Homeಮುಖಪುಟಬಿಹಾರ ರಾಜಕೀಯ ಬೆಳವಣಿಗೆ: ಮುಖ್ಯಮಂತ್ರಿಯಾಗಿ ನಿತೀಶ್, ಬಿಜೆಪಿಯಿಂದ ಇಬ್ಬರು ಡಿಸಿಎಂ!

ಬಿಹಾರ ರಾಜಕೀಯ ಬೆಳವಣಿಗೆ: ಮುಖ್ಯಮಂತ್ರಿಯಾಗಿ ನಿತೀಶ್, ಬಿಜೆಪಿಯಿಂದ ಇಬ್ಬರು ಡಿಸಿಎಂ!

- Advertisement -
- Advertisement -

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ‘ಮಹಾ ಘಟಬಂಧನ್’ ತೊರೆಯುವುದು ಖಚಿತವಾಗಿದ್ದು, ಬಿಜೆಪಿ ಜತೆ ಸೇರಿ ಅವರು ಇದೆ ಭಾನುವಾರ ಏಳನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮಗಳು ಉನ್ನತ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿವೆ.

ಜೆಡಿಯು ಮುಖ್ಯಸ್ಥ ನಿತೀಶ್‌ ಕುಮಾರ್ ಮುಖ್ಯಮಂತ್ರಿಯಾದರೆ, ಬಿಹಾರ ಬಿಜೆಪಿ ಎರಡು ಉಪಮುಖ್ಯಮಂತ್ರಿ ಸ್ಥಾನಗಳನ್ನು ಪಡೆಯುತ್ತದೆ ಎನ್ನಲಾಗಿದ್ದು, 2020ರ ಚುನಾವಣೆಯ ನಂತರ ಈ ಒಪ್ಪಂದವನ್ನು ಮಾಡಿಕೊಳ್ಳಲಾಗಿತ್ತು ಎನ್ನಲಾಗಿದೆ.

ಈ ಸಮಯದಲ್ಲಿ ನಿತೀಶ್ ಕುಮಾರ್ ವಿಧಾನಸಭೆ ವಿಸರ್ಜಿಸಿ, ಮತ್ತೆ ಚುನಾವಣೆಗೆ ಹೋಗುವುದಿಲ್ಲ ಎಂದು ತಿಳಿದುಬಂದಿದ್ದು, ಮುಂದಿನ ವರ್ಷ ಬಿಹಾರ ವಿಧಾನಸಭೆಗೆ ಮತದಾನ ನಡೆಯಲಿದೆ. ಆದ್ದರಿಂದ, ಬಿಜೆಪಿ-ಜೆಡಿಯು ಪಕ್ಷಗಳು ವಿಧಾನಸಭೆ ವಿಸರ್ಜಿಸುವ ಆತುರದಲ್ಲಿಲ್ಲ. ಆದರೆ, ಉಭಯ ಪಕ್ಷಗಳ ಚಿತ್ತ ಈಗ ಲೋಕಸಭೆ ಚುನಾವಣೆ ಮೇಲಿದೆ.

ಬಿಹಾರ ಸಿಎಂ ನಿತೀಶ್ ಕುಮಾರ್ ಅವರು ಜನವರಿ 28ರವರೆಗೆ ನಿಗದಿಯಾಗಿದ್ದ ಸಾರ್ವಜನಿಕ ಸಭೆಗಳು ಮತ್ತು ಕಾರ್ಯಕ್ರಮಗಳನ್ನು ರದ್ದುಗೊಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅವರು 2022 ರಲ್ಲಿ ಬಿಜೆಪಿಗೆ ಕೈಕೊಟ್ಟು ಮಹಾ ಘಟಬಂಧನ್ ಕಡೆಗೆ ಜಿಗಿದಿದ್ದರು. ಈಗ ಮತ್ತೊಮ್ಮೆ ಬಿಜೆಪಿ ಸೇರಲು ಮುಂದಾಗಿದ್ದಾರೆ. ಆ ಮೂಲಕ ತಮ್ಮ ‘ಪಲ್ಟು ಕುಮಾರ್’ ಅಡ್ಡಹೆಸರನ್ನು ಮರುಪಡೆಯಲು ಸಜ್ಜಾಗಿದ್ದಾರೆ.

