ಬೆಳಗಾವಿ ಮಹಾನಗರ ಪಾಲಿಕೆಯ ಬಿಜೆಪಿ ಸದಸ್ಯ ಅಭಿಜಿತ್ ಜವಳಕರ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ವಾರ್ಡ್ ಸಂಖ್ಯೆ 42ರ ಕಾರ್ಪೊರೇಟರ್ ಆಗಿರುವ ಅಭಿಜಿತ್ ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ತಡರಾತ್ರಿ ಬಂಧಿಸಿದ ಟಿಳಕವಾಡಿ ಪೊಲೀಸರು ಹಿಂಡಲಗಾ ಜೈಲಿಗೆ ಕಳುಹಿಸಿದ್ದಾರೆ.
ಭಾಗ್ಯನಗರದಲ್ಲಿ ಮೊಬೈಲ್ ಟವರ್ ಅಳವಡಿಕೆ ವಿಚಾರವಾಗಿ ನ.23ರಂದು ಪಾಲಿಕೆ ಸದಸ್ಯ ಅಭಿಜಿತ್ ಮತ್ತು ಸ್ಥಳೀಯ ನಿವಾಸಿ ರಮೇಶ್ ಪಾಟೀಲ್ ಮಧ್ಯೆ ಗಲಾಟೆ ನಡೆದಿತ್ತು. ಈ ಸಂಬಂಧ ಇಬ್ಬರೂ ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ಪರಸ್ಪರ ದೂರು ದಾಖಲಿಸಿದ್ದರು. ಹಲ್ಲೆ ಮಾಡಿದ ರಮೇಶ್ ಪಾಟೀಲ್ನನ್ನು ಬಂಧಿಸುವಂತೆ ಟಿಳಕವಾಡಿ ಪೊಲೀಸ್ ಠಾಣೆ ಮುಂದೆ ಬಿಜೆಪಿ ಸದಸ್ಯರು ಪ್ರತಿಭಟನೆ ಮಾಡಿದ್ದರು. ಪ್ರತಿಭಟನೆಗೆ ಮಣಿದು ರಮೇಶ್ ಪಾಟೀಲ್ನನ್ನು ಪೊಲೀಸರು ಭಾನುವಾರ ಬಂಧಿಸಿದ್ದರು.
ರಮೇಶ್ ಪಾಟೀಲ್ ಬಂಧನವಾಗುತ್ತಿದ್ದಂತೆ ಅಭಿಜಿತ್ ಜವಳಕರ್ ಬಂಧನಕ್ಕೆ ಆಗ್ರಹಿಸಿ ಎಂಇಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಈ ಹಿನ್ನೆಲೆ ತಡರಾತ್ರಿ ಪೊಲೀಸರು ಅಭಿಜಿತ್ ಅವರನ್ನು ಬಂಧಿಸಿದ್ದಾರೆ. ಅಭಿಜಿತ್ ಬಂಧನವಾಗುತ್ತಿದ್ದಂತೆ ಬಿಮ್ಸ್ ಆಸ್ಪತ್ರೆಗೆ ಎದುರು ಮಾಜಿ ಶಾಸಕ ಅನಿಲ್ ಬೆನೆಕೆ ನೇತೃತ್ವದಲ್ಲಿ ಬಿಜೆಪಿ ಕಾರ್ಪೋರೇಟರ್ಗಳು ಪ್ರತಿಭಟನೆ ನಡೆಸಿದ್ದಾರೆ.
ಮಾಹಿತಿ ಪಡೆದ ವಿಜಯೇಂದ್ರ : ಅಭಿಜಿತ್ ಬಂಧನದ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಮಾಹಿತಿ ಪಡೆದಿದ್ದಾರೆ. ಅನಿಲ್ ಬೆನಕೆ ಅವರಿಗೆ ಕರೆ ಮಾಡಿರುವ ವಿಜಯೇಂದ್ರ ಇಂದು ಬೆಳಗ್ಗೆ ಹತ್ತು ಗಂಟೆಗೆ ನಗರ ಪೊಲೀಸ್ ಆಯುಕ್ತರನ್ನು ಜಿಲ್ಲೆಯ ಎಲ್ಲಾ ಬಿಜೆಪಿ ಮುಖಂಡರ ಜೊತೆಗೆ ಭೇಟಿ ಮಾಡುವಂತೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.
ಅಭಿಜಿತ್ ಬಂಧನ ವಿಚಾರ ಬೆಳಗಾವಿಯಲ್ಲಿ ಬಿಜೆಪಿ, ಕಾಂಗ್ರೆಸ್ ಮತ್ತು ಎಂಇಎಸ್ ನಡುವೆ ರಾಜಕೀಯ ಕಾಳಗಕ್ಕೆ ಕಾರಣವಾಗುವ ಸಾಧ್ಯತೆ ಇದೆ.
ಇದನ್ನೂ ಓದಿ: ಬಿಟಿವಿ ಸುದ್ದಿವಾಹಿನಿಯ ಎಂ.ಡಿ ಕುಮಾರ್ ಬಂಧನ