Homeಮುಖಪುಟಬಹುಜನ ಭಾರತ : ಹಸಿವಿನ ಸಾವುಗಳು ಮತ್ತು ತುಂಬಿ ತುಳುಕಿರುವ ಗೋದಾಮುಗಳು

ಬಹುಜನ ಭಾರತ : ಹಸಿವಿನ ಸಾವುಗಳು ಮತ್ತು ತುಂಬಿ ತುಳುಕಿರುವ ಗೋದಾಮುಗಳು

ಕಂಗೆಟ್ಟ ಬಡಭಾರತದತ್ತ ಕಣ್ಣು ಮುಚ್ಚಿದ್ದಾರೆ ಮೋದಿ. ಹೆಚ್ಚುವರಿ ದಾಸ್ತಾನಿನ ಉಚಿತ ಹಂಚಿಕೆ ಮಾಡುತ್ತಿಲ್ಲ ಯಾಕೆ?

- Advertisement -
- Advertisement -

ಕೊರೊನಾ ಲಾಕ್ ಡೌನ್ 200ಕ್ಕೂ ಹೆಚ್ಚು ಬಡಜೀವಗಳನ್ನು ಬಲಿ ತೆಗೆದುಕೊಂಡಿದೆ. ಇವು ವರದಿಯಾಗಿರುವ ಪ್ರಕರಣಗಳು. ಮನೆಯ ಕದಗಳಷ್ಟೇ ಅಲ್ಲದೆ ಮನದ ಕದಗಳನ್ನೂ ಮುಚ್ಚಿಕೊಂಡಿರುವ ಭಾರತ ದೇಶದಲ್ಲಿ ಕಂಗೆಟ್ಟವರೆಡೆಗೆ ಕಣ್ಣುಮುಚ್ಚಿರುವವರೇ ಹೆಚ್ಚು. ಹೀಗಾಗಿ ಒಳನಾಡುಗಳಲ್ಲಿ, ದೂರದ ಸೀಮೆಗಳಲ್ಲಿ ವರದಿಯಾಗದಿರುವ ಪ್ರಕರಣಗಳ ಸಂಖ್ಯೆ ಕಡಿಮೆಯೇನೂ ಇರಲಿಕ್ಕಿಲ್ಲ. ದನಿ ಕಳೆದುಕೊಂಡ ಭಾರತವೊಂದಿದೆ. ಅದರ ಆಕ್ರಂದನ ಕೇಳುವವರಿಲ್ಲ. ಅಲ್ಲಿ ಹಿಂದು- ಮುಸ್ಲಿಂ ಕೋಮುವಾದಿ ಕೋನವಿದ್ದರೆ ಮಾತ್ರ ಮೀಡಿಯಾದ ಕಣ್ಣು ಕಿವಿಗಳು ಅರಳುತ್ತವೆ. ಯಾರೂ ಕೇಳದವರನ್ನು ಸರ್ಕಾರ ಯಾಕೆ ಕೇಳೀತು?

ಏಪ್ರಿಲ್ 11ರಂದು ಲಭ್ಯವಿದ್ದ ಅಂಕಿ ಅಂಶಗಳ ಪ್ರಕಾರ ಹಸಿವು, ದಣಿವು, ಪೊಲೀಸ್ ದೌರ್ಜನ್ಯ, ಹೆದ್ದಾರಿಗಳಲ್ಲಿ ಕಾಲುನಡಿಗೆಯಲ್ಲಿ ಊರು ಸೇರುವ ತವಕದಲ್ಲಿ ವೇಗದ ವಾಹನಗಳ ಚಕ್ರಗಳಿಗೆ ಸಿಕ್ಕವರು, ಮದ್ಯ ಸಿಗದೆ ಒದ್ದಾಡಿದವರು, ಸೋಂಕಿತರೆಂಬ ಸಂಶಯಕ್ಕೆ ಗುರಿಯಾಗಿ ಗುಂಪುಗಳಿಂದ ಜಜ್ಜಿಸಿಕೊಂಡವರು, ವರಮಾನವಿಲ್ಲದೆ ಆತ್ಮಹತ್ಯೆಯಂತಹ ಕಾರಣಗಳಿಂದಾಗಿ ಲಾಕ್ ಡೌನ್ ಅವಧಿಯಲ್ಲಿ ಸತ್ತವರ ಸಂಖ್ಯೆ 185. ತಮ್ಮದಲ್ಲದ ತಪ್ಪಿಗೆ ಬದುಕನ್ನು ಮುಗಿಸಿದ ಈ ಬಡಪಾಯಿಗಳಿಗಾಗಿ ದೀಪ ಮುಡಿಸಿದವರು, ಜಾಗಟೆ ಹೊಡೆದವರು ಯಾರೂ ಇಲ್ಲ. ಜನರನ್ನು ಉಳಿಸಲೆಂದು ಕೈಗೊಂಡ ಕ್ರಮಗಳೇ ಅವರಿಗೆ ಉರುಳಾಗಿವೆ. ಇದಕ್ಕಿಂತ ವ್ಯಂಗ್ಯ ಮತ್ತೊಂದು ಇದ್ದೀತೇ?

