ರಾಜ್ಯ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ಶಿರಸಿಯ ಅನಂತ ಹೆಗಡೆ ಆಶೀಸರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಡಿಸೆಂಬರ್ 2021ರ ಅಂತ್ಯಕ್ಕೆ ಅಧಿಕಾರ ಅವಧಿಯ ಎರಡು ವರ್ಷ ಮುಕ್ತಾಯ ಆಗುತ್ತಿರುವುದರಿಂದ ಪದತ್ಯಾಗ ಮಾಡುತ್ತಿರವುದಾಗಿ ಡಿ.28ರಂದು ಸಲ್ಲಿಸಿರುವ ರಾಜಿನಾಮೆ ಪತ್ರದಲ್ಲಿ ಹೇಳಿದ್ದಾರೆ.
ಅನಂತ ಹೆಗಡೆ ಆಶೀಸರ ಮಂಡಳಿಯ ಅಧ್ಯಕ್ಷರಾದಾಗಿನಿಂದ ಉತ್ತರ ಕನ್ನಡ ಜಿಲ್ಲಾ ಬಿಜೆಪಿಯಲ್ಲಿ ಅಸಮಾಧಾನ ಹೊಗೆಯಾಡುತ್ತಲೆ ಇತ್ತು. ಬಿಜೆಪಿಯ ಸಕ್ರಿಯ ಕಾರ್ಯಕರ್ತನಲ್ಲದ ಆಶೀಸರ ಆರ್ಎಸ್ಎಸ್ ಶಿಫಾರಸಿನಿಂದ ಬಿಜೆಪಿ ಅಧಿಕಾರಕ್ಕೆ ಬಂದಾಗೆಲ್ಲ ಒಂದಲ್ಲ ಒಂದು ನಿಗಮ-ಮಂಡಳಿ ಅಧಿಕಾರ ಪಡೆಯುತ್ತಾರೆಂದು ಬಿಜೆಪಿಯ ನಿಷ್ಟಾವಂತ ಕಾರ್ಯಕರ್ತರ ಆಕ್ರೋಶವಾಗಿತ್ತು. ಅದರಲ್ಲೂ ಜಿಲ್ಲೆಯ ಘಟ್ಟದ ಮೇಲಿನ ಹವ್ಯಕ ಬ್ರಾಹ್ಮಣ ಸಮುದಾಯದವರೆ ಹೆಚ್ಚು ಅಧಿಕಾರ ಸ್ಥಾನ-ಮಾನ ಅನುಭವಿಸುತ್ತಿದ್ದಾರೆಂಬ ಭಾವನೆ ಹಿಂದುಳಿದವರಲ್ಲಿತ್ತು.
ಕಳೆದ ವಿಧಾನ ಪರಿಷತ್ ಚುನಾವಣೆ ಹೊತ್ತಲ್ಲಿ ಈ ಬೇಸರ ಭುಗಿಲೆದ್ದಿತ್ತು. ಬಂಡಾಯ ಅಭ್ಯರ್ಥಿಗಳಾಗಿ ಕಣಕ್ಕಿಳಿಯಲು 2-3 ಹಳೆಯ ಕಾರ್ಯಕರ್ತರು ಸಿದ್ದವಾಗಿದ್ದರು. ಆಗ ಅವರಲ್ಲಿ ಕೆಲವರಿಗೆ ನಿಗಮ-ಮಂಡಳಿ ಅಧ್ಯಕ್ಷತೆ ಕೊಡುವ ಭರವಸೆ ಕೊಟ್ಟು ಸಮಾಧಾನ ಮಾಡಲಾಗಿತ್ತೆನ್ನಲಾಗಿದೆ. ಆಗಲೆ ಆಶೀಸರ ರಾಜಿನಾಮೆ ಪಡೆಯಲು ಬಿಜೆಪಿ ಹೈಕಮಾಂಡ್ ನಿರ್ಧರಿಸಿರುವ ಸುದ್ದಿ ಹಬ್ಬಿತ್ತು.