ನಿತೀಶ್ ಕುಮಾರ್ ಅವರು ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟಕ್ಕೆ (ಎನ್‌ಡಿಎ) ಮರಳುವುದಕ್ಕೆ ಬಿಜೆಪಿ ಹಲವು ಷರತ್ತುಗಳನ್ನು ವಿಧಿಸಿದೆ ಎನ್ನಲಾಗುತ್ತಿದೆ. ವಿಧಾನಸಭೆ ಸ್ಪೀಕರ್ ಯಾರಾಗಬೇಕು ಎಂಬುದರಿಂದ ಹಿಡಿದು, ಕ್ಯಾಬಿನೆಟ್ ಮರು-ವಿಂಗಡಣೆಯನ್ನು ಒಳಗೊಂಡಿರುತ್ತದೆ. ಬಿಜೆಪಿ ಶಾಸಕರಿಗೆ ಅವಕಾಶ ಕಲ್ಪಿಸಲು ಪ್ರತಿ ನಾಲ್ಕು ಶಾಸಕರಿಗೆ ಒಂದು ಮಂತ್ರಿ ಸ್ಥಾನ ನೀಡುವುದು ಸೇರಿದಂತೆ, ಜೆಡಿಯುಗೆ ಲೋಕಸಭಾ ಸ್ಥಾನಗಳ ಕಡಿತಗೊಳಿಸುವ ವಿಚಾರ ಒಳಗೊಂಡಿದೆ. 2019 ರಲ್ಲಿ ಜೆಡಿಯು 17 ರಲ್ಲಿ ಸ್ಪರ್ಧಿಸಿ, 16 ಸ್ಥಾನಗಳನ್ನು ಗೆದ್ದಿತು.

ನಿತೀಶ್ ಅವರ ಬಿಜೆಪಿ ಜತೆಗೆ ಮರು ಹೊಂದಾಣಿಕೆ ಮಾಡಿಕೊಳ್ಳುತ್ತವೆ ಎಂಬುದು ಇನ್ನೂ ಖಚಿತವಾಗಿಲ್ಲ. ಆದರೆ, ಬಿಜೆಪಿ ಮುಖಂಡ ಸುಶೀಲ್ ಕುಮಾರ್ ಮೋದಿಯವರ “ರಾಜಕೀಯದಲ್ಲಿ ಬಾಗಿಲುಗಳು ಶಾಶ್ವತವಾಗಿ ಮುಚ್ಚಲ್ಪಟ್ಟಿಲ್ಲ” ಎಂಬ ಹೇಳಿಕೆಯ ನಂತರ ಈ ಊಹಾಪೋಹಗಳಿಗೆ ಮತ್ತಷ್ಟು ರೆಕ್ಕೆಪುಕ್ಕ ಬಂದಿದೆ.

ನಿತೀಶ್ ಕುಮಾರ್ ಅವರ ಬಿಜೆಪಿ ಘರ್ ವಾಪ್ಸಿಯು ಬಿಹಾರದ ರಾಜಕೀಯದಲ್ಲಿ ಮಿಶ್ರ ಪ್ರತಿಕ್ರಿಯೆ ಕೇಳಿಬರುತ್ತಿದೆ. ಮೂಲಗಳ ಪ್ರಕಾರ, ನಿತೀಶ್ ಕುಮಾರ್ ಅವರ ಪಕ್ಷದೊಳಗೆ ಭಿನ್ನಾಭಿಪ್ರಾಯ ಉಂಟಾಗಿದೆ. ಕಳೆದ ತಿಂಗಳು ನಿತೀಶ್ರಿಂದ ಜೆಡಿಯು ಮುಖ್ಯಸ್ಥ ಸದ್ಥಾನದಿಂದ ಪದಚ್ಯುತಗೊಂಡ ಲಾಲನ್ ಸಿಂಗ್, ಆರ್‌ಜೆಡಿ ಕೈಬಿಡುವುದನ್ನು ವಿರೋಧಿಸುತ್ತಿದ್ದಾರೆ ಎಂದು ತಿಳಿದುಬಂದಿದೆ, ಆದರೆ ಸಂಜಯ್ ಝಾ ಮತ್ತು ಅಶೋಕ್ ಚೌಧರಿ ನೇತೃತ್ವದ ಗುಂಪು ಬಿಜೆಪಿಯೊಂದಿಗೆ ಮೈತ್ರಿಗೆ ಒತ್ತಾಯಿಸುತ್ತಿದೆ.

