ಕರ್ನಾಟಕದ ಡೈರಿ ಮಾರುಕಟ್ಟೆಗೆ ಅಮುಲ್ ಹಾಲು, ಮೊಸರು ಕಾಲಿಡುತ್ತಿರುವ ಸಂದರ್ಭದಲ್ಲಿ ಬೆಂಗಳೂರಿನ ಹೋಟೆಲ್ಗಳು ಸ್ಥಳೀಯ ನಂದಿನಿ ಬ್ರಾಂಡ್ನ ಹಾಲು ಮತ್ತು ಮೊಸರನ್ನು ಮಾತ್ರ ಬಳಸಬೇಕೆಂದು ಬೃಹತ್ ಬೆಂಗಳೂರು ಹೋಟೆಲ್ ಅಸೋಸಿಯೇಷನ್ ಒತ್ತಾಯಿಸಿದೆ.
ಅಮುಲ್ ಉತ್ಪನ್ನಗಳ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸುವಂತೆ ನಗರದ ಹೋಟೆಲ್ಗಳಿಗೆ ಕರೆ ನೀಡಿರುವ ಅಸೋಸಿಯೇಷನ್ ಕೆಎಂಎಫ್ನ ನಂದಿನಿ ಹಾಲು ಮತ್ತು ಉತ್ಪನ್ನಗಳನ್ನು ಬಳಸುವ ಮೂಲಕ ಕರ್ನಾಟಕದ ಹೈನುಗಾರರಿಗೆ ಬೆಂಬಲ ನೀಡುವಂತೆ ಸಂಘದ ಅಧ್ಯಕ್ಷ ಪಿ.ಸಿ.ರಾವ್ ಅವರು ಎಲ್ಲಾ ಹೋಟೆಲ್ ಮಾಲೀಕರಿಗೆ ಸೂಚಿಸಿದ್ದಾರೆ.
ಮೈಸೂರಿನಲ್ಲಿ ಪ್ರತಿಭಟನೆಗೆ ಕರೆ
ಕನ್ನಡದ ನೆಲದಲ್ಲಿ ಕನ್ನಡತನವನ್ನೇ ಹೊಸಕುವ ಪ್ರಕ್ರಿಯೆಗಳು ನಡೆಯುತ್ತಲೇ ಇವೆ. ಇದರ ಮುಂದುವರೆದ ಭಾಗವೆಂಬಂತೆ ಕನ್ನಡಿಗರ ಹೆಮ್ಮೆಯ ನಂದಿನಿಯನ್ನು ಮುಗಿಸಿ, ಗುಜರಾತಿನ ವಸಾಹತನ್ನಾಗಿ ಮಾಡುವ ಷಡ್ಯಂತ್ರ ಆರಂಭಗೊಂಡಿದೆ. ಹಾಗಾಗಿ ನಂದಿನಿ ಉಳಿಸಲು ಮೈಸೂರಿನಲ್ಲಿ ಸೋಮವಾರ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ನಂದಿನಿ ಉಳಿಸಿ ಹೋರಾಟದ ಮೊದಲ ಹಂತವಾಗಿ ದಿನಾಂಕ 10 ರ ಸೋಮವಾರ ಬೆಳಿಗ್ಗೆ 10.30 ಗಂಟೆಗೆ ಮೈಸೂರು ನಗರದ ವಿವಿ ಪುರಂನ ಲಾಯಲ್ ವರ್ಲ್ಡ್ ಬದಿಯಲ್ಲಿರುವ ಅಮುಲ್ ಮಳಿಗೆಯ ಮುಂದೆ ಸಮಾನ ಮನಸ್ಕ ಕನ್ನಡಿಗರು ಸಾಂಕೇತಿಕ ಪ್ರತಿಭಟನೆ ನಡೆಸಲಿದ್ದಾರೆ ಎಂದು ಪತ್ರಕರ್ತರಾದ ಟಿ.ಗುರುರಾಜ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ದೇಶ-ವಿದೇಶದಲ್ಲೂ ನಂದಿನಿ ಹಾಲು ಲಭ್ಯ, ಬೆಂಗಳೂರಿನಲ್ಲಿ ಮಾತ್ರ ಲಭ್ಯವಿಲ್ಲ!: ಇದು ಕೃತಕ ಅಭಾವದ ಸೃಷ್ಟಿನಾ?