ಕ್ರಿಸ್ಮಸ್ ಆಚರಣೆಗೆ ತಡೆಯೊಡ್ಡಿದ ಬಜರಂಗದಳ ಸದಸ್ಯರನ್ನು ಕೆಲ ಮಹಿಳೆಯರು ತರಾಟೆಗೆ ತೆಗೆದುಕೊಂಡಿರುವ ಘಟನೆ ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ಬಿಳಿದೇವಾಲಯ ಗ್ರಾಮದಲ್ಲಿ ಡಿಸೆಂಬರ್ 28ರ ಮಂಗಳವಾರ ಸಂಜೆ ಜರುಗಿದೆ. ಈ ಕುರಿತ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮತಾಂತರ ಮಾಡುತ್ತಿದ್ದಾರೆ ಎಂದು ಆರೋಪಿಸಿ ಬಜರಂಗದಳ ಕಾರ್ಯಕರ್ತರು ನಂದಿನಿ ಎಂಬುವವರ ಮನೆಗೆ ನುಗ್ಗಿ ಕ್ರಿಸ್ಮಸ್ ಪ್ರಾರ್ಥನೆಗೆ ಅಡ್ಡಿಪಡಿಸಿದ್ದಾರೆ. ಅಲ್ಲಿದ್ದ ಮಹಿಳೆಯರು ನಾವು ಮತಾಂತರ ಮಾಡುತ್ತಿಲ್ಲ ಎಂದು ಸಮರ್ಥನೆ ನೀಡಿದ್ದಾರೆ. ಈ ವೇಳೆ ವ್ಯಕ್ತಿಯೊಬ್ಬ ಹಿಂದೂ ಧರ್ಮದಂತೆ ನಿಮ್ಮ ಹಣೆಯಲ್ಲಿ ಸಿಂಧೂರ ಏಕಿಲ್ಲ ಎಂದು ಪ್ರಶ್ನಿಸಿದಾಗ ನಾವು ತಾಳಿ, ಕಾಲುಂಗುರ ಸಹ ಹಾಕುವುದಿಲ್ಲ, ಅದನ್ನು ಕೇಳಲು ಅಧಿಕಾರ ನಿಮಗೆ ಕೊಟ್ಟವರ್ಯಾರು ಎಂದು ನಂದಿನಿಯವರು ತರಾಟೆಗೆ ತೆಗೆದುಕೊಂಡಿರುವುದು ವೈರಲ್ ವಿಡಿಯೋದಲ್ಲಿ ದಾಖಲಾಗಿದೆ.
ನೀವು ಹೊರಗಡೆ ಹೋದಾಗ ವಾರಗಟ್ಟಲೆ ಮುಖ ತೊಳೆಯುವುದಿಲ್ಲ, ನಾಮ ಇಕ್ಕಿಕೊಳ್ಳುವುದಿಲ್ಲ. ಅದನ್ನು ಯಾರಾದರೂ ಪ್ರಶ್ನಿಸಿದ್ದಾರ? ಇಲ್ಲವಾದರೆ ನಮ್ಮನ್ನು ಏಕೆ ಪ್ರಶ್ನಿಸುತ್ತೀರಿ? ಎಂದು ನಂದಿನಿಯವರು ಮರು ಪ್ರಶ್ನಿಸಿದ್ದಾರೆ. ನಾವು ನಮ್ಮ ಮನಶಾಂತಿಗಾಗಿ ಪ್ರಾರ್ಥನೆ ಮಾಡುತ್ತೇವೆ ಎಂದು ಮತ್ತೊಬ್ಬ ಮಹಿಳೆ ಇದೇ ಸಮಯದಲ್ಲಿ ತಿಳಿಸಿದ್ದಾರೆ.
ನಾವು ಯಾವುದೇ ಮತಾಂತರ ಮಾಡುತ್ತಿಲ್ಲ. ಮತಾಂತರ ಮಾಡಿದ್ದಕ್ಕೆ ಯಾವುದಾದರೂ ಸಾಕ್ಷಿಯಿದ್ದರೆ ತೋರಿಸಿ, ಮತಾಂತರ ಎಂದರೆ ಏನು ಎಂದು ನಮಗೆ ತಿಳಿಸಿ ಎಂದು ಮಹಿಳೆಯರು ತರಾಟೆಗೆ ತೆಗೆದುಕೊಂಡಿದ್ದಾರೆ.
