ಯಡಿಯೂರಪ್ಪ ಅವರ ಸೋರಿಕೆಯಾದ ಆಡಿಯೋ ಕ್ಲಿಪ್ ಕುರಿತು ವಿಚಾರಣೆ ನಡೆಸಬೇಕೆಂಬ ಕಾಂಗ್ರೆಸ್ ಮನವಿಯನ್ನು ಸುಪ್ರೀಂ ಕೋರ್ಟ್ ಸ್ವೀಕರಿಸಿದ್ದು ನಾಳೆ ವಿಚಾರಣೆ ನಡೆಯಲಿದೆ.
ಡಿಸೆಂಬರ್ 5 ರಂದು ಕರ್ನಾಟಕದಲ್ಲಿ 15 ಸ್ಥಾನಗಳಿಗೆ ಉಪಚುನಾವಣೆ ನಡೆಯಲಿದೆ. ಈ ಕುರಿತು ಅನರ್ಹ ಶಾಸಕರಿಗೆ ಟಿಕೆಟ್ ನೀಡಲಾಗುತ್ತಿರುವ ಬಗ್ಗೆ ಬಿಜೆಪಿ ನಾಯಕರ ವಿರೋಧದ ಬಗ್ಗೆ ಹುಬ್ಬಳ್ಳಿಯಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಯಡಿಯೂರಪ್ಪ ಮಾತನಾಡಿದ್ದರು. ಶಾಸಕರ ರಾಜಿನಾಮೆಗೆ ಅಮಿತ್ ಶಾರವರ ಕಾರಣರು ಎಂಬರ್ಥದಲ್ಲಿ ಬಿಎಸ್ವೈ ಮಾತಾಡಿದ್ದ ಆಡಿಯೋ ಸೋರಿಕೆಯಾಗಿತ್ತು.
ಈಗ ಈ ವಿಡಿಯೋ ಸೋರಿಕೆ ಕುರಿತು ವಿಚಾರಣೆಗೆ ಕಾಂಗ್ರೆಸ್ ಸಲ್ಲಿಸಿದ್ದ ಅರ್ಜಿಯನ್ನು ಆಲಿಸಲು ಸುಪ್ರೀಂ ಕೋರ್ಟ್ ಸೋಮವಾರ ಒಪ್ಪಿಕೊಂಡಿದೆ. ಹಿರಿಯ ವಕೀಲ ಮತ್ತು ಕಾಂಗ್ರೆಸ್ ಮುಖಂಡ ಕಪಿಲ್ ಸಿಬಲ್ ಈ ವಿಷಯವನ್ನು ಉನ್ನತ ನ್ಯಾಯಾಲಯದ ಮುಂದೆ ಪ್ರಸ್ತಾಪಿಸಿದ್ದು, ಮಂಗಳವಾರ ಅರ್ಜಿಯ ವಿಚಾರಣೆ ನಡೆಯಲಿದೆ.
ಇನ್ನು ಕಾಂಗ್ರೆಸ್ ರಾಜ್ಯಪಾಲರ ಮೂಲಕ ಸಲ್ಲಿಸಿರುವ ದೂರು ಸಹ ಗೃಹ ಸಚಿವಾಲಯ ತಲುಪಿದೆ ಎನ್ನಲಾಗುತ್ತಿದೆ. ಆದ್ದರಿಂದ ಸುಪ್ರೀಂ ಕೋರ್ಟ್ ವಿಚಾರಣೆಯತ್ತ ಎಲ್ಲರ ಗಮನ ನೆಟ್ಟಿದೆ.
ನಾನು ಅಮಿತ್ ಶಾ ಕಾರಣರೆಂದು ಹೇಳಿಲ್ಲ. “ಇದು ಸುಳ್ಳು ಪ್ರಚಾರ … ಜನರು ಉಪಚುನಾವಣೆಯಲ್ಲಿ ಕಾಂಗ್ರೆಸ್ಗೆ ಪಾಠ ಕಲಿಸುತ್ತಾರೆ” ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ಹೇಳಿದ್ದಾರೆ.
ಪ್ರತಿಪಕ್ಷದ ಶಾಸಕರನ್ನು “ಬೇಟೆಯಾಡಲು” ಮತ್ತು ಸರ್ಕಾರಗಳನ್ನು “ಅಸ್ಥಿರಗೊಳಿಸಲು” ಬಿಜೆಪಿ ಎಲ್ಲಾ ಸರ್ಕಾರಿ ಸಂಸ್ಥೆಗಳನ್ನು ದುರುಪಯೋಗಪಡಿಸುತ್ತಿದೆ ಎಂಬುದನ್ನು ಈ ವಿಡಿಯೋ ತೋರಿಸುತ್ತದೆ ಎಂದು ಕರ್ನಾಟಕದ ಉಸ್ತುವಾರಿ ವಹಿಸಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಹೇಳಿದ್ದಾರೆ.
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಬಿಜೆಪಿಯೂ ಈಗ ಬೆತ್ತಲಾಗಿದೆ. ಅವರ ಬಗ್ಗೆ ಜನರು ತೀರ್ಮಾನಸಿಸುತ್ತಾರೆ ಎಂದು ಹೇಳಿದ್ದಾರೆ.