Homeಚಳವಳಿಮನುವಾದಿ ಮೀಸಲಾತಿ ಧಿಕ್ಕರಿಸಿ ಮಾನವತಾವಾದಿ ಮೀಸಲಾತಿ ಜಾರಿಗೆ ತಂದಿದ್ದೇವೆ: ಬರಗೂರು ರಾಮಚಂದ್ರಪ್ಪ

ಮನುವಾದಿ ಮೀಸಲಾತಿ ಧಿಕ್ಕರಿಸಿ ಮಾನವತಾವಾದಿ ಮೀಸಲಾತಿ ಜಾರಿಗೆ ತಂದಿದ್ದೇವೆ: ಬರಗೂರು ರಾಮಚಂದ್ರಪ್ಪ

- Advertisement -
- Advertisement -

ಶತಮಾನಗಳಿಂದ ನಮ್ಮ ಮೇಲೆ ಹೇರಲ್ಪಟ್ಟ ಮನುವಾದಿ ಮೀಸಲಾತಿಯನ್ನು ಧಿಕ್ಕರಿಸಿ ಮಾನವತಾವಾದಿ ಮೀಸಲಾತಿ ಜಾರಿಗೆ ತಂದಿದ್ದೇವೆ. ಸ್ವತಂತ್ರ ಭಾರತದಲ್ಲಿ ಮೀಸಲಾತಿಗೆ ಶಾಸನಬದ್ಧತೆಯನ್ನು ತಂದು ಕೊಟ್ಟವರು ಅಂಬೇಡ್ಕರ್‌ರವರು ಎಂದು ನಾಡೋಜ ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟರು.

ಬೆಂಗಳೂರಿನ ಸರ್ಕಾರಿ ಕಲಾ ಕಾಲೇಜಿನಲ್ಲಿ ಬಂಡಾಯ ಸಾಹಿತ್ಯ ಸಂಘಟನೆ ಆಯೋಜಿಸಿದ್ದ, ’ಮೀಸಲಾತಿ ನೂರು ವರ್ಷ’ ಕುರಿತ ರಾಜ್ಯ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಕೆಲವರು ಸಂವಿಧಾನ ಎಂದರೆ ಮೀಸಲಾತಿ, ಮೀಸಲಾತಿ ಎಂದರೆ ಸಂವಿಧಾನ ಎಂದು ತಪ್ಪಾಗಿ ಭಾವಿಸಿದ್ದಾರೆ. ಮೀಸಲಾತಿ ಸಂವಿಧಾನದ ಒಂದು ಅಂಶವೇ ಹೊರತು ಮೀಸಲಾತಿಯೇ ಸಂವಿಧಾನವಲ್ಲ. ಸಂವಿಧಾನ ಆಡಳಿತಕ್ಕೆ ಬೇಕಾದಂತ ಎಲ್ಲಾ ತಾಂತ್ರಿಕ ಮತ್ತು ತಾತ್ವಿಕ ಚೌಕಟ್ಟನ್ನು ಒದಗಿಸಿದೆ. ಸಂವಿಧಾನ ಶಾಸ್ತ್ರಕ್ಕೆ ಸಿಗದ ಸಂವೇದನೆ. ಇಲ್ಲಿ ಸಂವೇದನೆ ಎಂದರೆ ಸಾಮಾಜಿಕ ನ್ಯಾಯದ ಆಶಯ, ಸಮಾನತೆಯ ಆಶಯವಾಗಿದೆ ಎಂದರು.

ಮೀಸಲಾತಿಯಿಂದ ಪ.ಜಾತಿ/ಪ.ಪಂಗಡದವರಿಗೆ ಮಾತ್ರ ಉದ್ಯೋಗ ಸಿಕ್ಕಿದೆ ಎಂದು ಬಹಳಷ್ಟು ಜನರಿಗೆ ಅಸಮಾಧಾನವಿದೆ. ಮೀಸಲಾತಿಯಿಂದ ಅನೇಕ ಸುಧಾರಣೆಗಳು ನಡೆದಿವೆ ನಿಜ, ಆದರೆ ಮೀಸಲಾತಿಯ ಕುರಿತು ಅಸಹನೆ ವ್ಯಕ್ತಪಡಿಸುವಷ್ಟು ಉನ್ನತ ಉದ್ಯೋಗಗಳು ದಲಿತರಿಗೆ ಸಿಕ್ಕಿವೆ ಎನ್ನುವುದು ಸತ್ಯವಲ್ಲ. ಯೋಗೇಂದ್ರಯಾದವ್ ಅವರ ಸಮೀಕ್ಷೆಯ ವರದಿ ಮತ್ತು ಕೇಂದ್ರ ಸರ್ಕಾರದ ಅಂಕಿ ಅಂಶಗಳನ್ನು ನೋಡಿದರೆ ದೊಡ್ಡ ದೊಡ್ಡ ಸಂಸ್ಥೆಗಳಾದ ಐಐಎಂ, ಐಐಟಿಗಳಲ್ಲಿ ಎಷ್ಟು ಎಸ್ಸಿ ಎಸ್ಟಿಯ ಪ್ರಾಧ್ಯಾಪಕರು ತೀರಾ ಕಡಿಮೆ ಸಂಖ್ಯೆಯಲ್ಲಿದ್ದಾರೆ ಎಂದರು.

