ಬಿಜೆಪಿ ಪಕ್ಷವು ತೆಲಂಗಾಣ ರಾಜ್ಯದಲ್ಲಿ ಟಿಆರ್ಎಸ್ ಶಾಸಕರ ಖರೀದಿಗೆ ಯತ್ನಿಸಿದ ಆರೋಪದ ಮೇಲೆ ನವೆಂಬರ್ 21ರೊಳಗೆ ಬಿಜೆಪಿ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ್ ವಿಚಾರಣೆಗೆ ಹಾಜರಾಗಬೇಕೆಂದು ತೆಲಂಗಾಣ ಪೊಲೀಸರು ಸಮನ್ಸ್ ಜಾರಿಗೊಳಿಸಿದ್ದಾರೆ. ವಿಚಾರಣೆಗೆ ತಪ್ಪಿದ್ದಲ್ಲಿ ಬಂಧಿಸಲಾಗುವುದು ಎಂದು ಸಹ ನೋಟಿಸ್ನಲ್ಲಿ ತಿಳಿಸಲಾಗಿದೆ ಎಂದು ಎನ್ಡಿಟಿವಿ ವರದಿ ಮಾಡಿದೆ.
ತೆಲಂಗಾಣದಲ್ಲಿ ಬಿಜೆಪಿ ನಡೆಸಿದ ಆಪರೇಷನ್ ಕಮಲದ ವಿಚಾರಣೆಯನ್ನು ನ್ಯಾಯಾಧೀಶರ ಮೇಲ್ವೀಚಾರಣೆಯಲ್ಲಿ ತೆಲಂಗಾಣ ಪೊಲೀಸರು ನಡೆಸಬಹುದು ಎಂದು ಹೈಕೋರ್ಟ್ ಹೇಳಿದ ನಂತರ ಈ ವಿದ್ಯಾಮಾನ ಜರುಗಿದೆ.
ಟಿಆರ್ಎಸ್ ಶಾಸಕರಿಗೆ 100 ಕೋಟಿ ರೂ ಆಮಿಷವೊಡ್ಡಿದ ಆರೋಪದ ಮೇಲೆ ಮೂವರು ಆರೋಪಿಗಳನ್ನು ಅಕ್ಟೋಬರ್ 26 ರ ರಾತ್ರಿ ಹೈದರಾಬಾದ್ ಬಳಿಯ ಮೊಯಿನಾಬಾದ್ನಲ್ಲಿರುವ ಫಾರ್ಮ್ಹೌಸ್ನಿಂದ ಪೊಲೀಸರು ಬಂಧಿಸಿದ್ದರು. ಸದ್ಯ ಅವರು ಈಗ ಜಾಮೀನು ಪಡೆದಿದ್ದಾರೆ. ಈ ನಡುವೆ ಬಿಜೆಪಿಯ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ್ ವಿಚಾರಣೆಗೆ ಹಾಜರಾಗಬೇಕೆಂದು ತೆಲಂಗಾಣ ಪೊಲೀಸರು ಸಮನ್ಸ್ ಕಳಿಸಿದ್ದಾರೆ.
ಶಾಸಕರಲ್ಲಿ ಒಬ್ಬರಾದ ರೋಹಿತ್ ರೆಡ್ಡಿ ನೀಡಿದ ಸುಳಿವಿನ ಮೇರೆಗೆ ಸೈಬರಾಬಾದ್ ಪೊಲೀಸರು ದಾಳಿ ನಡೆಸಿದ್ದಾರೆ. ಆರೋಪಿಗಳು ತಮಗೆ 100 ಕೋಟಿ ಹಾಗೂ ಇತರ ಮೂವರಿಗೆ ತಲಾ 50 ಕೋಟಿ ರೂ. ನೀಡುವುದಾಗಿ ಹೇಳಿದ್ದಾರೆ.
ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ) ಮತ್ತು ಭ್ರಷ್ಟಾಚಾರ ತಡೆ ಕಾಯ್ದೆಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ತಮ್ಮ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್ಎಸ್) ಪಕ್ಷದ ನಾಲ್ವರು ಶಾಸಕರನ್ನು ಖರೀದಿಸುವ ಪ್ರಯತ್ನ ವಿಫಲಗೊಳಿಸಲಾಗಿದೆ ಎಂದಿರುವ ಕೆಸಿಆರ್, “ಬಿಜೆಪಿಗೆ ಸಂಬಂಧಿಸಿದ ಒಂದು ಗಂಟೆಗೂ ಹೆಚ್ಚಿನ ಹಿಡನ್ ಕ್ಯಾಮೆರಾ ಫೂಟೇಜ್ ಅನ್ನು ಬಿಡುಗಡೆ ಮಾಡಿದ್ದರು. ಅದರಲ್ಲಿ ಅಮಿತ್ ಶಾ, ಬಿ.ಎಲ್ ಸಂತೋಷ್ ಹೆಸರು ಕೇಳಿಬಂದಿತ್ತು. ರಾಷ್ಟ್ರೀಯ ತಂಡ ಆಪರೇಷನ್ ಕಮಲ ಮಾಡುತ್ತದೆ; ಅದರಲ್ಲಿ ಬಿ.ಎಲ್. ಸಂತೋಷ್, ಅಮಿತ್ ಶಾ ಮತ್ತು ಜೆಪಿ ನಡ್ಡಾ ಇದ್ದಾರೆ ಎಂದು ಬಿಜೆಪಿ ಬೆಂಬಲಿಗರು ಹೇಳಿದ್ದರು.
ಇದನ್ನೂ ಓದಿ; ಸುದರ್ಶನ್ ಟಿವಿ ಸಂಪಾದಕ ಚವ್ಹಾಂಕೆ ಟ್ವೀಟ್ ಬಳಿಕ ಅಂತರಧರ್ಮೀಯ ವಿವಾಹ ರದ್ದು