Homeಮುಖಪುಟನಿಮ್ಮಿಂದಾಗಿ ನಾನು ನೇಣು ಹಾಕಿಕೊಳ್ಬೇಕಾ? ಸುವರ್ಣ ಟಿ.ವಿ. ವಿರುದ್ಧ ನಟಿ ಸಂಜನಾ ಕಿಡಿ

ನಿಮ್ಮಿಂದಾಗಿ ನಾನು ನೇಣು ಹಾಕಿಕೊಳ್ಬೇಕಾ? ಸುವರ್ಣ ಟಿ.ವಿ. ವಿರುದ್ಧ ನಟಿ ಸಂಜನಾ ಕಿಡಿ

ಸಂಜನಾ ಅವರು ಸುಮಾರು 9 ನಿಮಿಷಗಳ ಕಾಲ ಸುವರ್ಣ ನ್ಯೂಸ್‌ ಚಾನೆಲ್‌ನ ಮಹಿಳಾ ಸಿಬ್ಬಂದಿಯೊಬ್ಬರೊಂದಿಗೆ ಬೇಸರದಿಂದ ಮಾತನಾಡಿರುವ ಆಡಿಯೊ ಲಭ್ಯವಾಗಿದೆ.

- Advertisement -
- Advertisement -

“ನಿಮ್ಮ ಹೆಸರು ಬರೆದಿಟ್ಟು ನೇಣು ಹಾಕಿಕೊಂಡು ಸಾಯ್ಬೇಕಾ? ಹೇಳಿ, ಸತ್ತು ಹೋಗ್ಬಿಡ್ತೀನಿ. ಯಾಕೆ ನನ್ನ ಹಿಂದೆ ಹೀಗೆ ಬಿದ್ದಿದ್ದೀರಾ, ಹೇಳಿ” – ಹೀಗೆ ಬಹಳ ಬೇಸರದಿಂದ ಬಹುಭಾಷಾ ನಟಿ, ಸಂಜನಾ ಗಲ್ರಾನಿಯವರು ಸುವರ್ಣ ನ್ಯೂಸ್‌ ಚಾನೆಲ್‌ ಸಿಬ್ಬಂದಿಯೊಬ್ಬರ ಜೊತೆ ಮಾತನಾಡಿದ್ದಾರೆ.

ಸಂಜನಾ ಅವರು ಗರ್ಭಿಣಿಯವಾಗಿರುವ ಸುದ್ದಿಯೊಂದಿಗೆ ಆಧಾರ ರಹಿತ ಸಾಲುಗಳನ್ನೂ ವರದಿಯಲ್ಲಿ ಸೇರಿಸಿರುವುದಕ್ಕೆ ಸಂಜನಾ ನೋವು ತೋಡಿಕೊಂಡಿದ್ದಾರೆ. “ಪದೇ ಪದೇ ಸುವರ್ಣ ನ್ಯೂಸ್‌ ಚಾನೆಲ್‌ನವರು ಮಾನನಷ್ಟ ಮಾಡುತ್ತಿದ್ದಾರೆ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

ಸುವರ್ಣ ನ್ಯೂಸ್‌ ಜೊತೆ ಅವರು ಮಾತನಾಡಿರುವ ಆಡಿಯೊ ನಾನುಗೌರಿ.ಕಾಂಗೆ ಲಭ್ಯವಾಗಿದ್ದು, ವರದಿಯಲ್ಲಿ ಉಲ್ಲೇಖಿಸಲಾಗಿರುವ ಆಧಾರ ರಹಿತವಾದ ಸಾಲುಗಳಿಗೆ ಸಂಜನಾ ಆಕ್ಷೇಪ ವ್ಯಕ್ತಪಡಿಸಿರುವುದನ್ನು ಆಡಿಯೊದಲ್ಲಿ ಕೇಳಬಹುದು.

