Homeಅಂಕಣಗಳುದೇಹವೊಂದೇ ಎಲ್ಲವೂ ಅಲ್ಲ v

ದೇಹವೊಂದೇ ಎಲ್ಲವೂ ಅಲ್ಲ v

- Advertisement -
- Advertisement -

ಡಾ.ವಿನಯಾ ಒಕ್ಕುಂದ |

ಗೋಕರ್ಣದ ಕಲ್ಪನಾ ಟಾಕೀಸು ವರ್ಷದಲ್ಲಿ ಮೂರು ತಿಂಗಳು ಚಾಲೂ ಇದ್ದರೆ ಅದೇ ಸ್ವರ್ಗ ಎಂದುಕೊಂಡ ದಿನಗಳವು. ಸುತ್ತಲ ಹಳ್ಳಿಗೆ ಎಡವಿ ಬಿದ್ದರೆ ಸಿಗುವ ಪೇಟೆ ಗೋಕರ್ಣವೇ. ವರ್ಷಕ್ಕೊಮ್ಮೆ ಮಂಕಾಳಮ್ಮನ ಗುಡಿ ಪ್ರಸಾದ ಕೈಗೆ ಬಿದ್ದರೆ ಅಲ್ಲಿಗೆ, ನಾವು ನಮ್ಮ ಹಳ್ಳಿಯ ಜಂಬೂದ್ವೀಪದಿಂದ ಹೊರಲೋಕಕ್ಕೆ ಸಂಪರ್ಕ ಇಟ್ಟುಕೊಂಡಿದ್ದಕ್ಕೆ ಸಾಕ್ಷಿ. ಹೆಣ್ಣುಮಕ್ಕಳು, ಫಾರೆನ್ನರ್ಸ್ ಬರುವ ಬೀಚುಗಳಿಗೆ ಹೋಗುವುದು ಎಂದರೆ, ಮನೆ ಹೊಸ್ತಿಲು ದಾಟುವಾಗ ತಮ್ಮ ಶ್ರಾದ್ಧದ ಅನ್ನ ತಾವೇ ಇಕ್ಕಿ ಹೋಗಬೇಕು ಅಷ್ಟೇ. ಹಾಗಂತ ಇದು ಕಳೆದ ಶತಮಾನದ ಆರಂಭದ ಕಥೆಯೇನಲ್ಲ. ಹೆಂಗಸರು ಶಿಕ್ಷಣ ಉದ್ಯೋಗಗಳಿಗೆ ದೊಡ್ಡ ಮಟ್ಟದಲ್ಲಿ ಸೇರ್ಪಡೆಯಾಗಿ, ಸಾಮಾಜಿಕ ಬದುಕಿನಲ್ಲಿ ಮನ್ವಂತರ ಸಂಭವಿಸಿದ ನಂತರದ್ದು, ಕರಾವಳಿ ಜಿಲ್ಲೆಯಲ್ಲಂತೂ ಹೆಣ್ಣುಮಗಳಿಗೆ ಡಿಗ್ರಿವರೆಗಾದರೂ ಓದಿಸುವುದು ಘನಸ್ತಿಕೆ ಎಂದು ತಿಳಿದ ದಿನಮಾನವದು. ಹಾಗಿರುವಾಗ, ಗೋಕರ್ಣದ ಟಾಕೀಸಿಗೆ ಮುಖಹಾಕದೆ ಬದುಕಲಾದೀತೆ? ಮನೆ, ಊರು ಹೇಗೆ ಹೇಗೆ ಹೆಣ್ಣುಮಕ್ಕಳನ್ನು