ದೇಶ ಅಳುವವರು ಹೆಚ್ಚು ವಿವೇಕಿಗಳೂ, ಬಡವರ ಬವಣೆಗಳ ಕುರಿತು ಹೆಚ್ಚು ಸಂವೇದನಾಶೀಲರೂ ಆಗಿದ್ದಲ್ಲಿ ಮಾನವೀಯವಾದ ಯೋಜಿತ ಮತ್ತು ಸುಸಜ್ಜಿತ ಲಾಕ್ ಡೌನ್ ಮಾಡುತ್ತಿದ್ದರು. ಆಗ ಸಾವುಗಳ ಸಂಖ್ಯೆಯೂ ತಗ್ಗುತ್ತಿತ್ತು.

ಅಂತಹ ಅಮೆರಿಕೆಯಲ್ಲೇ ಒಂದೂವರೆ ಕೋಟಿ ಮಂದಿ ಸರ್ಕಾರದ ಮುಂದೆ ನಿರುದ್ಯೋಗ ಪರಿಹಾರಗಳಿಗೆಂದು ಕೈ ಚಾಚಿ ನಿಂತಿದ್ದಾರೆ. ಇನ್ನು ಸಾಮಾಜಿಕ-ಆರ್ಥಿಕ ರಕ್ಷಣೆ ಇಲ್ಲದ ಜನಸಮುದಾಯಗಳ ಪಾಲಿಗೆ ಲಾಕ್ ಡೌನ್ ಎಂಬುದು ಹಸಿವು ಮತ್ತು ಮರಣದ ನಿಶ್ಚಿತ ದಾರಿ. ಬಡದೇಶಗಳ ಸುಮಾರು 200 ಕೋಟಿ ಮಂದಿಯ ಮುಂದೆ ನಿರುದ್ಯೋಗದ ಕತ್ತಲು ಕವಿದಿದೆ. ಸರ್ಕಾರಗಳು ಅವರ ನೆರವಿಗೆ ಧಾವಿಸುವ ಅವಕಾಶಗಳು ಕ್ಷೀಣ.

ದೇಶದಲ್ಲಿ ಅಸಂಘಟಿತ ಕಾರ್ಮಿಕ ವಲಯ ಮತ್ತು ವಲಸೆ ಕಾರ್ಮಿಕರ ಸಂಖ್ಯೆಯನ್ನು 39 ಕೋಟಿ ಎಂದು ಅಂದಾಜು ಮಾಡಲಾಗಿದೆ. ಸಾಮಾಜಿಕ-ಆರ್ಥಿಕ ಭದ್ರತೆಯ ನೆರಳಿನಿಂದ ವಂಚಿತರು ಇವರು. ತಮ್ಮ ಹಳ್ಳಿಗಳು ಊರುಗಳನ್ನು ಸೇರಿಕೊಂಡ ನಂತರವೂ ಹಸಿವು ಇವರನ್ನು ಕಾಡುವುದಿಲ್ಲ ಎಂಬ ಖಾತರಿ ಇಲ್ಲ. ಶ್ರಮದ ಮಾರುಕಟ್ಟೆಯಲ್ಲಿ ಇವರ ಬೆವರು ಈಗಾಗಲೆ ಬೆಲೆ ಕಳೆದುಕೊಳ್ಳತೊಡಗಿದೆ. ರೆಟ್ಟೆ ಮುರಿದರೂ ಹೊಟ್ಟೆ ತುಂಬುವ ಸೂಚನೆಗಳು ಕಾಣುತ್ತಿಲ್ಲ. ಬದುಕುಗಳು ಬಲು ದುರ್ಭರವಾಗಲಿವೆ. ಶಾಲೆಗೆ ಹೋಗುತ್ತಿರುವ ಇವರ ಮಕ್ಕಳು ಸಂಸಾರದ ನೊಗಕ್ಕೆ ಹೂಡುವ ಕರುಗಳಾಗಲಿದ್ದಾರೆ. ಈ ಜನವರ್ಗಗಳ ದೈಹಿಕ, ಮಾನಸಿಕ ಹಾಗೂ ಲೈಂಗಿಕ ಹಿಂಸೆ ಮೇರೆ ಮೀರಲಿದೆ.

