ಮೂರು ಕೃಷಿ ಕಾನೂನುಗಳ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಯನ್ನು ಕೊನೆಗೊಳಿಸಬೇಕೆಂದು ಒಕ್ಕೂಟ ಸರ್ಕಾರ ಹಲವಾರು ಬಾರಿ ಪ್ರತಿಭಟನಾ ನಿರತ ರೈತರಿಗೆ ಮನವಿ ಮಾಡಿದೆ. ಗುರುವಾರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಪ್ರತಿಭಟನೆಯನ್ನು ನಿಲ್ಲಿಸುವಂತೆ ಮತ್ತೆ ರೈತರಿಗೆ ಮನವಿ ಮಾಡಿದ್ದಾರೆ. ದಿನಗಳ ಹಿಂದೆಯಷ್ಟೇ ನವೀಕರಣಗೊಂಡಿದ್ದ ಮೋದಿ ಸರ್ಕಾರದ ಹೊಸ ಸಚಿವ ಸಂಪುಟದಲ್ಲಿ, ಕೃಷಿ ಕ್ಷೇತ್ರಕ್ಕಾಗಿ ತೆಗೆದುಕೊಂಡ ಕೆಲವು ಯೋಜನೆಗಳನ್ನು ಸೂಚಿಸುತ್ತಾ ಈ ಬಾರಿ ರೈತರೊಂದಿಗೆ ವಿನಂತಿ ಮಾಡಲಾಗಿದೆ.
ಕೃಷಿ ಉತ್ಪಾದನಾ ಮಾರುಕಟ್ಟೆ ಸಮಿತಿ(ಎಪಿಎಂಸಿ) ಗೆ 1 ಲಕ್ಷ ಕೋಟಿ ರೂ. ಗಳ ನಿಧಿಯನ್ನು ಬಳಸಲು ಅನುಮತಿ ನೀಡಲಾಗುವುದು ಎಂದು ಸಚಿವ ನರೇಂದ್ರ ತೋಮರ್ ಸಚಿವ ಸಂಪುಟದ ನಿರ್ಧಾರಗಳನ್ನು ಪ್ರಕಟಿಸಿದ್ದಾರೆ.
ಇದನ್ನೂ ಓದಿ: ಸಹಕಾರ ಖಾತೆ ರಚನೆ: ಒಕ್ಕೂಟ ಸರ್ಕಾರದಿಂದ ರಾಜ್ಯದ ಹಕ್ಕುಗಳ ಮೇಲೆ ದಾಳಿ
“ಸರ್ಕಾರ ಏನೇ ಘೋಷಿಸಿದರೂ ಅವುಗಳನ್ನು ಕಾರ್ಯಗತಗೊಳಿಸುವ ಇಚ್ಛಾಶಕ್ತಿ ಇದೆ. ಈ ವರ್ಷದ ಬಜೆಟ್ನಲ್ಲಿ ಕೃಷಿ ಮಂಡಿಗಳನ್ನು ಮುಚ್ಚಲಾಗುವುದಿಲ್ಲ ಎಂದು ಘೋಷಿಸಲಾಯಿತು. ರೈತ ಮೂಲಸೌಕರ್ಯ ನಿಧಿಗೆ ಆತ್ಮನಿರ್ಭರ ಭಾರತ ಅಡಿಯಲ್ಲಿ ಹಂಚಿಕೆಯಾದ 1 ಲಕ್ಷ ಕೋಟಿ ರೂಗಳ ನಿಧಿಯನ್ನು ಬಳಸಲು ಎಪಿಎಂಸಿಗೆ ಅನುಮತಿ ನೀಡಲಾಗುವುದು ಎಂದು ಘೋಷಿಸಲಾಗಿದೆ. ಇಂದಿನ ಕ್ಯಾಬಿನೆಟ್ ಸಭೆಯಲ್ಲಿ, ಆ ಘೋಷಣೆಯನ್ನು ಜಾರಿಗೆ ತರಲು ನಿರ್ಧರಿಸಲಾಗಿದೆ. ಎಲ್ಲಾ ರಾಜ್ಯ-ಕೇಂದ್ರ ಸಹಕಾರ ಸಂಘಗಳು, ಒಕ್ಕೂಟಗಳು ಮತ್ತು ಸ್ವಾಯತ್ತ ಒಕ್ಕೂಟಗಳು ಈ ನಿಧಿಯನ್ನು ಬಳಸಿಕೊಳ್ಳಲು ಸಾಧ್ಯವಾಗುತ್ತದೆ” ಎಂದು ಸಚಿವರು ಹೇಳಿದ್ದಾರೆ.