ಪ್ರಾರ್ಥನೆಯನ್ನು ಚರ್ಚ್ಗಳಲ್ಲಿ ಮಾತ್ರ ಮಾಡಬೇಕು ಎಂಬು ಬಜರಂಗದಳದ ಸದಸ್ಯರ ಪ್ರಶ್ನೆಗೆ ನಾವು ಹಿಂದೂಗಳ ಹಬ್ಬದಲ್ಲಿ ಮನೆ ಮುಂದೆಯೇ ಬಲಿ ಕೊಡುತ್ತೇವೆ, ಒಂದೊಂದು ದೇವರಿಗೂ ಒಂದೊಂದು ಆಚರಣೆ ಇದೆ ಇದೆ. ಅದೇ ರೀತಿ ಪ್ರಾರ್ಥನೆ ಮಾಡುತ್ತಿದ್ದೇವೆ. ಮರಿ ಕಡಿದು ಹಬ್ಬ ಮಾಡುತ್ತೇವೆ, ಬಂದು ನೀವು ಊಟ ಮಾಡಿಕೊಂಡು ಹೋಗಿ ಎಂದು ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮನೆಯಲ್ಲಿ ಹಿಂದೂ ದೇವರ ಫೋಟೊಗಳಿಲ್ಲ ಎಂಬ ಪ್ರಶ್ನೆಗೆ ನಮ್ಮ ಮನೆಯಲ್ಲಿ ಹಿಂದೂ ದೇವರ ಫೋಟೊಗಳು, ದೇವರ ಮನೆ ಎಲ್ಲಾ ಇದೆ ಎಂದು ಮಹಿಳೆಯರು ಪ್ರತಿ ಉತ್ತರ ನೀಡಿದ್ದಾರೆ. ಅದೇ ಸಮಯದಲ್ಲಿ ವ್ಯಕ್ತಿಯೊಬ್ಬರು ಪೊಲೀಸರಿಗೆ ಕರೆ ಮಾಡಿ ಆರ್ಎಸ್ಎಸ್ ಕಾರ್ಯಕರ್ತರು ಮನೆಗೆ ದಾಳಿ ಮಾಡಿ ಪ್ರಾರ್ಥನೆಗೆ ಅಡ್ಡಿಪಡಿಸುತ್ತಿದ್ದಾರೆ ಎಂದು ದೂರುವುದನ್ನು ಕಾಣಬಹುದಾಗಿದೆ.
ಬಿಳಿದೇವಾಲಯ ಗ್ರಾಮದ ಗ್ರಾಮ ಪಂಚಾಯತ್ ಸದಸ್ಯರೊಬ್ಬರ ದೂರಿನ ಮೇಲೆ ಬಜರಂಗದಳ ಸದಸ್ಯರು ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ದೂರು-ಪ್ರತಿದೂರು ದಾಖಲಾಗಿದೆ, ಆದರೆ ಯಾವುದೇ ಪ್ರಕರಣ ದಾಖಲಿಸಿಲ್ಲ ಎಂದು ಪೊಲೀಸರು ತಿಳಿಸಿರುವುದಾಗಿ ದಿ ನ್ಯೂಸ್ ಮಿನಿಟ್ ವರದಿ ಮಾಡಿದೆ.
ಕರ್ನಾಟಕದಲ್ಲಿ ಮತಾಂತರ ನಿಷೇಧ ಕಾಯ್ದೆ ತರುವ ಪ್ರಯತ್ನದ ಬೆನ್ನಲ್ಲೆ ಕ್ರಿಶ್ಚಿಯನ್ನರ ಮೇಲಿನ ದಾಳಿಗಳು ಹೆಚ್ಚಾಗಿವೆ. ನಿನ್ನೆ ಮತಾಂತರ ಮಾಡಲಾಗುತ್ತಿದೆ ಎಂಬ ಆರೋಪದ ಮೇಲೆ ಬಾಗಲಕೋಟೆ ಜಿಲ್ಲೆಯ ಹುನಗುಂದ ಸಮೀಪದ ಇಳಕಲ್ನಲ್ಲಿರುವ ಸೇಂಟ್ ಪೌಲ್ಸ್ ಹೈಯರ್ ಪ್ರೈಮರಿ ಶಾಲೆಯನ್ನು ಶಿಕ್ಷಣ ಇಲಾಖೆ ಅಧಿಕಾರಿಗಳು ಶಾಲೆಯನ್ನು ಮುಚ್ಚಿದ್ದಾರೆ.
ಇದನ್ನೂ ಓದಿ: ಬಾಗಲಕೋಟೆ: ಮತಾಂತರ ಆರೋಪದ ಮೇಲೆ ಶಾಲೆ ಮುಚ್ಚಿದ ಶಿಕ್ಷಣ ಇಲಾಖೆ
ತಾಳಿ,ಕಾಲುಂಗರ ಹಾಕಬೇಡಿ ,ಹಾಕು ಅಂತ ಯಾರು ಹೇಳ್ತಾರೆ ಇವರಿಗೆ .ಮತಾಂತರ ಆಗಿರೋರು ಕ್ರಿಶ್ಚಿಯನ್ ಸಮುದಾಯದಲ್ಲಿ ಅಧಿಕೃತವಾಗಿ ಸೇರಲಿ ,ಹಿಂದೂ ಸಮುದಾಯದ SC,ST ,OBC ಮೀಸಲಾತಿ ಏನಕ್ಕೆ ಇವರಿಗೆ .
ದಾರ್ಮಿಕ ಸ್ವಾತಂತ್ರ್ಯ ಈ ದೇಶದ ಜನರ ಸಂವಿಧಾನಿಕ ಹಕ್ಕು ಅದನ್ನ ಪ್ರಶ್ನಿಸೋಕೆ ಬಜರಂಗದಳ ಅಲ್ಲ ಸುಪ್ರಿಂಕೋರ್ಟ್ಗೂ ಹಕ್ಕಿಲ್ಲ..