ವರ್ಷಾಂತ್ಯದ ಹೊತ್ತಿಗೆ ಕರೋನಾ ವೈರಸ್ ಮಹಾಮಾರಿಯು ಮಹಾಕ್ಷಾಮವೊಂದಕ್ಕೆ ದಾರಿ ಮಾಡಲಿದೆ ಎಂದು ವಿಶ್ವ ಆಹಾರ ತಜ್ಞರು ಭವಿಷ್ಯ ನುಡಿದಿದ್ದಾರೆ. 2020ರ ಅಂತ್ಯದ ವೇಳೆಗೆ ಹಸಿವಿನ ಅಂಚಿಗೆ ತಲುಪಲಿರುವ ವಿಶ್ವದ ಜನಸಂಖ್ಯೆ ಮೂವತ್ತು ಕೋಟಿಯನ್ನು ಸಮೀಪಿಸಲಿದೆ ಎಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಹೇಳಿದೆ.

ತಿಂಗಳ ಹಿಂದೆ ಮಾರ್ಚ್ ಒಂದರ ಅಂಕಿ ಅಂಶದ ಪ್ರಕಾರ ದೇಶದ ಸರ್ಕಾರೀ ಗೋದಾಮುಗಳು 77 ದಶಲಕ್ಷ ಮೆಟ್ರಿಕ್ ಟನ್ ಗಳಷ್ಟು ಅಕ್ಕಿ ಮತ್ತು ಗೋಧಿಯ ಧಾರಾಳ ದಾಸ್ತಾನು ಹೊಂದಿದ್ದವು. ನಮಗೆ ಅಗತ್ಯವಿರುವ ಕಾಪು ದಾಸ್ತಾನಿನ ಪ್ರಮಾಣ 21.4 ದಶಲಕ್ಷ ಮೆಟ್ರಿಕ್ ಟನ್ನುಗಳು ಮಾತ್ರ. ಉಳಿದದ್ದೆಲ್ಲ ಹೆಚ್ಚುವರಿ. ಹಿಂಗಾರು ಇಳುವರಿಯ ಖರೀದಿ ಕಾರ್ಯಾಚರಣೆಗಳು ಹತ್ತಿರದಲ್ಲಿವೆ.

ಮನೆಯಲ್ಲಿನ ಆಹಾರ ಕಣಜ ಕಂಠಮಟ್ಟ ಭರ್ತಿ, ಕುಟುಂಬದ ದುರ್ಬಲರು ಹಸಿವಿನಿಂದ ಸತ್ತರೂ ಕಣಜದಿಂದ ಆಹಾರ ಧಾನ್ಯ ಹೊರತೆಗೆಯುವುದಿಲ್ಲ ಎಂಬ ಧೋರಣೆ ಭಾರತ ಸರ್ಕಾರದ್ದು. ಕರೋನಾ ಮಹಾಮಾರಿಯ ತಾಂಡವದಲ್ಲಿ ಕಾಡತೊಡಗಿರುವ ಹಸಿವನ್ನು ಸರ್ಕಾರದ ಗೋದಾಮುಗಳಲ್ಲಿನ ಆಹಾರಧಾನ್ಯ ಹೊರತೆಗೆದರೆ ಅಡಗಿಸಬಹುದು. ಎಲ್ಲರೂ ಬಲ್ಲ ಸತ್ಯವಿದು. ಆದರೆ ಯಾರೂ ತಲೆಕೆಡಿಸಿಕೊಳ್ಳುತ್ತಿಲ್ಲ. ಪರಿಸ್ಥಿತಿಯ ಘೋರ ಭೀಕರ ಸ್ವರೂಪ ಆಳುವವರಿಗೆ ಅರ್ಥವಾಗುತ್ತಿಲ್ಲ ಎನ್ನುತ್ತಾರೆ ಆರ್ಥಿಕ ತಜ್ಞ ಮತ್ತು ಸಮಾಜವಿಜ್ಞಾನಿ ಜೀನ್ ಡ್ರೆಜ್.