ಬಿಗಿದಿಡುತ್ತಿತ್ತೋ ಹಾಗೆ ಹಾಗೆ ಆ ಬಿಗಿತದ ಗಂಟು ಸಡಲಿಸಿಕೊಳ್ಳಲು ಅವರು ಸಾಹಸಯಾತ್ರೆಯಲ್ಲಿ ಪರಿಣತರಾಗುತ್ತಿದ್ದರು. ನಮ್ಮ ಬ್ಯಾಗುಗಳಲ್ಲಿ ಚೂಪು ಟಾಚಣಗಳು ವರ್ಷದ ಮುನ್ನೂರೈವತ್ತು ದಿನವೂ ಕೈಯಲ್ಲಿ ಅಂಬ್ರೆಲಾ ಕೊಡೆಗಳು ಏನು ಚೆಂದಕಿರುತ್ತಿದ್ದವೇ? ಬಸ್ ಪ್ರಯಾಣವನ್ನು ಸಲೀಸುಗೊಳಿಸಿದ, ಟಾಕೀಸಿನ ಕತ್ತಲಲ್ಲೂ ಕೂತು ಸಿನಿಮಾ ನೋಡುವ ಧೈರ್ಯಕೊಟ್ಟ ಆಪ್ತಮಿತ್ರಗಣಗಳಲ್ಲವೇ ಅವು? ಶಿವರಾತ್ರಿಯ ನಾಟಕ ನೋಡಲು ಸಕುಟುಂಬ ಪರಿವಾರ ಸಮೇತ ಹೋಗುವುದು ಅನಿವಾರ್ಯವಾಗಿತ್ತು. ಬೆಳತನಾ ನಡೆವ ಯಕ್ಷಗಾನಗಳಿಗಂತೂ ಮನೇಲಿರೋವು ದೆವ್ವಗಳು ಮಾತ್ರ ಅಂತಾಗಿತ್ತು. ಆದರೆ ಅದ್ಯಾಕೋ ಸಿನಿಮಾ ಟಾಕೀಸಿಗೆ ಮಾತ್ರ ಗೆಳತಿಯರೊಡನಾಟ ಮಾತ್ರ ಸರಿಯೆನಿಸಿತ್ತು. ಆದರೇನು? ಹೆಣ್ಣುಮಕ್ಕಳಿಗೆ ಸರಿಯೆನಿಸಿದ್ದನ್ನು ಒಪ್ಪಲು ಅದೇನು ಸಂವಿಧಾನವೇ? ಅಂತೂ ನಂನಮ್ಮ ಮನೆಗಳಲ್ಲಿ ಸಿನಿಮಾ ವೀಕ್ಷಣೆಗೆ ಒಪ್ಪಿ, ನಾವು ಮೂರ್ನಾಲ್ಕು ಹುಡುಗಿಯರು ಕಲ್ಪನಾ ಟಾಕೀಸಿನ ಮೆಟ್ಟಲು ಹತ್ತುವುದರಲ್ಲಿ ಅದೆಷ್ಟು ಅವಸ್ಥಾಂತರಗಳು? ಊರಿಗೆ ಮಧ್ಯಾಹ್ನ ಬರುವ ಬಸ್ಸಿಗೆ ಹೀಗೆ ಶಾಲೆ ಕಲಿವ ಹುಡುಗಿಯರು ಹತ್ತಿದರು ಅಂದರೆ, ‘ಇದೆ, ತಂಗಿ ಎಲ್ಲಿಗ್ರೆ. ಸಿನೇಮಕೆ ಹೋತರೇನೇ?’ ಎಂದು ಯಾರಾದರೂ ಕೇಳುವುದೇ. ಪ್ರಶ್ನೆ ಬಸ್ಸಿನೊಳಗಿಂದ ತೂರಿ ಬಂದರೂ ಬಂತೇ. ಆಹಾ, ಅದೆಷ್ಟು ಅದ್ಭುತವಾಗಿ ಗುಂಪಿನ ಮುಖಂಡೆಯಾಗಿದ್ದವಳಿಂದ ಪ್ರತ್ಯುತ್ತರ! ‘ಇಲ್ಲಪ್ಪ, ನಾವ ನೋಟ್ಸ್ ಝರಾಕ್ಸ್ ಮಾಡ್ಸಕಂಡ ಬರ್ತೇವೆ’ ಅಂತಲೋ, ‘ಇದ್ಕ ಹುಷಾರಿಲ್ಲ. ಮಲ್ಲಣ್ಣ ಡಾಕ್ಟರ ಹತ್ರ ಇಂಜಕ್ಷನ್’ ಅಂತಲೋ, ಪಟಾಪಟ್ ಹೇಳಿಯಾಗಿರುತ್ತಿತ್ತು. ಕೇಳಿದವರಿಗೂ ಈ ಒಡಕು ರೀಲು ರೂಢಿಯಾಗಿರುತ್ತಿತ್ತೋ ಏನೋ? ನಾವು ಸಿನಿಮಾಕ್ಕೆ ಹೋಗವವರಲ್ಲ ಎಂದ ಮೇಲೂ ಆ ಹಿರಿಯ ಇನ್ಯಾರೊಂದಿಗೋ, ಯಾರೂ ಇರದಿದ್ದರೆ ಬಸ್ಸಿನ ಕಂಡಕ್ಟರನೊಂದಿಗೋ, ಸಿನಿಮಾ ನೋಡಿ ಕೆಟ್ಟವರ ಬಗ್ಗೆ ಪುರಾಣ ಶುರುಮಾಡಿ ಆಗಿರುತ್ತಿತ್ತು. ಇಷ್ಟೆಲ್ಲ ಆಗಿ, ಮೇಲಿನ ಸ್ಟಾಪಿನಲ್ಲಿ ಇಳಿದರೆ ಸಿನಿಮಾಕ್ಕೆ ಅಂತ ಅನುಮಾನ ಬಂದೀತೇನೋ ಅಂದು, ಕೆಳಗೆ ರಥಬೀದಿಯ ಬಸ್‍ಸ್ಟಾಪಿಗೇ ಇಳಿದು, ಅವಸರದ ಓಡು ನಡಿಗೆಯಲ್ಲಿ ಏರಿ ಏರಿ ಬಂದರೆ. . . ಊರಿಗೆ ಬಂದ ರಿಕ್ಷಾದಲ್ಲಿ ಕೂಗಿದ ಸಿನಿಮಾ ಹೆಸರೇ ಒಂದು; ಇಲ್ಲಿ ರಾರಾಜಿಸುತ್ತಿರುವುದೇ ಒಂದು-ಎಂಬಂತಾಗಿರುತ್ತಿತ್ತು. ಮಗಳನ್ನು ನೋಡಿ ಬಾ ಅಂದರೆ ಅವ್ವನನ್ನು ನೋಡಿ ಬಂದ ಮಳ್ಳನ ಹಾಗೆ ಪೆಕರು ಪೆಕರಾಗಿ ಟಾಕೀಸಿನೊಳಗೆ ನುಸುಳಿಕೊಂಡಿದ್ದೂ ಇದೆ. ಈ ಪರಿಷೆ ನಡೆಯುತ್ತಿದ್ದುದು ವರ್ಷಕ್ಕೆ ಒಂದೆರಡು ಬಾರಿ ಮಾತ್ರ.