ಸುವರ್ಣ ವಾಹಿನಿಯ ಮಹಿಳಾ ಸಿಬ್ಬಂದಿಯೊಬ್ಬರ ಜೊತೆ ಸಂಜನಾ ಮಾತನಾಡಿದಾಗ, ಆ ಸಿಬ್ಬಂದಿ, “ನಿಮಗೆ ಕನ್ನಡ ಬರುತ್ತದೆಯೇ” ಎಂದು ಕೇಳುತ್ತಾರೆ. ಸಂಜನಾ ಅವರು ಕನ್ನಡವನ್ನು ಓದಿಯೇ ಅಲ್ಲಿನ ವಿವರಗಳನ್ನು ಪ್ರಸ್ತಾಪಿಸುತ್ತಾರೆ.

“ಸಂಜನಾ ವಿಚ್ಛೇದನಾ ಪಡೆಯಲಿದ್ದಾರೆ ಎಂದು ಸುದ್ದಿಯೂ ಹರಿದಾಡಿತ್ತು” ಎಂದು ಉಲ್ಲೇಖಿಸಿರುವುದನ್ನು ಸಂಜನಾ ಪ್ರಶ್ನಿಸುವುದನ್ನು ಆಡಿಯೊದಲ್ಲಿ ಕೇಳಬಹುದು.

“ನಾವು ಹಾಗೆ ಬರೆದಿಲ್ಲ. ಯಾರೋ ಮಿಸ್‌ ಲೀಡ್ ಮಾಡಿದ್ದಾರೆ. ನಿಮಗೆ ಕನ್ನಡ ಓದಲಿಕ್ಕೆ ಬರುತ್ತಾ” ಎಂದು ಸುವರ್ಣ ವಾಹಿನಿಯ ಮಹಿಳಾ ಪ್ರತಿನಿಧಿಯೊಬ್ಬರು ಪ್ರತಿಕ್ರಿಯೆ ನೀಡುತ್ತಾರೆ.

“ನನಗೆ ಸ್ಪಷ್ಟವಾಗಿ ಕನ್ನಡ ಬರುತ್ತೆ ಮೇಡಂ. ಕನ್ನಡ ಕಲಿಸುವಷ್ಟು ಸ್ಪಷ್ಟವಾಗಿ ನನಗೆ ಕನ್ನಡ ಬರುತ್ತದೆ” ಎಂದು ಸಂಜನಾ ಹೇಳುತ್ತಾರೆ.

“ನೀವು ಕೊರೊನಾ ಟೈಮ್‌ನಲ್ಲಿ ಮಾಡಿದ್ದರ ಬಗ್ಗೆ ಬರೆದಿದ್ದೇವೆ…” ಎನ್ನುತ್ತಾರೆ ಸುವರ್ಣ ಸಿಬ್ಬಂದಿ.

“ಇಲ್ಲ ಮೇಡಂ, ತಾಯಿ ಆಗುತ್ತಿರುವ ವಿಚಾರ ರಿವೀಲ್‌ ಮಾಡಿದ ನಟಿ, ಹೊಸ ವರ್ಷಕ್ಕೆ ಸಿಹಿ ಸುದ್ದಿ…. ಒಂದು ನಿಮಿಷ ಮೇಡಂ… ಡಿವೋರ್ಸ್ ಎಂಬ ಪದ ಬರೆದಿದ್ದಾರೆ… ಹೇಳುತ್ತೇನೆ” ಎಂದು ಸಂಜನಾ ಮಾತು ಮಂದುವರಿಸುತ್ತಾರೆ.

ಸುವರ್ಣ ಸಿಬ್ಬಂದಿ: ಆ ವಾಕ್ಯ ಮೊದಲು ಇತ್ತು ಅನಿಸುತ್ತೆ. ಈಗ ಇಲ್ಲ. ನಾನು ಓಪನ್ ಮಾಡಿ ಇಟ್ಟುಕೊಂಡಿದ್ದೇನೆ.