ಮಾಜಿ ಮುಖ್ಯಮಂತ್ರಿ ಜಿತನ್ ರಾಮ್ ಮಾಂಝಿ ಮತ್ತು ಅವರ ಹಿಂದೂಸ್ತಾನ್ ಅವಾಮ್ ಮೋರ್ಚಾ – ಸದ್ಯಕ್ಕೆ ಜೆಡಿಯು ಮಿತ್ರ ಮತ್ತು ರಾಜ್ಯ ಸರ್ಕಾರದ ಭಾಗವಾಗಿದೆ. ಕೇಂದ್ರ ಗೃಹ ರಾಜ್ಯ ಸಚಿವ ನಿತ್ಯಾನಂದ ರೈ ಅವರು ಆ ಒಪ್ಪಂದವನ್ನು ಮಾಡಿಕೊಳ್ಳುವ ಜವಾಬ್ದಾರಿಯನ್ನು ಹೊಂದಿದ್ದಾರೆ ಎಂದು ವರದಿಯಾಗಿದೆ.

ಇಷ್ಟೆಲ್ಲಾ ಬೆಳವಣಿಗೆಗಳು ನಡೆಯುತ್ತಿದ್ದರೂ ಇಂಡಿಯಾ ಬಣವು ಭರವಸೆ ಕಳೆದುಕೊಂಡಿಲ್ಲ. ಸಾರ್ವಜನಿಕವಾಗಿಯೂ ಯಾವುದೇ ಹೇಳಿಕೆ ನೀಡಿಲ್ಲ. ‘ನಿತೀಶ್ ಕುಮಾರ್ ಅವರು ಮೈತ್ರಿಯೊಂದಿಗೆ ಉಳಿಯುತ್ತಾರೆ ಎಂದು ನಾನು ವಿಶ್ವಾಸದಿಂದ ಹೇಳಬಲ್ಲೆ. ಅವರು ಬಿಜೆಪಿಯನ್ನು ಅಧಿಕಾರದಿಂದ ಹೊರಹಾಕಲು ನಿರ್ಧರಿಸಿದ್ದಾರೆ ಮತ್ತು ನಾವು ಅವರನ್ನು ನಂಬುತ್ತೇವೆ’ ಎಂದು ಬಿಹಾರದ ಕಾಂಗ್ರೆಸ್ ನಾಯಕ ಪ್ರೇಮ್ ಚಂದ್ರ ಮಿಶ್ರಾ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಆರ್‌ಜೆಡಿ ಮುಖಂಡರೂ ಕೂಡ ಇನ್ನೂ ಆಶಾವಾದ ಇಟ್ಟುಕೊಂಡಿದ್ದಾರೆ, ‘ಮೈತ್ರಿ ಮಾತುಕತೆಯು ಬಿಜೆಪಿ ಹೆದರಿರುವುದನ್ನು ಪ್ರತಿಬಿಂಬಿಸುತ್ತದೆ’ ಎಂದು ಪಕ್ಷದ ವಕ್ತಾರ ಶಕ್ತಿ ಯಾದವ್ ಹೇಳಿದರು.

ಇದನ್ನೂ ಓದಿ; ಇಂಡಿಯಾ ಬಣ ಬಿಕ್ಕಟ್ಟು: ಟಿಎಂಸಿ ಸಂಸದರ ವಿರುದ್ಧ ಅಧೀರ್ ರಂಜನ್ ಚೌಧರಿ ವಾಗ್ದಾಳಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚುನಾವಣೆಗಾಗಿ ಕಾಗೇರಿಯಿಂದ ಮೇಸ್ತಾ ಪ್ರಕರಣ ಬಳಕೆ: ಹಿಂದುತ್ವ ಕಾರ್ಯಕರ್ತರ ಅಸಮಾಧಾನ

0
ಚುನಾವಣೆ ಬಂದಾಗ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಪರೇಶ್ ಮೇಸ್ತಾ ಪ್ರಕರಣದ ಪ್ಲೇ ಕಾರ್ಡ್ ಪ್ರಯೋಗಿಸುತ್ತಿದ್ದಾರೆ. ದಯವಿಟ್ಟು ನಿಮ್ಮ ರಾಜಕೀಯದ ತೆವಲಿಗೆ ಹಿಂದುಳಿದ ಯುವಕರನ್ನು ಬಳಸಿಕೊಳ್ಳಬೇಡಿ ಎಂದು ಹಿಂದುತ್ವ ಕಾರ್ಯಕರ್ತ ಶ್ರೀರಾಮ್...