ಆಶೀಸರ ರಾಜಿನಾಮೆ ಘೋಷಿಸುತ್ತಿದ್ದಂತೆಯೆ ಜಿಲ್ಲಾ ಬಿಜೆಪಿಯಲ್ಲಿ ನಿಗಮ-ಮಂಡಳಿ ಸ್ಥಾನಕ್ಕಾಗಿ ತುರುಸಿನ ಪೈಪೋಟಿ ಶುರುವಾಗಿದ್ದು, ಘಟ್ಟದ ಮೇಲಿನ-ಘಟ್ಟದ ಕೆಳಗಿನ [ಕರಾವಳಿ], ಬ್ರಾಹ್ಮಣ-ಶೂದ್ರ ಲೆಕ್ಕಾಚಾರ ನಡೆಯಲಾರಂಭಿಸಿದೆ. ಸಂಸದ ಅನಂತಕುಮಾರ್ ಹೆಗಡೆ, ಸ್ಪೀಕರ್ ಕಾಗೇರಿ, ಜಿಲ್ಲಾ ಉಸ್ತುವಾರಿ ಮಂತ್ರಿ ಶಿವರಾಮ ಹೆಬ್ಬಾರ್ ಘಟ್ಟದ ಮೇಲಿನ ಹವ್ಯಕ ಬ್ರಾಹ್ಮಣರು. ಲಿಂಗಾಯತ ಸಮುದಾಯದ ವಿ.ಎಸ್.ಪಾಟೀಲ್ ವಾಯವ್ಯ ಕರ್ನಾಟಕ ಸಾರಿಗೆ ನಿಗಮದ ಅಧ್ಯಕ್ಷರಾಗಿದ್ದಾರೆ. ಕೆಲ ತಿಂಗಳ ಹಿಂದೆ ನಿಧನರಾದ ಶಿರಸಿಯ ಎಂ.ಎ.ಹೆಗಡೆ ಯಕ್ಷಗಾನ ಮಂಡಳಿ ಅಧ್ಯಕ್ಷರಾಗಿದ್ದರು.
ಬಿಜೆಪಿಯನ್ನು ನಿರಂತರವಾಗಿ ಬೆಂಬಲಿಸುತ್ತ ಬಂದಿರುವ ಜಿಲ್ಲೆಯ ದೊಡ್ಡ ಸಮುದಾಯವಾದ ದೀವರು [ಈಡಿಗರು] ಕಾರ್ಯಕರ್ತರಲ್ಲಿ ತಮ್ಮನ್ನು ಬರಿ ಚುನಾವಣೆಯಲ್ಲಿ ಪೋಸ್ಟರ್ ಅಂಟಿಸುವ ಚಾಕರಿಗಷ್ಟೆ ಬಳಸಲಾಗುತ್ತಿದೆಯೆಂಬ ಬೇರಸ ಮೂಡಿದೆ. ಈ ಜಾತಿಗೆ ಸೇರಿದ ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಕೆ.ಜಿ.ನಾಯ್ಕ್, ಭಟ್ಕಳದ ಗೋವಿಂದ ನಾಯ್ಕ್, ನಾಡವ ಸಮುದಾಯದ ನಾಗರಾಜ್ ನಾಯಕ ತೊರ್ಕೆ, ಅಂಕೋಲಾದ ವಕೀಲ ನಾಗರಾಜ್ ನಾಯಕ್, ಭಾಸ್ಕರ್ ನಾರ್ವೇಕರ್ ಎಮ್ಮೆಲ್ಸಿ ಟಿಕೆಟ್ಗೆ ಹಠ ಹಿಡಿದಿದ್ದರು. ಅವರೆಲ್ಲರನ್ನು ಸಮಾಧಾನ ಪಡಿಸಿ ಗಣಪತಿ ಉಳ್ವೇಕರ್ ಅವರನ್ನು ಕಣಕ್ಕಿಳಿಸಲಾಗಿತ್ತು.
ಆಗ ಸಂಧಾನಕಾರರ ಮಾತು ನಂಬಿ ಹಿಂದೆ ಸರಿದವರೆಲ್ಲ ಈಗ ನಿಗಮ-ಮಂಡಳಿ ಆವಕಾಶ ಬೇಡುತ್ತಿದ್ದಾರೆ. ಘಟ್ಟದ ಮೇಲಿನ ಹಲವರಿಗೆ, ಅದರಲ್ಲೂ ಹವ್ಯಕ ಬ್ರಾಹ್ಮಣ ಜನಾಂಗಕ್ಕೆ ಹೆಚ್ಚಿನ ಪ್ರಾತಿನಿಧ್ಯ ಸಿಕ್ಕಿರುವುದರಿಂದ ಈ ಬಾರಿ ಘಟ್ಟದ ಕೆಳಗಿನ ದೀವರಿಗೆ ಅವಕಾಶ ಸಿಗಲಿದೆಯೆಂಬ ಮಾತು ಬಿಜೆಪಿ ವಲಯದಲ್ಲಿ ಕೇಳಿಬರುತ್ತಿದೆ. ಸಿದ್ದಾಪುರದ ಕೆ.ಜಿ.ನಾಯ್ಕ್ ಹೆಸರು ಮುಂಚೂಣಿಯಲ್ಲಿದೆ ಎಂದು ಬಿಜೆಪಿ ಕಾರ್ಯಕರ್ತರು ಹೇಳುತ್ತಾರೆ.
ಇದನ್ನೂ ಓದಿ: ಕೃಷಿಕಥನ 03: ರೈತರದು ಆತ್ಮಹತ್ಯೆಯಲ್ಲ, ಹತ್ಯೆ