ಸುವರ್ಣ ಸಿಬ್ಬಂದಿ ಪರಿಷ್ಕೃತ ವರದಿಯನ್ನು ಪೂರ್ಣವಾಗಿ ಓದುತ್ತಾರೆ. (ಆಡಿಯೊ ಕೇಳಿದ ಬಳಿಕ ಸುವರ್ಣ ಚಾನೆಲ್‌ ವರದಿಯನ್ನು ಪರಿಷ್ಕರಿಸಿರುವುದು ಸ್ಪಷ್ಟವಾಯಿತು. ಸುವರ್ಣ ವರದಿಯ ಆರ್ಕೈವ್‌ ಲಿಂಕ್‌ ಇಲ್ಲಿದೆ)

ಸುದ್ದಿಯನ್ನು ಬದಲಾಯಿಸಿರುವುದನ್ನು ಗಮನಿಸಿ ಮಾತು ಮುಂದುವರಿಸುವ ಸಂಜನಾ, “ಮೇಡಂ ನಿಮ್ಮ ವಾಟ್ಸ್‌ಆಪ್‌ ಓಪನ್‌ ಮಾಡಿ. ಸುವರ್ಣ ನ್ಯೂಸ್‌ ಡಾಟ್‌ಕಾಮ್‌ ನಿಮ್ಮದೇ ಅಲ್ಲವಾ? ನಿಮ್ಮ ವಾಟ್ಸ್‌ಆಪ್‌ಗೆ ಸ್ಕ್ರೀನ್‌ಶಾಟ್‌ ಕಳಿಸಿದ್ದೇನೆ ನೋಡಿ” ಎನ್ನುತ್ತಾರೆ.

ಮುಂದಿನ ಮಾತುಕತೆ ಹೀಗೆ ನಡೆಯುತ್ತದೆ:

ಸುವರ್ಣ ಸಿಬ್ಬಂದಿ: “ಓಕೆ ಅದು ಸುವರ್ಣ ನ್ಯೂಸ್‌ನಲ್ಲಿ ಬಂದಿರಲಿಲ್ಲ ಅನಿಸುತ್ತೆ”

ಸಂಜನಾ: “ಯಾಕ್‌ ಮೇಡಂ. ಡಿವೋರ್ಸ್‌ ಅನ್ನೋ ವಿಷಯವನ್ನು ಹಬ್ಬಿಸಿದ್ದೇ ಸುವರ್ಣ”

ಸಿಬ್ಬಂದಿ: ಸುವರ್ಣ ನ್ಯೂಸ್‌ ಅಲ್ಲ ಅನಿಸುತ್ತೆ.

ಸಂಜನಾ: ಹಿಂದೆ ಮಾಡಿದ ವರದಿಯೂ ನನ್ನ ಬಳಿ ಇದೆ. ಅದು ಸುವರ್ಣ ನ್ಯೂಸ್. ಇದು ಕೂಡ ಸುವರ್ಣ ನ್ಯೂಸ್‌. ನಾನು ಸ್ನ್ಯಾಪ್‌‌ಶಾಟ್ ತೆಗೆದು ಇಟ್ಟಿದ್ದೇನೆ. ನೀವು ಹಬ್ಬಿಸೋದು ಹಬ್ಬಿಸಿ, ಆಮೇಲೆ ನೀವು ಲಿಂಕ್ ಡಿಲೀಟ್ ಮಾಡಿ, ಪ್ರೇಕ್ಷಕರನ್ನು ಮಿಸ್‌ ಲೀಡ್ ಮಾಡಿ ನಮ್ಮ ಜೀವನವನ್ನು ನಾಶ ಮಾಡುತ್ತೀರಾ. ಮೈ ಹಸ್ಬೆಂಡ್‌ ಇಸ್‌ ಎ ಸರ್ಜನ್‌ ಮೇಡಂ. ಐ ಆಮ್‌ ಪ್ರೆಗ್ನೆಂಟ್ ಲೇಡಿ ಮೇಡಂ. ಬೆಳಿಗ್ಗೆ ಬೆಳಿಗ್ಗೆಯೇ ಬೈಯಿಸಬೇಡಿ ಮೇಡಂ. ದೇವಸ್ಥಾನದಿಂದ ಪೂಜೆ ಮಾಡಿಕೊಂಡು ಈಗ ಆಚೆ ಬಂದಿದ್ದೇವೆ. ಯಾಕ್‌ ಬರೆಯುತ್ತೀರಾ ಮೇಡಂ ಡಿವೋರ್ಸ್, ಡಿವೋರ್ಸ್ ಅಂತ. ನೀವು ಕೂಡ ಮೂರು ನಿಮಿಷ ಮಾತನಾಡಿ ಮಿಸ್‌ಲೀಡ್ ಮಾಡುತ್ತಿದ್ದೀರಿ. ಸ್ನ್ಯಾಪ್‌‌ಶಾಟ್‌ ತೆಗೆದು ಇಟ್ಟಿದ್ದೀನಿ. ಪ್ರೂಫ್ ನೋಡಿ ಮೇಡಂ.

