ಆಲ್ಟ್ ನ್ಯೂಸ್ ಸಹ ಸಂಸ್ಥಾಪಕ ಹಾಗೂ ಖ್ಯಾತ ಫ್ಯಾಕ್ಟ್ ಚೆಕ್ಕರ್ ಮುಹಮ್ಮದ್ ಝುಬೈರ್ ಅವರಿಗೆ ತಮಿಳುನಾಡು ಸರ್ಕಾರ 2024ನೇ ಸಾಲಿನ ‘ಕೊಟ್ಟೈ ಅಮೀರ್ ಕೋಮು ಸೌಹಾರ್ದ ಪ್ರಶಸ್ತಿ’ ನೀಡಿ ಗೌರವಿಸಿದೆ.
ಕೋಮು ಸೌಹಾರ್ದತೆಯನ್ನು ಉತ್ತೇಜಿಸಲು ನೀಡಿದ ಕೊಡುಗೆ ಪರಿಗಣಿಸಿ ಝಬೈರ್ ಅವರಿಗೆ ಈ ಪ್ರಶಸ್ತಿ ನೀಡಲಾಗಿದೆ ಎಂದು ತಮಿಳುನಾಡು ಸರ್ಕಾರದ ಮೂಲಗಳನ್ನು ಉಲ್ಲೇಖಿಸಿ ವರದಿಗಳು ಹೇಳಿವೆ.
ಪ್ರತಿಕ್ ಸಿನ್ಹಾ ಅವರೊಂದಿಗೆ ಆಲ್ಟ್ ನ್ಯೂಸ್ ವೆಬ್ಸೈಟ್ ನಡೆಸುತ್ತಿರುವ ಝಬೈರ್, ಮುಖ್ಯ ವಾಹಿನಿ ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಬರುವ ಸುಳ್ಳು ಸುದ್ದಿಗಳನ್ನು ಬಯಲು ಮಾಡಿ ಜನರಿಗೆ ಸತ್ಯ ತಿಳಿಸುವ ಕಾರ್ಯ ಮಾಡುತ್ತಿದ್ದಾರೆ. ಅಲ್ಲದೆ, ಕೋಮು ಸಾಮರಸ್ಯ ಕದಡುವ ಸುದ್ದಿಗಳ ವಿರುದ್ದವೂ ಸಮರ ಸಾರುತ್ತಿದ್ದಾರೆ.
ಝಬೈರ್ ಅವರ ಆಲ್ಟ್ ನ್ಯೂಸ್ ಪ್ರಸ್ತುತ ದೇಶದ ಮುಂಚೂಣಿ ಫ್ಯಾಕ್ಟ್ಚೆಕ್ ವೆಬ್ಸೈಟ್ ಎನಿಸಿಕೊಂಡಿದೆ. ಸತ್ಯ ಬಯಲು ಮಾಡಿದ ಕಾರಣ ಹಲವಾರು ಭಾರೀ ಝುಬೈರ್ ಕೇಂದ್ರ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿದ್ದೂ ಇದೆ.
ಮಾರ್ಚ್ 2023ರಲ್ಲಿ ತಮಿಳುನಾಡಿನಲ್ಲಿ ವಲಸೆ ಕಾರ್ಮಿಕರ ಮೇಲೆ ದಾಳಿ ನಡೆಸಲಾಗ್ತಿದೆ ಎಂಬ ಸುಳ್ಳು ಸುದ್ದಿಯೊಂದು ಹಬ್ಬಿತ್ತು. ಮುಖ್ಯವಾಹಿನಿ ಮಾಧ್ಯಮಗಳು ಕೂಡ ಇದನ್ನು ವೈಭವೀಕರಿಸಿ ತಮಿಳುನಾಡಿನ ಡಿಎಂಕೆ ಸರ್ಕಾರದ ವಿರುದ್ದ ಮುಗಿಬಿದ್ದಿತ್ತು. ಆ ಸಂದರ್ಭದಲ್ಲಿ ಅದೊಂದು ಸುಳ್ಳು ಸುದ್ದಿ ಎಂದು ಝುಬೈರ್ ಸತ್ಯ ಬಯಲು ಮಾಡಿದ್ದರು. ಇದು ಝುಬೈರ್ ಅವರಿಗೆ ಪ್ರಶಸ್ತಿ ನೀಡಲು ಮುಖ್ಯ ಕಾರಣ ಎನ್ನಲಾಗಿದೆ.
1983 ರ ಹಿಂದಿ ಚಲನಚಿತ್ರದ ಸ್ಕ್ರೀನ್ಶಾಟ್ ಒಂದನ್ನು ಹಂಚಿಕೊಂಡ 2018ರ ಪ್ರಕರಣವೊಂದಕ್ಕೆ ಸಂಬಂಧಪಟ್ಟಂತೆ 2023ರಲ್ಲಿ ಝುಬೈರ್ ಅವರನ್ನು ದೆಹಲಿ ಪೊಲೀಸರು ಬಂಧಿಸಿದ್ದರು. ಅವರ ವಿರುದ್ದ 6 ಪ್ರಕರಣಗಳನ್ನು ದಾಖಲಿಸಿ ಜೈಲಿಗಟ್ಟಲಾಗಿತ್ತು. ಕೊನೆಗೆ ಸುಪ್ರೀಂ ಕೋರ್ಟ್ನಿಂದ ಜಾಮೀನು ಪಡೆದು ಝುಬೈರ್ ಬಂಧಮುಕ್ತರಾಗಿದ್ದರು.
ಸುಳ್ಳು ಸುದ್ದಿಗಳನ್ನು ಬಯಲಿಗೆಳೆಯುವ ಕಾರಣಕ್ಕೆ ಝಬೈರ್ ಆಗಾಗ ಹಿಂದುತ್ವ ಗುಂಪುಗಳಿಂದ ಸೈದ್ದಾಂತಿಕ ದಾಳಿಗೆ ಒಳಗಾಗುತ್ತಿರುತ್ತಾರೆ.
ಇದನ್ನೂ ಓದಿ: ಗಣರಾಜ್ಯೋತ್ಸವ: ಸೇನಾ ಪಡೆಗಳ ಪರೇಡ್ ಮುನ್ನಡೆಸಿದ ಮಹಿಳೆಯರು