ಇಂತಹ ಒಮ್ಮೆ- ಸಿನಿಮಾದ ಹೆಸರು ಮರೆತಿದೆ. ಅನಂತನಾಗ ಮತ್ತು ಗಾಯತ್ರಿ ಅಭಿನಯ. ಹೆಂಡತಿಗೆ ಸ್ಟೌವ್ ಬಸ್ರ್ಟ್ ಆಗಿಯೇನೋ ಮುಖದ ಒಂದು ಭಾಗ ಸುಟ್ಟು ಹೋಗಿರುತ್ತದೆ. ಅವರ ದಾಂಪತ್ಯದಲ್ಲಿ ಉಂಟಾದ ತಳಮಳವನ್ನು, ಹೆಂಡತಿಯೆಂಬ ಪ್ರೀತಿಯಿದ್ದರೂ ಪ್ರೇಮಿಸಲಾಗದವನ ಸ್ಥಿತಿಯ ತಾಪ ದಣೇ ಈಗ ನಾನು ಆ ಸಿನಿಮಾ ನೋಡಿದೆನೆಂಬಷ್ಟು ಗಾಢವಾಗಿ ನನ್ನ ಪ್ರಜ್ಞೆಯಲ್ಲಿ ಸೇರಿಹೋಗಿದೆ. ಸಿನಿಮಾದ ಒಟ್ಟೂ ಸಂದೇಶವೇನಿತ್ತೋ ನೆನಪಿಲ್ಲ. ಆದರೆ, ಹೆಣ್ಣಿನ ದೇಹ ಸೌಂದರ್ಯ ಹಾಳಾದರೆ, ಅವಳು ಬದುಕುವ ಹಕ್ಕನ್ನೂ ಕಳೆದುಕೊಳ್ಳುತ್ತಾಳೆ. ಕಳೆದುಕೊಳ್ಳಬೇಕು-ಅದು ಮೌಲ್ಯ ಎಂಬಂತಹ ಪಾಠವನ್ನು ಉನ್ನತೀಕರಿಸಿದ ಸಿನಿಮಾಗಳ ಕಾಲ ಅದು. ಅದಕ್ಕೆ ಪೂರಕ ಪಠ್ಯವೆಂಬಂತೆ ಬಂಡಿಹಬ್ಬ, ಜಾತ್ರೆ, ಹಬ್ಬಗಳಲ್ಲಿ ಒಟ್ಟುಗೂಡುವ ಮನೆಗಳಲ್ಲಿ ದೂರದೂರುಗಳಲ್ಲಿ ಗಂಡ-ಹೆಂಡತಿಯರಿಬ್ಬರೂ ನೌಕರಿ ಮಾಡಿಕೊಂಡು ಸುಖವಾಗಿದ್ದಾರೆಂದು ಮೇಲ್ನೋಟಕ್ಕೆ ಕಾಣುವ ಸಂಸಾರಗಳ ಒಡಕು ಬಿಂಬಗಳು ಹೆಣ್ಣುಮಕ್ಕಳ ಪಿಸುಮಾತು-ಕಂಬನಿಗಳಲ್ಲಿ. . ಫಳಫಳಿಸುತ್ತಿತ್ತು. ಹೆಣ್ಣಿನ ಚೆಲುವಿಕೆಯ ಏಕರೂಪೀ ಸಂಹಿತೆ ಅದಾಗಲೇ ಚಾಲ್ತಿಗೆ ಬಂದ ದಿನಗಳವು. ಕುಮಟೆಗೆ ಹೋಗಿದ್ದ ನನ್ನ ಅಪ್ಪ ‘ಫೆರ್ ಆಂಡ್ ಲವ್ಲೀ’ಯನ್ನು ತಂದುಕೊಟ್ಟಿದ್ದ. ‘ತಕಾ, ಇದನ್ನರಾ ಹಚ್ಕಾ’ ಎಂದಿದ್ದ. ಆ ಮಾತಿನ ಅರ್ಥ ಆಗಂತೂ ಗೊತ್ತಾಗಿರಲಿಲ್ಲ. ಬಹುಶಃ ಟಿ.ವಿ. ಮನೆಯೊಳಗೆ ಬಂದು ಕೂತಿರದಿದ್ದರೆ, ರಾಮಾಯಣ-ಮಹಾಭಾರತ ಸೀರಿಯಲ್ಲುಗಳನ್ನು ಮಿಂದು ಮಡಿಯುಟ್ಟು ಕೂತು ನೋಡುತ್ತಿದ್ದ ಜನರಿಗೆ, ತರಹೇವಾರಿ ಜಾಹೀರಾತಿನ ಪಾಠ ಸಿಗದಿದ್ದರೆ. . . ನಮ್ಮಂತಹ ಹೆಣ್ಣುಮಕ್ಕಳ ಕೈಗೆ ಫೇರ್ ಆಂಡ್ ಲವ್ಲಿಯೂ ಸಿಗುತ್ತಿರಲಿಲ್ಲವೇನೋ, ಫೇರ್ ಮತ್ತು ಲವ್ಲಿಯ ಸರಿಯಾದ ಅರ್ಥ ಆಗುವ ಹೊತ್ತಿಗೆ ನಾವು ಬಳಸಿ ಬಿಸಾಕಿದ ಟ್ಯೂಬ್‍ಗಳು ಈ ಭೂಮಿಯ ಗರ್ಭವನ್ನು ಅದೆಷ್ಟು ನೋಯಿಸಿರಬಹುದು ಎನಿಸುತ್ತಿದೆ.