ಸುವರ್ಣ ಸಿಬ್ಬಂದಿ: ಮೇಡಂ, ಸುದ್ದಿ ತಕ್ಷಣ ಎಡಿಟ್‌‌ ಆಗಿದೆ.

ಸಂಜನಾ: ಮೇಡಂ ನಿಮಗೂ ಮಕ್ಕಳಿರುತ್ತಾರೆ. ನಿಮಗೆ ಮಗಳಿಲ್ಲವಾ? ನೀವು ಲೇಡಿಸ್‌ ಅಲ್ವಾ? ನಿಮಗೆ ಭಾವನೆಗಳು ಇಲ್ಲವಾ? ಮಿಸ್‌ ಲೀಡ್ ಮಾಡಬೇಡಿ ನೀವು.

(ಸುದ್ದಿಯಲ್ಲಿ ಬಳಸಲಾಗಿರುವ ಆಧಾರ ರಹಿತ ಸಾಲುಗಳನ್ನು ಸಂಜನಾ ಓದಿ ಉಲ್ಲೇಖಿಸುತ್ತಾರೆ)

‘ಡಿವೋರ್ಸ್ ಸುದ್ದಿಯೂ ಹರಿದಾಟಿತ್ತು’ ಎಂಬುದು ಕೇವಲ ಸುವರ್ಣ ಚಾನೆಲ್‌ ನಲ್ಲಿ ಮಾತ್ರ ಮೇಡಂ. ಯಾಕ್‌ ಮೇಡಂ ಹೀಗೆಲ್ಲ ಬರಿತೀರಾ? ನಾನು ನೇಣು ಹಾಕಿಕೊಂಡು ಸತ್ತು ಹೋಗಬೇಕಾ ಹೇಳ್ಬಿಡಿ. ನಿಮ್ಮ ಹೆಸರು ಬರೆದಿಟ್ಟು ಸತ್ತುಹೋಗ್ಬಿಡ್ತೀನಿ. ಸುವರ್ಣ ಚಾನೆಲ್‌ನಿಂದಾಗಿ ಸೂಸೈಡ್‌‌ ಮಾಡ್ತಾ ಇದ್ದೀನಿ ಅಂತ ಬರೆಯುತ್ತೇನೆ.

ಸು.ಸಿಬ್ಬಂದಿ: ಒಂದು ಕೆಲಸ ಮಾಡ್ತೀವಿ. ಈ ಸುದ್ದಿಯನ್ನು ಡಿಲೀಟ್ ಮಾಡಬೇಕಾ?

ಸಂಜನಾ: ಪಬ್ಲಿಷ್ ಯಾಕ್‌ ಮಾಡ್ತೀರಾ ಮೇಡಂ. ಏನು ಫ್ರೂಪ್‌ ಇದೆ? ಡ್ರಗ್ಸ್‌ ಕೇಸ್‌ನ ಫ್ರೂಪ್‌ ಏನಿದೆ? ನಾನು ಡ್ರಗ್ಸ್‌ ತೆಗೆದುಕೊಳ್ಳುವುದನ್ನು ನೋಡಿದ್ದೀರಾ ನೀವು?

ಸಿಬ್ಬಂದಿ: ನೀವು ಡ್ರಗ್ಸ್‌ ತೆಗೆದುಕೊಳ್ಳುತ್ತೀರಾ ಎಂದು ನಾವು ಹೇಳಿಲ್ಲ.

ಸಂಜನಾ: ಮತ್ತೆ ಮತ್ತೆ ಯಾಕ್ ಬರೆಯುತ್ತೀರಾ? ಯಾಕ್ ಸಾಯಿಸ್ತೀರಾ? ಪ್ರಗ್ನೆಸ್ಸಿಯಲ್ಲಿ ನೇಣು ಹಾಕಿಕೊಂಡು ಸತ್ತು ಹೋದ್ರೆ ನಿಮ್ಮ ಹೆಸರನ್ನೇ ಬರೆಯೋದು ನಾನು.