ಆದರೆ ಮೀಸಲಾತಿ ಮೆರಿಟ್‌ಗೆ ವಿರುದ್ಧ ಎನ್ನುವವರಿದ್ದಾರೆ. ದೇಶದ ಎಲ್ಲಾ ಉನ್ನತ ವಿವಿಗಳಲ್ಲಿ ಹಾಗು ಶಿಕ್ಷಣ ಸಂಸ್ಥೆಗಳಲ್ಲಿ ಸಾಮಾನ್ಯ ವರ್ಗದ ಪ್ರಾಧ್ಯಾಪಕರೆ ಇದ್ದಾರೆ. ಆದರೂ ಜಗತ್ತಿನ ಉತ್ತಮ ವಿವಿಗಳ ಪಟ್ಟಿಯಲ್ಲಿ ಭಾರತದ ಒಂದು ವಿವಿ ಇಲ್ಲ ಯಾಕೆ ಎಂದು ಪ್ರಶ್ನಿಸಿದ ಅವರು, ಮೆರಿಟ್ ಎಂಬ ಮಿಥ್ಯೆ ಇಟ್ಟುಕೊಂಡು ಮೀಸಲಾತಿ ವಿರೋಧ ಮಾಡುವ ಪ್ರವೃತ್ತಿ ಅಪ್ಪಟ ಹುಸಿತನದ್ದು ಎಂದರು.

ಇನ್ನು ಮೀಸಲಾತಿ ವಿಚಾರಕ್ಕೆ ಬಂದರೆ, ಜಾತಿವಾದ ಎಲ್ಲಿಯವರೆಗೆ ಇರುತ್ತೋ ಅಲ್ಲಿಯವರೆಗೆ ಮೀಸಲಾತಿ ಇರಬೇಕು. ಮೀಸಲಾತಿಯನ್ನು ಅಸಹನೀಯವಾಗಿ ಬಿಂಬಿಸುವ ವ್ಯಕ್ತಿಗಳು ನಮ್ಮ ಮಧ್ಯೆ ಇದ್ದಾರೆ. ಆದರೆ ಅವರಿಗೆ ತಿಳಿದಿರಲಿ, ಹತ್ತಾರು ಶತಮಾನಗಳಿಂದ ಮೀಸಲಾತಿ ಜಾರಿಯಲ್ಲಿದೆ. ಶಿಕ್ಷಣ, ದೇವಾಲಯ ಪ್ರವೇಶ, ಮನೆ, ಬಾವಿ ನೀರು, ಕೆರೆ, ಬೀದಿಗಳು ಕೆಲವರಿಗೆ ಮೀಸಲಾಗಿತ್ತು. ಅಷ್ಟೇ ಅಲ್ಲದೆ, ಸ್ಪರ್ಶ ಸಹ ಮೀಸಲಾಗಿತ್ತು. ಆದರೆ, ಇದನ್ನು ನಾವು ಧಿಕ್ಕರಿಸಿದ ಕಾರಣ, ಕೆಲವರು ಇಂದಿಗೂ ಸಾಮಾಜಿಕ ನ್ಯಾಯದ ಪರಿಕಲ್ಪನೆಯಾದ ಮೀಸಲಾತಿಯನ್ನು ಟೀಕಿಸುತ್ತಾರೆ ಎಂದರು.

ಗೋಡ್ಸೆ ಕೊಲೆಗಾರ ಎನ್ನಲು ಹಿಂದೇಟು ಏಕೆ?:

ಕರ್ನಾಟಕ ಶಿಕ್ಷಣ ಇಲಾಖೆಯ ಕೈಪಿಡಿಯಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಒಬ್ಬರೇ, ಸಂವಿಧಾನ ಬರೆದಿಲ್ಲ ಎಂದಿರುವುದು ಅವರ ವಿಕೃತ ಮನಸ್ಥಿತಿಯನ್ನು ತಿಳಿಸುತ್ತದೆ. ಅಷ್ಟೇ ಅಲ್ಲದೆ, ಒರಿಸ್ಸಾದ ಪಠ್ಯವೊಂದರಲ್ಲಿ ಮಹಾತ್ಮ ಗಾಂಧಿ ಅವರು ಅವಘಡದಿಂದಾಗಿ ಮೃತಪಟ್ಟಿದ್ದಾರೆ ಎಂದು ಉಲ್ಲೇಖಿಸಲಾಗಿದೆ. ಗಾಂಧಿಯನ್ನು ಹತ್ಯೆಗೈದವನು ಗೋಡ್ಸೆ ಎಂದು ಹೇಳಲು ಹಿಂಜರಿಕೆ ಏಕೆ ಎಂದು ಪ್ರಶ್ನಿಸಿದರು. 2018ರ ಆಗಸ್ಟ್‌ನಲ್ಲಿ ದೆಹಲಿಯ ಜಂತರ್ ಮಂತರ್ ಅಲ್ಲಿ ಭಾರತೀಯ ಸಂವಿಧಾನವನು ಸುಟ್ಟು ಅಂಬೇಡ್ಕರ್ ವಿರುದ್ಧ ದಿಕ್ಕಾರ ಕೂಗುವ ಘಟನೆ ನಡೆಯುತ್ತದೆ. 2019 ಜನವರಿಯಲ್ಲಿ ಗಾಂಧೀಜಿಯವರ ಭಾವಚಿತ್ರದಲ್ಲಿ ಅವರ ಎದೆಗೆ ಅಣಕು ಗುಂಡನ್ನು ಹಾರಿಸಿ ವಿಕಾರ ಸಂಭ್ರಮ ಪಡುವ ಘಟನೆ ನಡೆಯುತ್ತದೆ. ಇವೆಲ್ಲವೂ ದೇಶದ ಸಂವಿಧಾನವನ್ನು ಮರೆಮಾಚುವ ಹುನ್ನಾರ ಎಂದರು.

ಮಹಾತ್ಮ ಗಾಂಧಿ ಮತ್ತು ಅಂಬೇಡ್ಕರ್ ಅವರ ನಡುವೆ ತಾರ್ಕಿಕ ಭಿನ್ನಾಭಿಪ್ರಾಯಗಳು ಮಾತ್ರ ಇದ್ದವು. ಅದನ್ನೇ ನೆಪವಾಗಿಟ್ಟುಕೊಂಡು ಅವರ ಅನುಯಾಯಿಗಳ ನಡುವೆ ಅಸಹನೆ ಹೆಚ್ಚಾಗಿದೆ ಎಂದ ಅವರು, ಗಾಂಧಿ ಮತ್ತು ಅಂಬೇಡ್ಕರ್ ನಮಗೆ ಮುಖ್ಯವಾಗಬೇಕು. ಇದೀಗ ಮೂಲಭೂತವಾದಿಗಳು ಗಾಂಧಿಯನ್ನು ತಳ್ಳುತ್ತಾ, ಅಂಬೇಡ್ಕರ್ ಅವರನ್ನು ವಶಪಡೆಸಿಕೊಳ್ಳುತ್ತಿರುವ ಪ್ರಕ್ರಿಯಲ್ಲಿ ನಿರತರಾಗಿರುವಾಗ ನಾವು ಎಚ್ಚೆತ್ತುಕೊಳ್ಳಬೇಕು ಎಂದರು.

ಸಮಾವೇಶದ ಅಧ್ಯಕ್ಷತೆಯನ್ನು ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯ್ಕ್, ಡಾ.ಕಿರಣ್ ಗಾಜನೂರು, ಡಾ.ರಾಜಪ್ಪ ದಳವಾಯಿ ಸಂಘಟನೆ ಸಂಚಾಲಕರಾದ ಡಾ.ರಾಜು ಗುಂಡಾಪುರ, ಬಿ.ರಾಜಶೇಖರ ಮೂರ್ತಿ ಸೇರಿದಂತೆ ಪ್ರಮುಖರಿದ್ದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

7 COMMENTS

  1. ಇವತ್ತಿನ ಸ್ವಸ್ಥ ಸಮಸಮಾಜ ನಿರ್ಮಾಣ ದಲ್ಲಿ ಗೌರಿ ಮೇಡಮ್ ರವರ ಪತ್ರಿಕೆ ತುಂಬಾ ಆವಶ್ಯಕವಾದುದು.

  2. ಪಂಗಡ,ಪಂಗಡಗಳೊಳಗೆ ಹಣಕಾಸು ಮಾನದಂಡದಡಿಯಲ್ಲಿ ಶೇ.ನೂರು ಮೀಸಲಾತಿ ಒದಗಿಸುವುದೊಂದೇ ಮೀಸಲಾತಿ ಕಗ್ಗಂಟಿಗಿರುವ ಪರಿಹಾರ.
    ಶೆ.ಅಯ್ವತ್ತರ ಮಿತಿಯನ್ನು ತಕ್ಕ ತಿದ್ದುಪಡಿ ಮಾಡಿ ಸಡಿಲಮಾಡಬೇಕಾಗಿದೆ

  3. ಮೀಸಲಾತಿ ನೆರವಿನಿಂದ ಮೇಲೆ ಬಂದ ಪ.ಪ/ಪ.ಬುಡಕಟ್ಟು ಮಂದಿ ತನ್ನದೇ ಪಂಗಡದ ವಂಚಿತ ಮಂದಿಗೆ ತಕ್ಕ ಪಾಲು ಸಿಗುವಂತೆ ಹೆಜ್ಜೆ ಇಡಬೇಕು. ಇಲ್ಲವಾದರೆ, ಮೀಸಲಾತಿ ಒಪ್ಪದವರ ಎದುರು ದಾಳಿಗೆ ಪದೇಪದೇ ತುತ್ತಾಗಬೇಕಾಗುತ್ತೆ. ಇದು ಮತ್ತೆ ಕೆಲವರ ಎಲೆಕ್ಶನ್ ಇಶ್ಯೂ ಆಗಿ ಒಡಕಿಗೆ ಎಡಮಾಡಲಿದೆ.
    ಮೀಸಲಾತಿಯಿಂದ ಒಂದು ಬಗೆಯ ಹತೋಟಿ ಕೂಟ ಮೂಡಿರುವುದನ್ನೂ ಕೂಡ ಕಡೆಗಣಿಸಬಾರದು.

  4. ಈಗ ಹೆಚ್ಚುಮಂದಿಗೆ ಅನುಕೂಲವಾಗುತ್ತಿರುವ ಮೀಸಲಾತಿ ಏರ್ಪಾಡಿಗಿಂತ ಹತೋಟಿಕೂಟ ಬಡ್ತಿಯಲ್ಲಿ ತನಗೆ ಸಿಗಬೇಕಾದ ಹೆಚ್ಚಿನಪಾಲಿಗೆ ಹಾತೊರೆಯುತ್ತಿರುವ ಬೆಳವಣಿಗೆಯನ್ನು ಎಚ್ಚರಿಕೆಯಿಂದ ಬಗೆಹರಿಸಿಕೊಳ್ಳಬೇಕುಉ.
    ಒಳಮೀಸಲಾತಿಯನ್ನು ಪಡೆಯಲು ಮೂಡುತ್ತಿರುವ ದಿಟವಾಗಿಯೂ ತುಳಿತಕ್ಕೊಳಗಾದವರ ಹೋರಾಟವನ್ನು ಮೀಸಲಾತಿ ಒಪ್ಪುವವರು ಬೆಂಬಲಿಸಲು ಯಾವುದೇ ನೆಪ ಹೇಳಬಾರದು.

  5. ಸದಾಶಿವ ರಿಪೋರ್ಟ್, ಸೋಸಿಯೋ ಎಕಾನಮಿಕ್ ಸರ್ವೆ ರಿಪೋರ್ಟ್ ಅನ್ನು ಬಯಲುಗೊಳಿಸಲು ಒತ್ತಾಯಿಸಬೇಕು.

  6. ಈ ಬಗ್ಗೆ ಹೆಚ್ಚಿನ ಒರೆತಮಾಡಿ ತಕ್ಕ ತಿದ್ದುಪಡಿಗೆ ಎಡೆಮಾಡಿಕೊಡಬೇಕು.

  7. ಮೀಸಲಾತಿ ಬಗೆಗೆ ಗಣಿತದಂತೆ ಪಕ್ಕಾ ಪಾರ್ಮುಲ ತಂದರೆ, ಏಳಿಗೆಗೆ ಇರುವ ದಾರಿಯತ್ತ ದಾಪುಗಾಲಿಡಬಹುದು.

LEAVE A REPLY

Please enter your comment!
Please enter your name here

- Advertisment -

Must Read

ಚಾಮರಾಜನಗರ: ರೈತ ಮುಖಂಡರ ಮೇಲೆ ಬಿಜೆಪಿಗರಿಂದ ಹಲ್ಲೆ

0
ರೈತ ಮುಖಂಡರ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿ ಬೆದರಿಕೆ ಹಾಕಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಬಿಜೆಪಿ ಗುಂಡಾಗಳು ಅವಾಚ್ಯವಾಗಿ ನಿಂದಿಸಿ ತಳ್ಳಾಟ ನಡೆಸಿದ್ದಾರೆ, ರೈತರ ಸ್ವಾಭಿಮಾನವಾದ ಹಸಿರು ಟವಲನ್ನು ಕಿತ್ತು ಅವಮಾನಿಸಿದ್ದಾರೆ...