ಒಕ್ಕೂಟ ಸರ್ಕಾರ ಮತ್ತು ಪ್ರತಿಭಟನಾ ನಿರತ ರೈತರ ನಡುವಿನ ಮಾತುಕತೆಗಳ ಕುರಿತು ಮಾತನಾಡಿ ಸಚಿವ, “ಕಾನೂನುಗಳನ್ನು ರದ್ದುಪಡಿಸುವುದನ್ನು ಹೊರತುಪಡಿಸಿ ಯಾವುದೇ ವಿಷಯದ ಬಗ್ಗೆ ಮಾತನಾಡಲು ನಾವು ಸಿದ್ಧರಿದ್ದೇವೆ ಎಂದು ನಾನು ಹಲವಾರು ಬಾರಿ ಹೇಳಿದ್ದೇನೆ. ರೈತರ ಬೇಡಿಕೆಗಳ ಕುರಿತು ಸರ್ಕಾರ ಯಾವಾಗಲೂ ಸೂಕ್ಷ್ಮತೆಯಿಂದ ಇರುತ್ತದೆ. ಪ್ರಧಾನಿ ಮೋದಿ ಸರ್ಕಾರವು ರೈತರ ಕುರಿತು ಹೆಚ್ಚಿನ ಗೌರವವನ್ನು ಹೊಂದಿದೆ. ನಮ್ಮ ಸರ್ಕಾರದ ಅಡಿಯಲ್ಲಿ ರೈತರು ಉದ್ದಾರ ಹೊಂದಬೇಕೆಂದು ನಾವು ಬಯಸುತ್ತೇವೆ. ಅದಕ್ಕಾಗಿಯೆ ಮೂರು ಕಾನೂನುಗಳನ್ನು ಪರಿಚಯಿಸಲಾಗಿದೆ. ಎಪಿಎಂಸಿಗಳನ್ನು ಬಲಪಡಿಸಲು ನಾವು ತೆಗೆದುಕೊಳ್ಳುತ್ತಿರುವ ಕ್ರಮಗಳ ಬಗ್ಗೆ ರೈತ ಸಂಘವು ಈಗ ಚಿಂತಿಸಬೇಕು” ಎಂದು ಅವರು ಹೇಳಿದ್ದಾರೆ.
“ಪ್ರತಿಭಟನೆ ಪ್ರಾರಂಭವಾದಾಗಿನಿಂದ, ನಾವು ಎಂಎಸ್ಪಿಯಲ್ಲಿ ಏನು ಮಾಡುತ್ತಿದ್ದೇವೆಂದು ನೀವು ನೋಡುತ್ತಿದ್ದೀರಿ. ಪ್ರತಿಭಟನೆಯ ಮುಂಚೂಣಿಯಲ್ಲಿರುವ ಆ ಪ್ರದೇಶಗಳ ರೈತರು ನಮ್ಮ ಎಂಎಸ್ಪಿ ಯೋಜನೆಯ ಗರಿಷ್ಠ ಲಾಭವನ್ನು ಪಡೆಯುತ್ತಿದ್ದಾರೆ. ಆದ್ದರಿಂದ ಮಾತುಕತೆಗಳನ್ನು ಪುನರಾರಂಭಿಸಲು ನಾನು ಮತ್ತೆ ರೈತ ಸಂಘಗಳ ಮುಖಂಡರನ್ನು ಒತ್ತಾಯಿಸುತ್ತಿದ್ದೇನೆ” ಎಂದು ಸಚಿವರು ಹೇಳಿದ್ದಾರೆ.
ಇದನ್ನೂ ಓದಿ: ಯುಪಿ: ಚುನಾವಣೆಗೆ ನಾಮಪತ್ರ ಸಲ್ಲಿಸಲು ತೆರಳುತ್ತಿದ್ದ ಮಹಿಳೆಯ ಸೀರೆ ಎಳೆದ ದುಷ್ಕರ್ಮಿಗಳು