸ ಶಿಕ್ಷಣ ನೀತಿ, ಇದೀಗ ಸಹಕಾರ ಖಾತೆ ಸೃಷ್ಟಿಯ ಹಿಂದಿರುವುದು ರಾಜ್ಯಗಳ ಸಂವಿಧಾನದತ್ತ ಹಕ್ಕನ್ನು ಕೇಂದ್ರೀಕರಿಸುವುದು, ಮೊಟಕುಗೊಳಿಸುವುದು. ಇದನ್ನು ಅರಿಯದೆ ಒಕ್ಕೂಟ ಸರ್ಕಾರಕ್ಕೆ ಮತ ನೀಡಿದ ಮತದಾರರು, ರಾಜ್ಯ ಸರ್ಕಾರಗಳು ಮತ್ತು ಅವುಗಳನ್ನು ಆರಿಸಿದ ಪ್ರಜಾಪ್ರಭುಗಳು ಪಂಕದಲ್ಲಿ ಬಿದ್ದ ಪಶುವಿನಂತೆ ಒದ್ದಾಡುತ್ತಿರುವುದು ಈಗಾಗಲೇ ಗೋಚರಿಸುತ್ತಿದೆ. ಭವಿಷ್ಯದಲ್ಲಿ ಇದರ ಪರಿಸ್ಥಿತಿ ಇನ್ನಷ್ಟು ಭೀಕರವಾಗುತ್ತದೆ.

– ಡಾ.ಪ್ರದೀಪ್ ಮಾಲ್ಗುಡಿ, ಸಂಶೋಧಕ

ಇದನ್ನೂ ಓದಿ: ಮೋದಿ ಸರ್ಕಾರದ ’ಸರ್ವಾಧಿಕಾರಿ ಧೋರಣೆ’ ಖಂಡಿಸಿ ಬ್ರಿಟಿಷ್ ಸಂಸದರು, ತಜ್ಞರ ಪತ್ರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಹಿಂದೂ ಧಾರ್ಮಿಕ ಸಂಘಟನೆ ನಿಯೋಗದ ಭೇಟಿ ವೇಳೆ ಮಹಿಳಾ ಸಿಬ್ಬಂದಿಯನ್ನು ದೂರವಿಟ್ಟ ಆರೋಪ; ಈಫೆಲ್ ಟವರ್‌ನಲ್ಲಿ ನೌಕರರ ಮುಷ್ಕರ

ಹಿಂದೂ ಧಾರ್ಮಿಕ ಸಂಘಟನೆ ಬಿಎಪಿಎಸ್ (BAPS) ನಿಯೋಗದ ಭೇಟಿಯ ವೇಳೆ ಮಹಿಳಾ ಸಿಬ್ಬಂದಿಯನ್ನು ಕೆಲಸದ ಸ್ಥಳಗಳಿಂದ ದೂರವಿಡಲಾಗಿತ್ತು ಎಂಬ ಆರೋಪ ಫ್ರಾನ್ಸ್‌ನಲ್ಲಿ ವಿವಾದಕ್ಕೆ ಕಾರಣವಾಗಿದೆ. ಘಟನೆಯನ್ನು ಖಂಡಿಸಿ ಈಫೆಲ್ ಟವರ್‌ನ ಸಿಬ್ಬಂದಿ ಸೋಮವಾರ...

KPSC ಪಶುವೈದ್ಯಾಧಿಕಾರಿ ನೇಮಕಾತಿ ಅಕ್ರಮ: CID ತನಿಖೆಯಲ್ಲಿ ರೂ. 12 ಕೋಟಿಗೂ ಅಧಿಕ ಡೀಲ್ ಬಯಲು!

ಕರ್ನಾಟಕ ಲೋಕಸೇವಾ ಆಯೋಗ (KPSC) ನಡೆಸಿದ ಪಶುವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿ ಪರೀಕ್ಷೆಯ ಅಕ್ರಮ ಪ್ರಕರಣದ ತನಿಖೆ ತೀವ್ರಗೊಂಡಿದ್ದು, ಸಿಐಡಿ (CID) ತನಿಖೆಯಲ್ಲಿ ಸಾಲು ಸಾಲು ಆಘಾತಕಾರಿ ಸಂಗತಿಗಳು ಹೊರಬಿದ್ದಿವೆ. ಒಟ್ಟು 24 ಅಭ್ಯರ್ಥಿಗಳು ಹಣ...