ಯಾಕೆ ಇದೆಲ್ಲ ನೆನಪಾಗುತ್ತಿದೆಯೆಂದರೆ- ಭಾರತೀಯ ಸಿನಿಮಾ ರಂಗದಲ್ಲಿ ಹೆಣ್ಣಿನ ವ್ಯಕ್ತಿತ್ವವನ್ನು ತಥಾಕಥಿತ ಪಿತೃತ್ವವು ರೂಪಿಸಿಟ್ಟ ದೇಹಸೌಂದರ್ಯದಾಚೆ ವಿಸ್ತರಿಸಿದ ಎರಡು ಸಂಗತಿಗಳು ಇತ್ತೀಚೆಗೆ ನಡೆದಿವೆ. ದೀಪಿಕಾ ಪಡುಕೋಣೆ ‘ಚಪಾಕ್’ ಸಿನಿಮಾದ ನಾಯಕಿಯಾಗಿ, ಆ್ಯಸಿಡ್ ದಾಳಿಗೆ ಒಳಗಾದ ಸಂತ್ರಸ್ಥೆಯ ಹೋರಾಟದ ಬದುಕನ್ನು ಸಾಬೀತುಪಡಿಸುವ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಮೇಘನಾ ಗುಲ್ಜಾರ್ ನಿರ್ದೇಶನದ ಸಿನಿಮಾ ಇದು. ದೀಪಿಕಾ ಅವರ ಬಗ್ಗೆ ಅಭಿಮಾನ ಮೂಡಲು ಕಾರಣಗಳಿವೆ- ದೀಪಿಕಾ ಈಗ ನಟನೆಯ ಮತ್ತು ವೈವಾಹಿಕ ಬದುಕಿನ ವಸಂತದಲ್ಲಿದ್ದಾರೆ. ಕಲಾವಿದೆಯಾಗಿ ಹೊಸ ಪ್ರಯೋಗಗಳಿಗೆ ತಮ್ಮನ್ನು ಒಡ್ಡಿಕೊಳ್ಳಲೇಬೇಕಾದ ಅಗತ್ಯವೇನೂ ಅವರಿಗಿಲ್ಲ. ಎರಡೆರಡು ಬಾರಿ ಫಿಲ್ಮಫೇರ್ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದವರು. ಚಪಾಕ್ ಚಿತ್ರದ ಪಾತ್ರ ನಿರ್ವಹಣೆಯಲ್ಲಿ, ಗಂಡಸಿನ ವಿಕೃತ ಮನಸ್ಸಿಗೆ ದೇಹವನ್ನು ಕುರೂಪವಾಗಿಸಿಕೊಂಡು ಬದುಕಬೇಕಾದ ಹೆಣ್ಣಿನ ತಲ್ಲಣದ ಕಂಪನಗಳನ್ನು ಸ್ಪರ್ಶಿಸಬೇಕಿದೆ. ಚಪಾಕ್ ಚಿತ್ರ ಲಕ್ಷ್ಮಿ ಅಗರವಾಲ್ ಎಂಬ ಸಂತ್ರಸ್ತೆಯ ಬದುಕಿನ ಕಥೆ ಎಂದು ಹೇಳಲಾಗುತ್ತಿದೆ. 