ಸುದರ್ಶನ್ ನ್ಯೂಸ್ ಟಿವಿ ಚಾನೆಲ್ ಸಂಪಾದಕ ಮತ್ತು ವ್ಯವಸ್ಥಾಪಕ ನಿರ್ದೇಶಕ ಸುರೇಶ್ ಚವ್ಹಾಂಕೆ ಟ್ವೀಟ್ ಮಾಡಿದ ಬಳಿಕ ಅಂತರಧರ್ಮೀಯ ವಿವಾಹ ರದ್ದಾಗಿದೆ. ಉಭಯ ಕುಟುಂಬಗಳು ಮದುವೆಯನ್ನು ನಿಲ್ಲಿಸಿವೆ ಎಂದು ‘ನ್ಯೂಸ್ಲಾಂಡ್ರಿ’ ವರದಿ ಮಾಡಿದೆ.
“ಲವ್ ಜಿಹಾದ್” ಎಂದು ಆರೋಪಿಸಿ ಮದುವೆಯ ಆಮಂತ್ರಣ ಪತ್ರವನ್ನು ಸುರೇಶ್ ಚವ್ಹಾಂಕೆ ಟ್ವೀಟ್ ಮಾಡಿದ್ದರು. ನಂತರ ಮಹಾರಾಷ್ಟ್ರದ ವಸಾಯಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ವಿವಾಹ ಕಾರ್ಯಕ್ರಮವನ್ನು ಎರಡೂ ಕುಟುಂಬಗಳು ರದ್ದುಗೊಳಿಸಿವೆ.
ಅಂತರ್ ಧರ್ಮೀಯವಾಗಿದ್ದ ವಿವಾಹ ಕಾರ್ಯಕ್ರಮವನ್ನು ನವೆಂಬರ್ 20, 2022ರಂದು ನಿಗದಿಪಡಿಸಲಾಗಿತ್ತು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
“ವಧು-ವರರ ಕುಟುಂಬಗಳು ಶುಕ್ರವಾರ ಸಂಜೆ ನನ್ನನ್ನು ಭೇಟಿಯಾದರು” ಎಂದು ಸಮಾರಂಭ ನಡೆಯಬೇಕಿದ್ದ ಸ್ಥಳದ ವ್ಯವಸ್ಥಾಪಕರೊಬ್ಬರು ‘ನ್ಯೂಸ್ಲಾಂಡ್ರಿ’ಗೆ ತಿಳಿಸಿದ್ದಾರೆ. ಹೆಸರು ಹೇಳಲಿಚ್ಛಿಸದೆ ಪ್ರತಿಕ್ರಿಯಿಸಿರುವ ವ್ಯವಸ್ಥಾಪಕ, “ಅವರು ದಿನವಿಡೀ ಕರೆಗಳನ್ನು ಸ್ವೀಕರಿಸುತ್ತಿದ್ದರು ಮತ್ತು ತೊಂದರೆಗೊಳಗಾದಂತೆ ತೋರುತ್ತಿತ್ತು” ಎಂದು ಉಲ್ಲೇಖಿಸಿದ್ದಾರೆ.
“ನನ್ನ ಸ್ಥಳದಲ್ಲಿ ನಡೆಯಬೇಕಿದ್ದ ಕಾರ್ಯಕ್ರಮವನ್ನು ಅವರು ರದ್ದುಮಾಡಿದರು. ನಾನು ಅವರ ಮುಂಗಡ ಹಣವನ್ನು ಹಿಂದಿರುಗಿಸಿದೆ. ಸಮಾರಂಭದ ಆಮಂತ್ರಣ ಪತ್ರವು ಸಾರ್ವಜನಿಕವಾಗಿ ಸೋರಿಕೆಯಾದ ಕಾರಣ ಕಾರ್ಯಕ್ರಮ ರದ್ದಾಯಿತು” ಎಂದು ತಿಳಿಸಿದ್ದಾರೆ. ಕಾರ್ಯಕ್ರಮ ನಡೆಯಬೇಕಿದ್ದ ಸ್ಥಳವು ವಸಾಯ್ನಲ್ಲಿದೆ.
ತಮ್ಮ ಚಾನೆಲ್ನ ಮುಸ್ಲಿಂ ವಿರೋಧಿ ಧೋರಣೆಗೆ ಕುಖ್ಯಾತರಾದ ಚವ್ಹಾಂಕೆ, ಶುಕ್ರವಾರ ಬೆಳಿಗ್ಗೆ 10 ಗಂಟೆ ಸುಮಾರಿಗೆ ಸಮಾರಂಭದ ಆಮಂತ್ರಣ ಪತ್ರವನ್ನು ಟ್ವೀಟ್ ಮಾಡಿದ್ದರು. ತನ್ನ ಸಂಗಾತಿ ಶ್ರದ್ಧಾ ವಾಕರ್ರನ್ನು ಅಫ್ತಾಬ್ ಪೂನಾವಾಲಾ ಕೊಂದಿರುವ ಪ್ರಕರಣಕ್ಕೆ ಈ ವಿವಾಹವನ್ನು ತಳುಕು ಹಾಕಿದ ಅವರು, ‘ಲವ್ಜಿಹಾದ್ ಆಕ್ಟ್ಆಫ್ಟೆರರ್’ ಎಂಬ ಹ್ಯಾಷ್ಟ್ಯಾಗ್ಗಳಲ್ಲಿ ಟ್ವೀಟ್ ಮಾಡಿದ್ದರು.