ದೇಶದ ಆಹಾರ ದಾಸ್ತಾನನ್ನು ಸಾಮಾಜಿಕ ಭದ್ರತಾ ಯೋಜನೆಗಳು ಮತ್ತು ಸಾರ್ವಜನಿಕ ಕಾಮಗಾರಿಗಳಿಗೆ ಬಳಸಿಕೊಳ್ಳುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಪೀಪಲ್ಸ್ ಯೂನಿಯನ್ ಅಫ್ ಸಿವಿಲ್ ಲಿಬರ್ಟೀಸ್ (ಪಿ.ಯು.ಸಿ.ಎಲ್) ಇಪ್ಪತ್ತು ವರ್ಷಗಳ ಹಿಂದೆ ಸುಪ್ರೀಮ್ ಕೋರ್ಟಿಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತು. ಪರಿಣಾಮವಾಗಿ ಮಧ್ಯಾಹ್ನದ ಬಿಸಿಯೂಟ, ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿನ ಸುಧಾರಣೆಗಳು, ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆ ಜಾರಿಗೆ ಬಂದವು. ಈ ಯೋಜನೆಗಳಿಗಾಗಿ ಪ್ರತಿ ವರ್ಷ 50-60 ದಶಲಕ್ಷ ಟನ್ನುಗಳಷ್ಟು ಅಕ್ಕಿ ಗೋಧಿ ಹಂಚಿಕೆಯಾಗುತ್ತಿದೆ. ಆಹಾರ ದಾಸ್ತಾನಿನ ಪ್ರಮಾಣ ಕೂಡ ವರ್ಷದಿಂದ ವರ್ಷಕ್ಕೆ ಜಿಗಿಯುತ್ತಲೇ ಬಂದಿದೆ. ಈ ವರ್ಷದ ದಾಸ್ತಾನು 77 ದಶಲಕ್ಷ ಟನ್ನುಗಳು. ಹಿಂಗಾರಿನ ಫಸಲು ಸದ್ಯದಲ್ಲೇ ಕೈ ಸೇರಿದರೆ ಈ ದಾಸ್ತಾನು 97 ದಶಲಕ್ಷ ಟನ್ನುಗಳಿಗೆ ಏರಲಿದೆ. ಮುಂದಿನ ಮೂರು ತಿಂಗಳ ಸಾರ್ವಜನಿಕ ವಿತರಣಾ ವ್ಯವಸ್ಥೆಯ ಪಡಿತರವನ್ನು ದುಪ್ಪಟ್ಟು ಮಾಡಿರುವುದಾಗಿ ಕೇಂದ್ರ ಹಣಕಾಸು ಮಂತ್ರಿ ಇತ್ತೀಚೆಗೆ ಘೋಷಿಸಿದರು. ಅದು ದೊಡ್ಡ ಉಪಕಾರವೇನೂ ಅಲ್ಲ. ಹಿಂಗಾರು ಹಂಗಾಮಿನ ಖರೀದಿ ಹೊಸ್ತಿಲಲ್ಲಿ ನಿಂತಿತ್ತು. ಗೋದಾಮುಗಳಲ್ಲಿ ಸ್ಥಳಾವಕಾಶ ಇರಲಿಲ್ಲ.

ಕರೋನಾ ಕಾಲದ ಹಸಿವು ಭಾರತ ದೇಶದ ದೀನರ ನಡುವೆ ಹೊಂಚು ಹಾಕಿದೆ. ಕೇಂದ್ರ ಸರ್ಕಾರ ತನ್ನ ಗೋದಾಮುಗಳನ್ನು ತನ್ನದೇ ಬಡಜನರಿಗಾಗಿ ತೆರೆಯಬೇಕಿದೆ. ಆಹಾರ ಧಾನ್ಯಗಳನ್ನು ಅರ್ಹರಿಗೆ ಉಚಿತವಾಗಿ ಹಂಚಬೇಕಿದೆ. ಜನಧನ ಯೋಜನೆಯಡಿ ಹೆಣ್ಣುಮಕ್ಕಳ ಖಾತೆಗಳಿಗೆ ತಿಂಗಳಿಗೆ 500 ರುಪಾಯಿ ಹಾಕುವ ಕ್ರಮ ಯಾತಕ್ಕೂ ಸಾಲದು. ಬಡವರ ಪಾಲಿನ ಬ್ಯಾಂಕಿಂಗ್ ವ್ಯವಸ್ಥೆ ಈಗಲೂ ಅಸಮರ್ಪಕ.

ತಮ್ಮನ್ನು ಬಡವರ ಬಂಧು ಎಂದೇ ಘೋಷಿಸಿಕೊಂಡು ಅವರ ಮತಗಳನ್ನು ಕೊಳ್ಳೆ ಹೊಡೆದಿರುವ ಪ್ರಧಾನಮಂತ್ರಿ ನರೇಂದ್ರ ದಾಮೋದರದಾಸ ಮೋದಿಯವರು ದೊಡ್ಡ ಮನಸ್ಸು ಮಾಡಬೇಕು.


ಇದನ್ನೂ ಓದಿ: ಲಾಕ್‍ಡೌನ್ – ಮನೆಯಿಂದಲೇ ಕೆಲಸ, ಮನೆಕೆಲಸ ಮತ್ತು ಮಹಿಳೆ! – ಮಲ್ಲಿಗೆ ಸಿರಿಮನೆ 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....