ದೆಹಲಿಯಲ್ಲಿ ಮಣಿಪುರದ ಸಂಗೀತಗಾರನ ಗುಂಪು ಹತ್ಯೆ : ಎಂಟು ಜನರ ಬಂಧನ

ದೆಹಲಿಯ ಆಶ್ರಮ್ ಪ್ರದೇಶದಲ್ಲಿ ವಾಸಿಸುತ್ತಿದ್ದ ಮಣಿಪುರದ ಸಂಗೀತಗಾರ ಚೊಂಗ್ಥಾಮ್ ವಿಕ್ರಮ್ ಸಿಂಗ್ ಅವರು ಭಾನುವಾರ (ಸೆ.6) ರಾತ್ರಿ ಗುಂಪೊಂದರಿಂದ ಕಲ್ಲು ತೂರಾಟ ಅಥವಾ ಹಲ್ಲೆಗೆ ಒಳಗಾಗಿ, ಅದರಿಂದ ಉಂಟಾದ ಗಂಭೀರ ಗಾಯಗಳಿಂದಾಗಿ ಸೋಮವಾರ...

SIR: ಚಿಂತಕ ಪರಕಾಲ ಪ್ರಭಾಕರ್‌ಗೆ ಚುನಾವಣಾ ಆಯೋಗದಿಂದ ನೋಟಿಸ್

ಅರ್ಥಶಾಸ್ತ್ರಜ್ಞ, ರಾಜಕೀಯ ವಿಶ್ಲೇಷಕ ಡಾ. ಪರಕಾಲ ಪ್ರಭಾಕರ್ ಅವರಿಗೂ ಈಗ ‘ವಿಶೇಷ ತೀವ್ರ ಪರಿಷ್ಕರಣೆ’ (SIR) ಪ್ರಕ್ರಿಯೆಯಡಿ ಚುನಾವಣಾ ಆಯೋಗದ ನೋಟಿಸ್ ಜಾರಿಯಾಗಿದೆ. ವೋಟರ್ ಐಡಿ ಪರಿಶೀಲನೆಯಲ್ಲಿ ‘Logical Discrepancy’ (ತಾರ್ಕಿಕ ಅಸಂಗತತೆ)...

ಕರ್ನಾಟಕ ಎಸ್‌ಐಆರ್: ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬರಿಗೆ ನೋಟಿಸ್ ನೀಡಿದ ಚುನಾವಣಾ ಆಯೋಗ

ಮಂಗಳೂರು: ಶೈಕ್ಷಣಿಕ ಕ್ಷೇತ್ರದಲ್ಲಿ ತಮ್ಮ ವಿಶಿಷ್ಟ ಸೇವೆಯ ಮೂಲಕ ದೇಶ-ವಿದೇಶಗಳಲ್ಲಿ ಗುರುತಿಸಿಕೊಂಡಿರುವ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಅವರಿಗೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗದ...

SIR ಸೂತ್ರದಿಂದ ಬದಲಾಗುತ್ತಾ ಬೆಂಗಳೂರಿನ 28 ಕ್ಷೇತ್ರಗಳ ಗೆಲುವಿನ ಸಮೀಕರಣ?

ರಾಜ್ಯ ರಾಜಕೀಯದ ಶಕ್ತಿಕೇಂದ್ರವಾದ ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳಲ್ಲಿ ‘ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (SIR)’ ಪ್ರಕ್ರಿಯೆಯು ಮಹತ್ವದ ರಾಜಕೀಯ ಮತ್ತು ಆಡಳಿತಾತ್ಮಕ ಚರ್ಚೆಯನ್ನು ಹುಟ್ಟುಹಾಕಿದೆ. ಎಸ್‌ಐಆರ್‌ಗೂ ಮುನ್ನ ನಗರದಲ್ಲಿದ್ದ ಸುಮಾರು 1.03...