ಇಸ್ಲಾಂಗೆ ಮತಾಂತರ ಮಾಡಲು ಹಿಂದೂ ಯುವತಿಯನ್ನು ಮುಸ್ಲಿಂ ಯುವಕರು ಮದುವೆಯಾಗುತ್ತಾರೆಂದು ಹುಟ್ಟಿಸಲಾಗಿರುವ ಹಿಂದುತ್ವ ಪಿತೂರಿ ಸಿದ್ಧಾಂತವೇ ‘ಲವ್ ಜಿಹಾದ್’ ಎಂಬ ವಿಶ್ಲೇಷಣೆಗಳಿವೆ.
“ಕೊಲೆಗಾರ ಅಫ್ತಾಬ್ನ ವಸಾಯ್ನಲ್ಲಿ ಇಮ್ರಾನ್ ಮತ್ತು ದಿವ್ಯಾ ಅವರ ಮದುವೆಗೆ ಸಾರ್ವಜನಿಕರನ್ನು ಆಹ್ವಾನಿಸಲಾಗಿದೆ” ಎಂದು ಚವ್ಹಾಂಕೆ ಬರೆದಿದ್ದಾರೆ. “35 ತುಂಡುಗಳಾಗಿ ಕತ್ತರಿಸಿದ ಹೃದಯ ವಿದ್ರಾವಕ ಕೊಲೆಯ ನಂತರ, ಅದೇ ಊರಿನಲ್ಲಿ ಇದು ಹೇಗೆ ನಡೆಯುತ್ತಿದೆ?” ಎಂದು ಪ್ರಶ್ನಿಸಿದ್ದಾರೆ.
हत्यारे अफताब के वसई में ही अब “ इमरान और दिव्या” का होने जा रहा है निकाह/ विवाह का निमंत्रण सार्वजनिक हैं। उसी ग्राम के “अफताब ने श्रध्दा” के 35 टुकड़े करने के ह्रदय विदारक अपराध के बाद भी यह कैसे होने जा रहा हैं ? #LoveJihad_ActOfTerrorism #LoveJihad #Shraddha pic.twitter.com/8gwmwYVkzm
— Suresh Chavhanke “Sudarshan News” (@SureshChavhanke) November 18, 2022
ಮಾಧ್ಯಮ ವರದಿಗಳ ಪ್ರಕಾರ, ಶ್ರದ್ಧಾ ವಾಕರ್ ಅವರು ವಸಾಯ್ ನಿವಾಸಿಯಾಗಿದ್ದಾರೆ.
ಇದನ್ನೂ ಓದಿರಿ: ಅಫ್ತಾಬ್-ಶ್ರದ್ಧಾ 2019ರಿಂದಲೂ ಜೊತೆಯಲ್ಲಿದ್ದರು; ಮುಂಬೈ ತೊರೆದು ದೆಹಲಿಗೆ ಹೋದರು: ಕೊಲೆ ಪ್ರಕರಣ ಬೆಳಕಿಗೆ ಬಂದಿದ್ದು ಹೀಗೆ…
ಸೆಪ್ಟೆಂಬರ್ 2020ರಲ್ಲಿ ಸರ್ವೋಚ್ಚ ನ್ಯಾಯಾಲಯ ಈ ಚವ್ಹಾಂಚೆ ಅವರಿಗೆ ಎಚ್ಚರಿಕೆಯನ್ನು ನೀಡಿತ್ತು. ಭಾರತೀಯ ಮುಸ್ಲಿಮರು ಸಂಘಟಿತ ಇಸ್ಲಾಮಿಕ್ ಪಿತೂರಿಯ ಭಾಗವಾಗಿ ನಾಗರಿಕ ಸೇವೆಗಳಿಗೆ ಪ್ರವೇಶಿಸುತ್ತಿದ್ದಾರೆ ಎಂದು ಸುದರ್ಶನ್ ನ್ಯೂಸ್ ಸಂಪಾದಕರು ‘UPSE ಜಿಹಾದ್’ ಎಂಬ ಕಾರ್ಯಕ್ರಮ ಮಾಡಿದ್ದಕ್ಕೆ ಕೋರ್ಟ್ ಎಚ್ಚರಿಕೆ ನೀಡಿತ್ತು.
ಸಿಎನ್ಎನ್-ನ್ಯೂಸ್ 18, ನ್ಯೂಸ್ 18 ಇಂಡಿಯಾ ಮತ್ತು ರಿಪಬ್ಲಿಕ್ ಭಾರತ್ ಇಂಡಿಯಾದಂತಹ ಮುಖ್ಯವಾಹಿನಿಯ ಟಿವಿ ಸುದ್ದಿ ವಾಹಿನಿಗಳು ವಾಕರ್ ಹತ್ಯೆಯನ್ನು ‘ಲವ್ ಜಿಹಾದ್’ ಎಂದು ಬಿಂಬಿಸಿವೆ.
ಮದುವೆ ಕಾರ್ಯಕ್ರಮವನ್ನು ಆಯೋಜಿಸಿದ್ದ ಕುಟುಂಬಗಳಲ್ಲಿ ಒಂದನ್ನು ಸಂಪರ್ಕಿಸಿರುವ ‘ನ್ಯೂಸ್ಲಾಂಡ್ರಿ’, ಅವರ ಪ್ರತಿಕ್ರಿಯೆಯನ್ನು ಸ್ವೀಕರಿಸಲು ಸಾಧ್ಯವಾಗಲಿಲ್ಲ ಎಂದಿದೆ.