ಸಿಬ್ಬಂದಿ: ಇನ್ನೊಂದು ಕೆಲಸ ಮಾಡುತ್ತೇನೆ. ಇನ್ನು ಮುಂದೆ ನಿಮ್ಮ ಯಾವುದೇ ಸುದ್ದಿಯನ್ನು ನಾವು ಹಾಕಲ್ಲ.

ಸಂಜನಾ: ನಿಮ್ಮ ತಂಟೇನೆ ಬೇಡ. ನೀವು (ನ್ಯೂಸ್) ಹಾಕಿದ ತಕ್ಷಣ ಆಸ್ಕರ್ ಆವಾರ್ಡ್ ಸಿಗೋದಕ್ಕೆ ನಿಮ್ಮದೇನು ನ್ಯೂಯಾರ್ಕ್ ಟೈಮ್ಸ್‌ ಅಲ್ಲ. ಬರೀಬೇಡಿ. ಈ ಥರ ಸುದ್ದಿಯನ್ನು ಯಾರ್ ಬರೆಯುತ್ತಾರೆ ಮೇಡಂ? ಇದೇನಾ ಜರ್ನಲಿಸಂ?

ಸಿಬ್ಬಂದಿ: ಆ ಸುದ್ದಿಯನ್ನು ಡಿಲೀಟ್ ಮಾಡಿಸುತ್ತೇನೆ.

ಸಂಜನಾ: ಬಿ.ಪಿ. ಆಗ್ತಾ ಇದೆ ಮೇಡಂ. ನಾನು ಪ್ರಗ್ನೆಂಟ್ ಇದ್ದೀನಿ. ಶಾಪ ಹಾಕಿಸಿಕೊಳ್ಳಬೇಡಿ. ಈ ಸುದ್ದಿ ಬರೆದ ಜರ್ನಲಿಸ್ಟ್‌ ಹೆಸರು ಹೇಳಿ ಮೇಡಂ.

ಸಿಬ್ಬಂದಿ: ಇಲ್ಲ, ಅದು ಆಯ್ತಲ್ಲ, ಫೈನ್‌.

ಸಂಜನಾ: ವಾಟ್‌ ಯೂ ಮೀನ್‌. ನಿಮ್ಮ ಮಗಳ ಬಗ್ಗೆ ಬರೆದುಬಿಟ್ಟು ಆಯ್ತು ಎಂದು ಹೇಳಿ ಮೇಡಂ. ನಿಮ್ಮ ಬಗ್ಗೆ ಬರೆದು, ನಿಮ್ಮ ಡಿವೋರ್ಸ್ ಆಗುತ್ತಿದೆ ಎಂದು ಬರೆದು ಅಥವಾ ನಿಮ್ಮ ಸಂಪಾದಕನ ಮಗುವನ್ನು ಡ್ರಗ್‌ ಕೇಸಲ್ಲಿ ಹಾಕಿ ಬರೆಯಿರಿ. ನಿಮ್ಮ ಪರಿವಾರದ ಮೇಲೆ ಬರೆಯಿರಿ. ಟಿಆರ್‌ಪಿಗಾಗಿ ಕಲಾವಿದರನ್ನು ಎಷ್ಟು ಅಂತ ಚಚ್ಚುತ್ತೀರಾ? ಟಿಆರ್‌ಪಿಗಾಗಿ ಎಷ್ಟು ಅಂತ ಸಾಯಿಸುತ್ತೀರಾ ನಮ್ಮನ್ನು? ಟಿಆರ್‌ಪಿ, ಹಿಟ್ಸ್‌ ಅಷ್ಟೇ ಅಲ್ಲ. ಲೇಡೀಸ್‌ಗೆ ಮಾನಮಾರ್ಯಾದೆ ಇಲ್ಲವಾ? ಇದಕೋಸ್ಕರವೇ ಹೆಸರು ಮಾಡಿರುವುದು ನಾವು?

ಸಿಬ್ಬಂದಿ: ಸೋಷಿಯಲ್ ಮೀಡಿಯಾ ಎಲ್ಲ ಕಡೆ ಸುದ್ದಿ ಡಿಲೀಟ್‌ ಮಾಡಿಸುತ್ತೇನೆ. ನಿಮಗೆ ಸಂಬಂಧಪಟ್ಟ ಯಾವುದೇ ಸುದ್ದಿಯನ್ನು ಇನ್ನು ಮುಂದೆ ತೆಗೆದುಕೊಳ್ಳುವುದಿಲ್ಲ.

ಸಂಜನಾ: ಈ ರೀತಿ ಸುದ್ದಿ ಬರೀಬೇಡಿ ಮೇಡಂ. ನೀವು ಒಂದು ಲೇಡೀಸ್. ನಾಚಿಕೆ ಆಗಬೇಕು. ಬರೆದ ಜರ್ನಲಿಸ್ಟ್ ಹೆಸರು ಬಿಟ್ಟುಕೊಡುತ್ತಿಲ್ಲ ನೀವು.

ಸಿಬ್ಬಂದಿ: ಅದು ನಮ್ಮ ಟೀಮ್‌.

ಸಂಜನಾ: ಇಂಥವನು ಬರೆದದ್ದು ಎಂದು ಟೀಮಲ್ಲಿ ಒಂದು ಹೆಸರು ಇರುತ್ತದ್ದಲ್ಲ. ಯಾಕೆ ಈ ರೀತಿ ಕಾಡುತ್ತೀರಾ? ಮಾಡೋದು ಮಾಡಿಬಿಟ್ಟು ನಮ್ಮ ಟೀಮ್ ಎಂದು ಮುಚ್ಚಿಡುತ್ತೀರಾ? ಲಿಂಕ್‌ ಡಿಲೀಟ್ ಮಾಡ್ತೀರಾ. ನೀವು ಸುದ್ದಿ ಮಾಡಿದ ಮೇಲೆ ಬೇರೆ ಹತ್ತು ಮಂದಿ ಸುದ್ದಿ ಮಾಡ್ತಾರೆ. ಅದನ್ನು ಯಾರ್‌ ಡಿಲೀಟ್ ಮಾಡ್ತಾರೆ.

ಸಿಬ್ಬಂದಿ: ಒಂದು ನಿಮಿಷ ಸಂಜನಾ, ನಿಮಗೆ ಸಂಬಂಧಪಟ್ಟ ಯಾವುದೇ ಸುದ್ದಿಯನ್ನು…

ಸಂಜನಾ: ಇನ್ನುಳಿದ ಪಬ್ಲಿಕೇಷನ್‌ನವರು ಹೇಳ್ತಾರೆ, ಸುವರ್ಣದವರು ಬರೆದಿದ್ದರು. ಹೀಗಾಗಿ ಕಾಪಿ ಮಾಡಿದೆವು ಅಂತ. ಅದನ್ನೆಲ್ಲ ಡಿಲೀಟ್ ಮಾಡಿಸಲು ಯಾರು ಜವಾಬ್ದಾರಿ ತೆಗೆದುಕೊಳ್ಳುತ್ತಾರೆ? ಯಾಕೆ ನಮ್ಮ ವಿರುದ್ಧ ಶತ್ರುಗಳನ್ನು ರೆಡಿ ಮಾಡ್ತೀರಾ?

ಸಿಬ್ಬಂದಿ: ಆಯ್ತು ಸಂಜನಾ. ನಿಮ್ಮ ಸಂಕಟ ಅರ್ಥವಾಗುತ್ತಿದೆ. ನಮ್ಮ ಟೀಮ್‌ಗೆ ಸೂಚಿಸುತ್ತೇನೆ. ಸಂಜನಾ ಅವರಿಗೆ ಸಂಬಂಧಪಟ್ಟ ಯಾವುದೇ ಸುದ್ದಿಯನ್ನು ತೆಗೆದುಕೊಳ್ಳಬೇಡಿ ಎಂದು.

ಸಂಜನಾ: ನಿಮಗೂ ನಿಮ್ಮ ಚಾನೆಲ್‌ಗೂ ದೊಡ್ಡ ನಮಸ್ಕಾರ. ಸಾಷ್ಟಾಂಗ ನಮಸ್ಕಾರ. ಚೆನ್ನಾಗಿರಿ ನೀವು. ಭಗವಂತ ಅನ್ನೋನು ಇದ್ದಾನೆ. ನ್ಯಾಯ ಅನ್ನೋದು ಇದೆ.

ಸಿಬ್ಬಂದಿ: ಈವನ್‌ ವೀ ಬಿಲಿವ್‌ ಇನ್ ಗಾಡ್‌.

ಸಂಜನಾ: ಐ ಡೋಂಡ್‌ ಥಿಂಕ್‌ ಯೂ ಬಿಲಿವ್‌ ಇನ್ ಗಾಡ್‌. ಮಾಡೋದು ಮಾಡಿಬಿಟ್ಟು, ಗಲೀಜು ಬರೆದುಬಿಟ್ಟು, ಡಿಲೀಟ್ ಮಾಡಿಬಿಟ್ಟು ವೈರಲ್ ಮಾಡ್ತೀರಾ. ನೂರು ಜನ ಬೇರೆ ಪಬ್ಲಿಕೇಷನ್‌ನವರು ಬರೆತಾರೆ. ಇಷ್ಟು ಹಿಂಸೆಯನ್ನು ಬೇರೆಯವರ ಮನೆಗಳಲ್ಲಿ ತರುತ್ತೀರಾ. ನೀವು ಸುಖವಾಗಿ ಬದುಕುತ್ತೀರಾ? ಆ ಭಗವಂತ ನಿಮ್ಮನ್ನು ಬಿಡುತ್ತಾನಾ? ನೋಡ್ತೀನಿ ಮೇಡಂ. ನಾನು ಬದುಕಿರುತ್ತೇನೆ. ನೀವು ಬದುಕಿರುತ್ತೀರಾ.

ಸಿಬ್ಬಂದಿ: ಇವತ್ತು ಬದುಕಿದವರು ನಾಳೆ ಬದುಕಿರುತ್ತೇವೆ ಅನ್ನೋ ನಂಬಿಕೇನೇ ಇಲ್ಲ.

ಸಂಜನಾ: ಅಷ್ಟು ಗೊತ್ತಿದ್ದರೆ ಸಾಕು. ಮೇಲೆ ಭಗವಂತ ಶಿಕ್ಷೆ ಕೊಡ್ತಾನೆ ಅಂತ ಗೊತ್ತಿದ್ದರೆ ಸಾಕು. ಅಷ್ಟು ಮಾನವೀಯತೆ ಇದ್ದರೆ ಸಾಕು. ಮತ್ತೆ ನನ್ನ ಬಗ್ಗೆ ಬರೆಯಬೇಡಿ.

ಸಿಬ್ಬಂದಿ: ಖಂಡಿತಾ ಬರೆಯಲ್ಲ ಸಂಜನಾ ಅವರೇ…

ಸಂಜನಾ: ಗ್ರೇಟ್ ಸೆಲ್ಯೂಟ್‌ ಟು ಯೂ. .

ಸಿಬ್ಬಂದಿ: ಪ್ರತಿಯೊಬ್ಬರಿಗೂ ಸೂಚನೆ ನೀಡ್ತೀವಿ.

ಸಂಜನಾ: ನಿಮ್ಮ ಸಹವಾಸನೇ ಬೇಡ. ನೀವು ಬರೆಯಲಿಲ್ಲ ಅಂದರೆ ನೂರು ಹೊಸ ಚಾನೆಲ್ ಬರುತ್ತೆ. ನೂರು ಒಳ್ಳೆಯ ಜನ ಬರ್ತಾರೆ. ಈ ಥರ ಕಳ್ಳತನದ ಕೆಲಸ ಮಾಡಲ್ಲ. ಬರೆಯೋದು ಬರೆದು ಹೇಗೆ ಮಿಸ್‌ ಗೈಡ್ ಮಾಡ್ತಾ ಇದ್ದೀರಿ ನೀವು. ಫ್ರೂಫ್‌ ತೆಗೆದುಕೊಂಡು ಇಟ್ಟಿದ್ದೀನಿ. ಕ್ರಿಮಿನಲ್ ಡಿಫಮೇಷನ್‌ ಹೊಡೆದರೆ ಆಮೇಲೆ ಗೊತ್ತಾಗುತ್ತದೆ.