ಮಣಿಪುರದಲ್ಲಿ ಹಿಂಸಾಚಾರಕ್ಕೆ 306 ಬಲಿ, 49 ಮಂದಿ ನಾಪತ್ತೆ: ವಿಧಾನಸಭೆಯಲ್ಲಿ ಗೃಹ ಸಚಿವರ ಸ್ಪಷ್ಟನೆ

ಇಂಫಾಲ್: ಮಣಿಪುರದಲ್ಲಿ 2023ರ ಮೇ ತಿಂಗಳಲ್ಲಿ ಭುಗಿಲೆದ್ದ ಜನಾಂಗೀಯ ಹಿಂಸಾಚಾರಕ್ಕೆ ಮೂರು ವರ್ಷಗಳಿಗೂ ಹೆಚ್ಚು ಕಾಲ ಕಳೆದಿದ್ದರೂ, ಅದರ ಪರಿಣಾಮದಿಂದ ರಾಜ್ಯ ಸಂಪೂರ್ಣವಾಗಿ ಹೊರಬಂದಿಲ್ಲ. ಹಿಂಸಾಚಾರ ಆರಂಭವಾದ ಬಳಿಕ ಇದುವರೆಗೆ ಕನಿಷ್ಠ 306...

ದಲಿತರ ಅಭಿವೃದ್ಧಿಗೆ ಮೀಸಲಿಟ್ಟ ನಿಧಿ ದುರ್ಬಳಕೆ; ಜನವಸತಿಯೇ ಇಲ್ಲದ ಜಾಗದಲ್ಲಿ ರೂ. 50 ಲಕ್ಷದ ಸಿ.ಸಿ. ರಸ್ತೆ ನಿರ್ಮಾಣ!

ಸಮಾಜ ಕಲ್ಯಾಣ ಇಲಾಖೆಯ 'ಪ್ರಗತಿ ಕಾಲೋನಿ' ಯೋಜನೆಯ ನಿಧಿ ದುರ್ಬಳಕೆಯಾಗಿರುವ ಆರೋಪ ಕೇಳಿಬಂದಿದ್ದು, ಜನವಸತಿಯೇ ಇಲ್ಲದ ಜಾಗದಲ್ಲಿ ರೂ. 50 ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣ ಮಾಡಿರುವ ಪ್ರಕರಣ ಬೆಂಗಳೂರು...

SIR: ‘ಚುನಾವಣಾ ಆಯೋಗದಿಂದ ನೋಟಿಸ್‌’ ಇಲ್ಲದಿರುವ ದಾಖಲೆಗಳನ್ನು ಎಲ್ಲಿಂದಾ ತರೋದು? ಸಾರ್ವಜನಿಕರ ಪ್ರಶ್ನೆ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಚುನಾವಣಾ ಆಯೋಗವು ಬಳಸುತ್ತಿರುವ 'Logical Discrepancy' (ತಾರ್ಕಿಕ ವ್ಯತ್ಯಾಸ) ಎಂಬ ಸಾಫ್ಟ್‌ವೇರ್ ಆಧಾರಿತ ಪರಿಶೀಲನೆಯು ತಾಂತ್ರಿಕವಾಗಿ ದೋಷರಹಿತವೆಂದು ತೋರಿದರೂ, ವಾಸ್ತವದಲ್ಲಿ ಲಕ್ಷಾಂತರ ನೈಜ...

SIR ರಗಳೆ: ಕೊನೆಗೂ 43.81 ಲಕ್ಷ ಮತದಾರರ ನೋಟಿಸ್ ಪಟ್ಟಿ ಬಹಿರಂಗಪಡಿಸಿದ ಚುನಾವಣಾ ಆಯೋಗ

ಕರ್ನಾಟಕದಲ್ಲಿ ಭಾರಿ ಸದ್ದು ಮಾಡುತ್ತಿರುವ 'ವಿಶೇಷ ತೀವ್ರ ಪರಿಷ್ಕರಣೆ' (SIR) ಪ್ರಕ್ರಿಯೆಯಲ್ಲಿ ನೋಟಿಸ್‌ಗೆ ಗುರಿಯಾಗಿರುವ 43.81 ಲಕ್ಷ ಮತದಾರರ ಪಟ್ಟಿಯನ್ನು ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿ ಕೊನೆಗೂ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ...