ಆಡಳಿತಾರೂಢ ಭಾರತೀಯ ಜನತಾ ಪಕ್ಷ (ಬಿಜೆಪಿ) ‘ಸರ್ವಾಧಿಕಾರ ಮತ್ತು ಪ್ರತಿಪಕ್ಷಗಳ ಧ್ವನಿಯನ್ನು ಅಡಗಿಸುವ ಮೂಲಕ ಲೋಕಸಭೆ ಚುನಾವಣೆಗೆ ಸಜ್ಜಾಗಿದೆ’ ಎಂದು ಅರ್ಥಶಾಸ್ತ್ರಜ್ಞ ಜೀನ್ ಡ್ರೆಝ್ ಹೇಳಿದ್ದಾರೆ.
ಐದು ವರ್ಷಗಳ ಹಿಂದೆ, ಲೇಖಕಿ ಅರುಂಧತಿ ರಾಯ್ ಅವರು 2019ರ ಲೋಕಸಭೆ ಚುನಾವಣೆಯನ್ನು ಫೆರಾರಿ ಮತ್ತು ಕೆಲ ಸೈಕಲ್ಗಳ ನಡುವಿನ ಸ್ಪರ್ಧೆ ಎಂದು ಬಿಜೆಪಿ ಮತ್ತು ವಿರೋಧ ಪಕ್ಷಗಳ ನಡುವಿನ ಸ್ಪರ್ಧೆಯನ್ನು ಬಣ್ಣಿಸಿದ್ದರು ಎಂದು ಡ್ರೆಝ್ ನೆನಪಿಸಿಕೊಂಡಿದ್ದಾರೆ.
“2019ರ ಪರಿಸ್ಥಿತಿ ಈಗಲೂ ಇದೆ. ಫೆರಾರಿಗೆ [ಬಿಜೆಪಿ] ಕಾರ್ಪೊರೇಟ್ ವಲಯದ ಬೆಂಬಲವಿದೆ ಎಂದು ನಮಗೆ ತಿಳಿದಿದೆ. ಪ್ರಮುಖ ವಿರೋಧ ಪಕ್ಷಗಳಾದ ಜಾರ್ಖಂಡ್ ಮುಕ್ತಿ ಮೋರ್ಚಾ, ರಾಷ್ಟ್ರೀಯ ಜನತಾ ದಳ ಮತ್ತು ಕಾಂಗ್ರೆಸ್ ಎಂಬ ಸೈಕಲ್ಗಳನ್ನು ವ್ಯವಸ್ಥಿತವಾಗಿ ಗುರಿಪಡಿಸಲಾಗಿದೆ” ಎಂದು ಡ್ರೆಝ್ ಹೇಳಿದ್ದಾರೆ.
“ಬಿಜೆಪಿ ಸರ್ಕಾರದ ಅಡಿಯಲ್ಲಿ ಪ್ರತಿಪಕ್ಷ ನಾಯಕರು ಕೇಂದ್ರೀಯ ಸಂಸ್ಥೆಗಳಿಂದ ನಿರಂತರ ಕಿರುಕುಳವನ್ನು ಎದುರಿಸುತ್ತಿದ್ದಾರೆ. ಹೇಮಂತ್ ಸೊರೇನ್ ಅವರನ್ನು ಬಂಧಿಸಲಾಗಿದೆ. ಲಾಲೂ ಪ್ರಸಾದ್ ಯಾದವ್ ಅವರನ್ನು ಬಂಧಿಸಲಾಗಿತ್ತು. ರಾಹುಲ್ ಗಾಂಧಿಯವರಿಗೂ ಇದೇ ರೀತಿಯ ಪರಿಸ್ಥಿತಿ ಎದುರಾಗಿತ್ತು. ಕಾಂಗ್ರೆಸ್ನ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಲಾಗಿತ್ತು. ಬಿಜೆಪಿಗೆ ಅಪಾಯ ತಂದೊಡ್ಡುವ ಎಲ್ಲಾ ರಾಜಕಾರಣಿಗಳು ಕಿರುಕುಳ ಅನುಭವಿಸಬೇಕಾಗಿದೆ. ಈ ಮೂಲಕ ಚುನಾವಣೆಗೆ ಸಿದ್ದತೆ ಮಾಡಿಕೊಳ್ಳಲಾಗಿದೆ” ಎಂದಿದ್ದಾರೆ.
ಬಿಜೆಪಿಯನ್ನು ಸೋಲಿಸಲು ಪ್ರತಿಪಕ್ಷಗಳು ಒಗ್ಗೂಡುವ ನಿರ್ಧಾರವನ್ನು ಡ್ರೆಝ್ ಸ್ವಾಗತಿಸಿದ್ದು, ಇದು ಈ ಬಾರಿಯ ಚುನಾವಣೆಯ ಫಲಿತಾಂಶಗಳಲ್ಲಿ ದೊಡ್ಡ ಬದಲಾವಣೆಯನ್ನು ಉಂಟುಮಾಡಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.
ಏಪ್ರಿಲ್ 19 ರಿಂದ ಜೂನ್ 1 ರ ನಡುವೆ ಏಳು ಹಂತಗಳಲ್ಲಿ ಈ ಬಾರಿಯ ಸಾರ್ವತ್ರಿಕ ಚುನಾವಣೆಯ ಮತದಾನ ನಡೆಯಲಿದೆ. ಜೂನ್ 4 ರಂದು ಮತಗಳ ಎಣಿಕೆ ನಡೆಯಲಿದೆ.
ಇದನ್ನೂ ಓದಿ : ‘ಮೋದಿ ಸರ್ವಾಧಿಕಾರಿ, ಅವರ ಮರಳುವಿಕೆ ದೇಶಕ್ಕೆ ವಿನಾಶಕಾರಿ’: ಪರಕಾಲ ಪ್ರಭಾಕರ್