15 ವರ್ಷದ ಎಳೆಯ ಸುಂದರಿ, ಆ್ಯಸಿಡ್ ಹಲ್ಲೆಯಿಂದ ವಿಕಾರಗೊಂಡು ಯಾತನೆ, ಹಿಂಸೆಗಳಿಂದ ತತ್ತರಿಸುತ್ತಾಳೆ. ಗೌರವಾನ್ವಿತ ಬಾಳಿಗಾಗಿ ಆ ನಂತರವೂ ಪ್ರಯತ್ನಿಸುತ್ತಾಳೆ. ವಿಕಾರ ರೂಪಕ್ಕೆ ಕಾಲಿಟ್ಟಲೆಲ್ಲಾ ಸೋಲು, ಆದರೆ ಧೃತಿಗೆಡದೆ ಆ್ಯಸಿಡ್ ಸಂತ್ರಸ್ತೆಯರಿಗಾಗಿ ನಿರಂತರ ಹೋರಾಡಿ – ಆ್ಯಸಿಡ್ ಸುಲಭ ಸಾಧ್ಯ ಲಭ್ಯವಾಗದ ಹಾಗೆ ಮಾಡುವ ಕಾನೂನು ತರುವಲ್ಲಿ ಯಶಸ್ವಿಯಾಗುತ್ತಾರೆ. 2013ರಲ್ಲಿ ನಮ್ಮ ದೇಶದಲ್ಲಿದು ಕಾನೂನಾಯಿತು. ಈ ಲಕ್ಷ್ಮಿ ಅಗರವಾಲ್ 2014ರಲ್ಲಿ ಅಮೇರಿಕಾದಿಂದ ‘‘International Woman of Courage’’ ಪ್ರಶಸ್ತಿ ಪಡೆದರು. ಪತಿ ಅಲೋಕ್ ದೀಕ್ಷಿತ್, ಮಗು ಪಿಹೂ ಜೊತೆ ಬಾಳುತ್ತಿದ್ದಾರೆ. ಲಕ್ಷ್ಮೀ ಅಗರವಾಲ್ ಎನ್‍ಜಿಓ ನಡೆಸುತ್ತಿದ್ದಾರೆ. ಲಕ್ಷ್ಮೀ ಬಾಳು- ಚೆಲುವಿನ ಮಾಪನ ದೇಹಸಂಬಂಧಿಯೋ, ವ್ಯಕ್ತಿತ್ವ ಸಂಬಂಧಿಯೋ ಎಂಬ ತಾತ್ವಿಕತೆಯನ್ನು ಮುಂದಿಟ್ಟಿದೆ. ಇದನ್ನು ಕಲಾತ್ಮಕವಾಗಿ ಜನಮಾನಸಕ್ಕೆ ತಲುಪಿಸುವ ಕೆಲಸವನ್ನು ಚಪಾಕ್ ಮಾಡಬಲ್ಲದು. ಹೆಣ್ಣಿನ ದೇಹವನ್ನೇ ಬಂಡವಾಳವಾಗಿಸಿಕೊಂಡು ಅದನ್ನೇ ಪ್ರತಿಪಾದಿಸುತ್ತ ಬಂದ ಸಿನಿಮಾರಂಗಕ್ಕೆ ಮಾತ್ರ ಮುರಿವ ಶಕ್ತಿಯಿದೆ. ಈ ಕಾರಣಕ್ಕೆ ದೀಪಿಕಾ ಪಡುಕೋಣೆ ಮತ್ತು ಮೇಘನಾ ಗುಲ್ಜಾರ ಅಭಿನಂದನಾರ್ಹರು.