ಸಿಬ್ಬಂದಿ: ನಮ್ಮ ಟೀಮಿಗೆ ಇವತ್ತೇ ಇನ್ಸ್‌ಟ್ರಕ್ಸ್‌ ಮಾಡ್ತೀನಿ.. ಸಂಜನಾ ಅವರಿಗೆ ಸಂಬಂಧಪಟ್ಟ ಯಾವುದೇ ಸುದ್ದಿಯನ್ನು ತೆಗೆದುಕೊಳ್ಳಬಾರದೆಂದು.

ಸಂಜನಾ: ಸಾಷ್ಟಾಂಗ ನಮಸ್ಕಾರ ನಿಮಗೆ.

ಸಿಬ್ಬಂದಿ: ಖಂಡಿತ ಸಂಜನಾ ಅವರೇ ಟೇಕ್‌ ಕೇರ್‌.

-ಇಷ್ಟು ಸಂಜನಾ ಹಾಗೂ ಸುವರ್ಣ ನ್ಯೂಸ್‌ ಜೊತೆ ನಡೆದಿರುವ ಸಂಭಾಷಣೆ.

ಸಂಜನಾ ಅವರು ಈ ಹಿಂದೆಯೂ ಸುವರ್ಣ ನ್ಯೂಸ್‌ನ ನಿರೂಪಕ ಅಜಿತ್ ಹನುಮಕ್ಕನವರ್‌ ಅವರಿಗೆ ಕ್ಲಾಸ್ ತೆಗೆದುಕೊಂಡಿದ್ದರು. “ಡಿಸೆಂಟ್ ಆಂಕರ್‌ ಜೊತೆ ಮಾತನಾಡ್ತೀನಿ. ನಿಮ್ಮ ಜೊತೆ ಅಲ್ಲ” ಎಂದಿದ್ದರು. ವಿಡಿಯೊ ವೈರಲ್‌ ಕೂಡ ಆಗಿತ್ತು. ಆ ನಂತರದಲ್ಲಿ ಸಂಜನಾ ಕುರಿತು ಈ ರೀತಿ ವರದಿಗಳಾಗುತ್ತಿವೆ. (ಆ ವರದಿಯನ್ನು ಇಲ್ಲಿ ಓದಬಹುದು.)

ನಟಿಯರ ಬಗ್ಗೆ ಗಾಸಿಪ್‌ಗಳನ್ನು ಬರೆಯುವುದು, ಅವರ ಮೇಲೆ ದ್ವೇಷವನ್ನು ಸೃಷ್ಟಿಸುವುದು ಇತ್ತೀಚಿನ ಕನ್ನಡ ಪತ್ರಿಕಾರಂಗದಲ್ಲಿ ವ್ಯಾಪಕವಾಗಿ ಬೆಳೆಯುತ್ತಿದೆ. ನಟಿ ಶ್ರುತಿ ಹರಿಹರನ್‌ ಅವರು ಮೀಟೂ ಆರೋಪ ಮಾಡಿದಾಗಲೂ ಕೆಲವು ಮಾಧ್ಯಮಗಳು ಹೀಗೆಯೇ ವರ್ತಿಸಿದ್ದವು. ನಟಿ ರಶ್ಮಿಕಾ ಮಂದಣ್ಣ ಅವರ ವಿರುದ್ಧ ಜನರು ಆಶ್ಲೀಲ ಪದ ಬಳಸಿ ನಿಂದಿಸುತ್ತಿರುವುದನ್ನು ಕಳೆದೆರಡು ವರ್ಷಗಳಿಂದ ಕಾಣುತ್ತಿದ್ದೇವೆ. ಇದಕ್ಕೂ ಮಾಧ್ಯಮಗಳ ವರದಿಗಳಿಗೂ ಸಂಬಂಧವಿರುವುದನ್ನು ಅಲ್ಲಗಳೆಯಲಾಗದು.


ಇದನ್ನೂ ಓದಿರಿ: ನಿರೂಪಕ ‘ಅಜಿತ್ ಹನುಮಕ್ಕನವರ್‌’ಗೆ ನಟಿ ಸಂಜನಾ ಸಭ್ಯತೆಯ ಪಾಠ; ವಿಡಿಯೊ ವೈರಲ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -