ಪಶ್ಚಿಮ ಬಂಗಾಳ ಚುನಾವಣೆಯ ಮೊದಲ ಹಂತದ ಮತದಾನ ಆರಂಭಕ್ಕೆ ಕೆಲವೇ ದಿನಗಳಿರುವಾಗ ಮಹತ್ವದ ಬೆಳವಣಿಗೆಯಲ್ಲಿ ಮಾಜಿ ಬಿಜೆಪಿ ನಾಯಕ, ಮಾಜಿ ಕೇಂದ್ರ ಹಣಕಾಸು ಸಚಿವ ಯಶವಂತ್ ಸಿನ್ಹಾ ಇಂದು ಟಿಎಂಸಿ ಪಕ್ಷೆಕ್ಕೆ ಸೇರ್ಪಡೆಯಾಗಿದ್ದಾರೆ.
83 ವರ್ಷದ ಯಶವಂತ್ ಸಿನ್ಹಾ ಬಿಜೆಪಿಯಲ್ಲಿರುವಾಗಲೇ ನರೇಂದ್ರ ಮೋದಿ ಸರ್ಕಾರದ ಕಟು ವಿಮರ್ಶಕರಲ್ಲಿ ಒಬ್ಬರಾಗಿದ್ದರು. ನಂತರ ಅವರು 2018ರಲ್ಲಿ ಬಿಜೆಪಿ ಪಕ್ಷ ತ್ಯಜಿಸಿದ್ದರು. ಇಂದು ಅವರು ಟಿಎಂಸಿ ಸೇರ್ಪಡೆಯಾಗಿರುವುದು ಪಕ್ಷದಿಂದ ಹೊರಹೋಗುವವರ ಸಂಖ್ಯೆಯಲ್ಲಿ ಹೆಚ್ಚಳದಿಂದ ಬಳಲುತ್ತಿದ್ದ ಟಿಎಂಸಿಗೆ ವರದಾನವಾಗಿದೆ ಎಂದು ಎನ್ಡಿಟಿವಿ ವರದಿ ಮಾಡಿದೆ.
ಇಂದು ಮುಂಜಾನೆಯೇ ಯಶವಂತ್ ಸಿನ್ಹಾರವರು ಕೋಲ್ಕತ್ತಾದ ಟಿಎಂಸಿ ಭವನಕ್ಕೆ ಭೇಟಿ ನೀಡಿದ್ದರು. ಅಲ್ಲಿ ಇಂದು ಟಿಎಂಸಿ ಪಕ್ಷದ ಡೆರೇಕ್ ಓ ಬ್ರಿಯಾನ್, ಸುದೀಪ್ ಬಂಡೋಪಾಧ್ಯಯ ಮತ್ತು ಸುಬ್ರತ ಮುಖರ್ಜಿಯವರ ಸಮ್ಮುಖದಲ್ಲಿ ಪಕ್ಷಕ್ಕೆ ಸೇರಿದ್ದಾರೆ. ಇದು ನಮಗೆ ಹೆಮ್ಮೆಯ ವಿಷಯ ಎಂದು ಸುಬ್ರತ ಮುಖರ್ಜಿ ತಿಳಿಸಿದ್ದಾರೆ.
ಯಶವಂತ್ ಸಿನ್ಹಾರವರು ವಾಜಪೇಯಿ ನೇತೃತ್ವದ ಎನ್ಡಿಎ ಸರ್ಕಾರದಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವ ಮತ್ತು ಹಣಕಾಸು ಸಚಿವರಾಗಿ ಕೆಲಸ ಮಾಡಿದ್ದರು.
ಟಿಎಂಸಿ ಸೇರ್ಪಡೆ ನಂತರ ಮಾತನಾಡಿದ ಯಶವಂತ್ ಸಿನ್ಹಾ “ಇಂದು ನಮ್ಮ ದೇಶದಲ್ಲಿ ಯಾರೂ ಚಿಂತಿತರಾಗಿಲ್ಲ. ನಮಗೆ ಆಹಾರ ನೀಡುವ ರೈತ ದೆಹಲಿ ಬೀದಿಗಳಲ್ಲಿ ಕುಳಿತಿದ್ದಾನೆ, ಆದರೆ ಯಾರೂ ಅವರ ಬಗ್ಗೆ ಚಿಂತಿಸುತ್ತಿಲ್ಲ. ಶಿಕ್ಷಣ, ಆರೋಗ್ಯ ಎಲ್ಲವೂ ಕೆಟ್ಟ ದಿನಗಳನ್ನು ನೋಡುತ್ತಿದೆ. ಆದರೆ ಸರ್ಕಾರ ಚಿಂತಿಸುತ್ತಿಲ್ಲ. ಎಲ್ಲಾ ಕಡೆ ಚುನಾವಣೆಗಳನ್ನು ಗೆಲ್ಲುವುದು ಮಾತ್ರವೇ ಆಡಳಿತ ಪಕ್ಷದ ಏಕೈಕ ಗುರಿಯಾಗಿದೆ. ಅಟಲ್ ಜಿ ಸಮಯದಲ್ಲಿ ಪಕ್ಷ ಮತ್ತು ಈಗ ಪಕ್ಷವು ತುಂಬಾ ಭಿನ್ನವಾಗಿದೆ. ಅಟಲ್ಜಿ ಒಮ್ಮತವನ್ನು ನಂಬಿದ್ದರು. ಇಂದಿನ ಸರ್ಕಾರವು ವಿಭಜನೆಯನ್ನು ನಂಬುತ್ತದೆ” ಎಂದು ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.
“ನಮ್ಮ ದೇಶವು ವಿಚಿತ್ರ ಪರಿಸ್ಥಿತಿಯಲ್ಲಿದೆ. ನಾವು ನಂಬಿದ್ದ ಮೌಲ್ಯಗಳು ಅಪಾಯದಲ್ಲಿವೆ. ಪ್ರಜಾಪ್ರಭುತ್ವದ ಶಕ್ತಿ ಪ್ರಜಾಪ್ರಭುತ್ವದ ಸಂಸ್ಥೆಗಳಲ್ಲಿದೆ ಎಂದು ನಮಗೆ ತಿಳಿದಿದೆ. ಆದರೆ ಇಂದು ಆ ಎಲ್ಲಾ ಸಂಸ್ಥೆಗಳು ದುರ್ಬಲಗೊಂಡಿವೆ. ನ್ಯಾಯಾಂಗವು ದುರ್ಬಲವಾಗಿದೆ ಎಂದು ನಾನು ವಿಷಾದದಿಂದ ಹೇಳುತ್ತೇನೆ. ಅದಕ್ಕಾಗಿಯೇ ಸರ್ಕಾರದ ಇಚ್ಛೆಯನ್ನು ಪ್ರಶ್ನಿಸಲು ಯಾರೂ ಇಲ್ಲ” ಎಂದು ಕೋಲ್ಕತ್ತಾದ ಟಿಎಂಸಿ ಕಚೇರಿಯಲ್ಲಿ ಹೇಳಿದ್ದಾರೆ.
ಇದನ್ನೂ ಓದಿ: ತನ್ನ ವಿರುದ್ಧದ ಪ್ರಕರಣಗಳನ್ನು ತಾನೇ ಹಿಂಪಡೆದ ಯುಪಿ ಸಿಎಂ ಯೋಗಿ ಆದಿತ್ಯನಾಥ್: BSP ಸಂಸದನ ಆರೋಪ