ಸಾಯಿಪಲ್ಲವಿ ಎಂಬ ನಟಿಯ ದಿಟ್ಟ ನಿರ್ಧಾರವೊಂದು, ಹೆಣ್ಣಿನ ಅಸಲಿತನವನ್ನು ದೇಹಕ್ಕೆ ಲಗತ್ತಿಸುವ ರಾಜಕಾರಣವನ್ನು ತಳ್ಳಿಹಾಕಿದೆ. ಜಾಹೀರ ನಾಮೆ ಸ್ವತಃ ವೈದ್ಯೆಯಾಗಿರುವ, ಮೇಕಪ್‍ನ್ನು ನಿರಾಕರಿಸಿ ಅಭಿನಯಿಸುವ ಈ ಚೆಲುವೆ, ಕಾಸ್ಮೆಟಿಕ್ ಕಂಪನಿಯೊಂದರ 2 ಕೋಟಿ ರೂಪಾಯಿಯ ಜಾಹೀರಾತು ಆಫರ್‍ನ್ನು ತಿರಸ್ಕರಿಸಿದ್ದಾರೆ. ಹೆಣ್ಣೆಂದರೆ ತಮ್ಮ ಪ್ರೊಡಕ್ಟ್‍ಗಳ ಪ್ರಯೋಗ ಭೂಮಿ ಎಂಬ ಬಂಡವಾಳಶಾಹಿ ಅಹಂನ್ನು, ಹೆಣ್ಣೆಂದರೆ ದೇಹ ಸೌಂದರ್ಯ ಎಂಬ ಪಿತೃತ್ವದ ತಪ್ಪನ್ನು ಏಕಕಾಲದಲ್ಲಿ ವಿರೋಧಿಸಿದ ತೀರ್ಮಾನವಿದು. ಹೆಣ್ಣು ಎಂದರೆ ದೇಹ,ಆದೇಹ ಸಂರಕ್ಷಣೆ ಮತ್ತು ಆಕರ್ಷಣೆಯನ್ನು ಕಾಪಾಡುವುದು ಮಾರ್ಕೆಟ್ಟಿನ ಸೌಂದರ್ಯವರ್ಧಕಗಳ ಜವಾಬ್ದಾರಿ ಎಂಬ ಸಾಮಾಜಿಕ ಫೋಬಿಯಾದ ಕಾಲವನ್ನು ಒಂದಿಷ್ಟಾದರೂ ತಡೆಯಲು ಈ ಮಾತು ಸಹಾಯಕವಾದೀತೇನೋ.
ಈಗ ನಮ್ಮ ಗೋಕರ್ಣದ ಕಲ್ಪನಾ ಟಾಕೀಸು ನಡೆಯುತ್ತಿಲ್ಲ. ಅದೀಗ ಯಾವುದೋ ಗೋಡೌನ್ ಆಗಿದೆ. ನಮ್ಮ ಹಾಗೆ, ಆದರೆ ಏನೆಲ್ಲ ರಾದ್ಧಾಂತಗಳ ಮೂಲಕ ಸಿನಿಮಾ ನೋಡುವ ಗರಜು ನಮ್ಮ ಮಕ್ಕಳಿಗಿಲ್ಲ. ಅವರೀಗ ಸ್ವತಂತ್ರರು. ಯಾರ ಒಪ್ಪಿಗೆಯ ಹಂಗಿಲ್ಲದೆ, ಏನೆಲ್ಲವನ್ನೂ ತಮ್ಮ ಪ್ರಜ್ಞೆಗೆ ತಂದುಕೊಳ್ಳಬಲ್ಲವರು. ಅವರಿಗೆ ಚಪಾಕ್‍ನಂತಹ ಸಿನಿಮಾಗಳು, ಇಂತಹ ನಿರ್ಣಯಗಳು ಬದುಕನ್ನು ನೋಡುವ ಹೊಸ ಕಣ್ಣೋಟವನ್ನು ಕೊಡಲಿ. ಹೆಣ್ಣುಗಳು ಭಯ ಅಪಮಾನಗಳಿಂದ ಕುಗ್ಗುವುದು ನಿಲ್ಲಲಿ. ಗಂಡುಮಕ್ಕಳಿಗೆ ಹೆಣ್ಣೆಂದರೆ ದೇಹವಲ್ಲ ಎಂಬ ತಿಳಿವು ಸಿಗಲಿ. ಸಿನಿಮಾ ನಮ್ಮ ಭಾವವಲಯವನ್ನು ಮೀಟುವುದಕ್ಕೆ ಯಶಸ್ವಿಯಾದಷ್ಟು ಬೇರೆ ಯಾವ ಮಾಧ್ಯಮವೂ ಯಶಸ್ವಿಯಾಗದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...